Karnataka news paper

ಬಿಪಿಎಲ್‌ಗಾಗಿ ಜೈಲು ಸೇರಿದ 10 ಎಕರೆ ಭೂಮಿ ಒಡೆಯ; ಅನರ್ಹ ಕಾರ್ಡ್‌ದಾರರ ಬೇಟೆ ತೀವ್ರ, ಇನ್ನೂ ಹಲವರಿಗೆ ಕಾದಿದೆ ಶಿಕ್ಷೆ!


ಹೈಲೈಟ್ಸ್‌:

  • ನಕಲಿ ದಾಖಲೆ ಕೊಟ್ಟು ಬಿಪಿಎಲ್‌ ಪಡಿತರ ಚೀಟಿ ಪಡೆದಿದ್ದ ವ್ಯಕ್ತಿಯೊಬ್ಬರು ಜೈಲುಪಾಲಾಗಿದ್ದಾರೆ
  • ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಸಲ್ಲಿಸಿದ ದೂರು ಮತ್ತು ಸಾಕ್ಷ್ಯಗಳನ್ನು ಪರಿಗಣಿಸಿ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ
  • ಹಾಲಿ ಪ್ರಕರಣದಲ್ಲಿ ಆರೋಪಿಯು ಸುಶಿಕ್ಷಿತನಾಗಿದ್ದರೂ ಸರಕಾರಕ್ಕೆ ತಪ್ಪು ಮಾಹಿತಿ ನೀಡಿರುವುದು ಸಾಕ್ಷ್ಯಾಧಾರಗಳಿಂದ ದೃಢಪಟ್ಟಿತ್ತು

ಎಚ್‌.ಪಿ. ಪುಣ್ಯವತಿ, ಬೆಂಗಳೂರು
ಬೆಂಗಳೂರು: ಹತ್ತು ಎಕರೆ ಕೃಷಿ ಭೂಮಿ, ಪತ್ನಿ ಹೆಸರಿನಲ್ಲಿ ಕಾರು ಹೊಂದಿದ್ದರೂ ‘ನಾನು ಬಡವ’ ಎಂದು ನಕಲಿ ದಾಖಲೆ ಕೊಟ್ಟು ಬಿಪಿಎಲ್‌ ಪಡಿತರ ಚೀಟಿ ಪಡೆದಿದ್ದ ವ್ಯಕ್ತಿಯೊಬ್ಬರು ಜೈಲುಪಾಲಾಗಿದ್ದಾರೆ.

ರಾಣೆಬೆನ್ನೂರು ತಾಲೂಕಿನ ಹರನಗಿರಿ ಗ್ರಾಮದ ಈ ವ್ಯಕ್ತಿಯ ವಿರುದ್ಧ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಸಲ್ಲಿಸಿದ ದೂರು ಮತ್ತು ಸಾಕ್ಷ್ಯಗಳನ್ನು ಪರಿಗಣಿಸಿ ರಾಣೆಬೆನ್ನೂರಿನ 2ನೇ ಹೆಚ್ಚುವರಿ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ರಾಜ್ಯದಲ್ಲಿ ಸಾವಿರಾರು ಮಂದಿ ಶ್ರೀಮಂತರು ಬಿಪಿಎಲ್‌ ಕಾರ್ಡ್‌ದಾರರಾಗಿದ್ದು, ಇದರ ಪರಿಶೀಲನೆ ಕಾಲದಿಂದ ಕಾಲಕ್ಕೆ ನಡೆಯುತ್ತಿದೆ. ಕೆಲವರ ಬಿಪಿಎಲ್‌ ಕಾರ್ಡ್‌ ರದ್ದುಪಡಿಸಿದರೆ, ಇನ್ನು ಕೆಲವರಿಂದ ಅದುವರೆಗೆ ಪಡೆದ ಪಡಿತರದ ದಂಡ ವಸೂಲಿ ಮಾಡಲು ಸೂಚನೆ ನೀಡಲಾಗಿದೆ. ಕೆಲವು ವಿಶೇಷ ಪ್ರಕರಣಗಳಲ್ಲಿ ಜೈಲು ಶಿಕ್ಷೆಯನ್ನೂ ವಿಧಿಸಲಾಗಿದೆ.
ಪತ್ನಿ ಜೀವಂತವಿರುವಾಗಲೇ ನಕಲಿ ಮರಣ ಪತ್ರ ತಯಾರಿಸಿ ವಿಮೆ ಹಣ ಪಡೆದ ಗಂಡನಿಗೆ ಜೈಲುಶಿಕ್ಷೆ
ಅಂತ್ಯೋದಯ ಅನ್ನ ಮತ್ತು ಬಿಪಿಎಲ್‌ ಪಡಿತರ ಚೀಟಿಗಳನ್ನು ಇಲಾಖೆ ಮಾನದಂಡಗಳನ್ನು ತಪ್ಪಿಸಿ ಪಡೆದವರು ಕೂಡಲೇ ಸ್ವಯಂಪ್ರೇರಿತವಾಗಿ ಆಯಾ ತಾಲೂಕಿನ ತಹಸೀಲ್ದಾರರಿಗೆ ಹಿಂದಿರುಗಿಸಲು ಇಲಾಖೆ ಮೂರು ಬಾರಿ ಗಡುವು ನೀಡಿತ್ತು. ಕೆಲವೇ ಮಂದಿ ಹಿಂದಿರುಗಿಸಿದ್ದಾರೆ. ಸಾಕಷ್ಟು ಸಂಖ್ಯೆಯ ಅನರ್ಹ ಕಾರ್ಡ್‌ದಾರರು ಇನ್ನೂ ಇದ್ದಾರೆ.

ಎಷ್ಟು ಶಿಕ್ಷೆ?

ಹಾಲಿ ಪ್ರಕರಣದಲ್ಲಿ ಆರೋಪಿಯು ಸುಶಿಕ್ಷಿತನಾಗಿದ್ದರೂ ಸರಕಾರಕ್ಕೆ ತಪ್ಪು ಮಾಹಿತಿ ನೀಡಿರುವುದು ಸಾಕ್ಷ್ಯಾಧಾರಗಳಿಂದ ದೃಢಪಟ್ಟಿತ್ತು. ಹೀಗಾಗಿ ಆರೋಪಿಯು ಅಪರಾಧಗಳ ಪರಿವೀಕ್ಷಣಾ ಕಾಯಿದೆಯಡಿ ಯಾವುದೇ ರಿಯಾಯಿತಿ ಹೊಂದಲು ಅರ್ಹನಾಗಿರುವುದಿಲ್ಲ. ಈ ಹಿನ್ನಲೆಯಲ್ಲಿ ಆರೋಪಿಗೆ ಜೈಲು ಶಿಕ್ಷೆಯೇ ಸೂಕ್ತವೆಂದು ನ್ಯಾಯಾಲಯ ಪರಿಗಣಿಸಿತು. ಸಿಆರ್‌ಪಿಸಿ ಕಾಲಂ 420ರಡಿ 1 ವರ್ಷ ಕಾಲ ಕಠಿಣ ಸಜೆ ಮತ್ತು 3 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದರೆ ಇನ್ನೂ ಒಂದು ತಿಂಗಳು ಜೈಲು. ಇಷ್ಟೇ ಅಲ್ಲ, ಅಗತ್ಯ ವಸ್ತುಗಳ ಕಾಯಿದೆ 1955ರ 3ನೇ ಕಲಂ (ಉಪ ಕಲಂ 7) ಹಾಗೂ 1977ರ ನಿಯಮ 3ರ ಪ್ರಕಾರ ಅಪರಾಧಕ್ಕಾಗಿ 6 ತಿಂಗಳ ಕಾಲ ಸದಾ ಸಜೆ ಮತ್ತು 1 ಸಾವಿರ ರೂ. ದಂಡ ಪಾವತಿಸಬೇಕಾಗಿದೆ. ಪಾವತಿಸದಿದ್ದರೆ ಇನ್ನೂ ಒಂದು ತಿಂಗಳು ಜೈಲು. ಒಟ್ಟಾರೆಯಾಗಿ ಒಂದೂವರೆ ವರ್ಷ ಜೈಲು ಶಿಕ್ಷೆ ಮತ್ತು 4 ಸಾವಿರ ರೂ. ದಂಡ ಪಾವತಿಯ ಶಿಕ್ಷೆಗೆ ಒಳಗಾಗಿದ್ದಾನೆ.
ಪಡಿತರ ಚೀಟಿಗಾಗಿ ಕಾದಿದ್ದವರಿಗೆ ಖುಷಿ ಸುದ್ದಿ: ಬಾಕಿ ಉಳಿದ ಅರ್ಜಿಗಳಿಗೆ ರೇಷನ್ ಕಾರ್ಡ್ ವಿತರಣೆ
ಬಿಪಿಎಲ್‌ಗೆ ಯಾರು ಅನರ್ಹರು?

  • ಸರಕಾರಿ ನೌಕರರು
  • ಸರಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಗಳು, ಸರಕಾರಿ ಪ್ರಾಯೋಜಿತ, ಸರಕಾರಿ ಸ್ವಾಮ್ಯದ ಸಂಸ್ಥೆಗಳು/ಮಂಡಳಿಗಳು, ನಿಗಮಗಳು/ಸ್ವಾಯತ್ತ ಸಂಸ್ಥೆಗಳ ನೌಕರರು.
  • ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್‌, ವೃತ್ತಿ ತೆರಿಗೆ ಪಾವತಿಸುವ ಕುಟುಂಬಗಳು
  • ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್‌ಗಿಂತ ಹೆಚ್ಚಿನ ಒಣ ಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿದವರು.
  • ನಗರ ಪ್ರದೇಶದಲ್ಲಿ 1 ಸಾವಿರ ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು
  • ವಾರ್ಷಿಕ ಆದಾಯ 1.20 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವ ಕುಟುಂಬಗಳು

ಕೆಆರ್‌ ಪೇಟೆ: ವೈದ್ಯರಿಗೆ ಬೆದರಿಕೆ ಹಾಕಿ ಹಣ ದೋಚಿದ್ದ ನಕಲಿ ಪತ್ರಕರ್ತ ಸೇರಿ ಇಬ್ಬರಿಗೆ ಜೈಲು
ನಕಲಿ ದಾಖಲೆಗಳನ್ನು ಸಲ್ಲಿಸಿ ಪಡೆದಿದ್ದ 3,04,853 ಬಿಪಿಎಲ್‌ ಕಾರ್ಡ್‌ಗಳನ್ನು ಎಪಿಎಲ್‌ ಕಾರ್ಡ್‌ಗಳನ್ನಾಗಿ ಪರಿವರ್ತಿಸಲಾಗಿದೆ. ಈ ಮೂಲಕ 14 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಪಡಿತರ ವಿತರಣಾ ಪಟ್ಟಿಯಿಂದ ರದ್ದುಪಡಿಸಲಾಗಿದೆ. 2021ರಲ್ಲಿ ಒಟ್ಟಾರೆ 60.25 ಲಕ್ಷಕ್ಕೂ ಹೆಚ್ಚು ದಂಡ ವಸೂಲಿ ಮಾಡಲಾಗಿದೆ.
ಡಾ. ಶಮ್ಲಾ ಇಕ್ಬಾಲ್‌, ಆಯುಕ್ತರು, ರಾಜ್ಯ ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ



Read more

[wpas_products keywords=”deal of the day sale today offer all”]