Karnataka news paper

400 ಕೋಟಿ ರೂ. ಸಾಲ ಕೊಡಿಸೋದಾಗಿ ನಂಬಿಸಿ 5.85 ಕೋಟಿ ರೂ. ಮೋಸ: ಬೆಂಗಳೂರಿನಲ್ಲಿ ಐವರ ಸೆರೆ


ಹೈಲೈಟ್ಸ್‌:

  • ಆರೋಪಿಗಳಿಂದ ಐಷಾರಾಮಿ ಕಾರು, 8 ಕೆ.ಜಿ. ಚಿನ್ನ ವಶ
  • ಉದ್ಯಮಿಗಳನ್ನು ಟಾರ್ಗೆಟ್‌ ಮಾಡಿ ವಂಚಿಸುತ್ತಿದ್ದ ಆರೋಪಿಗಳು
  • ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸೋದಾಗಿ ನಂಬಿಸಿ ವಂಚನೆ

ಬೆಂಗಳೂರು: ಕಡಿಮೆ ಬಡ್ಡಿ ದರದಲ್ಲಿ 400 ಕೋಟಿ ರೂ. ಸಾಲ ಕೊಡಿಸುವುದಾಗಿ ನಂಬಿಸಿ ಇಬ್ಬರು ಉದ್ಯಮಿಗಳಿಂದ ಮುಂಗಡವಾಗಿ 5.85 ಕೋಟಿ ರೂ. ಬಡ್ಡಿ ಪಡೆದು ವಂಚಿಸಿದ್ದ ಐದು ಮಂದಿ ಆರೋಪಿಗಳನ್ನು ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ಸೈಯ್ಯದ್‌ ಇಬ್ರಾಹಿಂ ಅಲಿಯಾಸ್‌ ಡ್ಯಾನಿಯಲ್‌ ಆರ್ಮ್‌ಸ್ಟ್ರಾಂಗ್, ಕೊಯಮತ್ತೂರಿನ ವಿವೇಕ್‌ ಅಲಿಯಾಸ್‌ ವಿಕ್ಕಿ ಅಲಿಯಾಸ್‌ ವಿವೇಕಾನಂದ, ಕ್ರಿಸ್ಟೋಫರ್‌ ಅಲಿಯಾಸ್‌ ರಾಘವನ್‌, ರಘುವರನ್‌ ಅಲಿಯಾಸ್‌ ರಘು, ಶಿವರಾಮನ್‌ ಅಲಿಯಾಸ್‌ ನಾಗರಾಜು ಬಂಧಿತರು. ಆರೋಪಿಗಳಿಂದ 4.10 ಕೋಟಿ ರೂ. ಮೌಲ್ಯದ 8 ಕೆ.ಜಿ 215 ಗ್ರಾಂ ಚಿನ್ನಾಭರಣ, 35 ಲಕ್ಷ ರೂ. ಬೆಲೆ ಬಾಳುವ ಬಿಎಂಡಬ್ಲ್ಯು ಕಾರು, 10 ಲಕ್ಷ ರೂ. ಗಳ ಎರ್ಟಿಗಾ, 36.60 ಲಕ್ಷ ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ. 1.86 ಲಕ್ಷ ರೂ. ಫ್ರೀಜ್‌ ಮಾಡಲಾಗಿದೆ. 45 ಲಕ್ಷ ರೂ.ಗಳನ್ನು ಆರೋಪಿಗಳು ಖರ್ಚು ಮಾಡಿದ್ದಾರೆ. ಚಿನ್ನ ಖರೀದಿಗೆ ಸಂಬಂಧಿಸಿದಂತೆ 33 ಲಕ್ಷ ರೂ. ಜಿಎಸ್‌ಟಿ ಹಾಗೂ ಸಿಎಸ್‌ಟಿ ಪಾವತಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಏನಿದು ಪ್ರಕರಣ?: ಸಾಲದ ಅವಶ್ಯಕತೆ ಇರುವ ಉದ್ಯಮಿಗಳನ್ನು ಟಾರ್ಗೆಟ್‌ ಮಾಡುತ್ತಿದ್ದ ಆರೋಪಿಗಳು, ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ನೂರಾರು ಕೋಟಿ ರೂ. ಸಾಲ ಕೊಡಿಸುವುದಾಗಿ ನಂಬಿಸುತ್ತಿದ್ದರು. ಆನಂತರ ಸಾಲದ ಬಡ್ಡಿಯನ್ನು ಮುಂಗಡವಾಗಿ ಪಡೆದು ವಂಚಿಸುತ್ತಿದ್ದರು. ಇದಕ್ಕಾಗಿಯೇ ಸುದ್ದಗುಂಟೆಪಾಳ್ಯದ ಕೃಷ್ಣ ಇಂಡಸ್ಟ್ರಿಯಲ್‌ ಪ್ರದೇಶದಲ್ಲಿ ‘ಏಸ್‌ ವೆಂಚರ್ಸ್‌ ಕ್ಯಾಪಿಟಲ್‌, ಎಂಓಯು ಗ್ರೂಪ್‌ ಆಫ್‌ ಕಂಪನೀಸ್‌’ ಅನ್ನು ನವೆಂಬರ್‌ನಲ್ಲಿ ಆರಂಭಿಸಿದ್ದರು.

ಸಾಲಕ್ಕಾಗಿ ಆರೋಪಿಗಳನ್ನು ಭೇಟಿಯಾಗಿದ್ದ ರಿಯಲ್‌ ಎಸ್ಟೇಟ್‌ ಉದ್ಯಮಿ ಗಿರೀಶ್‌ಗೆ 150 ಕೋಟಿ ರೂ. ಹಾಗೂ ಪಿ.ಬಿ ಕಂಪನಿಯ ಮಾಲೀಕ ಅರುಣಾಚಲ ಪನೀತರಾಮ್‌ಗೆ 250 ಕೋಟಿ ರೂ. ಸಾಲ ನೀಡುವ ಭರವಸೆ ನೀಡಿ ಎಲ್ಲ ದಾಖಲೆಗಳನ್ನು ಪಡೆದುಕೊಂಡಿದ್ದರು. ಸಾಲ ನೀಡಲು ಮುಂಗಡವಾಗಿ 3 ತಿಂಗಳ ಬಡ್ಡಿ ಕೊಡಬೇಕೆಂದು ನ.15ರಂದು ಗಿರೀಶ್‌ ಅವರಿಂದ 2.25 ಕೋಟಿ ರೂ., ಪನೀತರಾಮ್‌ರಿಂದ 3.60 ಕೋಟಿ ರೂ. ಗಳನ್ನು ತಮ್ಮ ಕಂಪನಿಯ ಹೆಸರಿನಲ್ಲಿದ್ದ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದರು. ನವೆಂಬರ್ 16ರಂದು ಬ್ಯಾಂಕ್‌ ಖಾತೆಗೂ ಪ್ರತ್ಯೇಕವಾಗಿ ಸಾಲದ ಹಣ ಜಮೆ ಮಾಡಲಾಗುವುದು. ಆ ದಿನ ಕಚೇರಿಗೆ ಬರಬೇಕೆಂದು ಇಬ್ಬರು ಉದ್ಯಮಿಗಳಿಗೂ ಸೂಚಿಸಿದ್ದರು.

ಅದರಂತೆ ಕಚೇರಿಗೆ ಭೇಟಿ ನೀಡಿದ್ದ ಉದ್ಯಮಿಗಳೊಂದಿಗೆ ವಿಶ್ವಾಸದಿಂದ ಮಾತನಾಡುತ್ತಲೇ ಆರೋಪಿಗಳು ಅಲ್ಲಿಂದ ನಾಪತ್ತೆಯಾಗಿದ್ದಾರೆ. ಆನಂತರ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ಪರಾರಿಯಾಗಿದ್ದಾರೆ. ಇತ್ತ ಆರೋಪಿಗಳನ್ನು ಪರಿಚಯಿಸಿದ ಮದ್ಯವರ್ತಿಗಳು ಹಾಗೂ ಉದ್ಯಮಿಗಳು ಸಂಜೆವರೆಗೆ ಕಚೇರಿಯಲ್ಲೇ ಕಾದು ವಾಪಸಾಗಿದ್ದಾರೆ. ಆನಂತರ ಮೋಸ ಹೋಗಿರುವುದು ಗೊತ್ತಾಗಿದೆ. ಹೀಗಾಗಿ, ಸುದ್ದಗುಂಟೆಪಾಳ್ಯ ಪೊಲೀಸರಿಗೆ ದೂರು ನೀಡಿದ್ದರು.

ಕಲಬುರಗಿ: ದಶಕದ ಹಿಂದೆ ನಡೆದ ವಂಚನೆ ಪ್ರಕರಣ ಬೆನ್ನತ್ತಿದ ಸಿಬಿಐ
ಕೆ.ಜಿ ಗಟ್ಟಲೇ ಚಿನ್ನ ಖರೀದಿ: ಗಿರೀಶ್‌ ನೀಡಿದ 2.25 ಕೋಟಿ. ರೂ. ಹಣದಲ್ಲಿ ಆರೋಪಿಗಳು ನಗರದ ಕಲ್ಯಾಣ್‌ ಜ್ಯುವೆಲ್ಲರ್ಸ್‌ನಿಂದ 4 ಕೆ.ಜಿ 202 ಗ್ರಾಂ ಚಿನ್ನಾಭರಣ ಖರೀದಿಸಿದ್ದರು. ಪನೀತರಾಮ್‌ ನೀಡಿದ್ದ 3.60 ಕೋಟಿ ಪೈಕಿ 3.50 ಕೋಟಿ ರೂ.ಗಳನ್ನು ಚೆನ್ನೈನ ನ್ಯೂ ಸರವಣ್‌ ಸ್ಟೋರ್ಸ್ (ಜ್ಯುವೆಲ್ಲರ್ಸ್‌) ಖಾತೆಗೆ ಜಮೆ ಮಾಡಿ 7.295 ಕೆ.ಜಿ ಚಿನ್ನಾಭರಣ ಕೊಂಡುಕೊಂಡಿದ್ದಾರೆ. ಬಳಿಕ ಒಟ್ಟು 11.497 ಕೆ.ಜಿ ಚಿನ್ನವನ್ನು ಐದು ಮಂದಿ ಆರೋಪಿಗಳೂ ಸಮಾನವಾಗಿ ಹಂಚಿಕೊಂಡಿದ್ದರು.

ಸಿಕ್ಕಿಬಿದ್ದಿದ್ದು ಹೇಗೆ?: ಆರೋಪಿಗಳ ಬಗ್ಗೆ ಯಾವುದೇ ಸುಳಿವು ಪೊಲೀಸರಿಗೆ ಲಭ್ಯವಾಗಿರಲಿಲ್ಲ. ಆದರೆ, ಅವರ ಕಚೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಅಳವಡಿಸಿದ್ದ 200 ಸಿಸಿಟಿವಿ ಕ್ಯಾಮೆರಾಗಳು, 2,000 ಸಿಡಿಆರ್‌ಗಳನ್ನು ವಶಕ್ಕೆ ಪಡೆದು 6 ತಿಂಗಳ ಅವಧಿಯ ದೃಶ್ಯಗಳನ್ನು ಪರಿಶೀಲಿಸಿದ್ದರು. ಈ ವೇಳೆ ಸಿಡಿಆರ್‌ನಿಂದ ಪ್ರಕರಣದ ಕಿಂಗ್‌ಪಿನ್‌ ಸೈಯದ್‌ ಇಬ್ರಾಹಿಂ ಸುಳಿವು ದೊರೆತಿತ್ತು. ಈ ಆಧಾರದ ಮೇಲೆ ಕೇರಳಕ್ಕೆ ತೆರಳಿ ಇಬ್ರಾಹಿಂನನ್ನು ಬಂಧಿಸಿ ವಿಚಾರಣೆ ನಡೆಸಿದಾದ ಇತರೆ ಆರೋಪಿಗಳ ಬಗ್ಗೆ ಬಾಯ್ಬಿಟ್ಟಿದ್ದಾನೆ. ನಂತರ ಉಳಿದ ಆರೋಪಿಗಳನ್ನು ಬಂಧಿಸಲಾಗಿದೆ. ಇಬ್ರಾಹಿಂ ಗುಜರಿ ವ್ಯಾಪಾರ ಮಾಡುತ್ತಿದ್ದರೆ, ಉಳಿದವರು ಸಣ್ಣಪುಟ್ಟ ವ್ಯಾಪಾರ ಮಾಡುತ್ತಿದ್ದರು.

ಬೆಂಗಳೂರು: ಸಾಲ ಕೊಡಿಸುವುದಾಗಿ 1.80 ಕೋಟಿ ರೂ. ವಂಚಿಸಿದ್ದ ನಾಲ್ವರ ಬಂಧನ
ತೆಲುಗು ಗಾಯಕಿ ತಂದೆಗೂ ವಂಚಿಸಿದ ಶಂಕೆ

ತೆಲುಗು ಚಿತ್ರರಂಗದ ಗಾಯಕಿ ಹರಿಣಿ ಅವರ ತಂದೆ ತೆಲಂಗಾಣ ಮೂಲದ ನಿವೃತ್ತ ಪ್ರೊ. ಎ. ಕೆ. ರಾವ್‌ ಮತ್ತು ಮುರಳಿ ಎಂಬುವವರು ತಮಗೆ ಪರಿಚಯ ಇರುವ ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಮತ್ತು ಕಂಪನಿಗಳ ಮಾಲೀಕರಿಗೆ ಕಡಿಮೆ ಬಡ್ಡಿಗೆ ಸಾಲ ಕೊಡಿಸಲು ಕನ್ಸಲ್ಟೆನ್ಸಿಯನ್ನು ಹೈದರಾಬಾದ್‌ನಲ್ಲಿ ಆರಂಭಿಸಿದ್ದರು. ಇವರನ್ನು ಸಂಪರ್ಕಿಸಿದ್ದ ಆರೋಪಿಗಳು ಕಡಿಮೆ ಬಡ್ಡಿಗೆ ಸಾಲ ಕೊಡುವುದಾಗಿ ಹೇಳಿದ್ದರು. ಹಾಗಾಗಿ, ಎ. ಕೆ. ರಾವ್‌ ಹಾಗೂ ಮುರಳಿ ಇಬ್ಬರು ಉದ್ಯಮಿಗಳನ್ನು ಬೆಂಗಳೂರಿಗೆ ಕರೆತಂದು ಆರೋಪಿ ಸೈಯ್ಯದ್‌ ಇಬ್ರಾಹಿಂನನ್ನು ಪರಿಚಯಿಸಿದ್ದರು. ಉದ್ಯಮಿಗಳನ್ನು ಪರಿಚಯ ಮಾಡಿಕೊಟ್ಟ ಕಾರಣಕ್ಕೆ ಪೊಲೀಸರು, ರಾವ್‌ ಮತ್ತು ಮುರಳಿಗೆ ನೋಟಿಸ್‌ ಕೊಟ್ಟು ವಿಚಾರಣೆಗೆ ಕರೆದಿದ್ದರು. ನವೆಂಬರ್ 22ರಂದು ಇಬ್ಬರೂ ವಿಚಾರಣೆಗೆ ಹಾಜರಾಗಿದ್ದರು. ಆರೋಪಿಗಳು ವಂಚಿಸಿರುವುದು ತಿಳಿದು ಆತಂಕಗೊಂಡ ಎ. ಕೆ. ರಾವ್‌, ಯಲಹಂಕ – ರಾಜಾನುಕುಂಟೆ ಮಾರ್ಗದ ರೈಲು ಹಳಿಗೆ ತಲೆ ಕೊಟ್ಟು ಕೆಲ ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು.

6 ಮದುವೆಯಾದ ಬೆಂಗಳೂರಿನ ವಂಚಕನ ವಿರುದ್ಧ ದೂರು : ವಿಚ್ಛೇದಿತ ಮಹಿಳೆಯರೇ ಟಾರ್ಗೆಟ್‌



Read more