Karnataka news paper

ನೆಲಮಂಗಲದಲ್ಲಿ ಶ್ರೀಗಂಧದ ಮರ ಕಳವು: ಪಿಡಬ್ಲ್ಯೂಡಿ ಅಧಿಕಾರಿಗಳೇ ಶಾಮೀಲಾಗಿರುವ ಶಂಕೆ..!


ಹೈಲೈಟ್ಸ್‌:

  • ದೂರು ನೀಡದೆ ಯಾಮಾರಿಸಿದ ಅಧಿಕಾರಿಗಳು..!
  • ಸಾರ್ವಜನಿಕರಿಂದಲೇ ದೂರು ದಾಖಲು
  • ನೆಲಮಂಗಲದ ಪರಿವೀಕ್ಷಣಾ ಮಂದಿರದ ಆವರಣದಲ್ಲಿದ್ದ ಮರ

ನೆಲಮಂಗಲ (ಬೆಂಗಳೂರು ಗ್ರಾಮಾಂತರ): ನಗರದ ಪರಿ ವೀಕ್ಷಣಾ ಮಂದಿರದ ಆವರಣದಲ್ಲಿ ಬೆಳೆಸಲಾಗಿದ್ದ ಲಕ್ಷಾಂತರ ಮೌಲ್ಯದ ಶ್ರೀ ಗಂಧ ಮರಗಳನ್ನು ಕಳ್ಳತನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಲೋಕೋಪಯೋಗಿ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.

ನಗರದ ಹೃದಯ ಭಾಗದಲ್ಲಿರುವ ಪರಿವೀಕ್ಷಣಾ ಮಂದಿರದ ಮುಂಭಾಗದಲ್ಲಿ 12 ವರ್ಷಗಳಿಂದ ಬೆಳೆಸಲಾಗಿದ್ದ ಸುಗಂಧ ಬೀರುವ 2 ಶ್ರೀಗಂಧ ಮರಗಳನ್ನು ಸೋಮವಾರವೇ ಕಳ್ಳತನ ಮಾಡಿದ್ದರೂ ಸಹ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ದೂರು ನೀಡಿಲ್ಲ. ಅರಣ್ಯ ಇಲಾಖೆಯ ಗಮನಕ್ಕೂ ಸಹ ತಂದಿಲ್ಲ.

ಇದರ ಬಗ್ಗೆ ಪ್ರಶ್ನೆ ಮಾಡಿದರೆ ನಾವು ಕೆಲಸದ ಒತ್ತಡದಲ್ಲಿ ಇದ್ದೆವು. ಮರೆತು ಹೋಗಿತ್ತು, ಗುರುವಾರ ದೂರು ನೀಡುತ್ತೇವೆ ಎಂದು ಬೇಜವಾಬ್ದಾರಿ ಉತ್ತರವನ್ನು ಇಲಾಖೆ ಅಧಿಕಾರಿಗಳು ನೀಡಿದ್ದು, ಗುರುವಾರ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ.

ಹೊಸಕೋಟೆಯಲ್ಲಿ ಸಸಿ ನೆಟ್ಟು ರಕ್ಷಣೆ ಕಲ್ಪಿಸದ ಇಲಾಖೆ, ಸರಕಾರದ ಹಣ ದುರ್ಬಳಕೆ!
ಮಾಹಿತಿ ಇದ್ದರು ದೂರಿಲ್ಲ: ಶ್ರೀ ಗಂಧ ಮರಗಳ ಕಳ್ಳತನ ಮಾಡಿರುವ ಬಗ್ಗೆ ಕಾವಲುಗಾರ ಸೋಮವಾರವೇ ಲೋಕೋಪಯೋಗಿ ಅಧಿಕಾರಿಗಳಾದ ನಟರಾಜು ಹಾಗೂ ಹರೀಶ್‌ ಗಮನಕ್ಕೆ ತಂದರೂ ಸಹ ಸೋಮವಾರದಿಂದ ಗುರುವಾರದವರೆಗೂ ದೂರು ನೀಡಿಲ್ಲ. ಮಂದಿರದ ಆವರಣದಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದರೂ ಸಹ ತನಿಖೆ ಮಾಡಿಲ್ಲ, ಕ್ಯಾಮೆರಾಗಳು ರಿಪೇರಿ ಇವೆ ಎಂಬ ಉತ್ತರವನ್ನು ನೀಡಿದ್ದು ಅಧಿಕಾರಿಗಳ ನಡೆ ಅನೇಕ ಅನುಮಾನಗಳಿಗೆ ಕಾರಣವಾಗಿದೆ.

ಮೇಲಧಿಕಾರಿಗಳ ಭೇಟಿ: ನೆಲಮಂಗಲ ವಲಯ ಅರಣ್ಯ ಅಧಿಕಾರಿಗಳ ತಂಡ ಶ್ರೀ ಗಂಧ ಮರಗಳನ್ನು ಕಟಾವು ಮಾಡಿರುವ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ದೂರು ದಾಖಲು ಮಾಡಿಕೊಂಡಿದ್ದು, ತನಿಖೆ ಮಾಡುವ ಭರವಸೆ ನೀಡಿದ್ದಾರೆ. ಅಧಿಕಾರಿಗಳೇ ಶಾಮೀಲಾಗಿ ಶ್ರೀಗಂಧ ಮರಗಳನ್ನು ಕಟಾವು ಮಾಡಿಸಿರುವ ಅನುಮಾನಗಳಿದ್ದು, ಲೋಕೋಪಯೋಗಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಅರಣ್ಯ ಇಲಾಖೆಗೆ ದೂರು ಸಹ ನೀಡಿದ್ದಾರೆ.

ರೈತರೇ ಶ್ರೀಗಂಧ ಸಸಿ ನೆಡಿ.. ರಕ್ಷಣೆ ಜವಾಬ್ದಾರಿ ಲೇಸರ್ ಸೆನ್ಸಾರ್‌ ತಂತ್ರಜ್ಞಾನಕ್ಕೆ ಬಿಡಿ..!
ವಿಕದಿಂದ ಬೆಳಕಿಗೆ ಬಂತು: ಪರಿವೀಕ್ಷಣಾ ಮಂದಿರದಲ್ಲಿ ಶ್ರೀ ಗಂಧದ ಮರಗಳನ್ನು ಕಟಾವು ಮಾಡಲಾಗಿದೆ ಎಂಬ ಬಗ್ಗೆ ವಿಕಗೆ ಸಾರ್ವಜನಿಕರ ಮಾಹಿತಿ ನೀಡಿದ ಬೆನ್ನಲ್ಲೇ ವಲಯ ಅರಣ್ಯಾಧಿಕಾರಿಯವರ ಗಮನಕ್ಕೆ ತಂದು ಅಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲನೆ ಮಾಡಲಾಯಿತು. ಪರಿಶೀಲನೆಯಲ್ಲಿ ಸೋಮವಾರವೇ ಕಳ್ಳತನವಾಗಿದೆ ಆದರೂ ದೂರು ನೀಡಿಲ್ಲ ಎಂಬ ಮಾಹಿತಿ ಬಂದಿದ್ದು ತನಿಖೆಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

‘ಶ್ರೀ ಗಂಧ ಮರಗಳ ಕಳವು ಹಾಗೂ ನಾಲ್ಕೈದು ದಿನಗಳಾದರೂ ದೂರು ನೀಡದಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ತಕ್ಷಣ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮಕೈಗೊಳ್ಳಲಾಗುತ್ತದೆ’ ಎಂದು ತಹಸೀಲ್ದಾರ್‌ ಮಂಜುನಾಥ್‌ ಹೇಳಿದ್ದಾರೆ.

ನೀಲಗಿರಿ ಹೋಯ್ತು, ಶ್ರೀಗಂಧ ಬಂತು..! ಬರದ ನಾಡಲ್ಲಿ ರೈತರ ಕೈಹಿಡಿಯಲಿದೆ ಸ್ಯಾಂಡಲ್‌ವುಡ್..!



Read more