Karnataka news paper

ಇಂದೇಕೆ ಅವಳ ನೆನಪು-ಭಾಗ 32; ಹೃದಯ ಬಯಸಿತು ಇನಿಯನ ಸನಿಹ; ಹುಚ್ಚೆದ್ದು ಕುಣಿದ ಆಕೆಯ ಬದುಕಲ್ಲಿ ಆಗಿದ್ದೇನು?!


ಶ್ಯಾಮ್ ಜತೆಗೆ ಸಂಬಂಧ ಎಲ್ಲಿಯ ತನಕ ಮುಂದುವರಿಯುಬಹುದು ಎಂಬ ಯೋಚನೆ ಸುಮಾಳ ಮನಸ್ಸಿಗೆ ಬಂದಿದ್ದರೂ ಅವಳು ಅದನ್ನು ತಳ್ಳಿಹಾಕಿದ್ದಳು. ಅವನೊಬ್ಬ ಒಳ್ಳೆಯ ಗೆಳೆಯ, ಬೆಡ್ರೂಮ್ ಪಾರ್ಟ್ನರ್ ಎಂಬ ಭಾವನೆ ಇದ್ದರೂ ಮುಂದೆ ಏನು ಅಂತ ಯೋಚಿಸಲಿಲ್ಲ ಅವಳು. ಜೀವನ ಸಾಗುತ್ತಾ ಇದ್ದಂತೆ ನೋಡೋಣ ಎನ್ನುವ ಉದಾಸೀನ ಭಾವನೆ ತಾಳಿ ಸುಮ್ಮನೆ ಇದ್ದಳು.

ಶೇಖರನ ಭೇಟಿ,ಅವನ ಬಗ್ಗೆ ತಾನು ಬರೆದ ಲೇಖನ, ಮಾಡಿದ ಸಂದರ್ಶನ ಅವಳ ಮನಸ್ಸನ್ನು ಅಲ್ಲೋಲ ಕಲ್ಲೋಲ ಮಾಡಿರಲಿಲ್ಲ. ಬದಲಿಗೆ ತಾನು ಮುಂದೇನು ಮಾಡಬೇಕು ಎಂಬುದು ನಿಚ್ಚಳವಾಗಿ ತೋರಿತ್ತು. ತಾನು ಶೇಖರನಂತಹ ವ್ಯಕ್ತಿಯನ್ನು ಮದುವೆಯಾಗಬೇಕು,ಸಂಸಾರದಲ್ಲಿ ನೆಲೆಊರಬೇಕು ಅನ್ನುವ ಬಯಕೆ ಮೂಡತೊಡಗಿತು. ಹಲವಾರು ಹೆಂಗೆಳೆಯರು ಅವನ ಸಾಂಗತ್ಯಕ್ಕೆ ಹಾತೊರೆಯುತ್ತಿದ್ದ ವಿಷಯ ಅವಳಿಗೆ ಮೋಜೆನಿಸಿತ್ತು. ಯಾವುದೇ ಕಷ್ಟವಿಲ್ಲದೆ ತನ್ನ ಬಲೆಗೆ ಬಿದ್ದನಲ್ಲ ಎಂಬ ಗರ್ವವೂ ಮೂಡಿತ್ತು. ಮದುವೆ ಆದಾಗ ಇದ್ದ ಪ್ರೀತಿ, ಖುಷಿ ನಿಧಾನವಾಗಿ ಕಡಿಮೆ ಆಗುತ್ತಾ ಬಂದಾಗ ಅವಳಿಗೆ ದಿಗಿಲಾಯಿತು. ಗಂಡ ಖ್ಯಾತ ಕಲಾವಿದ,ದುಡಿಮೆ ಜಾಸ್ತಿ ಇಲ್ಲದೆ ಇದ್ದರೂ ಜನಪ್ರಿಯತೆಗೆ ಕಡಿಮೆ ಇರಲಿಲ್ಲ. ಹಲವಾರು ಸಭೆ, ಸಮಾರಂಭಗಳಲ್ಲಿ ತಾನೂ ಸಹ ಮಿಂಚಿದ್ದಳು. ಆದರೂ ಏನೋ ಅಸಂತೃಪ್ತಿ, ಅಸಹನೆ, ಸಿಡಿಮಿಡಿ ಮನದಲ್ಲಿ ಮೂಡಿಬರುತ್ತಿತ್ತು.

ಕಾಲ ಸರಿದಂತೆ ಮನಸು ಬೇರೆ ತರಹ ಯೋಚಿಸಲು ಶುರು ಮಾಡಿದಾಗ ಅವಳಿಗೆ ಕಸಿವಿಸಿ ಶುರು ಆಯ್ತು. ಮೊದಲನೆಯದಾಗಿ ಶೇಖರ ತಾನು ತಿಳಿದಷ್ಟು ಸಿರಿವಂತನಲ್ಲ, ವ್ಯವಹಾರ ಜ್ಞಾನವೂ ಕಡಿಮೆ. ಜನಪ್ರಿಯತೆ ಹೆಚ್ಚಿದ್ದರೂ ಅದನ್ನು ಬಳಸಿಕೊಳ್ಳುವ ಚಾಕಚಕ್ಯತೆ ಇರಲಿಲ್ಲ. ಜತೆಗೆ ತನ್ನ ಗೆಳತಿಯರೆಲ್ಲ ಓದಿ, ಒಳ್ಳೆಯ ಕೆಲಸಗಳಲ್ಲಿ ಕೈ ತುಂಬಾ ಸಂಬಳ ಪಡೆದುಕೊಳ್ಳುತ್ತಿದ್ದಾರೆ, ತಾನು ಮಾತ್ರ ಇವನ ಸಂಬಳಕ್ಕೆ ಕಾದು ಕೂರುವ ಗೃಹಿಣಿ ಆಗಿಬಿಟ್ಟೆ ಅನ್ನುವ ಕೊರಗು ಕಾಡಲು ಮೊದಲಾಯಿತು.
ಇಂದೇಕೆ ಅವಳ ನೆನಪು- ಭಾಗ 31: ಬಯಲಾಯಿತು ಸುಮಾಳ ಹಳೆಯ ಲವ್ ಸೀಕ್ರೆಟ್, ಯಾರದು ಶ್ಯಾಮ್?!+
ಮೊದಲೇ ಚಂಚಲ ಮನಸ್ಸಿನ ಹೆಣ್ಣು ಅವಳು. ಚಿಕ್ಕ ವಯಸ್ಸಿನಲ್ಲೇ ಪ್ರೀತಿ, ಪ್ರೇಮದಲ್ಲಿ ಬಿದ್ದು ಮದುವೆಯಾದಾಗ ಸಾರ್ಥಕತೆ ಮೂಡಿತ್ತು. ಅದರೆ ದಿನ ಕಳೆದಂತೆ ಬದುಕು ಹಳಸಲು ಪ್ರಾರಂಭವಾಗಿತ್ತು. ಜತೆಗೆ ಶೇಖರ ಯಾವಾಗಲೂ ಬ್ಯುಸಿ. ಒಬ್ಬಳೇ ಮನೆಯಲ್ಲಿ ಇದ್ದು ಸಾಕಾಗಿ ಹೋಗಿತ್ತು. ಯಾವುದರಲ್ಲಿಯೂ ಆಸಕ್ತಿ ಇರಲಿಲ್ಲ. ಮುಂದೆ ಓದಲು, ಅವನ ಜತೆ ಶೂಟಿಂಗ್ ನೋಡಲು ಹೋಗುವುದು ಅಥವಾ ಅವನ ಕೆಲಸದಲ್ಲಿ ತಾನೂ ಸಹ ಭಾಗಿಯಾಗುವುದು ಕೂಡ ಅವಳಿಗೆ ಇಷ್ಟ ಇರಲಿಲ್ಲ. ಹೀಗಿರುವಾಗ ಅವಳ ಬದುಕಿನಲ್ಲಿ ಮತ್ತೆ ಎಂಟ್ರಿ ಕೊಟ್ಟ ಶ್ಯಾಮ್.
ಇಂದೇಕೆ ಅವಳ ನೆನಪು- ಭಾಗ 30: ಮತ್ತೆ ಪ್ರೀತಿ ನಾಟಕ; ಪ್ರಿಯಕರನ ಮೋಡಿಗೆ ಬಲಿಯಾದಳೇ ಸುಮಾ?!
ತನ್ನ ಹದಿಹರೆಯದ, ಸ್ವಾತಂತ್ರದ ದಿನಗಳು, ಯಾವುದೇ ಯೋಚನೆ, ಹೋಣೆಯಿಲ್ಲದೆ ಇಲ್ಲದೆ ಕಳೆಯುತ್ತಿದ್ದ ನಿರಾತಂಕ ದಿನಗಳನ್ನು ನೆನಪಿಸಿತು ಅವನ ಬರುವಿಕೆ. ಮನಸು ಬಂಧನಗಳನ್ನು ಕಳಚಿ ಆಕಾಶದಲ್ಲಿ ವಿಹರಿಸಲು ರೆಡಿ ಆಯಿತು. ಇಬ್ಬರೂ ಜತೆಗೂಡಿದ ಕ್ಷಣಗಳು ಮನಸ್ಸಿಗೆ ಆತಂಕ ತಂದರೂ ಆಮೇಲೆ ತನ್ನನ್ನು ತಾನೇ ಸಮಾಧಾನ ಮಾಡಿಕೊಳ್ಳಲು ಕಲಿತುಕೊಂಡಲು. ಗಂಡನಿಗೆ ಸಮಯವಿಲ್ಲ, ಪ್ರೀತಿಇದ್ದರೂ ತೋರಿಸಲು ವ್ಯವಧಾನವಿಲ್ಲ, ಶ್ಯಾಮ್ ತನ್ನ ಬದುಕಿನಲ್ಲಿ ತಂಗಾಳಿಯಂತೆ ಬಂದಿರುವ. ಒಬ್ಬ ಇನಿಯ, ಗೆಳೆಯ ಅವಳಿಗೆ ಆಪ್ತನಾಗಿದ್ದ ಪ್ರಿಯತಮನಾಗಿ ಬಂದ ಶ್ಯಾಮ್ ಅವಳಿಗೆ ಅತ್ಯಂತ ಸನಿಹಕ್ಕೆ ಬಂದದ್ದು ತನ್ನ ಬಾಳಿಗೆ ಮುಳುವಾಗುತ್ತದೆ ಎಂದು ಅರಿವಿರಲಿಲ್ಲ. ಅವನಿಂದ ತನ್ನ ಬಾಳಿಗೆ ಹೊಸ ಲವಲವಿಕೆ, ಉತ್ಸಾಹ ತುಂಬಿದೆ, ಬರಡುಬಾಳು ಚಿಗುರಿದೆ ಎಂದೇ ಭಾವಿಸಿದ್ದಳು. ಹೊಸ ಮಿಂಚು ತನ್ನ ಬದುಕನ್ನೇ ಸುಟ್ಟು ಹಾಕುತ್ತೆ ಎಂದು ಅವಳ ಅರಿವಿಗೆ ಬಾರದಿದ್ದದ್ದು ವಿಪರ್ಯಾಸ.
(ಮುಂದುವರಿಯುವುದು)
ಧಾರಾವಾಹಿ ಕಥೆ : ಸಹನಾ ಪ್ರಸಾದ್

ಸಹನಾ ಪ್ರಸಾದ್



Read more