Karnataka news paper

ಕರಾವಳಿಯಾದ್ಯಂತ ಸಂಭ್ರಮದ ಕ್ರಿಸ್‌ಮಸ್‌; ಮನೆಮನೆಯಲ್ಲೂ ಸಡಗರ, ಉಲ್ಲಾಸ


ಮಂಗಳೂರು: ದೇವಸುತ ಏಸುಕ್ತಿಸ್ತರ 2021ನೇ ಹುಟ್ಟುಹಬ್ಬದ ಸಂಭ್ರಮ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಸಂಭ್ರಮ, ಖುಷಿ, ಉಲ್ಲಾಸಗಳಿಂದ ಆಚರಿಸಲಾಗುತ್ತಿದೆ.

ಶುಕ್ರವಾರ ರಾತ್ರಿ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಮತ್ತು ಬಲಿ ಪೂಜೆಗಳೊಂದಿಗೆ ಸಂಭ್ರಮದ ಕ್ರಿಸ್ಮಸ್‌ ಆಚರಣೆ ನಡೆಯಿತು. ಸಾಮೂಹಿಕ ಪ್ರಾರ್ಥನೆ, ದಿವ್ಯಬಲಿ ಪೂಜೆ ನಡೆಯುವ ಭಕ್ತಿ ಶ್ರದ್ಧೆಯ ಕೇಂದ್ರವಾದ ಚರ್ಚ್‌ಗಳನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ. ಚರ್ಚ್‌ಗಳ ವಠಾರದಲ್ಲಿ ಸುಂದರ ಗೋದಲಿಗಳನ್ನು ರಚಿಸಿ, ಏಸುಕ್ರಿಸ್ತರ ಜನನವನ್ನು ಸಂಕೇತಿಸುವ ದೃಶ್ಯಗಳ ಮರುಸೃಷ್ಟಿಯಲ್ಲಿ ಸಂಭ್ರಮಿಸಲಾಗುತ್ತಿದೆ. ಗೋದಲಿಗಳ ಮುಂದೆ ಮಕ್ಕಳು ಖುಷಿ ಪಡುವ, ಸೆಲ್ಫೀ ಜತೆ ಆನಂದಿಸುವ ದೃಶ್ಯಗಳು ಕಂಡು ಬರುತ್ತಿವೆ.
ಮಂಗಳೂರಿನಲ್ಲಿ ಡಿ.24ಕ್ಕೆ ಸರ್ವಧರ್ಮ ಸೌಹಾರ್ದ ಕ್ರಿಸ್‌ಮಸ್‌ ಆಚರಣೆ
ಮಂಗಳೂರು ಬಿಷಪ್‌ ಡಾ. ಪೀಟರ್‌ ಪಾವ್ಲ್‌ ಸಲ್ಡಾನ ಅವರು ನೆಲ್ಲಿಕಾರಿನಲ್ಲಿರುವ ಚರ್ಚ್‌ನ ಕ್ರಿಸ್ಮಸ್‌ ಬಲಿಪೂಜೆಯಲ್ಲಿ ಭಾಗವಹಿಸಿ ಹಬ್ಬದ ಸಂದೇಶ ನೀಡಿದರು. ಕಳೆದ ಎರಡು ವರ್ಷಗಳಿಂದ ಕೊರೊನಾ ಮತ್ತಿತರ ಕಾರಣಗಳಿಂದ ಜನರು ಸಂಕಷ್ಟದಲ್ಲಿದ್ದು, ಇಂಥ ಸಂದರ್ಭದಲ್ಲಿ ಏಸು ಕ್ರಿಸ್ತರ ಪ್ರೀತಿ ಮತ್ತು ಸೇವೆಯ ಸಂದೇಶ ಹೆಚ್ಚು ಪ್ರಸ್ತುತವಾಗಬೇಕು. ಏಸು ಕ್ರಿಸ್ತರ ಸಂದೇಶ ಇಡೀ ಜಗತ್ತಿಗೆ ಬೆಳಕು ತೋರಿಸಿದೆ ಎಂದರು. ಪ್ರತಿ ವರ್ಷವೂ ಬಿಷಪ್‌ ಧರ್ಮಪ್ರಾಂತ್ಯದ ಗ್ರಾಮೀಣ ಭಾಗದ ಚರ್ಚ್‌ಗಳಲ್ಲಿ ಪೂಜೆ ಸಲ್ಲಿಸುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಡಿ.25ರಂದು ಮಂಗಳೂರಿನ ರೊಸಾರಿಯೋ ಕೆಥೆಡ್ರಲ್‌ನಲ್ಲಿ ಬೆಳಗ್ಗೆ 8.15ಕ್ಕೆ ನಡೆಯುವ ಪೂಜೆಯಲ್ಲಿ ಬಿಷಪ್‌ ಭಾಗವಹಿಸುತ್ತಾರೆ.
ಕ್ರಿಸ್‌ಮಸ್‌ ದಿನ ಬರುವ ಸಾಂತಾ ಕ್ಲಾಸ್‌ ತಾತನ ಹಿಂದಿದೆ ಕುತೂಹಲಕಾರಿ ಹಿನ್ನೆಲೆ
ರಾತ್ರಿ ಚರ್ಚ್‌ಗಳಲ್ಲಿ ಜರುಗಿದ ವಿಶೇಷ ಪ್ರಾರ್ಥನೆಗಳಲ್ಲಿ ಕ್ರೈಸ್ತ ಬಾಂಧವರು ಶ್ರದ್ಧೆ ಮತ್ತು ಭಕ್ತಿಯಿಂದ ಭಾಗವಹಿಸಿದ್ದರು. ಕ್ರಿಸ್ಮಸ್‌ ಗೀತೆಗಳು (ಕ್ಯಾರೊಲ್ಸ್‌) ಆಚರಣೆಗೆ ವಿಶೇಷ ರಂಗು ನೀಡಿದವು. ಬಲಿ ಪೂಜೆ ಬಳಿಕ ಕ್ರೈಸ್ತ ಬಾಂಧವರು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಕೇಕ್‌ ಕತ್ತರಿಸಿ, ಏಸು ಕ್ರಿಸ್ತರ ಹುಟ್ಟುಹಬ್ಬದ ಶಾಂತಿಯ ಸಂದೇಶ ಸಾರಲಾಯಿತು. ಕ್ರಿಸ್ಮಸ್‌ ತಾತಾ ‘ಸಾಂತಾಕ್ಲಾಸ್‌’ ಆಕರ್ಷಣೆಯಾಗಿತ್ತು. ಪುಟಾಣಿಗಳು ಸಾಂತಾ ಕ್ಲಾಸ್‌ನಿಂದ ಚಾಕಲೇಟ್‌ ಪಡೆದು ಸಂಭ್ರಮಿಸಿದರು.

ಸರಕಾರದ ಮಾರ್ಗಸೂಚಿಯಂತೆ ಎಲ್ಲ ಚರ್ಚ್‌ಗಳಲ್ಲಿ ಸರಳವಾಗಿ ಕಾರ್ಯಕ್ರಮ ನಡೆಸಲಾಯಿತು. ಮಂಗಳೂರು ನಗರದ ಚರ್ಚ್‌ಗಳು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಚರ್ಚ್‌ಗಳನ್ನು ಹಬ್ಬದ ಸಂಭ್ರಮದಲ್ಲಿ ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ. ಚರ್ಚ್ ಆವರಣ, ಕ್ರೈಸ್ತರ ಮನೆಗಳು, ಪ್ರಮುಖ ಉದ್ಯಮ, ಅಂಗಡಿ, ಹೋಟೆಲ್‌ಗಳ ಎದುರು ಆಕರ್ಷಕ ಕ್ರಿಬ್‌ (ಗೋದಲಿ)ಗಳನ್ನು ನಿರ್ಮಿಸಲಾಗಿದೆ. ಕ್ರಿಸ್ಮಸ್‌ ಟ್ರೀ ಮತ್ತು ಅಲಂಕೃತ ನಕ್ಷತ್ರ ಗಮನ ಸೆಳೆಯುತ್ತಿತ್ತು.



Read more