ಕೆನಡಾ ಸರ್ಕಾರ ಕೋವಿಡ್ ಲಸಿಕೆ ಕಡ್ಡಾಯ ಮಾಡಿರುವುದನ್ನು ವಿರೋಧಿಸಿ ದೇಶದಲ್ಲಿ ಭಾರೀ ಪ್ರತಿಭಟನೆ ಭುಗಿಲೆದ್ದಿದೆ. ಜನವರಿ 29ರಂದು ರಾಜಧಾನಿ ಒಟ್ಟಾವಾಗೆ ಕಾಲಿಟ್ಟ ಪ್ರತಿಭಟನಾಕಾರರು, ತಮ್ಮ ವಾಹನಗಳನ್ನು ಪ್ರಮುಖ ಬೀದಿಗಳಲ್ಲಿ ನಿಲ್ಲಿಸಿ, ಟೆಂಟ್ಗಳನ್ನು ಹಾಕಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.
ಕೋವಿಡ್ ಲಸಿಕೆ ವಿರೋಧಿ ಪ್ರತಿಭಟನೆ ಕೈಮೀರಿದ್ದು, ಪ್ರತಿಭಟನಾಕಾರರನ್ನು ತಡೆಯಲು ನಾವು ಹರಸಾಹಸಪಡುತ್ತಿದ್ದೇವೆ. ನಗರದ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ತುರ್ತು ಪರಿಸ್ಥಿತಿ ಘೋಷಿಸುವುದು ಅನಿವಾರ್ಯವಾಗಿದೆ ಎಂದು ಮೇಯರ್ ಜಿಮ್ ವ್ಯಾಟ್ಸನ್ ಹೇಳಿದ್ದಾರೆ.
ಪ್ರತಿಭಟನಾಕಾರರು ಒಟ್ಟಾವಾ ನಗರ ಪ್ರದೇಶದ ಜನವಸತಿ ಪ್ರದೇಶಗಳಿಗೂ ನುಗ್ಗಿದ್ದು, ಜನಜೀವನದ ಮೇಲೆ ಭಾರೀ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಪ್ರತಿಭಟನಾಕಾರರ ಸಂಖ್ಯೆ ಪೊಲೀಸರ ಸಂಖ್ಯೆಗಿಂತಲೂ ದುಪ್ಪಟ್ಟಿದ್ದು, ಪೊಲೀಸರು ಕೂಡ ಜೀವ ಕೈಯಲ್ಲಿ ಹಿಡಿದು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಜಿಮ್ ವ್ಯಾಟ್ಸನ್ ಅಸಹಾಯಕತೆ ಪ್ರದರ್ಶಿಸಿದ್ದಾರೆ.
ತಮ್ಮ ಟ್ರಕ್ಗಳಲ್ಲಿ ಬಂದಿರುವ ಪ್ರತಿಭಟನಾಕಾರರು, ನಿರಂತರವಾಗಿ ಹಾರ್ನ್ ಬಾರಿಸುವ ಮೂಲಕ ಶಬ್ಧ ಮಾಡುತ್ತಿದ್ದು, ಇಡೀ ನಗರ ಗೊಂದಲಮಯವಾಗಿದೆ. ತುರ್ತು ಪರಿಸ್ಥಿತಿ ಘೋಷಿಸುವ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಜಿಮ್ ವ್ಯಾಟ್ಸನ್ ಹೇಳಿದ್ದಾರೆ.
ಇದಕ್ಕೂ ಮುನ್ನ ಕೋವಿಡ್ ಲಸಿಕಾ ವಿರೋಧಿ ಪ್ರತಿಭಟನೆಯಿಂದಾಗಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಮತ್ತವರ ಕುಟುಂಬವನ್ನು ಅಜ್ಞಾತ ಸ್ಥಳಕ್ಕೆ ಕಳುಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
Read more
[wpas_products keywords=”deal of the day sale today offer all”]