Karnataka news paper

ಹೆದ್ದಾರಿ ಅಭಿವೃದ್ಧಿಗಾಗಿ ಶಿರಾಡಿ ಘಾಟ್ ಮುಚ್ಚಿದರೆ ಚಾರ್ಮಾಡಿ ಘಾಟ್‌ನಲ್ಲಿ ಸಂಚಾರ ಸಂಕಟ..!


ಹೈಲೈಟ್ಸ್‌:

  • ಚಾರ್ಮಾಡಿ ಘಾಟಿಯ ಪ್ರಯಾಣವು ಸಂಪೂರ್ಣ ಸುರಕ್ಷಿತವಲ್ಲ
  • ಇಲ್ಲಿ ಸುಮಾರು ಒಂಬತ್ತು ಕಡೆಗಳಲ್ಲಿ ಭೂಕುಸಿತ ಪ್ರದೇಶವನ್ನು ಗುರುತಿಸಲಾಗಿದೆ
  • ವಾಹನ ಸಂಚಾರ ಒತ್ತಡ ಹೆಚ್ಚಿದರೆ ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತದೆ

ಅರವಿಂದ ಹೆಬ್ಬಾರ್‌
ಮುಂಡಾಜೆ (ದಕ್ಷಿಣ ಕನ್ನಡ):
ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿಯನ್ನು ರಸ್ತೆ ಅಭಿವೃದ್ಧಿಗಾಗಿ ಆರು ತಿಂಗಳು ಕಾಲ ಮುಚ್ಚುವ ಪ್ರಸ್ತಾವ ಹರಿದಾಡುತ್ತಿದ್ದು, ಯಾವಾಗ ದಿನ ನಿಗದಿಯಾಗುವುದು ಎಂಬ ವಿಚಾರ ಗೊಂದಲಮಯವಾಗಿದೆ. ಅಭಿವೃದ್ಧಿ ದೃಷ್ಟಿಯಿಂದ ಸಂಚಾರ ನಿಷೇಧ ಅಗತ್ಯವಾದರೆ ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಘಾಟಿ ಹೆಚ್ಚಿನ ವಾಹನಗಳಿಗೆ ಬದಲಿ ರಸ್ತೆಯಾಗಲಿದೆ. ಇದರಿಂದ ಇಲ್ಲಿ ವಾಹನ ಸಂಚಾರ ಒತ್ತಡ ಉಂಟಾಗುವುದು ಖಚಿತ.

ಚಾರ್ಮಾಡಿ ಘಾಟಿ 2019ರ ಭೀಕರ ಮಳೆ, ಪ್ರವಾಹದಿಂದ ತತ್ತರಗೊಂಡು ಹಲವು ಸಮಯ ವಾಹನ ಸಂಚಾರ ಸಂಪೂರ್ಣ ನಿಷೇಧ ಮಾಡಲಾಗಿತ್ತು. ಬಳಿಕ ಘಾಟಿ ದುರಸ್ತಿಗೊಳಿಸಿ ಹಂತ ಹಂತವಾಗಿ ವಾಹನ ಸಂಚಾರ ಆರಂಭವಾಯಿತು. ಇತ್ತೀಚಿನವರೆಗೂ ಬಸ್‌-ಲಾರಿ ಮೊದಲಾದ ವಾಹನಗಳಿಗೆ ರಾತ್ರಿ ಸಂಚಾರಕ್ಕೆ ಅವಕಾಶ ಇರಲಿಲ್ಲ. ಈಗಲೂ ನಿಗದಿಪಡಿಸಿದ ಹೆಚ್ಚು ಭಾರದ ಘನ ವಾಹನ ಸಂಚಾರಕ್ಕೆ ನಿಷೇಧ ಮುಂದುವರಿದಿದೆ.

ಚಾರ್ಮಾಡಿ ಘಾಟಿಯ ಪ್ರಯಾಣವು ಸಂಪೂರ್ಣ ಸುರಕ್ಷಿತವಲ್ಲ. ಘಾಟಿ ಪ್ರದೇಶದಲ್ಲಿ ರಸ್ತೆಗಳು ಅಗಲಗೊಂಡು ತಡೆ ಗೋಡೆ, ಹೊಸ ಮೋರಿಗಳನ್ನು ಅಳವಡಿಸಲಾಗಿದೆ. ಆದರೂ ಇಲ್ಲಿ ಸುಮಾರು ಒಂಬತ್ತು ಕಡೆಗಳಲ್ಲಿ ಭೂಕುಸಿತ ಪ್ರದೇಶವನ್ನು ಗುರುತಿಸಲಾಗಿದೆ. ಇದಕ್ಕಾಗಿ 18 ಕೋಟಿ ರೂ.ಗಳಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯಲಿದೆ ಎಂದು ಇತ್ತೀಚೆಗೆ ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ್‌ ತಿಳಿಸಿದ್ದಾರೆ. ಇಂತಹ ಸ್ಥಿತಿ ಇರುವಾಗ ವಾಹನ ಸಂಚಾರ ಒತ್ತಡ ಹೆಚ್ಚಿದರೆ ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತದೆ. ಈಗಾಗಲೇ ಘಾಟಿ ರಸ್ತೆಯಲ್ಲಿ ರಜಾ ದಿನಗಳಂದು ಹೆಚ್ಚಿನ ವಾಹನ ಒತ್ತಡದಿಂದ ಟ್ರಾಫಿಕ್‌ ಜಾಮ್‌, ಸಣ್ಣಪುಟ್ಟ ಅಪಘಾತಗಳು ಆಗುತ್ತಿರುವುದು ಸಾಮಾನ್ಯವಾಗಿದೆ. ಧರೆಗುರುಳುವ ಮರಗಳು, ರೆಂಬೆಗಳು ಕೂಡ ಸಂಚಾರ ವ್ಯತ್ಯಯ ಉಂಟು ಮಾಡುತ್ತವೆ.

ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರಕ್ಕೆ ಅನುಮತಿ; ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ಅವಕಾಶ
ಅಗಲ ಕಿರಿದಾದ ಸಂಪರ್ಕ ರಸ್ತೆ

ಪುಂಜಾಲ ಕಟ್ಟೆಯಿಂದ ಚಾರ್ಮಾಡಿ ತನಕದ ರಸ್ತೆ ತೀರಾ ಅಗಲ ಕಿರಿದಾಗಿದೆ. ಶಿರಾಡಿ ಮೂಲಕ ದ. ಕ. ಜಿಲ್ಲೆಗೆ ಬರುವ ಹಾಗೂ ಇಲ್ಲಿಂದ ತೆರಳುವ ಹೆಚ್ಚಿನ ವಾಹನಗಳು ಈ ರಸ್ತೆಯಲ್ಲಿ ಸಂಚರಿಸಿ ಚಾರ್ಮಾಡಿ ಘಾಟಿ ಮೂಲಕ ಹೋಗುವುದು ಅನಿವಾರ್ಯ. ಅಗಲ ಕಿರಿದಾಗಿರುವ ಈ ಮಾರ್ಗದಲ್ಲಿ ಏಕಕಾಲದಲ್ಲಿ ಎದುರು ಬದುರು ಎರಡು ಲಾರಿ ಅಥವಾ ಬಸ್ಸುಗಳು ಸಂಚಾರ ನಡೆಸಲು ಹರಸಾಹಸ ಪಡಬೇಕಾದ ಸ್ಥಿತಿ ಇದೆ. ಹೀಗಿರುವಾಗ ಹೆಚ್ಚಿನ ಬಸ್ಸು, ಲಾರಿ ಹಾಗೂ ಇತರ ವಾಹನಗಳು ಚಾರ್ಮಾಡಿ ಮೂಲಕ ಓಡಾಟ ನಡೆಸಿದರೆ ಈ ರಸ್ತೆಗಳಲ್ಲಿ ಸಂಚಾರ ಸಮಸ್ಯೆ ಎದುರಾಗಲಿದೆ.

ಪ್ರವಾಸಿಗರಿಂದ ತೊಂದರೆ

ಚಾರ್ಮಾಡಿ ಘಾಟಿಯ ಪ್ರಕೃತಿ ಸೌಂದರ್ಯ ಅದ್ಭುತವಾಗಿದ್ದು ಪ್ರವಾಸಿಗರು ಇದರ ವೀಕ್ಷಣೆಗಾಗಿ ಘಾಟಿ ಪ್ರದೇಶದ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಾರೆ. ಇನ್ನು ಶಿರಾಡಿ ಮುಚ್ಚಿದರೆ ಅತಿ ಹೆಚ್ಚಿನ ಪ್ರವಾಸಿಗರು ಈ ಘಾಟಿ ಮೂಲಕ ಮೂಲಕವೇ ಸಂಚರಿಸುತ್ತಾರೆ. ಇವರೆಲ್ಲರೂ ಪ್ರಕೃತಿ ವೀಕ್ಷಣೆಗಾಗಿ ವಾಹನಗಳನ್ನು ನಿಲುಗಡೆ ಮಾಡುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇದು ಕೂಡ ವಾಹನ ಸಂಚಾರಕ್ಕೆ ಸವಾಲಾಗಲಿದೆ. ರಾತ್ರಿ ಸಮಯ ಕಾಡಾನೆ ಸಹಿತ ಅನೇಕ ಪ್ರಾಣಿ, ಸರೀಸೃಪಗಳು ಇಲ್ಲಿನ ರಸ್ತೆಯಲ್ಲಿಆಗಾಗ ಕಂಡುಬರುತ್ತವೆ. ವಾಹನಗಳ ಒತ್ತಡ ಹೆಚ್ಚಿದ್ದರೆ ಪ್ರಾಣಿಗಳ ಪ್ರಾಣಕ್ಕೆ ಸಂಚಕಾರ ಉಂಟಾಗುವ ಸಾಧ್ಯತೆ ಇದೆ.

ಚಾರ್ಮಾಡಿ ರಸ್ತೆಗೆ ಅಪಾಯ: ಕಾಮಗಾರಿ ಹಿನ್ನೆಲೆ ಶಿರಾಡಿ ರಸ್ತೆ ಬಂದ್‌; ಬದಲಿ ರಸ್ತೆಗೆ ಸಂಚಾರ ಒತ್ತಡ!
ಮಳೆ ಆರಂಭವಾದರೆ ಚಾರ್ಮಾಡಿ ಘಾಟಿಯಲ್ಲಿ ಬಂಡೆ, ಮಣ್ಣು, ರಸ್ತೆ ಕುಸಿತ, ಮರಗಳು ಉರುಳಿ ಸಂಚಾರ ವ್ಯತ್ಯಯ ಉಂಟಾಗುತ್ತದೆ. 6 ತಿಂಗಳುಗಳ ಕಾಲ ಶಿರಾಡಿ ಘಾಟಿ ಮುಚ್ಚಿದರೆ ಜುಲೈ ತನಕವು ಚಾರ್ಮಾಡಿ ಸಂಚಾರ ಅನಿವಾರ್ಯ. ಈ ಭಾಗದಲ್ಲಿ ಮೇ,ಜೂನ್‌ ತಿಂಗಳಲ್ಲಿ ಉತ್ತಮ ಮಳೆ ಸುರಿಯುತ್ತದೆ. ಮಳೆ ಸಮಯದಲ್ಲಿ ಚಾರ್ಮಾಡಿ ಸಂಚಾರದಲ್ಲಿ ಹೆಚ್ಚಿನ ಎಚ್ಚರ ಅಗತ್ಯ. ಇಂತಹ ಸಮಯದಲ್ಲಿ ವಾಹನಗಳ ಒತ್ತಡ ಹೆಚ್ಚಾದರೆ ಸಂಚಾರಕ್ಕೆ ಸಂಕಷ್ಟ ಉಂಟಾಗಲಿದೆ.

‘ಈಗಾಗಲೇ ಚಾರ್ಮಾಡಿ ಘಾಟಿ ಮೂಲಕ ಹೆಚ್ಚಿನ ವಾಹನ ಓಡಾಟ ಇದೆ. ಶಿರಾಡಿ ಘಾಟಿಯನ್ನು ಬಂದ್‌ ಮಾಡಿದರೆ ಇದು ಎರಡರಿಂದ ಮೂರು ಪಟ್ಟು ಅಧಿಕಗೊಳ್ಳಲಿದೆ. ಆಗ ಚಾರ್ಮಾಡಿ ಮೂಲಕ ಪ್ರಯಾಣಿಸುವ ಎಲ್ಲಾ ವಾಹನ ಓಡಾಡಬೇಕಾದ ಅನಿವಾರ್ಯತೆ ಉಂಟಾಗುತ್ತದೆ’ ಎನ್ನುತ್ತಾರೆ, ವಾಹನ ಚಾಲಕ ಅಶೋಕ್‌ ಮುಂಡಾಜೆ.

ಘಾಟಿಗಳಲ್ಲಿ ಡೇಂಜರ್‌ ಮರಗಳು; ಚಾರ್ಮಾಡಿ, ಶಿರಾಡಿಯಲ್ಲಿ ತೂಗುಗತ್ತಿಯಾಗಿವೆ ಅಪಾಯಕಾರಿ ವೃಕ್ಷಗಳು!



Read more

[wpas_products keywords=”deal of the day sale today offer all”]