Karnataka news paper

‘ಗಮನ ಕ್ರಿಕೆಟ್‌ ಕಡೆಗಿರಲಿ’, ಕೊಹ್ಲಿ ವಿರುದ್ಧ ಕಪಿಲ್‌ ಅಸಮಾಧಾನ!


ಹೈಲೈಟ್ಸ್‌:

  • ದ್ವಿಪಕ್ಷೀಯ ಸರಣಿ ಸಲುವಾಗಿ ದ. ಆಫ್ರಿಕಾ ಪ್ರವಾಸ ಕೈಗೊಂಡಿರುವ ಭಾರತ ತಂಡ.
  • ಪ್ರವಾಸ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಅನಗತ್ಯ ಹೇಳಿಕೆ ನೀಡಿದ ವಿರಾಟ್‌ ಕೊಹ್ಲಿ.
  • ಕೊಹ್ಲಿ ಹೇಳಿಕೆ ಬಗ್ಗೆ ಅಸಮಾಧಾನ ಹೊರಹಾಕಿದ ಮಾಜಿ ನಾಯಕ ಕಪಿಲ್ ದೇವ್‌.

ಬೆಂಗಳೂರು: ಭಾರತಕ್ಕೆ ಮೊತ್ತ ಮೊದಲ ವಿಶ್ವಕಪ್‌ ಗೆದ್ದುಕೊಟ್ಟ ನಾಯಕ ಹರಿಯಾಣ ಹರಿಕೇನ್‌ ಖ್ಯಾತಿಯ ಮಾಜಿ ಆಲ್‌ರೌಂಡರ್‌ ಕಪಿಲ್‌ ದೇವ್‌, ಒಡಿಐ ಕ್ಯಾಪ್ಟನ್ಸಿ ಕಳೆದುಕೊಂಡ ವಿಚಾರದಲ್ಲಿ ವಿರಾಟ್‌ ಕೊಹ್ಲಿ ನೀಡಿರುವ ಇತ್ತೀಚಿನ ಹೇಳಿಕೆಗಳನ್ನು ಟೀಕಿಸಿದ್ದಾರೆ.

ವಿರಾಟ್‌, ಭಾರತ ಟಿ20 ಕ್ರಿಕೆಟ್‌ ತಂಡದ ನಾಯಕತ್ವವನ್ನು ಖುದ್ದಾಗಿ ಬಿಟ್ಟುಕೊಟ್ಟು ಈಗ ಒಡಿಐ ತಂಡದ ನಾಯಕತ್ವವನ್ನು ಕಳೆದುಕೊಂಡಿದ್ದಾರೆ. ಅವರ ಸ್ಥಾನದಲ್ಲಿ ರೋಹಿತ್‌ ಶರ್ಮಾ ಟೀಮ್ ಇಂಡಿಯಾ ಟಿ20 ಮತ್ತು ಒಡಿಐ ತಂಡಗಳ ನಾಯಕತ್ವ ಪಡೆದುಕೊಂಡಿದ್ದಾರೆ.

ಈ ಬಗ್ಗೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಕೊಹ್ಲಿ, ಟಿ20 ತಂಡದ ನಾಯಕತ್ವ ಬಿಡುವಾಗ ಬಿಸಿಸಿಐನಿಂದ ಯಾರೊಬ್ಬರೂ ತಮ್ಮನ್ನು ಸಂಪರ್ಕಿಸಿ ನಿರ್ಧಾರ ಮರು ಪರಿಗಣಿಸುವಂತೆ ಹೇಳಿಲ್ಲ ಎಂದು ಹೇಳಿದ್ದರು. ಕೊಹ್ಲಿ ಅವರ ಈ ಹೇಳಿಕೆ ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಏಕೆಂದರೆ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ತಾವೇ ಖುದ್ದಾಗಿ ಕೊಹ್ಲಿ ಬಳಿ ಟಿ20 ನಾಯಕತ್ವ ಬಿಡದಂತೆ ಮಾತೂಕತೆ ನಡೆಸಿದ್ದಾಗಿ ಹೇಳಿಕೊಂಡಿದ್ದರು.

‘ಗಂಗೂಲಿ ಇದಕ್ಕೆ ಉತ್ತರಿಸಿ,’ ವಿರಾಟ್‌ ವಿವಾದಕ್ಕೆ ಬಟ್‌ ಪ್ರತಿಕ್ರಿಯೆ!

ಸಾರ್ವಜನಿಕವಾಗಿ ಕೊಹ್ಲಿ ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿರುವುದನ್ನು ಕಪಿಲ್‌ ದೇವ್‌ ಕಟುವಾಗಿ ಟೀಕಿಸಿದ್ದಾರೆ. “ಬೇರೆಯವರ ಕಡೆಗೆ ಬೊಟ್ಟು ಮಾಡುವುದು ಅಷ್ಟು ಒಳ್ಳೆಯದ್ದಲ್ಲ. ದಕ್ಷಿಣ ಆಫ್ರಿಕಾ ಪ್ರವಾಸ ಮುಂದಿದೆ. ಕ್ರಿಕೆಟ್‌ ಕಡೆಗಹೆ ಗಮನ ನೀಡುವುದು ಉತ್ತಮ. ಬಿಸಿಸಿಐನ ಅಧ್ಯಕ್ಷ ಸ್ಥಾನ ಅತ್ಯಂತ ಮಹತ್ವದ ಸ್ಥಾನ, ಹಾಗೆಯೇ ತಂಡದ ನಾಯಕನ ಸ್ಥಾನವೂ ಮಹತ್ವದ್ದು. ಹೀಗಾಗಿ ಸಾರ್ವಜನಿಕವಾಗಿ ಇಬ್ಬರೂ ಕಿತ್ತಡುವುದು ಅಷ್ಟು ಸರಿಯಲ್ಲ. ಸೌರವ್ ಮತ್ತು ಕೊಹ್ಲಿಗೆ ಇದು ಶೋಭೆ ತರುವಂಥದ್ದಲ್ಲ,” ಎಂದು ಎಬಿಪಿ ನ್ಯೂಸ್‌ಗೆ ನೀಡಿರುವ ಸಂದರ್ಶನದಲ್ಲಿ ಕಪಿಲ್‌ ಹೇಳಿದ್ದಾರೆ.

“ಪರಿಸ್ಥಿತಿಗಳನ್ನು ನಿಯಂತ್ರಣಕ್ಕೆ ತರುವುದನ್ನು ನೋಡಬೇಕು. ಎಲ್ಲಕ್ಕಿಂತಲೂ ದೇಶದ ಪರ ಆಡುವುದು ಮೊದಲು ಎಂದು ಪರಿಗಣಿಸಬೇಕು. ತಪ್ಪು ಎಲ್ಲಾಗಿದೆ ಎಂಬುದು ಖಂಡಿತಾ ಮುಂದೊಂದು ದಿನ ಬಹಿರಂಗವಾಗಲಿದೆ. ಆದರೆ, ಈ ವಿಚಾರವಾಗಿ ಸಾರ್ವಜನಿಕವಾಗಿ ಮಾತನಾಡುವುದು ಅಷ್ಟು ಸರಿಯಲ್ಲ. ಈ ಮಹತ್ವದ ಪ್ರವಾಸಕ್ಕೂ ಮುನ್ನ ಯಾವುದೇ ವಿವಾದ ಕಾಣಲು ನಾನು ಇಷ್ಟ ಪಡುವುದಿಲ್ಲ,” ಎಂದು 1983ರಲ್ಲಿ ಭಾರತಕ್ಕೆ ವಿಶ್ವಕಪ್‌ ಗೆದ್ದುಕೊಟ್ಟ ಕಪ್ತಾನ ಅಭಿಪ್ರಾಯಪಟ್ಟಿದ್ದಾರೆ.

‘ಸೆಪ್ಟೆಂಬರ್‌ನಲ್ಲಿಯೇ ಮಾತನಾಡಿದ್ದೆವು’ ಕೊಹ್ಲಿ ಆರೋಪ ತಳ್ಳಿಹಾಕಿದ ಬಿಸಿಸಿಐ!

ವಿರಾಟ್‌ ಕೊಹ್ಲಿ ಈಗ ಭಾರತ ಟೆಸ್ಟ್‌ ತಂಡದ ನಾಯಕನಾಗಿ ಮಾತ್ರವೇ ಉಳಿಸಿದ್ದಾರೆ. ಅಂದಹಾಗೆ ಕಳೆದ 2 ವರ್ಷಗಳಿಂದ ಕೊಹ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಭಾರತ ತಂಡದ ನಾಯಕನಾಗಿ ಯಶಸ್ಸು ಕಂಡರೂ, ಬ್ಯಾಟ್ಸ್‌ಮನ್‌ ಆಗಿ ವೈಫಲ್ಯ ಕಂಡಿದ್ದಾರೆ. ಇದೇ ಕಾರಣಕ್ಕೆ ತಮ್ಮ ಮೇಲಿನ ಹೊರೆ ಕಡಿಮೆ ಮಾಡಲು ಟಿ20 ತಂಡದ ನಾಯಕತ್ವ ಬಿಟ್ಟಿದ್ದರು. ಬಳಿಕ ಟೀಮ್ ಇಂಡಿಯಾ ಆಯ್ಕೆ ಸಮಿತಿ ವೈಟ್‌ ಬಾಲ್‌ ಕ್ರಿಕೆಟ್‌ನಲ್ಲಿ ಭಾರತ ತಂಡಕ್ಕೆ ಒಬ್ಬನೇ ನಾಯಕನಿದ್ದರೆ ಸರಿ ಎಂದು ಎಕದಿನ ಮತ್ತು ಟಿ20 ತಂಡಗಳಿಗೆ ರೋಹಿತ್‌ ಶರ್ಮಾ ನಾಯಕ ಎಂದು ಘೋಷಣೆ ಮಾಡಿತ್ತು.

ಭಾರತ ತಂಡದ ದಕ್ಷಿಣ ಆಫ್ರಿಕಾ ಪ್ರವಾಸದ ವೇಳಾಪಟ್ಟಿ ಹೀಗಿದೆ
ಟೆಸ್ಟ್‌ ಸರಣಿ
ಪ್ರಥಮ ಟೆಸ್ಟ್‌: ಡಿಸೆಂಬರ್‌ 26-30, ಸೆಂಚೂರಿಯನ್‌
ದ್ವಿತೀಯ ಟೆಸ್ಟ್‌: ಜನವರಿ 03-07, ಜೊಹಾನ್ಸ್‌ಬರ್ಗ್‌
ತೃತೀಯ ಟೆಸ್ಟ್‌: ಜನವರಿ 11-15, ಕೇಪ್‌ ಟೌನ್‌

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆಯಾದ ಭಾರತ ಟೆಸ್ಟ್‌ ತಂಡ
ವಿರಾಟ್‌ ಕೊಹ್ಲಿ (ನಾಯಕ), ಕೆಎಲ್‌ ರಾಹುಲ್, ಮಯಾಂಕ್‌ ಅಗರ್ವಾಲ್‌, ಚೇತೇಶ್ವರ್‌ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್‌ ಅಯ್ಯರ್‌, ಹನುಮ ವಿಹಾರಿ, ರಿಷಭ್ ಪಂತ್‌ (ವಿಕೆಟ್‌ಕೀಪರ್‌), ವೃದ್ಧಿಮಾನ್‌ ಸಹಾ (ವಿಕೆಟ್‌ಕೀಪರ್‌), ಆರ್‌ ಅಶ್ವಿನ್‌, ಜಯಂತ್‌ ಯಾದವ್‌, ಇಶಾಂತ್‌ ಶರ್ಮಾ, ಮೊಹಮ್ಮದ್‌ ಶಮಿ, ಉಮೇಶ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ, ಶಾರ್ದುಲ್‌ ಠಾಕೂರ್‌, ಮೊಹಮ್ಮದ್‌ ಸಿರಾಜ್‌, ಪ್ರಿಯಾಂಕ್ ಪಾಂಚಾಲ್‌.



Read more