Karnataka news paper

ರಾಜ್ಯದಲ್ಲಿ ಮತ್ತೆ 7 ಮಂದಿಯಲ್ಲಿ ಓಮಿಕ್ರಾನ್‌ ಪತ್ತೆ, ಸೋಂಕಿತರ ಸಂಖ್ಯೆ 38ಕ್ಕೆ ಏರಿಕೆ


ಹೈಲೈಟ್ಸ್‌:

  • ಶನಿವಾರ ಕರ್ನಾಟಕದಲ್ಲಿ ಹೊಸದಾಗಿ 7 ಮಂದಿಗೆ ಕೊರೊನಾ ರೂಪಾಂತರಿ ಓಮಿಕ್ರಾನ್‌ ಸೋಂಕು ತಗಲಿರುವುದು ದೃಢ
  • ಇದರಿಂದ ರಾಜ್ಯದ ಓಮಿಕ್ರಾನ್‌ ಬಾಧಿತರ ಸಂಖ್ಯೆ 38ಕ್ಕೆ ಏರಿಕೆ
  • ದೇಶದಲ್ಲೇ ಓಮಿಕ್ರಾನ್‌ ಸೋಂಕಿಗೆ ತುತ್ತಾದ ರಾಜ್ಯಗಳ ಪೈಕಿ ನಾಲ್ಕನೇ ಸ್ಥಾನದಲ್ಲಿ ಕರ್ನಾಟಕ

ಬೆಂಗಳೂರು: ರಾಜ್ಯದಲ್ಲಿ ಶನಿವಾರ ಹೊಸದಾಗಿ 7 ಮಂದಿಗೆ ಕೊರೊನಾ ರೂಪಾಂತರಿ ಓಮಿಕ್ರಾನ್‌ ಸೋಂಕು ತಗಲಿರುವುದು ದೃಢಪಟ್ಟಿದೆ. ಇದರಿಂದ ಕರ್ನಾಟಕದಲ್ಲಿ ಓಮಿಕ್ರಾನ್‌ ಬಾಧಿತರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ.

ಹೊಸದಿಲ್ಲಿಯಿಂದ ಬೆಂಗಳೂರಿಗೆ ಬಂದ 76 ವರ್ಷದ ವೃದ್ಧ, ಅಮೆರಿಕಾದಿಂದ ಮರಳಿದ 30 ವರ್ಷದ ಯುವಕ, ಜಿಂಬಾವ್ವೆಯಿಂದ ಬಂದ 63 ವರ್ಷದ ವೃದ್ಧ ಹಾಗೂ ಯಾವುದೇ ಪ್ರಯಾಣ ಇತಿಹಾಸವಿಲ್ಲದ ಬೆಂಗಳೂರಿನ 54 ವರ್ಷದ ವ್ಯಕ್ತಿ, ಇಂಗ್ಲೆಂಡ್‌ನಿಂದ ಬಂದ 21 ವರ್ಷದ ಯುವಕ ಹಾಗೂ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಿಂದ ಬಂದ 15 ವರ್ಷದ ತರುಣ ಹಾಗೂ 62 ವರ್ಷದ ಬೆಂಗಳೂರು ಮೂಲದ ವೃದ್ಧೆಗೆ ಓಮಿಕ್ರಾನ್‌ ಸೋಂಕು ತಗುಲಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಡಿಸೆಂಬರ್‌ 2ರಂದು ದೇಶದಲ್ಲಿಯೇ ಮೊದಲ ಬಾರಿಗೆ ಓಮಿಕ್ರಾನ್‌ ಪ್ರಕರಣ ರಾಜ್ಯದಲ್ಲಿ ವರದಿಯಾಗಿತ್ತು. ಆನಂತರ ಓಮಿಕ್ರಾನ್‌ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಸದ್ಯ ಕರ್ನಾಟಕವು ಓಮಿಕ್ರಾನ್‌ ಸೋಂಕಿಗೆ ತುತ್ತಾದ ರಾಜ್ಯಗಳ ಪೈಕಿ ನಾಲ್ಕನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ.

ಜನವರಿಯಿಂದ ಮಕ್ಕಳಿಗೆ ಕೊರೊನಾ ಲಸಿಕೆ, ಫ್ರಂಟ್‌ಲೈನ್‌ ವರ್ಕರ್ಸ್‌ಗೆ ಬೂಸ್ಟರ್‌ ಡೋಸ್‌ – ಪ್ರಧಾನಿ ಘೋಷಣೆ
ರಾಜ್ಯಕ್ಕೆ ಕೇಂದ್ರ ತಂಡ

ದೇಶದಲ್ಲಿ ಕೊರೊನಾ ರೂಪಾಂತರಿ ‘ಓಮಿಕ್ರಾನ್‌’ ವೈರಾಣು ಪ್ರಕರಣಗಳು ದಿನೇ ದಿನೆ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವೇ ಅಖಾಡಕ್ಕೆ ಇಳಿದಿದೆ. ಕರ್ನಾಟಕ ಸೇರಿದಂತೆ ಹತ್ತು ರಾಜ್ಯಗಳಿಗೆ ‘ಬಹುಶಿಸ್ತೀಯ ತಂಡ’ಗಳನ್ನು ಶನಿವಾರ ರವಾನಿಸಿದೆ.

ಓಮಿಕ್ರಾನ್‌ ಪ್ರಕರಣಗಳ ಹೆಚ್ಚಳ, ಕೊರೊನಾ ನಿರೋಧಕ ಲಸಿಕೆ ಅಭಿಯಾನ ನಿಧಾನವಾಗುತ್ತಿರುವುದು ಸೇರಿ ಹಲವು ವಿಷಯಗಳ ಕುರಿತು ಈ ತಂಡಗಳು ನಿಗಾವಹಿಸುವುದರ ಜತೆಗೆ ಈ ನಿಯಂತ್ರಣ ಕ್ರಮಗಳ ಕುರಿತು ರಾಜ್ಯಗಳಿಗೆ ಮಾರ್ಗದರ್ಶನ ನೀಡಲಿವೆ. ಬಹುಶಿಸ್ತೀಯ ತಂಡಗಳನ್ನು ಆರೋಗ್ಯ ಸಚಿವಾಲಯ ನಿಯೋಜಿಸಿದೆ. ಪ್ರತಿ ತಂಡವೂ ಐದು ದಿನ ಕಾಲ ರಾಜ್ಯದಲ್ಲಿಯೇ ವಾಸ್ತವ್ಯ ಹೂಡಿ, ಆರೋಗ್ಯ ಇಲಾಖೆಯ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಲಿವೆ.

ದೇಶದಲ್ಲಿ ಹೆಚ್ಚಿದ ಓಮಿಕ್ರಾನ್‌ ಆತಂಕ, ಪ್ರಕರಣಗಳ ಸಂಖ್ಯೆ 415ಕ್ಕೆ ಏರಿಕೆ; ಭಾನುವಾರ ಬೊಮ್ಮಾಯಿ ಸಭೆ
ಹೊಸ ರೂಪಾಂತರಿ ಪ್ರಕರಣ ಹೆಚ್ಚಿರುವ ಕರ್ನಾಟಕ, ಕೇರಳ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಿಜೋರಾಂ, ಜಾರ್ಖಂಡ್‌, ಬಿಹಾರ ಹಾಗೂ ಪಂಜಾಬ್‌ಗೆ ಕೇಂದ್ರದ ತಂಡಗಳನ್ನು ನಿಯೋಜಿಸಲಾಗಿದೆ.

‘‘ಆಯಾ ರಾಜ್ಯಗಳ ಆರೋಗ್ಯ ಅಧಿಕಾರಿಗಳ ಜತೆಗೂಡಿ ಕೇಂದ್ರದ ತಂಡಗಳು ಕಾರ್ಯನಿರ್ವಹಿಸಲಿವೆ. ಓಮಿಕ್ರಾನ್‌ ಪ್ರಕರಣ, ಲಸಿಕೆ ಅಭಿಯಾನಕ್ಕೆ ವೇಗ, ಜಿನೋಮ್‌ ಸಿಕ್ವೆನ್ಸಿಂಗ್‌, ಕೊರೊನಾ ತಪಾಸಣೆ, ವೈದ್ಯಕೀಯ ಸೌಲಭ್ಯ, ಕೃತಕ ಆಮ್ಲಜನಕ, ಆಸ್ಪತ್ರೆಗಳಲ್ಲಿ ಹಾಸಿಗೆ, ವೆಂಟಿಲೇಟರ್‌ ಸೇರಿ ಹಲವು ವಿಷಯಗಳ ಕುರಿತ ಸ್ಥಿತಿಗತಿ ವರದಿ ತಯಾರಿಸಲಿದೆ,’’ ಎಂದು ಕೇಂದ್ರ ಸರಕಾರ ತಿಳಿಸಿದೆ. ನಿತ್ಯ ಸಂಜೆ 7 ಗಂಟೆಗೆ ಆಯಾ ದಿನದ ವರದಿಯನ್ನು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಸಲ್ಲಿಸಲಿವೆ.

ರಾಜ್ಯದಲ್ಲಿ ಕೊರೊನಾ ಹಾವು ಏಣಿಯಾಟ, ಹೊಸ ಕೇಸ್‌ ಇಳಿಕೆ, ಸಕ್ರಿಯ ಪ್ರಕರಣ ಏರಿಕೆ!
ಭಾನುವಾರ ಸಿಎಂ ಸಭೆ

ಓಮಿಕ್ರಾನ್‌ ಪ್ರಕರಣಗಳ ನಿಯಂತ್ರಣ ಕುರಿತಂತೆ ತಜ್ಞರ ಜತೆ ಸಮಾಲೋಚನೆ ನಡೆಸಲು ಭಾನುವಾರ ಸಭೆ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ‘‘ಕರ್ನಾಟಕದ ಗಡಿ ರಾಜ್ಯಗಳಾದ ಮಹಾರಾಷ್ಟ್ರ, ಕೇರಳ ಮತ್ತು ತಮಿಳನಾಡಿನಲ್ಲಿ ಓಮಿಕ್ರಾನ್‌ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದು ಆತಂಕಕ್ಕೆ ಕಾರಣವಾಗಿದೆ,” ಎಂದರು.

‘‘ಬೆಂಗಳೂರಿನಲ್ಲಿ ತಜ್ಞರೊಂದಿಗೆ ಸಭೆ ನಡೆಸಿ ಈಗಿರುವ ಸ್ಥಿತಿಗಳಿಗೆ ಅನುಗುಣವಾಗಿ ರಾಜ್ಯದಲ್ಲಿ ಕೈಗೊಳ್ಳಬೇಕಾಗಿರುವ ಮುಂದಿನ ಕ್ರಮಗಳ ಕುರಿತಂತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’’ ಎಂದು ತಿಳಿಸಿದರು.

ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಹೂಲಿಹಳ್ಳಿ ಹೆಲಿಪ್ಯಾಡ್‌ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನೈಟ್‌ ಕರ್ಫ್ಯೂ ವಿಚಾರದ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು,” ಎಂದು ಹೇಳಿದರು.

ಕೋವಿಡ್‌ಗೆ 4 ಮಂದಿ ಬಲಿ

ರಾಜ್ಯದಲ್ಲಿ ಕೋವಿಡ್‌ ಸೋಂಕಿನ ಏರಿಳಿತ ಮುಂದುವರಿದಿದೆ. ಶನಿವಾರ 97,782 ಜನರಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದ್ದು, 270 ಜನರಲ್ಲಿ ಸೋಂಕು ಕಂಡು ಬಂದಿದೆ. ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ 30,04,239ಕ್ಕೆ ಏರಿಕೆಯಾಗಿದ್ದು, ಇಲ್ಲಿಯವರೆಗೆ 29,58,630 ಮಂದಿ ಚೇತರಿಸಿಕೊಂಡಿದ್ದಾರೆ. ಸೋಂಕಿನಿಂದ ಬಳಲುತ್ತಿದ್ದ 38,309 ಮಂದಿ ಸಾವಿಗೀಡಾಗಿದ್ದಾರೆ.

ಸದ್ಯ ರಾಜ್ಯದಲ್ಲಿ 7,271 ಸಕ್ರಿಯ ಪ್ರಕರಣಗಳಿವೆ. ಕೋವಿಡ್‌ ಸೋಂಕಿನ ಪ್ರಮಾಣ ಶೇ.0.27, ಸಾವಿನ ಪ್ರಮಾಣ ಶೇ. 1.48ರಷ್ಟಿದೆ. ಬೆಂಗಳೂರು ನಗರದಲ್ಲಿ 152, ಕೊಡಗು 25, ತುಮಕೂರು ಮತ್ತು ಉಡುಪಿಯಲ್ಲಿ ತಲಾ 14 ಪ್ರಕರಣಗಳು ವರದಿಯಾಗಿವೆ. 11 ಜಿಲ್ಲೆಗಳಲ್ಲಿ ಯಾವುದೇ ಸೋಂಕಿತ ಪ್ರಕರಣಗಳು ಕಂಡುಬಂದಿಲ್ಲ. ಬೆಂಗಳೂರು ನಗರದಲ್ಲಿ 2, ಧಾರವಾಡ ಮತ್ತು ಉಡುಪಿಯಲ್ಲಿ ತಲಾ ಒಬ್ಬರು ಸೋಂಕಿತರು ಮೃತಪಟ್ಟಿದ್ದಾರೆ.



Read more