ಹೈಲೈಟ್ಸ್:
- 2022ರ ಜನವರಿ 7 ರಂದು ಬಿಡುಗಡೆಯಾಗಲಿದೆ ‘ಆರ್ಆರ್ಆರ್’
- ‘ಆರ್ಆರ್ಆರ್’ ಚಿತ್ರದ ಪ್ರೀ-ರಿಲೀಸ್ ಈವೆಂಟ್ನಲ್ಲಿ ಸಲ್ಮಾನ್ ಖಾನ್ ಮುಖ್ಯ ಅತಿಥಿ
- ‘ಆರ್ಆರ್ಆರ್’ ಸಿನಿಮಾದ ಬಗ್ಗೆ ಸಲ್ಮಾನ್ ಖಾನ್ ಹೇಳಿದ್ದೇನು?
‘ಆರ್ಆರ್ಆರ್’ ಚಿತ್ರದ ಪ್ರೀ-ರಿಲೀಸ್ ಈವೆಂಟ್ ಇತ್ತೀಚೆಗಷ್ಟೇ ಮುಂಬೈನಲ್ಲಿ ನಡೆದಿತ್ತು. ಪ್ರೀ-ರಿಲೀಸ್ ಈವೆಂಟ್ನಲ್ಲಿ ಜೂನಿಯರ್ ಎನ್.ಟಿ.ಆರ್, ರಾಮ್ ಚರಣ್, ರಾಜಮೌಳಿ, ಆಲಿಯಾ ಭಟ್, ಕರಣ್ ಜೋಹರ್ ಭಾಗವಹಿಸಿದ್ದರು. ಮುಖ್ಯ ಅತಿಥಿಯಾಗಿ ಸಲ್ಮಾನ್ ಖಾನ್ ಪಾಲ್ಗೊಂಡಿದ್ದರು. ಈ ವೇಳೆ ‘ಆರ್ಆರ್ಆರ್’ ಚಿತ್ರದ ಬಗ್ಗೆ ಸಲ್ಮಾನ್ ಖಾನ್ ಮಾತನಾಡಿದ್ದರು.
ಸಲ್ಮಾನ್ ಖಾನ್ ಹೇಳಿದ್ದೇನು?
‘ಆರ್ಆರ್ಆರ್’ ಚಿತ್ರದ ಪ್ರೀ-ರಿಲೀಸ್ ಈವೆಂಟ್ನಲ್ಲಿ ‘’ಆರ್ಆರ್ಆರ್ ಬಿಡುಗಡೆಯಾದ ಬಳಿಕ 4 ತಿಂಗಳ ಕಾಲ ಬೇರೆ ಯಾವುದೇ ಚಿತ್ರವನ್ನು ಯಾವುದೇ ನಿರ್ಮಾಪಕರು ರಿಲೀಸ್ ಮಾಡಲು ಹೋಗಬೇಡಿ. ಯಾಕಂದ್ರೆ, ನೀವೇ ಕಾಂಪಿಟೇಷನ್ನಲ್ಲಿ ಸಿಲುಕುತ್ತೀರಿ’’ ಎಂದು ಸಲ್ಮಾನ್ ಖಾನ್ ಹೇಳಿದರು. ಆ ಮೂಲಕ ‘ಆರ್ಆರ್ಆರ್’ ಚಿತ್ರವನ್ನ ಸಲ್ಮಾನ್ ಖಾನ್ ಹೊಗಳಿದರು. ಹಾಗೇ, ಇತರೆ ನಿರ್ಮಾಪಕರಿಗೆ ಸಲ್ಮಾನ್ ಖಾನ್ ಸಲಹೆ ನೀಡಿದರು.
ಜೂನಿಯರ್ ಎನ್.ಟಿ.ಆರ್ ಬಗ್ಗೆ ಸಲ್ಮಾನ್ ಖಾನ್ ಮಾತು
ಇದೇ ವೇದಿಕೆಯಲ್ಲಿ ಜೂನಿಯರ್ ಎನ್.ಟಿ.ಆರ್ ಬಗ್ಗೆಯೂ ಸಲ್ಮಾನ್ ಖಾನ್ ಹೊಗಳಿಕೆಯ ಮಾತುಗಳನ್ನಾಡಿದರು. ಜೂನಿಯರ್ ಎನ್.ಟಿ.ಆರ್ ನ್ಯಾಚುರಲ್ ಪರ್ಫಾಮರ್ ಎಂದು ಸಲ್ಮಾನ್ ಖಾನ್ ಹೇಳಿದರು.
ರಾಮ್ ಚರಣ್ ಬಗ್ಗೆ ಸಲ್ಮಾನ್ ಖಾನ್ ಹೇಳಿದ್ದೇನು?
‘’ರಾಮ್ ಚರಣ್ ಯಾವಾಗಲೂ ಪೆಟ್ಟು ಮಾಡಿಕೊಂಡಿರುವುದನ್ನೇ ನಾನು ನೋಡಿದ್ದೇನೆ. ನಾನು ಯಾವಾಗ ಕೇಳಿದರೂ ವರ್ಕೌಟ್ನಿಂದ ಪೆಟ್ಟು ಮಾಡಿಕೊಂಡೆ, ಶೂಟಿಂಗ್ ವೇಳೆ ಗಾಯವಾಯಿತು ಎಂದು ರಾಮ್ ಚರಣ್ ಹೇಳುತ್ತಿರುತ್ತಾರೆ. ಅಷ್ಟು ಕಠಿಣ ಶ್ರಮವನ್ನು ಅವರು ಸಿನಿಮಾ ಪ್ರಾಜೆಕ್ಟ್ಗಳಿಗೆ ಹಾಕುತ್ತಾರೆ’’ ಎಂದರು ಸಲ್ಮಾನ್ ಖಾನ್.
‘ಭಜರಂಗಿ ಭಾಯಿ ಜಾನ್ – 2’ ಬಗ್ಗೆ ಸಲ್ಮಾನ್ಗೆ ಆಸಕ್ತಿ
‘ಆರ್ಆರ್ಆರ್’ ಸಿನಿಮಾದ ಪ್ರೀ- ರಿಲೀಸ್ ಈವೆಂಟ್ನಲ್ಲೇ ‘’ನನ್ನ ವೃತ್ತಿ ಬದುಕಿನ ವಿಭಿನ್ನ ಸಿನಿಮಾ ‘ಭಜರಂಗಿ ಭಾಯಿ ಜಾನ್’ ಅಂತಹ ಸಿನಿಮಾದ ಮುಂದುವರಿದ ಭಾಗವನ್ನು ಮಾಡಲು ನಾನು ಉತ್ಸುಕನಾಗಿದ್ದೇನೆ. ಎರಡನೇ ಭಾಗದ ಕಥೆಯನ್ನು ವಿಜಯೇಂದ್ರ ಪ್ರಸಾದ್ ಅವರೇ ಬರೆಯಲಿ’’ ಅಂತ ಸಲ್ಮಾನ್ ಖಾನ್ ಹೇಳಿದರು.
‘ಆರ್ಆರ್ಆರ್’
ಭಾರತದ ಸ್ವಾತಂತ್ರ್ಯ ಪೂರ್ವ ಸಮಯದಲ್ಲಿ ನಡೆದಿರುವ ಕೆಲ ಘಟನೆಗಳನ್ನಿಟ್ಟುಕೊಂಡು ‘ಆರ್ಆರ್ಆರ್’ ಕಥಾಹಂದರವನ್ನು ರಚಿಸಲಾಗಿದೆ. ರೆಬೆಲ್ ನಾಯಕ ಕೋಮರಂ ಭೀಮ್ ಹಾಗೂ ಕ್ರಾಂತಿಕಾರಿ ಅಲ್ಲುರಿ ಸೀತಾರಾಮ ರಾಜು ಅವರ ಜೀವನದ ಕೆಲ ಘಟನೆಗಳನ್ನು ‘ಆರ್ಆರ್ಆರ್’ ಸಿನಿಮಾದಲ್ಲಿ ಚಿತ್ರಿಸಲಾಗಿದೆ.
‘ಆರ್ಆರ್ಆರ್’ ಸಿನಿಮಾದಲ್ಲಿ ಕೋಮರಂ ಭೀಮ್ ಪಾತ್ರದಲ್ಲಿ ಜೂನಿಯರ್ ಎನ್.ಟಿ.ಆರ್ ಅಭಿನಯಿಸಿದ್ದಾರೆ. ಅಲ್ಲುರಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್ ಚರಣ್ ನಟಿಸಿದ್ದಾರೆ. ಚಿತ್ರದಲ್ಲಿ ಅಜಯ್ ದೇವ್ಗನ್, ಆಲಿಯಾ ಭಟ್, ಒಲಿವಿಯಾ ಮೊರಿಸ್, ಶ್ರಿಯಾ ಶರಣ್ ಮುಂತಾದವರ ದೊಡ್ಡ ತಾರಾಬಳಗವೇ ಇದೆ.