ಹೈಲೈಟ್ಸ್:
- ಅಧಿಕಾರಿಗಳು ಹೆಚ್ಚು ಕಾರ್ಯಕ್ಷೇತ್ರದಲ್ಲಿರುವ ಮೂಲಕ ಜನರಿಗೆ ಸ್ಪಂದಿಸಬೇಕು
- ಅಧಿಕಾರಿಗಳು ಸರಿಯಾದ ಸಮಯಕ್ಕೆ ಕಾರ್ಯಕ್ಷೇತ್ರಕ್ಕೆ ಹೋದರೆ ಕೆಲಸ ಆಗುತ್ತೆ
- ಸಿಇಒ ಉಕೇಶ್ ಅವರೂ ಸಮಯ ಪಾಲನೆ ವಿಚಾರದಲ್ಲಿ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ
ಕೋಲಾರ: ಗ್ರಾಮೀಣ ಭಾಗಗಳಲ್ಲಿ ಕಚೇರಿಗಳಿಗೆ ಸರಿಯಾದ ಸಮಯಕ್ಕೆ ಹಾಜರಾಗದೆ ಜನರಿಂದ ತಪ್ಪಿಸಿಕೊಂಡು ತಿರುಗಾಡಿಕೊಂಡಿದ್ದ ಲೇಟ್ ಲತೀಫ್ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಜಿ. ಪಂ. ಸಿಇಒ ಮುಂದಾಗಿದ್ದು, ಸರಿಯಾದ ಸಮಯಕ್ಕೆ ಕಚೇರಿಗೆ ಬರದಂತಹ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ವೇತನ ಕಡಿತಗೊಳಿಸುವ ಖಡಕ್ ನಿರ್ಧಾರಕ್ಕೆ ಮುಂದಾಗಿದ್ದಾರೆ.
ಆ ಮೂಲಕ ಆಡಳಿತದಲ್ಲಿ ಸುಧಾರಣೆ ತರುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಗ್ರಾಮೀಣ ಭಾಗದ ಸಾಕಷ್ಟು ಜನರು ನಾನಾ ಕೆಲಸಗಳಿಗಾಗಿ ಗ್ರಾ. ಪಂ. ಕಚೇರಿಗಳಿಗೆ ಬರುತ್ತಾರೆ. ಆದರೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಹಾಗೂ ಬಿಲ್ ಕಲೆಕ್ಟರ್ಗಳು ಸರಿಯಾಗಿ ಸಿಗದ ಹಿನ್ನೆಲೆಯಲ್ಲಿ ಜನರು ತೊಂದರೆ ಅನುಭವಿಸುವಂತಾಗಿತ್ತು. ಅದರಲ್ಲಿಯೂ ಕೆಲವು ಸಿಬ್ಬಂದಿ ಒಂದೊಂದು ದಿನ ಕಚೇರಿಗೆ ಬರದಿರುವ ಬಗ್ಗೆಯೂ ದೂರುಗಳೂ ಕೇಳಿ ಬಂದಿದ್ದವು. ಅದರಂತೆ ಕೋಲಾರ ಜಿ. ಪಂ. ಅಧೀನದಲ್ಲಿ ಬರುವಂತಹ ಸಿಬ್ಬಂದಿ ಇ – ಹಾಜರಾತಿ ಪ್ರಮಾಣವೂ ಕಡಿಮೆ ಇರುವುದು ಕಂಡು ಬಂದಿದೆ.
ಇನ್ನು ಕೆಲವರು ಇಂಟರ್ ನೆಟ್ ಸಮಸ್ಯೆಯ ನೆಪವೊಡ್ಡಿ ಹಾಜರಾತಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸಿಇಒ ಉಕೇಶ್ ಕುಮಾರ್ ಆಡಳಿತದಲ್ಲಿ ಸುಧಾರಣೆ ತರಲು ಮುಂದಾಗಿದ್ದಾರೆ.
ಇಒಗಳ ಅನುಮತಿ ಕಡ್ಡಾಯ: ಕಚೇರಿಗೆ ಸಂಬಂಧಿಸಿದ ಕೆಲಸಗಳಿಂದಾಗಿ ಸರಿಯಾದ ಸಮಯಕ್ಕೆ ಇ – ಹಾಜರಾತಿ ನೀಡಲಾಗದಿರುವುದು ಹಾಗೂ ಸರಿಯಾದ ಸಮಯಕ್ಕೆ ಕಚೇರಿಗೆ ಬರದಂತಹ ಸಂದರ್ಭದಲ್ಲಿ ಪಿಡಿಒಗಳು ಹಾಗೂ ಇತರೆ ಪಂಚಾಯಿತಿ ಅಧಿಕಾರಿಗಳು ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳಿಂದ ಅನುಮತಿ ಪಡೆದುಕೊಂಡಿರಬೇಕು. ಅನುಮತಿ ಪಡೆಯದಿದ್ದರೆ ಗೈರು ಹಾಜರಿ ಎಂದು ಪರಿಗಣಿಸಿ ಸಂಬಳ ನೀಡುವ ವೇಳೆ ವೇತನ ಕಡಿತಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ.
ಕಾರ್ಯಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ: ಅಧಿಕಾರಿಗಳು ಹೆಚ್ಚು ಕಾರ್ಯಕ್ಷೇತ್ರದಲ್ಲಿರುವ ಮೂಲಕ ಜನರಿಗೆ ಸ್ಪಂದಿಸಬೇಕು. ಅಧಿಕಾರಿಗಳು ಸರಿಯಾದ ಸಮಯಕ್ಕೆ ಕಾರ್ಯಕ್ಷೇತ್ರಕ್ಕೆ ಹೋದರೆ ಅಂದುಕೊಂಡಂತಹ ಕೆಲಸಗಳು ಆಗುತ್ತವೆ ಎಂದು ನಂಬಿರುವ ಸಿಇಒ ಉಕೇಶ್ ಅವರೂ ಹೆಚ್ಚಿನ ಸಮಯವನ್ನು ಕಚೇರಿಗಿಂತಲೂ ಹೊರಗೆ ಕಳೆಯುತ್ತಿದ್ದಾರೆ. ಆ ಮೂಲಕ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ, ಗ್ರಾಪಂ ಗಳಿಗೆ ಭೇಟಿ ನೀಡಿ ಯೋಜನೆಗಳ ಜಾರಿಯ ಕುರಿತು ಮಾಹಿತಿ ಪಡೆಯುವ ಕೆಲಸ ಮಾಡುತ್ತಿದ್ದಾರೆ.
ಜಿಪಿಎಸ್ ಲೊಕೇಷನ್ ಕಡ್ಡಾಯ: ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವಂತಹ ತಾಂತ್ರಿಕ ಸಹಾಯಕ, ತಾಂತ್ರಿಕ ಎಂಜಿನಿಯರ್ ಸೇರಿದಂತೆ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವಂತಹ ಸಿಬ್ಬಂದಿಯೂ ಸಹ ಕಾರ್ಯಕ್ಷೇತ್ರಕ್ಕೆ ಹೋಗಿರುವುದನ್ನು ಖಚಿತಪಡಿಸಬೇಕಾಗುತ್ತದೆ. ಅದರಂತೆ ಹೊರಗುತ್ತಿಗೆ ಸಿಬ್ಬಂದಿ ಲೈವ್ ಲೊಕೇಷನ್ ಕಳುಹಿಸಬೇಕು. ಎಲ್ಲ ಸಿಬ್ಬಂದಿ ಮಾಹಿತಿ ಆಧರಿಸಿ ಜಿಪಂ ಜಿಲ್ಲಾ ಸಹಾಯಕ ಸಮನ್ವಯಾಧಿಕಾರಿ (ಎಡಿಪಿಸಿ) ಬೆಳಗ್ಗೆ 11 ಗಂಟೆಗೆ ಸಿಇಒ ಅವರಿಗೆ ವರದಿ ನೀಡಲಿದ್ದಾರೆ.