Karnataka news paper

ಚಿಕ್ಕಬಳ್ಳಾಪುರದಲ್ಲಿ ಮಹಾಮಳೆಯಿಂದ ಭೂ ಕಂಪಿಸಿದೆ, ಆತಂಕ ಬೇಡ ಎಂದ ವಿಜ್ಞಾನಿಗಳು..


ಹೈಲೈಟ್ಸ್‌:

  • ಚಿಕ್ಕಬಳ್ಳಾಪುರ ಜಿಲ್ಲೆ ಭೂಕಂಪ ವಲಯದಿಂದ ಬಹುದೂರವಿದೆ, ಸುರಕ್ಷಿತ ವಲಯದಲ್ಲಿದೆ
  • ಈ ಭಾಗದಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆಗಳು ಅತಿ ವಿರಳ
  • ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಹಿರಿಯ ವಿಜ್ಞಾನಿಗಳಿಂದ ಪರಿಶೀಲನೆ

ಚಿಕ್ಕಬಳ್ಳಾಪುರ: ಡಿಸೆಂಬರ್ 23 ರಂದು ಮಧ್ಯಾಹ್ನ 2.16ಕ್ಕೆ ಚಿಕ್ಕಬಳ್ಳಾಪುರ ತಾಲೂಕಿನ ಗೊಲ್ಲಹಳ್ಳಿ ಗ್ರಾ. ಪಂ. ವ್ಯಾಪ್ತಿಯಲ್ಲಿ ಭೂಕಂಪನ ಸಂಭವಿಸಿ ರಿಕ್ಟರ್‌ ಮಾಪನದಲ್ಲಿ 3.6 ತೀವ್ರತೆ ದಾಖಲಾಗಿದ್ದ ಹಿನ್ನೆಲೆಯಲ್ಲಿ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಹಿರಿಯ ವಿಜ್ಞಾನಿಗಳಾದ ರಮೇಶ್‌ ದಿಕ್ಪಾಲ್‌ ಮತ್ತು ಸಂತೋಷ್‌ ಕುಮಾರ್‌ ಅವರು ತಾಲೂಕಿನ ಬಂಡ ಹಳ್ಳಿ, ಗುಂಡ್ಲ ಮಂಡಿ ಕಲ್ಲು, ಜೋನ್ನಲ ಕುಂಟೆ, ಪಿಲ್ಲ ಗುಂಡ್ಲ ಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು.

ಈ ವೇಳೆ ಹಿರಿಯ ವಿಜ್ಞಾನಿ ರಮೇಶ್‌ ದಿಕ್ಪಾಲ್‌ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ವರ್ಷ ಸುರಿದ ಅತಿವೃಷ್ಟಿ ಮಹಾ ಮಳೆಯಿಂದ ಅಂತರ್ಜಲದಲ್ಲಿ ಬದಲಾವಣೆಯಾಗಿದೆ. ಭೂಮಿಯ ಆಳಕ್ಕೆ ನೀರು ನುಸುಳುತ್ತಿದೆ. ಹೀಗಾಗಿ ಈ ರೀತಿಯ ಭೂಕಂಪನಗಳು ಸಂಭವಿಸಿವೆ. ಇಂತಹ ಭೂಕಂಪನ ಅಲೆಗಳು ಭಾರೀ ಸದ್ದಿನೊಂದಿಗೆ ಮುಂದಿನ ಒಂದು ತಿಂಗಳವರೆಗೂ ಬರುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು.

chikkaballapura

ಚಿಕ್ಕಬಳ್ಳಾಪುರ ಜಿಲ್ಲೆ ಭೂಕಂಪ ವಲಯದಿಂದ ಬಹುದೂರವಿದ್ದು, ಸುರಕ್ಷಿತ ವಲಯದಲ್ಲಿದೆ. ಭೂಕಂಪ ಸಂಭವಿಸುವ ಸಾಧ್ಯತೆಗಳು ಅತಿ ವಿರಳ. ಜೊತೆಗೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿರಂತರವಾಗಿ ಈ ಭಾಗದ ಮೇಲೆ ತೀವ್ರ ಕಣ್ಗಾವಲು ಇಟ್ಟಿದೆ. ಜಿಲ್ಲಾಡಳಿತವು ಸಹ ನಿಗಾ ವಹಿಸಿದೆ. ಆದ್ದರಿಂದ ಜನರು ಯಾವುದೇ ವದಂತಿಗಳಿಗೆ ಕಿವಿ ಕೊಡಬಾರದು. ಈ ಬಗ್ಗೆ ಸಾರ್ವಜನಿಕರು ಹೆಚ್ಚಿನ ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ ಎಂದರು.

ಚಿಕ್ಕಬಳ್ಳಾಪುರ: ಲಘು ಭೂಕಂಪನ ಕೇವಲ ವದಂತಿ
ಕಳೆದ 2 ದಿನಗಳಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಂಭವಿಸಿರುವ ಭೂಕಂಪನಗಳನ್ನು ಅವಲೋಕಿಸಲಾಗಿ ಭೂಕಂಪನದ ತೀವ್ರತೆಯ ನಕಾಶೆಯನ್ವಯ ಈ ಭೂಕಂಪನಗಳ ತೀವ್ರತೆ ಅತ್ಯಂತ ಕನಿಷ್ಠ ಪ್ರಮಾಣದ್ದಾಗಿದೆ. ಸುಮಾರು 20 – 30 ಕಿ. ಮೀ. ವ್ಯಾಪ್ತಿಯವರೆಗೆ ಭೂಕಂಪನದ ಅನುಭವವಾಗಿರಬಹುದೆಂದು ಅಂದಾಜಿಸಲಾಗಿದೆ. ಇದರ ಪರಿಣಾಮದಿಂದಾಗಿ ಭೂಮಿಯು ಅಲುಗಾಡಿದ ಅನುಭವವಾದರೂ ಈ ಪ್ರಮಾಣದ ಭೂಕಂಪನ ಸ್ಥಳೀಯ ಸಮುದಾಯಕ್ಕೆ ಯಾವುದೇ ರೀತಿಯಲ್ಲೂ ಅಪಾಯಕಾರಿಯಲ್ಲ. ಇದರಿಂದ ಜನರು ಗಾಬರಿಗೊಳ್ಳುವ ಹಾಗೂ ಹೆಚ್ಚಿನ ಆತಂಕಗೊಳ್ಳುವ ಅವಶ್ಯಕತೆಯಿಲ್ಲ ಎಂದು ಭೇಟಿ ನೀಡಿದ ಗ್ರಾಮಗಳ ಸ್ಥಳೀಯರಿಗೆ ವಿಜ್ಞಾನಿಗಳು ಮನೋಸ್ಥೈರ್ಯ ತುಂಬಿದರು.

2.9, 3.0 ಮತ್ತು 3.6 ತೀವ್ರತೆಯ 3 ಭೂಕಂಪನಗಳು ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಡಿಸೆಂಬರ್ 22 ಮತ್ತು 23ರಂದು ಸಂಭವಿಸಿವೆ. ಡಿಸೆಂಬರ್ 22ರಂದು ಸಂಭವಿಸಿರುವ ಒಂದು ಭೂಕಂಪನದ ಕೇಂದ್ರ ಸ್ಥಾನವು ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್‌ ಗ್ರಾಪಂನಿಂದ ಸುಮಾರು 1.4 ಕಿ. ಮೀ. ದೂರದಲ್ಲಿ ದಾಖಲಾಗಿದೆ. ಇದು ಸುಮಾರು 2.9 ತೀವ್ರತೆ ಹೊಂದಿದ್ದು, 11 ಕಿ. ಮೀ. ದೂರದ ಭೂಗರ್ಭದಲ್ಲಿ ಕೇಂದ್ರೀಕೃತವಾಗಿದೆ. ಮತ್ತೊಂದು ಭೂಕಂಪನವು ತಾಲೂಕಿನ ಅಡ್ಡಗಲ್ಲು ಗ್ರಾಪಂ ವ್ಯಾಪ್ತಿಯ ಭೋಗಪರ್ತಿ ಗ್ರಾಮಕ್ಕೆ 1.23 ಕಿಮೀ ದೂರದಲ್ಲಿ ಮುಂಜಾನೆ 7.15ರಲ್ಲಿ ಸಂಭವಿಸಿದ್ದು, ಇದರ ತೀವ್ರತೆ 3 ರಷ್ಟಿದ್ದು, ಇದು ಭೂಗರ್ಭದ ಸುಮಾರು 23 ಕಿ. ಮೀ. ದೂರದಲ್ಲಿ ಕೇಂದ್ರೀಕೃತವಾಗಿದೆ.

ಡಿಸೆಂಬರ್ 23 ರಂದು ಸಂಭವಿಸಿದ ಭೂಕಂಪನವು ಚಿಕ್ಕಬಳ್ಳಾಪುರ ತಾಲೂಕಿನ ಗೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಸಾದೇನಹಳ್ಳಿ ಗ್ರಾಮಕ್ಕೆ 1.2 ಕಿ. ಮೀ. ದೂರದಲ್ಲಿ ಮಧ್ಯಾಹ್ನ 2.16ರಲ್ಲಿ ಸಂಭವಿಸಿದ್ದು, ಇದರ ತೀವ್ರತೆ 3.6ರಷ್ಟಿದ್ದು, ಇದು ಭೂಗರ್ಭದ ಸುಮಾರು 18 ಕಿ. ಮೀ. ದೂರದಲ್ಲಿ ಕೇಂದ್ರೀಕೃತವಾಗಿದೆ ಎಂದು ಮಾಹಿತಿ ನೀಡಿದರು.

ಕಲಬುರಗಿಯ ಗಡಿಕೇಶ್ವರದಲ್ಲಿ ಭೂಮಿ ಗಡಗಡ: ಗ್ರಾಮಸ್ಥರಿಗೆ ಅಭಯ ಹೇಳಿದ ವಿಜ್ಞಾನಿಗಳ ತಂಡ..
ಜನರಲ್ಲಿ ಜಾಗೃತಿ

ಹಿರಿಯ ಭೂ ವಿಜ್ಞಾನಿ ಸಂತೋಷ್‌ ಕುಮಾರ್‌ ಮಾತನಾಡಿ, ಭೂಕಂಪನದ ಮೊದಲು ಮತ್ತು ಭೂಕಂಪನ ಸಮಯದಲ್ಲಿ ಕೈಗೊಳ್ಳಬೇಕಾದ ಸಿದ್ಧತೆ ಬಗ್ಗೆ ಕರಪತ್ರಗಳನ್ನು ನೀಡಿ ಜನರಲ್ಲಿ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಹಿರಿಯ ಭೂವಿಜ್ಞಾನಿ ಕೃಷ್ಣವೇಣಿ, ಕಿರಿಯ ಭೂವಿಜ್ಞಾನಿ ಬಿ. ಎನ್‌. ಕೃಷ್ಣಮೂರ್ತಿ, ಚಿಕ್ಕಬಳ್ಳಾಪುರ ತಹಸೀಲ್ದಾರ್‌ ಗಣಪತಿ ಶಾಸ್ತ್ರಿ ಹಾಗೂ ತಾಪಂ ಇಒ ಹರ್ಷವರ್ಧನ್‌ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.

ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂಬೆಳಿಗ್ಗೆ ನಡುಗಿದ ಭೂಮಿ: ಎರಡು ಬಾರಿ ಲಘು ಭೂಕಂಪ



Read more