Karnataka news paper

ನಾಗವಾರ-ಗೊಟ್ಟಿಗೆರೆ ಮೆಟ್ರೋ ಮಾರ್ಗದಲ್ಲಿ 577 ಮರ ಕತ್ತರಿಸಲು ಹೈಕೋರ್ಟ್‌ ಅನುಮತಿ!


ಹೈಲೈಟ್ಸ್‌:

  • ಮೆಟ್ರೋ ಮಾರ್ಗದಲ್ಲಿ 577 ಮರ ಕತ್ತರಿಸಲು ಹೈಕೋರ್ಟ್‌ ಅನುಮತಿ
  • ನಾಗವಾರ-ಗೊಟ್ಟಿಗೆರೆ ಮಾರ್ಗ ಕಾಮಗಾರಿಗೆ ಅಡ್ಡಿಯಾಗಿದ್ದ ವೃಕ್ಷಗಳು
  • ಪ್ರತಿದಿನ 2 ಕೋಟಿ ರೂ. ನಷ್ಟ ಅನುಭವಿಸುತ್ತಿದ್ದ ಬಿಎಂಆರ್‌ಸಿಎಲ್‌ ನಿರಾಳ

ಬೆಂಗಳೂರು : ನಾಗವಾರ-ಗೊಟ್ಟಿಗೆರೆ ಮೆಟ್ರೋ ರೈಲು ಮಾರ್ಗದಲ್ಲಿ 577 ಮರಗಳನ್ನು ಕತ್ತರಿಸಲು ಹೈಕೋರ್ಟ್‌, ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್‌) ಅನುಮತಿ ನೀಡಿದೆ. ಕಾಮಗಾರಿ ವಿಳಂಬದಿಂದ ಪ್ರತಿದಿನ 2 ಕೋಟಿ ರೂ. ನಷ್ಟ ಅನುಭವಿಸುತ್ತಿದ್ದ ನಿಗಮಕ್ಕೆ ದೊಡ್ಡ ರಿಲೀಫ್‌ ಸಿಕ್ಕಂತಾಗಿದೆ.

ಮರಗಳನ್ನು ಕಡಿಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಬೆಂಗಳೂರು ಎನ್ವಿರಾನ್ಮೆಂಟ್‌ ಟ್ರಸ್ಟ್‌ ಮತ್ತು ಪರಿಸರವಾದಿ ಟಿ.ದತ್ತಾತ್ರೇಯ ದೇವರೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಗುರುವಾರ ಸಿಜೆ ರಿತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ಪೀಠದ ಮುಂದೆ ಬಂದಿತು.

ಸುದೀರ್ಘ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ”ತಜ್ಞರ ಸಮಿತಿ ವರದಿಯಂತೆ ಬಿಎಂಆರ್‌ಸಿಎಲ್‌ ನ.26ರಂದು ಸಲ್ಲಿಸಿರುವ ಜ್ಞಾಪನಾ ಪತ್ರದಂತೆ 577 ಮರಗಳನ್ನು ಕತ್ತರಿಸಬಹುದಾಗಿದೆ. ಜತೆಗೆ 18 ಮರಗಳನ್ನು ಸ್ಥಳಾಂತರ ಮಾಡಬೇಕು ಮತ್ತು ಕತ್ತರಿಸುವ ಮರಗಳಿಗೆ ಪರ್ಯಾಯವಾಗಿ ತಜ್ಞರ ಸಮಿತಿ ಸೂಚಿಸಿರುವಂತೆ ಅರಣ್ಯೀಕರಣ ಕೈಗೊಳ್ಳಬೇಕು. ನಿಗಮವು ಕಾಲಮಿತಿಯಲ್ಲಿ ಯೋಜನೆಯನ್ನು ಪೂರ್ಣಗೊಳಿಸಬೇಕು ಮತ್ತು ಆ ಬಗ್ಗೆ ಸಮಗ್ರ ವರದಿಯನ್ನು ಸಲ್ಲಿಸಬೇಕು,” ಎಂದು ಆದೇಶ ನೀಡಿತು.

”ಇದೇ ನ್ಯಾಯಾಲಯ ಮರಗಳನ್ನು ಕತ್ತರಿಸುವ ಬಗ್ಗೆ ಪರಿಶೀಲನೆ ನಡೆಸಲು ನೇಮಿಸಿದ್ದ ಸಮಿತಿಯ ವರದಿಯನ್ನು ಒಪ್ಪಲಿದೆ. ವಿಸ್ತೃತ ಯೋಜನಾ ವರದಿಗೂ(ಡಿಪಿಆರ್‌) ಮತ್ತು ಮರ ತಜ್ಞರ ಸಮಿತಿ(ಟಿಇಸಿ) ನೀಡುವ ಅಂಕಿ ಸಂಖ್ಯೆಗೆ ಸ್ವಲ್ಪ ವ್ಯತ್ಯಾಸವಿದೆ ಎಂಬ ಕಾರಣಕ್ಕೆ, ಟಿಇಸಿ ಸರಿಯಾಗಿ ಮರಗಳನ್ನು ಪರಿಶೀಲಿಸಿಲ್ಲವೆಂದು ಹೇಳಲಾಗದು. 2016ರಲ್ಲಿ ಸಿದ್ಧಪಡಿಸಲಾಗಿದ್ದ ಡಿಪಿಆರ್‌ಗೂ ಮತ್ತು 2019ರಲ್ಲಿ ಟಿಇಸಿ ಪರಿಶೀಲನೆ ನಡೆಸಿದಾಗ ಇದ್ದ ಮರಗಳ ಸಂಖ್ಯೆ ಹೆಚ್ಚು ಕಡಿಮೆ ಆಗಿರಬಹುದು. ಅದನ್ನೇ ದೊಡ್ಡ ವಿಚಾರ ಮಾಡುವ ಅಗತ್ಯವಿಲ್ಲ” ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಜನರನ್ನು ಸೆಳೆಯುವಲ್ಲಿ ವಿಫಲವಾದ ‘ನಮ್ಮ ಮೆಟ್ರೋ’; BMRCLಗೆ ನಿತ್ಯ 1 ಲಕ್ಷ ಪ್ರಯಾಣಿಕರ ನಷ್ಟ!

ನಾಗವಾರ-ಗೊಟ್ಟಿಗೆರೆ ಮೆಟ್ರೋ ಮಾರ್ಗದಲ್ಲಿ ಮರಗಳನ್ನು ಕತ್ತರಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅರ್ಜಿದಾರರು ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಕರ್ನಾಟಕ ಮರ ಸಂರಕ್ಷಣಾ ಕಾಯಿದೆ 1976 ಮತ್ತು ಕರ್ನಾಟಕ ಮರ ಸಂರಕ್ಷಣಾ ನಿಯಮ 1977ಗೆ ವಿರುದ್ಧವಾಗಿ ಮರಗಳನ್ನು ಕತ್ತರಿಸಲಾಗುತ್ತಿದೆ. ಇದು ನಿಯಮ ಬಾಹಿರ ಕ್ರಮ. ಮರ ಪ್ರಾಧಿಕಾರದ ಕಾರ್ಯವೈಖರಿಯ ಮೇಲೆ ನಿಗಾವಹಿಸಲು ಕಾರ್ಯಪಡೆ ರಚಿಸಬೇಕೆಂದು ಕೋರಿದ್ದರು.



Read more