ಹೈಲೈಟ್ಸ್:
- ಹರಿದ್ವಾರದಲ್ಲಿ ಡಿ. 17 ರಿಂದ ಡಿ. 20ರವರೆಗೆ ನಡೆದಿದ್ದ ಸಮ್ಮೇಳನ
- ಮುಸ್ಲಿಮರ ವಿರುದ್ಧ ಹಿಂಸೆಗಳನ್ನು ನಡೆಸಲು ಬಹಿರಂಗ ಕರೆ ವಿವಾದ
- ಇತ್ತೀಚೆಗೆ ಮತಾಂತರಗೊಂಡಿದ್ದ ವಸೀಂ ರಿಜ್ವಿ ವಿರುದ್ಧ ಪ್ರಕರಣ ದಾಖಲು
ಡಿ. 17 ರಿಂದ 20ರವರೆಗೆ ಧಾರ್ಮಿಕ ಸಮ್ಮೇಳನ ನಡೆದಿತ್ತು. ಇದರಲ್ಲಿ ಭಾಷಣ ಮಾಡಿದ ಅನೇಕರು ದ್ವೇಷ ಭಾಷಣಗಳನ್ನು ಮಾಡಿದ್ದರು ಎಂದು ಆರೋಪಿಸಲಾಗಿದೆ. ಇದರ ಕೆಲವು ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಟೀಕೆಗೆ ಗುರಿಯಾಗಿವೆ.
ಯಾವುದೇ ದೂರು ದಾಖಲಾಗದ ಕಾರಣ ಎಫ್ಐಆರ್ ದಾಖಲಿಸಿಲ್ಲ ಎಂದು ಈ ಮೊದಲು ಪೊಲೀಸರು ತಿಳಿಸಿದ್ದರು. ವೈರಲ್ ಆಗಿರುವ ವಿಡಿಯೋಗಳ ಬಗ್ಗೆ ಪ್ರಶ್ನಿಸಿದಾಗ, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದೆ ಎಂದು ಹರಿದ್ವಾರ ಎಸ್ಪಿ ಸ್ವತಂತ್ರ ಕುಮಾರ್ ಸಿಂಗ್ ಹೇಳಿದ್ದರು. ತೃಣಮೂಲ ಕಾಂಗ್ರೆಸ್ ನಾಯಕ ಮತ್ತು ಆರ್ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ನೀಡಿದ ದೂರಿನ ಅನ್ವಯ ಎಫ್ಐಆರ್ ದಾಖಲಾಗಿದೆ. ಶಿಯಾ ವಕ್ಫ್ ಮಂಡಳಿ ಅಧ್ಯಕ್ಷರಾಗಿದ್ದ, ಇತ್ತೀಚೆಗಷ್ಟೇ ‘ಜಿತೇಂದರ್ ನಾರಾಯಣ್’ ಹೆಸರಿನಲ್ಲಿ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದ ವಸೀಂ ರಿಜ್ವಿ ಅವರ ಹೆಸರನ್ನು ಉಲ್ಲೇಖಿಸಲಾಗಿದೆ. ಅವರು ಮತ್ತು ಇತರರು ಸಮ್ಮೇಳನದಲ್ಲಿ ಅವಹೇಳನಾಕಾರಿ ಮತ್ತು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದ್ದರು ಎಂದು ಎಫ್ಐಆರ್ ಹೇಳಿದೆ.
ಸಮ್ಮೇಳನ ಆಯೋಜಕರು ಮತ್ತು ದ್ವೇಷ ಭಾಷಣ ಮಾಡಿದವರು ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಪ್ರತಿಪಾದಿಸಿದ್ದಾರೆ. ‘ನಾನು ಏನು ಹೇಳಿದ್ದೇನೋ ಅದಕ್ಕೆ ನಾಚಿಕೆಪಡುವುದಿಲ್ಲ. ನನಗೆ ಪೊಲೀಸ್ ಬಗ್ಗೆ ಭಯವಿಲ್ಲ. ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ’ ಎಂದು ಹಿಂದೂ ರಕ್ಷಾ ಸೇನಾದ ಪ್ರಬೋಧಾನಂದ ಗಿರಿ ಹೇಳಿದ್ದಾರೆ.
‘ಮಯನ್ಮಾರ್ನಲ್ಲಿ ನಡೆದಿರುವಂತೆಯೇ, ನಮ್ಮ ಪೊಲೀಸರು, ನಮ್ಮ ರಾಜಕಾರಣಿಗಳು, ನಮ್ಮ ಸೇನೆ ಮತ್ತು ಪ್ರತಿ ಹಿಂದೂ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳಬೇಕು ಮತ್ತು ಸಮುದಾಯ ಸ್ವಚ್ಛತೆಯನ್ನು ನಡೆಸಬೇಕು. ಈಗ ನಮಗೆ ಬೇರೆ ಆಯ್ಕೆ ಉಳಿದಿಲ್ಲ’ ಎಂದು ಅವರು ಹೇಳುವುದು ವಿಡಿಯೋದಲ್ಲಿ ದಾಖಲಾಗಿದೆ.
ಮತ್ತೊಂದು ವಿವಾದಾತ್ಮಕ ವಿಡಿಯೋ ಪೂಜಾ ಶಕುನ್ ಪಾಂಡೆ ಅಲಿಯಾಸ್ ಸಾಧ್ವಿ ಅನ್ನಪೂರ್ಣ ಅವರದ್ದಾಗಿದ್ದು, ‘ಅವರನ್ನು ಮುಗಿಸಬೇಕು ಎಂದಿದ್ದರೆ, ಅವರನ್ನು ಸಾಯಿಸಿ… ಇದನ್ನು ಗೆಲ್ಲಲು ಅವರಲ್ಲಿ 20 ಲಕ್ಷ ಜನರನ್ನು ಕೊಲ್ಲುವ 100 ಸೈನಿಕರು ನಮಗೆ ಬೇಕಿದ್ದಾರೆ’ ಎಂದಿರುವುದು ಸೆರೆಯಾಗಿದೆ.