Karnataka news paper

ರಾಜ್ಯದಲ್ಲಿ ಕೊರೊನಾ ಹಾವು ಏಣಿಯಾಟ, ಹೊಸ ಕೇಸ್‌ ಇಳಿಕೆ, ಸಕ್ರಿಯ ಪ್ರಕರಣ ಏರಿಕೆ!


ಹೈಲೈಟ್ಸ್‌:

  • ಶನಿವಾರ ರಾಜ್ಯದಲ್ಲಿ 270 ಕೊರೊನಾ ಸೋಂಕಿನ ಪ್ರಕರಣಗಳು ದೃಢ
  • ಒಂದು ದಿನದ ಅಂತರದಲ್ಲಿ ಕೊರೊನಾದಿಂದ 4 ಮಂದಿ ಸಾವು
  • ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದರೂ, ಸಕ್ರಿಯ ಕೇಸ್‌ಗಳ ಸಂಖ್ಯೆ ಏರಿಕೆ

ಬೆಂಗಳೂರು: ದೇಶದ ಹಲವು ರಾಜ್ಯಗಳಲ್ಲಿ ಶನಿವಾರ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದರೂ ಕರ್ನಾಟಕದಲ್ಲಿ ಮಾತ್ರ ಕೋವಿಡ್ ಕೇಸ್‌ಗಳ ಸಂಖ್ಯೆ ಇಳಿಕೆಯಾಗಿದೆ. ವಾರದ ಕೊನೆಯ ದಿನ ರಾಜ್ಯದಲ್ಲಿ 270 ಸೋಂಕಿನ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 30,04,239ಕ್ಕೆ ಏರಿಕೆಯಾಗಿದೆ.

ಒಂದು ದಿನದ ಅಂತರದಲ್ಲಿ ಕೊರೊನಾದಿಂದ 4 ಮಂದಿ ಸಾವಿಗೀಡಾಗಿದ್ದಾರೆ. ಇದರೊಂದಿಗೆ ಇಲ್ಲಿಯವರೆಗೆ ಅಸುನೀಗಿದವರ ಸಂಖ್ಯೆ 38,309ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಬ್ಬರು ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದರೆ, ಧಾರವಾಡ ಮತ್ತು ಉಡುಪಿಯಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

24 ಗಂಟೆಗಳ ಅವಧಿಯಲ್ಲಿ 97,782 ಸ್ಯಾಂಪಲ್‌ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪಾಸಿಟಿವಿಟಿ ದರ ಶೇ. 0.27ರಷ್ಟಿದೆ. ಹೊಸ ಪ್ರಕರಣಗಳಿಗೆ ಹೋಲಿಸಿದಾಗ ಸಾವಿನ ಪ್ರಮಾಣ ಶೇ. 1.48ರಷ್ಟಿದೆ.

ಕೋಲಾರ ವೈದ್ಯಕೀಯ ಕಾಲೇಜಿನಲ್ಲಿ 4 ದಿನದಲ್ಲಿ 30 ಜನರಿಗೆ ಕೊರೊನಾ, ಓಮಿಕ್ರಾನ್‌ ಪರೀಕ್ಷೆಗೆ ಸ್ಯಾಂಪಲ್‌ ರವಾನೆ
ಕೊಡಗಿನಲ್ಲಿ ಇಳಿಯದ ಸೋಂಕು

ಸಣ್ಣ ಜಿಲ್ಲೆಯಾಗಿದ್ದೂ ಕೊಡಗಿನಲ್ಲಿ ಹೆಚ್ಚಿನ ಸಂಖ್ಯೆಯ ಕೊರೊನಾ ಪ್ರಕರಣಗಳು ವರದಿಯಾಗುತ್ತಲೇ ಇವೆ. ಶನಿವಾರ ಜಿಲ್ಲೆಯಲ್ಲಿ 25 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ 152, ತುಮಕೂರು ಮತ್ತು ಉಡುಪಿಯಲ್ಲಿ ತಲಾ 14, ಮೈಸೂರಿನಲ್ಲಿ 13, ದಕ್ಷಿಣ ಕನ್ನಡದಲ್ಲಿ 11 ಹೊಸ ಕೇಸ್‌ಗಳು ವರದಿಯಾಗಿವೆ.

ಉಳಿದೆಲ್ಲಾ ಜಿಲ್ಲೆಗಳಲ್ಲಿ ಒಂದಂಕಿ ಪ್ರಕರಣಗಳು ದೃಢಪಟ್ಟಿದ್ದು, 11 ಜಿಲ್ಲೆಗಳಲ್ಲಿ ಯಾವುದೇ ಕೇಸ್‌ಗಳು ವರದಿಯಾಗಿಲ್ಲ.

ಸಕ್ರಿಯ ಪ್ರಕರಣ ಮತ್ತೆ ಏರಿಕೆ

ಶನಿವಾರ 246 ಕೊರೊನಾ ರೋಗಿಗಳು ಚೇತರಿಸಿಕೊಂಡಿದ್ದು, ಒಟ್ಟು ಇಲ್ಲಿಯವರೆಗೆ ಗುಣಮುಖರಾದವರ ಸಂಖ್ಯೆ 29,58,630ಕ್ಕೆ ಏರಿಕೆಯಾಗಿದೆ.

ಮತ್ತೆ ಹೊಸ ಪ್ರಕರಣಗಳಿಗಿಂತ ಕಡಿಮೆ ಸಂಖ್ಯೆಯ ಕೊರೊನಾ ಸೋಂಕಿತರು ಗುಣಮುಖರಾಗಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ ಪುನಃ ಏರಿಕೆಯ ಹಾದಿ ಹಿಡಿದಿದೆ. ರಾಜ್ಯದಲ್ಲಿರುವ ಒಟ್ಟು ಆಕ್ಟಿವ್‌ ಕೇಸ್‌ಗಳ ಸಂಖ್ಯೆ 7,271ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ನಿಧಾನವಾಗಿ ಏರಿಕೆಯಾಗುತ್ತಿರುವುದು ಆತಂಕ ಹುಟ್ಟಿಸಿದೆ.

ಇನ್ನು ಶನಿವಾರ 91,707 ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿದ್ದು, ಇಲ್ಲಿಯವರೆಗೆ ರಾಜ್ಯದಲ್ಲಿ ನೀಡಲಾದ ಕೊರೊನಾ ಲಸಿಕೆ ಡೋಸ್‌ಗಳ ಸಂಖ್ಯೆ 8.45 ಕೋಟಿಗೆ ಏರಿಕೆಯಾಗಿದೆ.



Read more