Karnataka news paper

ಬಿಜೆಪಿ ಕಾರ್ಯಕಾರಿಣಿ, ಕೋರ್‌ ಕಮಿಟಿ ಸಭೆ; ವರಿಷ್ಠರಿಗೆ ಸವಾಲಾದ ಆಂತರಿಕ ಗೊಂದಲ ನಿವಾರಣೆ!


ಬೆಂಗಳೂರು: ರಾಜ್ಯ ಬಿಜೆಪಿ ಕಾರ್ಯಕಾರಿಣಿ ಹಾಗೂ ಕೋರ್ ಕಮಿಟಿ ಸಭೆಯ ಬಳಿಕವಾದರೂ ನಾಯಕತ್ವ ಬದಲಾವಣೆ ಮತ್ತು ಆಂತರಿಕ ಗೊಂದಲಕ್ಕೆ ಬೀಳುತ್ತಾ ಬ್ರೇಕ್ ಎಂಬ ಪ್ರಶ್ನೆ ಉದ್ಭವವಾಗಿದೆ.

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಕಾರ್ಯಕಾರಿಣಿ ನಡೆದ್ದು, ಬುಧವಾರ ಕೋರ್ ಕಮಿಟಿ ಸಭೆಯೂ ನಡೆಯಲಿದೆ. ಎರಡು ದಿನಗಳ ಕಾಲ ನಡೆದ ಮಹತ್ವದ ಸಭೆಗಳಲ್ಲಿ ಮುಂದಿನ ವಿಧಾನಸಭೆ ಚುನಾವಣೆ ಗೆಲುವಿನ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆದಿದ್ದು, ಪಕ್ಷದ ಆಂತರಿಕ ಬಿಕ್ಕಟ್ಟುಗಳ ಬಗ್ಗೆಯೂ ಪ್ರಮುಖರ ಜೊತೆ ಅರುಣ್ ಸಿಂಗ್ ಚರ್ಚಿಸಿದ್ದಾರೆ.

ಬಿಕ್ಕಟ್ಟು ನಂಬರ್ 1
ನಾಯಕತ್ವ ಬದಲಾವಣೆ ಗುಮ್ಮ!
ಬಿಎಸ್‌ ಯಡಿಯೂರಪ್ಪ ರಾಜೀನಾಮೆಯ ಬಳಿಕ ಪಕ್ಷದಲ್ಲಿ ಉಂಟಾಗಿರುವ ಆಂತರಿಕ ಕ್ಷೋಭೆಗೆ ಕಡಿವಾಣ ಬೀಳಲಿದೆ ಎಂಬ ನಂಬಿಕೆ ಬಿಜೆಪಿಯಲ್ಲಿ ಹುಸಿಯಾಗುತ್ತಿದೆ. ಪಕ್ಷದಲ್ಲಿ ಮತ್ತೆ ನಾಯಕತ್ವ ಬದಲಾವಣೆ ಚರ್ಚೆ ಶುರುವಾಗಿದೆ. ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡು ಇನ್ನೇನು ಕೆಲವೇ ತಿಂಗಳು ದಾಟಿರುವಾಗಲೇ ನಾಯಕತ್ವ ಬದಲಾವಣೆ ಚರ್ಚೆ ಮುನ್ನಲೆಗೆ ಬಂದಿದೆ. ಈ ನಡುವೆ ಸಚಿವ ಕೆ.ಎಸ್‌ ಈಶ್ವರಪ್ಪ ಅವರು ಮುರುಗೇಶ್ ನಿರಾಣಿ ಪರವಾಗಿ ಬ್ಯಾಟ್ ಬೀಸಿದ್ದು, ಪ್ರತ್ಯೇಕ ಸಭೆ ನಡೆಸಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ನಾಯಕತ್ವ ಬದಲಾವಣೆ ಇಲ್ಲ ಎಂದು ಪ್ರಮುಖರು ಹೇಳುತ್ತಿದ್ದರೂ ಪಕ್ಷದ ಮೊಗಸಾಲೆಯಲ್ಲಿ ಇದು ಬಹುಚರ್ಚಿತ ವಿಷಯವಾಗಿದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ ಕೋರ್‌ ಕಮಿಟಿ ಸಭೆಯಲ್ಲೂ ಈ ವಿಚಾರ ಚರ್ಚೆಯಾಗಲಿದೆ.
ರಾಜ್ಯ ಕಾರ್ಯಕಾರಣಿಗೆ ನಡ್ಡಾ, ಬಿಎಸ್‌ವೈ, ಜಾರಕಿಹೊಳಿ ಬ್ರದರ್ಸ್ ಗೈರು! ಸರ್ಕಾರದ ಸಾಧನೆ ಹೇಳಲಷ್ಟೇ ಸೀಮಿತ!
ಬಿಕ್ಕಟ್ಟು ನಂಬರ್ 2
ಜಾರಕಿಹೊಳಿ ಬಂಡಾಯದ ಸವಾಲು!

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬರಲು ಪ್ರಮುಖ ಕಾರಣರಲ್ಲೊಬ್ಬರು ರಮೇಶ್ ಜಾರಕಿಹೊಳಿ. ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದುಕೊಂಡರೂ ತನ್ನ ಅಶ್ಲೀಲ ಸಿ.ಡಿಯಿಂದಾಗಿ ರಾಜಕೀಯ ಅತಂತ್ರ ಸ್ಥಿತಿಯಲ್ಲಿ ರಮೇಶ್ ಇದ್ದಾರೆ. ಈ ನಡುವೆ ವಿಧಾನಪರಿಷತ್‌ ಚುನಾವಣೆಯಲ್ಲಿ ಬೆಳಗಾವಿಗೆ ತಮ್ಮ ಸಹೋದರ ಲಖನ್ ಜಾರಕಿಹೊಳಿಗೆ ಟಿಕೆಟ್ ಬೇಡಿಕೆ ಇಟ್ಟಿದ್ದ ರಮೇಶ್ ಟಿಕೆಟ್ ಕೈತಪ್ಪಿದರೂ ಪಕ್ಷೇತರವಾಗಿ ಲಖನ್ ಗೆಲ್ಲಿಸುವಲ್ಲಿ ಸಕ್ಸಸ್ ಆಗಿದ್ದಾರೆ. ಸಹವಾಗಿ ಬಿಜೆಪಿ ಅಧಿಕೃತ ಅಭ್ಯರ್ಥಿ ಸೋಲು ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ. ಆದರೆ ಅವರ ವಿರುದ್ಧ ಯಾವುದೇ ಕ್ರಮ ಆಗಿಲ್ಲ. ಈ ವಿಚಾರ ವರಿಷ್ಠರ ಮಟ್ಟದಲ್ಲೂ ಚರ್ಚೆ ನಡೆದಿದೆ. ಪರಿಷತ್‌ ಚುನಾವಣೆಯಲ್ಲಿ ಸೋತ ಮಹಾಂತೇಷ್ ಕವಟಗಿಮಠ ಅರುಣ್ ಸಿಂಗ್ ಭೇಟಿ ಮಾಡಿ ದೂರು ನೀಡಿದ್ದಾರೆ. ಈ ನಿಟ್ಟಿನಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಕ್ರಮಕ್ಕೆ ಪ್ರಮುಖರು ಮುಂದಾಗುತ್ತಾರಾ ಎಂಬುವುದು ಸದ್ಯದ ಕುತೂಹಲ.
ರಾಜ್ಯ ಕಾರ್ಯಕಾರಿಣಿಯಲ್ಲಿ ಆರೋಪ, ಪ್ರತ್ಯಾರೋಪಗಳಿಗೆ ಅವಕಾಶವಿಲ್ಲ: ಪ್ರಹ್ಲಾದ್‌ ಜೋಶಿ
ಬಿಕ್ಕಟ್ಟು ನಂಬರ್ 3
ಬಿಎಸ್‌ವೈ ಗುಂಪಿನ ಅಸಮಾಧಾನ!

ಸಿಎಂ ಸ್ಥಾನ ಕಳೆದುಕೊಂಡ ಬಿಎಸ್‌ ಯಡಿಯೂರಪ್ಪ ಸದ್ಯ ಸೈಲೆಂಟ್ ಆಗಿದ್ದಾರೆ. ಆದರೂ ಪಕ್ಷದಲ್ಲಿ ಅವರು ಎಂದಿನಂತೆ ಸಕ್ರಿಯರಾಗಿಲ್ಲ. ಬಿಎಸ್‌ವೈ ಸ್ಥಾನ ಕಳೆದುಕೊಂಡರೂ ಅವರ ಪುತ್ರ ಬಿ.ವೈ ವಿಜಯೇಂದ್ರ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಅದೂ ಹುಸಿಯಾಗುತ್ತಿವೆ. ಸದ್ಯ ಖಾಲಿ ಇರುವ ನಾಲ್ಕು ಸ್ಥಾನಗಳ ಪೈಕಿ ವಿಜಯೇಂದ್ರಗೆ ಮಂತ್ರಿ ಸೀಟು ಸಿಗುವುದು ಕಷ್ಟ. ಈ ನಡುವೆ ಗುಜರಾತ್ ಮಾದರಿಯಲ್ಲಿ ಸಂಪುಟ ಪುನಾರಚನೆಯ ಮಾತುಗಳು ಕೇಳಿಬರುತ್ತಿದೆ. ಸಂಕ್ರಾಂತಿಯ ಬಳಿಕ ಪೂರ್ಣ ಸಂಪುಟ ಪುನಾಚರನೆಯಾಗಲಿದೆ. ಹೊಸ ಮುಖಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂಬ ಮಾತಿದೆ. ಆದರೆ ಇದನ್ನು ಯಾರೂ ಅಧಿಕೃತಗೊಳಿಸಿಲ್ಲ. ಅದರಲ್ಲೂ ಬಿಎಸ್‌ವೈ ಗುಂಪಿಗೆ ಸಂಪುಟದಲ್ಲಿ ಹೆಚ್ಚಿನ ಆದ್ಯತೆ ನೀಡದೆ ಇರುವುದು ಚರ್ಚೆಗೆ ಗ್ರಾಸವಾಗುತ್ತಿದೆ. ಈ ಅಸಮಾಧಾನ ಮತ್ತಷ್ಟು ತೀವ್ರಗೊಳ್ಳದಂತೆ ನೋಡಿಕೊಳ್ಳುವುದು ಕೂಡಾ ಸವಾಲಿನ ಸಂಗತಿಯಾಗಿದೆ.
ಸಿಎಂ ಬದಲಾವಣೆ ಬಗ್ಗೆ ಮಾತಾಡಿದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ; ಬಸನಗೌಡ ಯತ್ನಾಳ್‌
ಒಟ್ಟಿನಲ್ಲಿ ಎರಡು ದಿನಗಳ ಕಾಲದ ಹುಬ್ಬಳ್ಳಿಯ ಬೆಳವಣಿಗೆಗಳ ಪರಿಣಾಮಗಳು ಏನು ಎಂಬುವುದು ಮುಂದಿನ ದಿನಗಳಲ್ಲಿ ಸ್ಪಷ್ಟಗೊಳ್ಳಲಿದೆ. ಬಹಿರಂಗವಾಗಿ ಮುಂದಿನ ಚುನಾವಣೆ ತಯಾರಿ, ಕಾರ್ಯತಂತ್ರ ಎಂದು ಹೇಳುತ್ತಿದ್ದರೂ ಪಕ್ಷದ ಆಂತರಿಕ ಸಮಸ್ಯೆಗಳು, ಬಿಕ್ಕಟ್ಟುಗಳಿಗೆ ಪರಿಹಾರ ನೀಡುವ ವಿಚಾರವೇ ಕೋರ್ ಕಮಿಟಿ ಸಭೆಯಲ್ಲಿ ಪ್ರಮುಖ ಚರ್ಚಾ ವಿಷಯವಾಗಲಿದೆ ಎಂಬವುದು ವಾಸ್ತವ.



Read more