ಹೈಲೈಟ್ಸ್:
- ಚಿಕ್ಕಮಗಳೂರು-ಬೆಂಗಳೂರು ಮತ್ತು ಚಿಕ್ಕಮಗಳೂರು – ಶಿವಮೊಗ್ಗ ನಡುವಿನ ರೈಲುಗಳ ಸಂಚಾರ ಪುನಾರಂಭ
- ಇದೇ ಜನವರಿ 3 ಮತ್ತು ಜನವರಿ 4 ರಿಂದ ಪುನಾರಂಭ
- ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾಹಿತಿ
ಚಿಕ್ಕಮಗಳೂರು – ಕಡೂರು ಮಾರ್ಗದ ತಾತ್ಕಾಲಿಕ ಸ್ಥಗಿತವನ್ನು ತಕ್ಷಣ ರದ್ದುಗೊಳಿಸುವಂತೆ ನಡೆಸಿದ ಪ್ರಯತ್ನ ಯಶಸ್ವಿಯಾಗಿದೆ. ಜ. 3 ಮತ್ತು 4 ರಿಂದ ಎರಡೂ ರೈಲುಗಳ ಮರು ಓಡಾಟ ಆರಂಭವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಲೆನಾಡಿನ ಪ್ರಮುಖ ಜಿಲ್ಲೆ ಹಾಗೂ ಪ್ರವಾಸಿ ತಾಣವಾಗಿರುವ ಚಿಕ್ಕಮಗಳೂರು ಕಾಫಿ ಸೇರಿದಂತೆ ಕೃಷಿಗೆ ಪ್ರಸಿದ್ಧಿಯಾಗಿದೆ. ನಿತ್ಯ ಸಾವಿರಾರು ಜನರ ಪ್ರಯಾಣ, ಕೃಷಿ ಸಂಬಂಧಿ ಗೂಡ್ಸ್ ರೈಲುಗಳ ಸಂಚಾರಕ್ಕೆ ಅನುಕೂಲಕರ ಮಾರ್ಗವಾಗಿದೆ ಎಂದು ರೈಲ್ವೆ ಸಚಿವರು ಮತ್ತು ರೈಲ್ವೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದು, ಈ ಹಿಂದೆ ಇಲಾಖೆ ತೆಗೆದುಕೊಂಡಿದ್ದ ನಿರ್ಣಯ ವಾಪಸ್ ಪಡೆದಿದೆ ಎಂದಿದ್ದಾರೆ.
ಚಿಕ್ಕಮಗಳೂರು – ಕಡೂರು ರೈಲು ಮಾರ್ಗ, ರೈಲುಗಳನ್ನು ಲಾಭದಾಯಕ, ಜನಸ್ನೇಹಿಯಾಗಿಸುವ ಬಗ್ಗೆ ರೈಲ್ವೆ ಸಚಿವರಿಗೆ ಸಲಹೆಗಳನ್ನು ನೀಡಲಾಗಿದೆ. ಚಿಕ್ಕಮಗಳೂರು – ಬೆಂಗಳೂರು ನಡುವೆ ರಾತ್ರಿ ಸ್ಲೀಪರ್ ರೈಲು, ಹಗಲಿನಲ್ಲಿ ಬೆಂಗಳೂರು ಕಡೆಗೆ ಪ್ರಯಾಣಿಸುವವರಿಗೆ ಕಡೂರು, ಬೀರೂರಲ್ಲಿ ಸಂಪರ್ಕ ನೀಡುವ ಚಿಕ್ಕಮಗಳೂರು, ಬೀರೂರು, ಕಡೂರು ಡೆಮು ಸೇವೆ, ಕೃಷಿ ಸಂಬಂಧಿ ಕಿಸಾನ್ ರೈಲುಗಳ ಓಡಾಟದ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದಕ್ಕೆ ಪೂರಕವಾಗಿ ಸ್ಪಂದಿಸಿದ ರೈಲ್ವೆ ಸಚಿವರು ಸಮಯ ಬದಲಾವಣೆ, ಹೊಸ ರೈಲುಗಳ ಓಡಾಟದ ಬಗ್ಗೆ ಪರಿಶೀಲಿಸಿ ಪ್ರಸ್ತಾಪ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದಿದ್ದಾರೆ.