Karnataka news paper

ಹೊರಟ್ಟಿ ಬಿಜೆಪಿಗೆ ಹೋದರೆ ಯಾರಿಗೆ ಲಾಭ..? ಪಶ್ಚಿಮ ಶಿಕ್ಷಕರ ಮೇಲ್ಮನೆ ಚುನಾವಣಾ ಅಭ್ಯರ್ಥಿ ಬಗ್ಗೆ ಗುಸುಗುಸು..


ಹೈಲೈಟ್ಸ್‌:

  • ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಯಾವುದೇ ಸಾಂವಿಧಾನಿಕ ಹುದ್ದೆ ನೀಡುವುದಿಲ್ಲ
  • ಮಾಜಿ ಸಿಎಂ ಯಡಿಯೂರಪ್ಪ ಹೊರತುಪಡಿಸಿ ಯಾರಿಗೂ ಹುದ್ದೆ ಸಿಕ್ಕಿಲ್ಲ
  • ಲಾಲಕೃಷ್ಣ ಆಡ್ವಾಣಿ, ಮುರಳಿ ಮನೋಹರ ಜೋಶಿಯವರಂಥ ಘಟಾನುಘಟಿಗಳಿಗೇಸಾಂವಿಧಾನಿಕ ಹುದ್ದೆ ಸಿಕ್ಕಿಲ್ಲ

ವಿಜಯ್‌ ಹೂಗಾರ
ಹುಬ್ಬಳ್ಳಿ:
ಪಶ್ಚಿಮ ಶಿಕ್ಷಕರ ವಿಧಾನ ಪರಿಷತ್‌ ಚುನಾವಣೆಗೆ ಆರು ತಿಂಗಳು ಬಾಕಿ ಇರುವಾಗಲೇ ಬಿಜೆಪಿಯಿಂದ ಯಾರು ಅಭ್ಯರ್ಥಿ ಎಂಬುದು ತೀವ್ರ ಚರ್ಚಿತ ವಿಷಯವಾಗಿದೆ.

ಈ ಚುನಾವಣೆಗೆ ಬಿಜೆಪಿಯಿಂದ ಎರಡ್ಮೂರು ಜನ ಆಕಾಂಕ್ಷಿಗಳಾಗಿದ್ದಾರೆ. ವಿಧಾನ ಪರಿಷತ್‌ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಮಾಧ್ಯಮಿಕ ಶಿಕ್ಷಕ ಸಂಘದ ಸಂದೀಪ ಬೂದಿಹಾಳ ಹಾಗೂ ಸಿಂಡಿಕೇಟ್‌ ಸದಸ್ಯ ಸುಧೀಂದ್ರ ದೇಶಪಾಂಡೆ ಪ್ರಮುಖ ಆಕಾಂಕ್ಷಿಯಾಗಿ ಗುರುತಿಸಿಕೊಂಡಿದ್ದಾರೆ. ಇವರಲ್ಲಿ ಯಾರಾದರೊಬ್ಬರು ಅಭ್ಯರ್ಥಿಗಳಾಗಿದ್ದರೆ ಇಷ್ಟೊಂದು ಚರ್ಚೆ ಆಗುತ್ತಿರಲಿಲ್ಲ. ಆದರೆ, ಬೇರೆ ಪಕ್ಷದ ಹಿರಿಯರೊಬ್ಬರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎನ್ನುವ ಸುದ್ದಿ ಚರ್ಚೆಗೆ ಗ್ರಾಸ ಒದಗಿಸಿದೆ.

ಹೌದು, ವಿಧಾನ ಪರಿಷತ್‌ನಲ್ಲಿ ಅತ್ಯಂತ ಹಿರಿಯರಾದ ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದಲೇ ಏಳು ಬಾರಿ ಆಯ್ಕೆಯಾಗಿರುವ ಬಸವರಾಜ ಹೊರಟ್ಟಿಯವರೇ ಬಿಜೆಪಿ ಅಭ್ಯರ್ಥಿಯಾಗಲು ಒಲವು ಹೊಂದಿದ್ದಾರೆ. ಬಿಜೆಪಿ ವರಿಷ್ಠರು ಪರಿಗಣಿಸಿದರೆ ಅವರೇ ಅಭ್ಯರ್ಥಿಯಾಗುತ್ತಾರೆ ಎನ್ನುವ ಗುಸು ಗುಸು ಆ ಪಕ್ಷದ ವಲಯದಲ್ಲಿಯೇ ಹರಿದಾಡುತ್ತಿದೆ.

2008ರಲ್ಲೇ ಆಗಿನ ಮುಖ್ಯಮಂತ್ರಿಯವರು ಹೊರಟ್ಟಿಯವರ ಮನೆಗೆ ತೆರಳಿ ಬಿಜೆಪಿಗೆ ಆಹ್ವಾನಿಸಿದ್ದರೂ ನಯವಾಗಿ ತಿರಸ್ಕರಿಸಿದ್ದರಲ್ಲದೇ, ಜೆಡಿಎಸ್‌ನಲ್ಲೇ ಮುಂದುವರಿಯುವುದಾಗಿ ಹೇಳಿಕೊಂಡಿದ್ದರು. ಇದೀಗ 75 ವರ್ಷಗಳ ಆಸುಪಾಸಿನಲ್ಲಿರುವ ಹೊರಟ್ಟಿ ಬಿಜೆಪಿಗೆ ಹೋಗುವ ಸಾಧ್ಯತೆ ಕಡಿಮೆ ಎನ್ನುವ ವಾದಗಳು ಅವರ ಆಪ್ತ ವಲಯದಲ್ಲಿ ಕೇಳಿ ಬರುತ್ತಿವೆ.

ಸಭಾಪತಿಗೆ ವಂದಿಸಿದ ಶ್ವಾನಗಳು: ಶ್ವಾನ ದಳದೊಂದಿಗೆ ಸಮಯ ಕಳೆದ ಬಸವರಾಜ ಹೊರಟ್ಟಿ
ಬಿಜೆಪಿಗೆ ಹೋದರೆ ಮುಂದೇನು..?

ಅದು ಅಲ್ಲದೇ ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಯಾವುದೇ ಸಾಂವಿಧಾನಿಕ ಹುದ್ದೆ ನೀಡುವುದಿಲ್ಲ ಎನ್ನುವ ಅಲಿಖಿತ ನಿರ್ಧಾರ ಮಾಡಲಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ಹೊರತುಪಡಿಸಿ ಲಾಲಕೃಷ್ಣ ಆಡ್ವಾಣಿ, ಮುರಳಿ ಮನೋಹರ ಜೋಶಿಯವರಂಥ ಅನೇಕ ಘಟಾನುಘಟಿ ನಾಯಕರಿಗೆ ಯಾವುದೇ ಸಾಂವಿಧಾನಿಕ ಹುದ್ದೆ ನೀಡದೇ ಪಕ್ಷದ ಸಲಹಾ ಸಮಿತಿಗೆ ನೇಮಿಸಲಾಗಿದೆ. ಇಂತಹದರಲ್ಲಿ ಹೊರಟ್ಟಿ ಬಿಜೆಪಿ ಸೇರ್ಪಡೆಗೊಂಡು ಬರುವ ಪರಿಷತ್‌ ಚುನಾವಣೆ ಗೆದ್ದರೂ, ಅವರಿಗೆ ಪಕ್ಷದಲ್ಲಿ ಯಾವ ಸ್ಥಾನಮಾನ ಕೊಡಬಹುದು ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ.

ದಾಖಲೆ ಗೆಲುವಿಗೆ ಬಿಜೆಪಿಯತ್ತ ಮುಖ?

ಉತ್ತರ ಕರ್ನಾಟಕ ಅದರಲ್ಲೂ ಪಶ್ಚಿಮ ಶಿಕ್ಷಕರ ವಿಧಾನ ಪರಿಷತ್‌ ಕ್ಷೇತ್ರದಲ್ಲಿ ಜೆಡಿಎಸ್‌ ಅಸ್ತಿತ್ವವೇ ಇಲ್ಲದಾಗಿದೆ. ಇಂತಹ ಸಂದರ್ಭದಲ್ಲಿ ಆ ಪಕ್ಷದಿಂದ ಸ್ಪರ್ಸುವುದಕ್ಕಿಂತ ಬಿಜೆಪಿಯಿಂದ ಸ್ಪರ್ಧಿಸಿದರೆ, ನಿರಾಯಾಸವಾಗಿ ಗೆಲುವು ಸಾಧಿಸಬಹುದು ಹಾಗೂ 1980ರಿಂದ ಹೊರಟ್ಟಿ ಅವರೇ ವಿಧಾನ ಪರಿಷತ್‌ ಸದಸ್ಯರಾಗಿದ್ದಾರೆ. ಈಗಾಗಲೇ ಒಂದೇ ಕ್ಷೇತ್ರದಲ್ಲಿ ಸತತ ಏಳು ಬಾರಿ ಗೆದ್ದಿದ್ದಾರೆ. ಇದೊಂದು ಸಲ ಗೆದ್ದರೆ ದಾಖಲೆಯ 8ನೇ ಬಾರಿ ಗೆಲುವಿನ ಜತೆಗೆ ಇತಿಹಾಸ ಸೃಷ್ಟಿಯಾಗಲಿದೆ.

ಅಧಿವೇಶನದಲ್ಲಿ ಗದ್ದಲ, ಬಹಿಷ್ಕಾರಕ್ಕೆ ಅವಕಾಶ ಕೊಡಬಾರದು ಎಂದು ತಿಳಿಸಿದ್ದೇವೆ; ಹೊರಟ್ಟಿ
ಬಿಜೆಪಿಗೆ ಬಲದ ಲೆಕ್ಕಾಚಾರ

ಕಳೆದ ಏಳು ಚುನಾವಣೆಗಳಿಂದ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿ ಲಗ್ಗೆ ಇಡಲು ಸಾಧ್ಯವಾಗಿಲ್ಲ. ಅದನ್ನು ಪ್ರತಿನಿಸುವ ಹೊರಟ್ಟಿಯವರೇ ಬಿಜೆಪಿಗೆ ಬಂದರೆ ಆ ಕ್ಷೇತ್ರವೂ ಪಕ್ಷದ ಪಾಲಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ಉತ್ತರ ಕರ್ನಾಟಕದ ಲಿಂಗಾಯತ ನಾಯಕ ಹೊರಟ್ಟಿ ಅವರಿಂದ ಮುಂದಿನ ವಿಧಾನಸಭೆ ಸೇರಿದಂತೆ ಎಲ್ಲ ಚುನಾವಣೆಗಳಲ್ಲಿ ಪಕ್ಷಕ್ಕೆ ದೊಡ್ಡ ಬಲ ಸಿಗಲಿದೆ ಎನ್ನುವ ಲೆಕ್ಕಾಚಾರವೂ ಇದೆ ಎಂದು ಹೇಳಲಾಗುತ್ತಿದೆ.

ಈ ಕುರಿತು ಚರ್ಚೆ ನಡೆದ ಬಗ್ಗೆ ಬಿಜೆಪಿಯವರಾಗಲಿ, ಬಸವರಾಜ ಹೊರಟ್ಟಿಯವರಾಗಲಿ ಖಚಿತ ಪಡಿಸಿಲ್ಲ. ಆದರೆ, ಪಕ್ಷದ ಆಂತರಿಕ ವಲಯದಲ್ಲಿ ಈ ಬಗ್ಗೆ ಚರ್ಚೆ ನಡೆದಿರುವುದನ್ನು ಯಾರೂ ಅಲ್ಲಗಳೆಯುತ್ತಿಲ್ಲ. ಪರಿಷತ್‌ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯದಲ್ಲಿ ಯಾವ್ಯಾವ ಬದಲಾವಣೆ ಆಗುತ್ತದೆಯೋ ಕಾದು ನೋಡಬೇಕಿದೆ.

‘ಪಕ್ಷದ ಆಂತರಿಕ ವಲಯದಲ್ಲಿ ಈ ಬಗ್ಗೆ ಚರ್ಚೆಯಾಗಿಲ್ಲ. ಚರ್ಚೆ ಆದರೆ ತಿಳಿಸುತ್ತೇವೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ತಿಳಿಸಿದ್ದಾರೆ.

ಕಾಂಗ್ರೆಸ್‌ನ 14 ಪರಿಷತ್‌ ಸದಸ್ಯರ ಅಮಾನತು; ಸಭಾಪತಿ ಬಸವರಾಜ ಹೊರಟ್ಟಿ ಆದೇಶ



Read more