Karnataka news paper

ರಾಜ್ಯದಲ್ಲಿ 299 ಹೊಸ ಪ್ರಕರಣ! ಮರಣ ಪ್ರಮಾಣದಲ್ಲಿ ಗಣನೀಯ ಇಳಿಕೆ!


ಹೈಲೈಟ್ಸ್‌:

  • ರಾಜ್ಯದಲ್ಲಿ 299 ಹೊಸ ಕೋವಿಡ್‌ ಪ್ರಕರಣಗಳು ಪತ್ತೆ
  • ರಾಜ್ಯದಲ್ಲಿ ಇನ್ನೂ ಇವೆ 7000ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು
  • ಸೋಂಕಿನಿಂದ ಸಂಭವಿಸುವ ಮರಣ ಪ್ರಮಾಣದಲ್ಲಿ ಗಣನೀಯ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಸೋಂಕು ಇನ್ನೂ ಸಕ್ರಿಯವಾಗಿದ್ದು, ಹೊಸ ಪ್ರಕರಣಗಳ ಸಂಖ್ಯೆ 300ರ ಆಸುಪಾಸಿನಲ್ಲೇ ಇದೆ. ಗುರುವಾರ ಕೂಡ 299 ಪ್ರಕರಣಗಳು ದೃಢಪಟ್ಟಿದೆ. ಬುಧವಾರಕ್ಕೆ ಹೋಲಿಸಿದರೆ ಸೋಂಕಿತರ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆ ಕಂಡಿದೆ.

ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3003564ಕ್ಕೆ ಏರಿಕೆಯಾಗಿದೆ. ಇತ್ತೀಚೆಗಷ್ಟೇ ರಾಜ್ಯದಲ್ಲಿ ಓಮಿಕ್ರಾನ್‌ ರೂಪಾಂತರಿ ತಳಿ ವೈರಸ್‌ ಕೂಡ ಪತ್ತೆಯಾಗಿದ್ದು, ರಾಜ್ಯದಲ್ಲಿ ಈಗಾಗಲೇ 19 ಪ್ರಕರಣಗಳು ಪತ್ತೆಯಾಗಿದೆ. ಓಮಿಕ್ರಾನ್‌ ಅಲೆ ಶೀಘ್ರದಲ್ಲೇ ಉಲ್ಬಣಗೊಳ್ಳಲಿದೆ ಎಂಬ ಭೀತಿಯೂ ಎದುರಾಗಿದೆ. ಈ ಕುರಿತು ಎಚ್ಚರಿಕೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರ ರಾಜ್ಯಗಳಿಗೆ ಸೂಚನೆ ನೀಡಿದೆ.

ರಾಜ್ಯಾದ್ಯಂತ 318 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆಸ್ಪತ್ರೆಯಿಂದ ಒಟ್ಟು ಬಿಡುಗಡೆಯಾದವರ ಸಂಖ್ಯೆ 29,58, 117ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣ ಸಂಖ್ಯೆ 7117ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವರದಿಯಲ್ಲಿ ತಿಳಿಸಿದೆ.

ಸೋಂಕಿನಿಂದ ಸಂಭವಿಸುವ ಸಾವಿನ ಪ್ರಮಾಣದಲ್ಲಿ ಕೊಂಚ ಕಡಿಮೆಯಾಗಿದೆ. ಗುರುವಾರ 2 ಮಂದಿ ಮೃತಪಟ್ಟಿದ್ದು, ಇದುವರೆಗೆ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 38,301ಕ್ಕೆ ಏರಿಕೆಯಾಗಿದೆ. ಸೋಂಕಿನ ಪ್ರಮಾಣ ಶೇ. 0.23ಕ್ಕೆ ಇಳಿಕೆಯಾದರೆ, ಮರಣ ಪ್ರಮಾಣ ಶೇ. 66ಕ್ಕೆ ಇಳಿಕೆಯಾಗಿದೆ.

ರಾಜ್ಯದಲ್ಲಿ ತ್ರಿಶತಕ ದಾಟಿದ ಕೋವಿಡ್‌ ಸೋಂಕು! ಬುಧವಾರ 321 ಹೊಸ ಪ್ರಕರಣ!

ಬೆಂಗಳೂರಲ್ಲಿ 210 ಸೋಂಕು
ಬೆಂಗಳೂರು ನಗರದಲ್ಲಿ ಗುರುವಾರ 210 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. 207 ಸೋಂಕಿತರು ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಬ್ಬರು ಸೋಂಕಿತರು ಮೃತಪಟ್ಟಿದ್ದಾರೆ. ನಗರದಲ್ಲಿ ಇನ್ನೂ 5742 ಸಕ್ರಿಯ ಪ್ರಕರಣಗಳಿವೆ. ದಕ್ಷಿಣ ಕನ್ನಡ 12, ಉತ್ತರ ಕನ್ನಡದಲ್ಲಿ 13 ಪ್ರಕರಣಗಳು ಪತ್ತೆಯಾಗಿವೆ. ಉಳಿದ ಕೆಲವು ಜಿಲ್ಲೆಗಳಲ್ಲಿ ಬೆರಳೆಣಿಕೆ ಸಂಖ್ಯೆಯ ಪ್ರಕರಣಗಳಿವೆ.

13 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ
ಬಾಗಲಕೋಟೆ, ಬಳ್ಳಾರಿ, ಬೀದರ್‌, ಚಾಮರಾಜನಗರ, ದಾವಣಗೆರೆ, ಚಿತ್ರದುರ್ಗ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ರಾಮನಗರ, ವಿಜಯಪುರ, ಯಾದಗಿರಿಯಲ್ಲಿ ಇಂದು ಶೂನ್ಯ ಪ್ರಕರಣ ವರದಿಯಾಗಿದೆ. ಯಾದಗಿರಿ, ಗದಗ ಜಿಲ್ಲೆಗಳು ಕೊರೊನಾ ಮುಕ್ತ ಜಿಲ್ಲೆಗಳಾಗಿ ಹೊರಹೊಮ್ಮಿದೆ. ಹಾವೇರಿ ಮತ್ತು ಬೀದರ್‌ ಜಿಲ್ಲೆಗಳಲ್ಲಿ ತಲಾ 1 ಸಕ್ರಿಯ ಪ್ರಕರಣಗಳಿವೆ.

ವರ್ಷಾಂತ್ಯಕ್ಕೆ ಫಸ್ಟ್‌ ಡೋಸ್‌ 100% ಪೂರ್ಣ: ಕೋವಿಡ್, ಓಮಿಕ್ರಾನ್ ನಿಗ್ರಹಕ್ಕೆ ಪಣ!

ಜಿಲ್ಲಾವಾರು ಸೋಂಕಿನ ಸಂಖ್ಯೆ:
ಬಾಗಲಕೋಟೆ 0, ಬಳ್ಳಾರಿ 0, ಬೆಳಗಾವಿ 6, ಬೆಂಗಳೂರು ಗ್ರಾಮಾಂತರ 1, ಬೆಂಗಳೂರು ನಗರ 210, ಬೀದರ್ 0, ಚಾಮರಾಜನಗರ 0, ಚಿಕ್ಕಬಳ್ಳಾಪುರ 4, ಚಿಕ್ಕಮಗಳೂರು 1, ಚಿತ್ರದುರ್ಗ 0, ದಕ್ಷಿಣಕನ್ನಡ 12, ದಾವಣಗೆರೆ 0, ಧಾರವಾಡ 8, ಗದಗ 0, ಹಾಸನ 3, ಹಾವೇರಿ 1, ಕಲಬುರಗಿ 0, ಕೊಡಗು 8, ಕೋಲಾರ 8, ಕೊಪ್ಪಳ 0, ಮಂಡ್ಯ 5, ಮೈಸೂರು 7, ರಾಯಚೂರು 0, ರಾಮನಗರ 0, ಶಿವಮೊಗ್ಗ 5, ತುಮಕೂರು 3, ಉಡುಪಿ 4, ಉತ್ತರಕನ್ನಡ 13, ವಿಜಯಪುರ 0, ಯಾದಗಿರಿ 0.

ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ
ಕೋವಿಡ್‌ ಹೊಸ ರೂಪಾಂತರಿ ವೈರಸ್‌ ಓಮಿಕ್ರಾನ್ ವೇಗವಾಗಿ ಹರಡುತ್ತಿದ್ದು, ವಿಶ್ವಾದ್ಯಂತ ಕಳವಳ ಉಂಟುಮಾಡಿದದೆ. ಭಾರತದಲ್ಲೂ ಓಮಿಕ್ರಾನ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ದೇಶದ ಕೋವಿಡ್ -19 ಪರಿಸ್ಥಿತಿ ಕುರಿತು ಪರಿಶೀಲನಾ ಸಭೆ ನಡೆಸಿದರು. ಓಮಿಕ್ರಾನ್‌ ಭೀತಿ ಹಿನ್ನೆಲೆಯಲ್ಲಿ ರಾಜ್ಯಗಳು ಹಬ್ಬದ ಸೀಸನ್‌ಗಿಂತ ಮುನ್ನವೇ ಸ್ಥಳೀಯ ನಿರ್ಬಂಧ ವಿಧಿಸುವ ಕುರಿತು ಪರಿಶೀಲಿಸುವಂತೆ ಕೋರಲಾಯಿತು.

ಅಲ್ಲದೆ, ಸೋಂಕು ಹರಡುವಿಕೆ ವೇಗ ಮತ್ತು ಸೋಂಕು ಪತ್ತೆಯಾಗಿರುವ ಕ್ಲಸ್ಟರ್‌ಗಳ ಮೇಲೆ ತೀವ್ರ ನಿಗಾ ವಹಿಸಬೇಕು. ಕೋವಿಡ್ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವಂತೆ ರಾಜ್ಯಗಳಿಗೆ ಸೂಚಿಸಲಾಯಿತು. ಮುಂದಿನ ದಿನಗಳಲ್ಲಿ ಚುನಾವಣೆ ಬರಲಿರುವ ರಾಜ್ಯಗಳಲ್ಲಿ ಸೋಂಕು ಹರಡುವಿಕೆ ವೇಗ ಹೆಚ್ಚು ಸಾಧ್ಯತೆ ಇದೆ. ಹೀಗಾಗಿ ಈ ರಾಜ್ಯಗಳಲ್ಲಿ ಲಸಿಕಾ ಕಾರ್ಯಕ್ರಮವನ್ನು ಮತ್ತಷ್ಟು ತ್ವರಿತಗೊಳಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಸೂಚಿಸಿದೆ.



Read more