Karnataka news paper

ಮೈಸೂರಲ್ಲಿ ಕಡಿದ ವೃಕ್ಷಕ್ಕೆ ತಿಥಿ ಕಾರ್ಯ ನಡೆಸಿ ವಿಶಿಷ್ಟ ಪ್ರತಿಭಟನೆ ನಡೆಸಿದ ಪರಿಸರ ಪ್ರಿಯರು!


ಮೈಸೂರು: ಬೋಳು ಮರದ ಮುಂದೆ ನಿಂತು “ಮತ್ತೆ ಹುಟ್ಟಿ ಬಾ ಮರವೇ” ಎಂದು ಪ್ರಾರ್ಥಿಸುವ ಮೂಲಕ ಪರಿಸರ ಪ್ರೇಮಿಗಳು ಶ್ರದ್ಧಾಂಜಲಿ ಸಲ್ಲಿಸಿದರು. ಪುಷ್ಪ ನಮನ ಸಲ್ಲಿಸಿ, ನೀನು ಬದುಕಿದ್ದ ಕಾಲದಲ್ಲಿ ಎಷ್ಟೋ ಮಂದಿಗೆ ಆಕ್ಸಿಜನ್ ನೀಡಿದೆ. ಸಹಸ್ರ ಕ್ರೀಮಿ, ಕೀಟ ಜೀವಿಗಳಿಗೆ ಹಾಗೂ ಪ್ರಾಣಿ- ಪಕ್ಷಿಗಳಿಗೆ ಆಶ್ರಯ ನೀಡಿದ್ದ ನಿನ್ನನ್ನು ಕಳೆದುಕೊಂಡಿದ್ದೇವೆ ಎಂದು ಸ್ಮರಿಸಿದರು.

ನಗರದ ಯಾದವಗಿರಿಯ ಆಸ್ಪತ್ರೆಯೊಂದರ ಮುಂಭಾಗದ ನಾಲ್ಕು ಮರಗಳನ್ನು ಬಡದ ವರೆಗೆ ಕಡಿದಿರುವುದನ್ನು ಖಂಡಿಸಿ ಪ್ರತಿಭಟಿಸಿದ ರೀತಿ ಇದು. ಮೈಸೂರು ಗ್ರಾಹಕ ಪರಿಷತ್ ಆಯೋಜಿಸಿದ್ದ ಈ ವಿಭಿನ್ನ ಕಾರ್ಯಕ್ರಮದಲ್ಲಿ ಪರಿಷತ್ ಸದಸ್ಯರು, ಯಾದವಗಿರಿ ನಿವಾಸಿಗಳು, ಕ್ಲೀನ್ ಮೈಸೂರು ಫೌಂಡೇಶನ್, ಪರಿಸರ ಬಳಗ ಸೇರಿದಂತೆ ಹಲವು ಸಂಘಟನೆಗಳು ಸದಸ್ಯರು ಸೇರಿ ಕಡಿದ ಮರಗಳ ತಿಥಿ ಕಾರ್ಯ ನಡೆಸುವ ಮೂಲಕ ಮರಕ್ಕೆ ಕೊಡಲಿ ಹಾಕುವವರ ವಿರುದ್ಧ ತಮ್ಮ ಸ್ವಾತ್ವಿಕ ಸಿಟ್ಟನ್ನು ಹೊರ ಹಾಕಿದರು.

ಪುರೋಹಿತ ಶಾಂತರಾಮ ಭಟ್ಟ ತಿಥಿ ಕಾರ್ಯದ ಮಂತ್ರ ಘೋಷಗಳನ್ನು ಪಠಿಸಿ ಪೂಜೆ ಸಲ್ಲಿಸಿದರು, ಬಳಿಕ ಅಲ್ಲಿ ನೆರದಿದ್ದವರು ಪುಷ್ಪ ನಮನ ಸಲ್ಲಿಸಿ ಮರುಕ ವ್ಯಕ್ತಪಡಿಸಿದರು. ಬಳಿಕ ಮೈಸೂರಿನಲ್ಲಿ ಎಲ್ಲೇ ಮರ ಕಡಿಯುತ್ತಿದ್ದರೂ ಅದನ್ನು ತಡೆಯುತ್ತೇವೆ. ಅದರ ವಿರುದ್ಧ ಹೋರಾಡುತ್ತೇವೆ ಎಂದು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ಚಿತ್ತಾಕರ್ಷಕ ಫಲಪುಷ್ಪ ಪ್ರದರ್ಶನ

ಕಾರ್ಯಕ್ರಮದಲ್ಲಿ ಹಾಜರಿದ್ದ ಪಾಲಿಕೆ ಸದಸ್ಯ ರವೀದ್ರ ಅವರಿಗೆ ಇನ್ಮುಂದೆ ಈ ತರಹದ ಘಟನೆ ನಡೆಯದಂತೆ ನೋಡಿಕೊಳ್ಳಬೇಕೆಂದು ಪರಿಸರ ಪ್ರಿಯರು ತಾಕೀತು ಮಾಡಿದರು.

ಮೈಸೂರು ಗ್ರಾಹಕ ಪರಿಷತ್ ಪರಿಷತ್ ಸಂಸ್ಥಾಪಕ ಭಾಮಿ ಶೆಣೈ ಮಾತನಾಡಿ, ಯಾದವಗಿರಿ ವಿವೇಕಾನಂದ ರಸ್ತೆಯ ಖಾಸಗಿ ಆಸ್ಪತ್ರೆ ಮಾಲೀಕ. ಆಸ್ಪತ್ರೆ ಚೆನ್ನಾಗಿ ಕಾಣಿಸಲೆಂದು ಮರಗಳ ಬುಡದ ವರೆಗೆ ಕತ್ತರಿಸಿದ್ದಾರೆ. ಇದರ ವಿರುದ್ಧ ಅರಣ್ಯ ಇಲಾಖೆಗೆ ದೂರು ನೀಡಿದ್ದು, ಮರ ಕಡಿಸಿದವರಿಗೆ 50 ಸಾವಿರ ರೂ. ದಂಡ ವಿಧಿಸುವುದಾಗಿ ಡಿಸಿಎಫ್ ಕರಿಕಾಳನ್ ತಿಳಿಸಿದ್ದಾರೆ. ಆದರೆ ಒಂದು ಮರದ ವೌಲ್ಯದ 600 ಕೋಟಿ ರೂ. ಆಗಿದೆ. ಹೀಗಾಗಿ ಮತ್ಯಾರು ಮರ ಕಡಿಯದಂತೆ ಎಚ್ಚರಿಕೆ ನೀಡುವ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು.

ಪರಿಸರ ಬಳಗ ಪರಶುರಾಮೇಗೌಡ, ಶೈಲಾಜೇಶ್, ಕ್ಲೀನ್ ಮೈಸೂರು ಫೌಂಡೇಶನ್‌ನ ಲೀಲಾ ಶಿವಕುಮಾರ್, ಲೀಲಾ ವೆಂಕಟೇಶ್, ಯಾದವಗಿರಿಯ ನಿವಾಸಿಗಳು ಮತ್ತಿತರರಿದ್ದರು.



Read more