ಹೈಲೈಟ್ಸ್:
- ಕಾಂಗ್ರೆಸ್ ಪಕ್ಷ ಕೊಳೆತ ಮಾವಿನ ಹಣ್ಣು. ಗೆದ್ದಲು ತಿಂದ ಮರದಂತೆ.. ಅಲ್ಲಿಗೆ ಯಾರು ಹೋಗಲು ಬಯಸುತ್ತಾರೆ?
- ಪ್ರಧಾನಿ ಮೋದಿ ಅವರು ಸೇಬು ಹಣ್ಣು ಇದ್ದಂತೆ. ಆ ಹಣ್ಣನ್ನು ಹುಡುಕಿಕೊಂಡು ಹಲವರು ಬರುತ್ತಾರೆ
- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿಕೆ
ಬುಧವಾರ ಚಿಕ್ಕಮಗಳೂರು ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಲು ಬಯಸುತ್ತಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದರು.
ಪ್ರಧಾನಿ ಮೋದಿ ಅವರು ಸೇಬು ಹಣ್ಣು ಇದ್ದಂತೆ. ಆ ಹಣ್ಣನ್ನು ಹುಡುಕಿಕೊಂಡು ವಿವಿಧ ಪಕ್ಷಗಳ ಮುಖಂಡರು ಬಿಜೆಪಿಯತ್ತ ಬರುತ್ತಿದ್ದಾರೆ ಎಂದು ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು.
ಕಾಂಗ್ರೆಸ್ ಮುಖಂಡರು ತಮ್ಮ ಪಕ್ಷದ ಇರುವಿಕೆಯನ್ನು ತೋರಿಸಿಕೊಳ್ಳಲು ಉಡಾಫೆ ಉತ್ತರ ನೀಡುತ್ತಾರೆಯೇ ಹೊರತು, ಕಾಂಗ್ರೆಸ್ ಪಕ್ಷ ಸೇರಲು ಬಯಸುವವರ ಹೆಸರು ಹೇಳಲ್ಲ. ಅವರು ಹೇಳೋದೂ ಬೇಡ ಎಂದು ಈಶ್ವರಪ್ಪ ತಿಳಿಸಿದರು.
ಸಿದ್ಧರಾಮಯ್ಯ ಅವರಿಗೆ ಸಿಎಂ ಸ್ಥಾನ, ವಿರೋಧ ಪಕ್ಷದ ಸ್ಥಾನ ಬಿಟ್ಟರೆ ಪಕ್ಷಕ್ಕಾಗಿ ದುಡಿಯುವ ಮನಸ್ಸಿಲ್ಲ. ಕೇಂದ್ರಕ್ಕೆ ಕರೆದರೂ ಸಿದ್ಧರಾಮಯ್ಯ ಹೋಗಲಿಲ್ಲ ಎಂದ ಈಶ್ವರಪ್ಪ, ಮೇಕೆದಾಟು ಆಯ್ತು, ಈಗ ಮಹದಾಯಿ ಪಾದಯಾತ್ರೆ ಹಮ್ಮಿಕೊಳ್ಳಲು ಕಾಂಗ್ರೆಸ್ ಮುಖಂಡರು ಮುಂದಾಗಿದ್ದಾರೆ ಎಂದು ಚಾಟಿ ಬೀಸಿದರು.
ನಾನು ನೀರಾವರಿ ಮಂತ್ರಿಯಾಗಿದ್ದಾಗ ಖರ್ಗೆ, ಸಿದ್ಧರಾಮಯ್ಯ, ಎಚ್. ಕೆ. ಪಾಟೀಲ್ ಅವರು ದಿಲ್ಲಿಯಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ವೇಳೆ ಕಳಸಾ ಬಂಡೂರಿ ಯೋಜನೆಗೆ ಗೋವಾ ರಾಜ್ಯ ಬೆಂಬಲ ನೀಡಲಿದೆ ಎಂದು ಹೇಳಿದ್ದರು. ಆದರೆ, ಗೋವಾ ಚುನಾವಣಾ ಪ್ರಚಾರಕ್ಕೆ ಹೋಗಿದ್ದ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರು ಕರ್ನಾಟಕಕ್ಕೆ ಒಂದು ಹನಿ ನೀರನ್ನೂ ಕೊಡುವುದಿಲ್ಲ ಎಂದು ತಿಳಿಸಿದ್ದರು. ಒಂದು ವೇಳೆ ಈ ಹೇಳಿಕೆ ಸುಳ್ಳೆಂದು ಸಾಬೀತುಪಡಿಸಿದರೆ ತಾವು ರಾಜಕೀಯ ನಿವೃತ್ತಿ ಪಡೆಯುವುದಾಗಿ ಈಶ್ವರಪ್ಪ ಸವಾಲೆಸೆದರು.
ಉತ್ತರ ಪ್ರದೇಶದಲ್ಲಿ ಬಿಜೆಪಿಯಿಂದ ಬೇರೆ ಪಕ್ಷಕ್ಕೆ ಸಚಿವರೇ ವಲಸೆ ಹೋಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, ಬಿಜೆಪಿ ಟಿಕೆಟ್ ವಿಚಾರದಲ್ಲಿ ಕಠಿಣ ನಿಲುವು ತಳೆಯುತ್ತಿರುವ ಕಾರಣ ತಮಗೆ ಟಿಕೆಟ್ ಸಿಗುವುದಿಲ್ಲವೆಂದು ಅರಿತ ಕೆಲವರು ಬೇರೆ ಪಕ್ಷಕ್ಕೆ ವಲಸೆ ಹೋಗುತ್ತಿದ್ದಾರೆ ಎಂದರು.
Read more
[wpas_products keywords=”deal of the day sale today offer all”]