ಹೈಲೈಟ್ಸ್:
- ಕೆಲವೇ ತಿಂಗಳಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ
- ವಿಧಾನಸಭೆ ಚುನಾವಣೆ ಮುಂದೂಡುವಂತೆ ಅಲಹಾಬಾದ್ ಹೈಕೋರ್ಟ್ ಮನವಿ
- ಓಮಿಕ್ರಾನ್ ತಳಿಯಿಂದ ಅಪಾಯಕಾರಿ ಮೂರನೇ ಅಲೆ ಎದುರಾಗುವ ಸಂಭವ
- ಚುನಾವಣೆಗಾಗಿ ಸಮಾವೇಶ ನಡೆಸುವುದು, ಗುಂಪುಗೂಡುವಿಕೆಯನ್ನು ನಿಷೇಧಿಸಿ
- ಚುನಾವಣಾ ಆಯೋಗ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಕೋರ್ಟ್ ಕೋರಿಕೆ
‘ಸಮಾವೇಶಗಳನ್ನು ನಿಲ್ಲಿಸದೆ ಹೋದರೆ ಎರಡನೇ ಅಲೆಗಿಂತಲೂ ಕೆಟ್ಟ ಮಟ್ಟದ ಫಲಿತಾಂಶ ಎದುರಾಗಲಿದೆ. ಜೀವ ಇದ್ದರೆ ಮಾತ್ರವೇ ಜಗತ್ತು’ ಎಂದು ನ್ಯಾಯಮೂರ್ತಿ ಶೇಖರ್ ಯಾದವ್ ಅವರು, ಈ ವಿಚಾರಕ್ಕೆ ಸಂಬಂಧಿಸದ ಜಾಮೀನು ಅರ್ಜಿಯೊಂದರ ವಿಚಾರಣೆ ವೇಳೆ ಹೇಳಿದ್ದಾರೆ.
ಪ್ರತಿ ದಿನ ನೂರಾರು ಪ್ರಕರಣಗಳು ವಿಚಾರಣೆಗೆ ನಿಗದಿಯಾಗಿರುವುದರಿಂದ ನ್ಯಾಯಾಲಯವು ನಿತ್ಯವೂ ಜನರಿಂದ ತುಂಬಿಕೊಳ್ಳುತ್ತಿದೆ. ಭಾರಿ ಸಂಖ್ಯೆಯಲ್ಲಿ ಜನರು ಸೇರುವುದರಿಂದ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುತ್ತಿಲ್ಲ ಎಂದು ನ್ಯಾಯಮೂರ್ತಿ ಉಲ್ಲೇಖಿಸಿದರು. ‘ಹೊಸ ತಳಿ ಓಮಿಕ್ರಾನ್ ಹೆಚ್ಚುತ್ತಿರುವುದರಿಂದ ಕೋವಿಡ್ 19 ಮೂರನೇ ಅಲೆ ಹೆಚ್ಚುವ ಸಾಧ್ಯತೆಗಳು ಇವೆ. ಗ್ರಾಮ ಪಂಚಾಯಿತಿ ಚುನಾವಣೆಗಳು ಮತ್ತು ಪಶ್ಚಿಮ ಬಂಗಾಳ ಚುನಾವಣೆ ಸಂದರ್ಭದಲ್ಲಿ ಅಧಿಕ ಸಂಖ್ಯೆಯಲ್ಲಿ ಜನರು ಸೋಂಕಿಗೆ ಒಳಗಾಗಿದ್ದರು. ಇದರಿಂದ ಹೆಚ್ಚಿನ ಸಾವುಗಳು ಕೂಡ ಸಂಭವಿಸಿದ್ದವು’ ಎಂದು ಹೇಳಿದರು.
ಕೋವಿಡ್ ಪ್ರಕರಣಗಳ ಸಂಖ್ಯೆ ಕುರಿತಾದ ಪತ್ರಿಕಾ ವರದಿಗಳನ್ನು ಉಲ್ಲೇಖಿಸಿದ ಅವರು, ಅನೇಕ ದೇಶಗಳು ಮತ್ತೆ ಲಾಕ್ಡೌನ್ ಜಾರಿಗೆ ತಂದಿವೆ ಎಂದು ತಿಳಿಸಿದರು. ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗಾಗಿ ರಾಜಕೀಯ ಪಕ್ಷಗಳು ದೊಡ್ಡ ದೊಡ್ಡ ಸಮಾವೇಶಗಳನ್ನು ಮತ್ತು ಜಾಥಾಗಳನ್ನು ಆಯೋಜಿಸುತ್ತಿವೆ. ಅಂತಹ ಕಾರ್ಯಕ್ರಮಗಳಲ್ಲಿ ಕೋವಿಡ್ ಶಿಷ್ಟಾಚಾರಗಳ ಪಾಲನೆ ಅಸಾಧ್ಯ ಎಂದು ಅಭಿಪ್ರಾಯಪಟ್ಟರು.
ವಿಧಾನಸಭೆ ಚುನಾವಣೆಗಾಗಿ ಯಾವುದೇ ರೀತಿಯ ಗುಂಪುಗೂಡುವಿಕೆ ಮತ್ತು ಸಮಾವೇಶಗಳನ್ನು ನಿಷೇಧಿಸಬೇಕು ಹಾಗೂ ದೂರದರ್ಶನ ಅಥವಾ ಪತ್ರಿಕೆಗಳ ಮೂಲಕ ಪ್ರಚಾರ ನಡೆಸುವಂತೆ ರಾಜಕೀಯ ಪಕ್ಷಗಳಿಗೆ ನಿರ್ದೇಶಿಸಬೇಕು. ದೈಹಿಕ ಪಾಲ್ಗೊಳ್ಳುವಿಕೆಯ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದು. ಸಂವಿಧಾನದ 21ನೇ ವಿಧಿಯನ್ನು ಜಾರಿಗೆ ತರಬೇಕು ಎಂದು ಚುನಾವಣಾ ಆಯೋಗಕ್ಕೆ ಅವರು ಮನವಿ ಮಾಡಿದರು.
ಉತ್ತರ ಪ್ರದೇಶದಲ್ಲಿ ಈಗಾಗಲೇ ಚುನಾವಣೆಗೆ ಸಂಬಂಧಿಸಿದ ತಯಾರಿಗಳು ಚುರುಕುಗೊಂಡಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಸತತವಾಗಿ ಉತ್ತರ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದು, ಅನೇಕ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದಾರೆ. ಕಾಂಗ್ರೆಸ್ ಮುಖಂಡರು, ಸಮಾಜವಾದಿ ಪಕ್ಷ ಹಾಗೂ ಇತರೆ ವಿಪಕ್ಷಗಳೂ ಚುನಾವಣಾ ಕಾರ್ಯಗಳಲ್ಲಿ ತೊಡಗಿವೆ. ಈ ಹಿಂದೆ ನಡೆದ ಪಶ್ಚಿಮ ಬಂಗಾಳ, ತಮಿಳುನಾಡು ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ತಮ್ಮ ಬದ್ಧತೆ ಮತ್ತು ಹೊಣೆಗಾರಿಕೆಗಳನ್ನು ಮರೆತು ಸಮಾವೇಶಗಳನ್ನು ನಡೆಸಿದ್ದು ವ್ಯಾಪಕ ಟೀಕೆಗಳಿಗೆ ಗುರಿಯಾಗಿತ್ತು. ಅದರ ಬೆನ್ನಲ್ಲೇ ಕೋವಿಡ್ ಎರಡನೇ ಅಲೆ ತೀವ್ರಗೊಂಡಿತ್ತು.