Karnataka news paper

ಪಾದಯಾತ್ರೆ | ಕಾಂಗ್ರೆಸ್‌ ನಾಯಕರು ಕ್ಷಮೆ ಯಾಚಿಸಲಿ: ಆರಗ ಜ್ಞಾನೇಂದ್ರ


ಬೆಂಗಳೂರು: ‘ಕಾವೇರಿ ನದಿ ನೀರಿನ ಮೇಲಿನ ನಮ್ಮ ಹಕ್ಕನ್ನು ಪಡೆಯಲು ಅಧಿಕಾರದಲ್ಲಿದ್ದಾಗ ವಿಫಲರಾದ ಕಾಂಗ್ರೆಸ್‌ ನಾಯಕರು ಸಂಗಮದ ದಂಡೆಯಲ್ಲಿ ಮಂಡಿಯೂರಿ ರಾಜ್ಯದ ಜನರ ಕ್ಷಮೆ ಯಾಚಿಸಬೇಕು’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆಗ್ರಹಿಸಿದರು.

ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಅಧಿಕಾರದಲ್ಲಿದ್ದಾಗ ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್‌ ನಾಯಕರು ಏನನ್ನೂ ಮಾಡಲಿಲ್ಲ. ಈಗ ಮುಂದಿನ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ಪಾದಯಾತ್ರೆ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಕಾಂಗ್ರೆಸ್‌ ಸರ್ಕಾರವಿದ್ದ ಐದು ವರ್ಷಗಳ ಅವಧಿಯಲ್ಲಿ ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿ ಸಲ್ಲಿಸಿದ್ದು ಬಿಟ್ಟರೆ ಬೇರೆ ಏನೂ ಮಾಡಿರಲಿಲ್ಲ. ಈಗ ನೀರಿನ ಮೇಲೆ ರಾಜಕೀಯ ಮಾಡಲು ಹೊರಟಿದ್ದಾರೆ. ಇದು ಸಂಪೂರ್ಣವಾಗಿ ಚುನಾವಣೆಗಾಗಿ ನಡೆಸುತ್ತಿರುವ ಪಾದಯಾತ್ರೆ. ಇವರ ನಾಟಕವನ್ನು ಜನರು ಅರ್ಥ ಮಾಡಿಕೊಳ್ಳುತ್ತಾರೆ ಎಂದರು.

ಮೇಕೆದಾಟು ಯೋಜನೆಯ ವಿಚಾರ ಸದ್ಯ ಸುಪ್ರೀಂಕೋರ್ಟ್‌ ಮುಂದಿದೆ. ಈ ಯೋಜನೆಯನ್ನು ಬಿಜೆಪಿ ಸರ್ಕಾರ ಅನುಷ್ಠಾನಕ್ಕೆ ತರುವುದರಲ್ಲಿ ಯಾವುದೇ ಅನುಮಾನ ಬೇಡ. ಈ ವಿಚಾರದಲ್ಲಿ ಬಿಜೆಪಿ ಸರ್ಕಾರ ಬದ್ಧತೆ ಹೊಂದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Live | ಮೇಕೆದಾಟು: ಕಾಂಗ್ರೆಸ್‌ನಿಂದ ‘ನೀರಿಗಾಗಿ ನಡಿಗೆ’, ಸಂಗಮ‌ದಿಂದ ಪಾದಯಾತ್ರೆ ಆರಂಭ

ಕೊರೊನಾ ವೈರಾಣು ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈ ಸಂದರ್ಭದಲ್ಲಿ  ಕಾಂಗ್ರೆಸ್‌ ನಾಯಕರು ಕೋವಿಡ್‌ ನಿಯಂತ್ರಣ ಮಾರ್ಗಸೂಚಿ ಮತ್ತು ಕಾನೂನು ಲೆಕ್ಕಿಸದೆ ಪಾದಯಾತ್ರೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ ನಾಯಕರ ನಡವಳಿಕೆ ಅತ್ಯಂತ ಬೇಜವಾಬ್ದಾರಿಯುತವಾದುದು. ಅವರ ವಿರುದ್ಧ ರಾಮನಗರ ಜಿಲ್ಲಾಡಳಿತ ಸೂಕ್ತ ಕ್ರಮ ಜರುಗಿಸುತ್ತದೆ ಎಂದರು.



Read more from source

[wpas_products keywords=”deal of the day sale today kitchen”]