Karnataka news paper

ಪ್ರಧಾನಿ ಮೋದಿ ನೇತೃತ್ವದಲ್ಲಿ ಕೋವಿಡ್ ಪರಿಶೀಲನಾ ಸಭೆ; ರಾಜ್ಯಗಳಲ್ಲಿ ಲಸಿಕೆ ಹೆಚ್ಚಿಸಲು ಸಲಹೆ


ಹೈಲೈಟ್ಸ್‌:

  • ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೋವಿಡ್‌ ಪರಿಶೀಲನಾ ಸಭೆ
  • ರಾಜ್ಯಗಳಲ್ಲಿ ಲಸಿಕಾ ಕಾರ್ಯಕ್ರಮವನ್ನು ಮತ್ತಷ್ಟು ತ್ವರಿತಗೊಳಿಸಲು ಸಲಹೆ
  • ಮಧ್ಯಪ್ರದೇಶದಲ್ಲಿ ನೈಟ್‌ ಕರ್ಫ್ಯೂ ಜಾರಿ ಮಾಡಿದ ಶಿವರಾಜ್‌ ಸಿಂಗ್‌ ಚೌಹಾಣ್

ಹೊಸದಿಲ್ಲಿ: ಕೋವಿಡ್‌ ಹೊಸ ರೂಪಾಂತರಿ ವೈರಸ್‌ ಓಮಿಕ್ರಾನ್ ವೇಗವಾಗಿ ಹರಡುತ್ತಿದ್ದು, ವಿಶ್ವಾದ್ಯಂತ ಕಳವಳ ಉಂಟುಮಾಡಿದದೆ. ಭಾರತದಲ್ಲೂ ಓಮಿಕ್ರಾನ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ದೇಶದ ಕೋವಿಡ್ -19 ಪರಿಸ್ಥಿತಿ ಕುರಿತು ಪರಿಶೀಲನಾ ಸಭೆ ನಡೆಸಿದರು. ಓಮಿಕ್ರಾನ್‌ ಭೀತಿ ಹಿನ್ನೆಲೆಯಲ್ಲಿ ರಾಜ್ಯಗಳು ಹಬ್ಬದ ಸೀಸನ್‌ಗಿಂತ ಮುನ್ನವೇ ಸ್ಥಳೀಯ ನಿರ್ಬಂಧ ವಿಧಿಸುವ ಕುರಿತು ಪರಿಶೀಲಿಸುವಂತೆ ಕೋರಲಾಯಿತು.

ಅಲ್ಲದೆ, ಸೋಂಕು ಹರಡುವಿಕೆ ವೇಗ ಮತ್ತು ಸೋಂಕು ಪತ್ತೆಯಾಗಿರುವ ಕ್ಲಸ್ಟರ್‌ಗಳ ಮೇಲೆ ತೀವ್ರ ನಿಗಾ ವಹಿಸಬೇಕು. ಕೋವಿಡ್ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವಂತೆ ರಾಜ್ಯಗಳಿಗೆ ಸೂಚಿಸಲಾಯಿತು. ಮುಂದಿನ ದಿನಗಳಲ್ಲಿ ಚುನಾವಣೆ ಬರಲಿರುವ ರಾಜ್ಯಗಳಲ್ಲಿ ಸೋಂಕು ಹರಡುವಿಕೆ ವೇಗ ಹೆಚ್ಚು ಸಾಧ್ಯತೆ ಇದೆ. ಹೀಗಾಗಿ ಈ ರಾಜ್ಯಗಳಲ್ಲಿ ಲಸಿಕಾ ಕಾರ್ಯಕ್ರಮವನ್ನು ಮತ್ತಷ್ಟು ತ್ವರಿತಗೊಳಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಸೂಚಿಸಿದೆ.

ಓಮಿಕ್ರಾನ್ ಆತಂಕ: ಮುಖ್ಯಮಂತ್ರಿಗಳ ಜತೆ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ

ಮಧ್ಯಪ್ರದೇಶದಲ್ಲಿ ನೈಟ್‌ ಕರ್ಫ್ಯೂ ಜಾರಿ
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಒಮಿಕ್ರಾನ್ ಮತ್ತು ಮೂರನೇ ಅಲೆ ಹರಡುವುದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಘೋಷಿಸಿದರು.

ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ದೇಶದ 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದುವರೆಗೆ 236 ಓಮಿಕ್ರಾನ್‌ ರೂಪಾಂತರಿ ಪ್ರಕರಣ ದಾಖಲಾಗಿವೆ. ಈ ಪೈಕಿ 104 ಸೋಂಕಿತರು ಈಗಾಗಲೇ ಗುಣವಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಓಮಿಕ್ರಾನ್ ಪ್ರಕರಣ ( 65 ಪ್ರಕರಣ) ದಾಖಲಾಗಿವೆ. ನಂತರದ ಸ್ಥಾನದಲ್ಲಿ ದೆಹಲಿ 64, ತೆಲಂಗಾಣ 24, ಕರ್ನಾಟಕ 19, ರಾಜಸ್ಥಾನ 21 ಮತ್ತು ಕೇರಳದಲ್ಲಿ 15 ಓಮಿಕ್ರಾನ್‌ ಪ್ರಕರಣಗಳು ದಾಖಲಾಗಿವೆ.



Read more