Karnataka news paper

ಫೇಸ್‌ಬುಕ್ ಮೂಲಕ ಲವ್ವಿಡವ್ವಿ: ಅಪ್ರಾಪ್ತನ ಜತೆ ಮಹಿಳೆ ದೈಹಿಕ ಸಂಪರ್ಕ, ನಂಜನಗೂಡಿನಲ್ಲಿ ಪೋಕ್ಸೋ ಕೇಸ್‌ ದಾಖಲು


ಹೈಲೈಟ್ಸ್‌:

  • ನಂಜನಗೂಡಿನಲ್ಲಿ ಪೋಕ್ಸೋ ಕೇಸ್‌ ದಾಖಲು
  • ಜಾಲತಾಣದ ಮೂಲಕ 17ರ ಬಾಲಕ, ವಯನಾಡಿನ 35ರ ಮಹಿಳೆ ಪರಿಚಯ
  • ಮದುವೆಯಾಗುವಂತೆ ಬಾಲಕನಿಗೆ ದುಂಬಾಲು ಬಿದ್ದ ಆರೋಪ

ನಂಜನಗೂಡು: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಅಪ್ರಾಪ್ತ ಯುವಕನೊಂದಿಗೆ ಸ್ನೇಹ ಸಾಧಿಸಿ ಆತ್ಮೀಯತೆ ಬೆಳೆಸಿಕೊಂಡು ದೈಹಿಕ ಸಂಪರ್ಕ ಹೊಂದಿದ್ದಲ್ಲದೆ ಆತನನ್ನೇ ವಿವಾಹವಾಗಬೇಕೆಂದು ಯುವಕನ ಪೋಷಕರನ್ನು ಒತ್ತಾಯಿಸಿದ ಆರೋಪದಲ್ಲಿ 35 ವರ್ಷದ ಮಹಿಳೆ ವಿರುದ್ಧ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ.

ಮೂವರು ಮಕ್ಕಳಿರುವ ಕೇರಳ ರಾಜ್ಯದ ವಯನಾಡು ಜಿಲ್ಲೆಯ ಕಲ್ಪೆಟ್ಟ ವ್ಯಾಪ್ತಿ ನಿವಾಸಿ ಮಹಿಳೆ ಆರೋಪಿ. ಈಕೆ ನಂಜನಗೂಡು ತಾಲೂಕಿನ ಗ್ರಾಮವೊಂದರ 17 ವರ್ಷ ವಯಸ್ಸಿನ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಬಾಲಕನನ್ನು ಮದುವೆಯಾಗುವಂತೆ ಒತ್ತಾಯಿಸಿದ ಆರೋಪ ಎದುರಿಸುತ್ತಿದ್ದಾರೆ.

ನಂದಿನಿ ಹೆಸರಿನಲ್ಲಿ ನಕಲಿ ತುಪ್ಪ ತಯಾರಿಸುವವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಿ

ಜಾಲತಾಣದ ಮೂಲಕ ಪರಿಚಯ

ಕೇರಳದ ಕಲ್ಪೆಟ್ಟ ಮೂಲದ ಮಹಿಳೆಗೆ ಮದುವೆಯಾಗಿ ಮೂವರು ಮಕ್ಕಳಿದ್ದಾರೆ. ಆದರೆ, ಕೆಲ ವರ್ಷಗಳಿಂದ ಪತಿಯೊಂದಿಗೆ ಸಂಪರ್ಕ ಕಡಿದುಕೊಂಡು ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ. ಕಳೆದ 6 ತಿಂಗಳ ಹಿಂದೆ ಈ ಅಪ್ರಾಪ್ತ ಬಾಲಕ ಹಾಗೂ ಮಹಿಳೆ ಫೇಸ್ಬುಕ್‌ನಲ್ಲಿ ಸ್ನೇಹಿತರಾಗಿ ಚಾಟಿಂಗ್‌ ಮಾಡುವ ಮೂಲಕ ಆತ್ಮೀಯತೆ ಬೆಳೆಸಿಕೊಂಡಿದ್ದಾರೆ. ಇಬ್ಬರ ನಡುವೆ ಸಲುಗೆ ಹೆಚ್ಚಾಗಿ ತಿಂಗಳ ಹಿಂದೆ ಈಕೆಯನ್ನು ಭೇಟಿ ಮಾಡಲು ಹೋದ ಅಪ್ರಾಪ್ತ ಯುವಕ ಸುಮಾರು 10 ದಿನಗಳ ಕಾಲ ಆಕೆಯೊಂದಿಗೆ ಕೇರಳ, ಆಂಧ್ರಪ್ರದೇಶ ಹಾಗೂ ಬೆಂಗಳೂರು ಇತರೆ ಕಡೆ ಪ್ರವಾಸ ಮಾಡಿರುವುದಲ್ಲದೆ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎನ್ನಲಾಗಿದೆ. ಮನೆಮಂದಿಗೆ ತಿಳಿಸದೆ ಏಕಾಏಕಿ ಮನೆಯಿಂದ ಮಗ ಕಾಣೆಯಾಗಿದ್ದರಿಂದ ಗಾಬರಿಗೊಂಡ ಪಾಲಕರು, ಸುಳಿವು ಪತ್ತೆಗಾಗಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಕಾಣೆಯಾಗಿರುವ ಕುರಿತು ದೂರು ನೀಡಿದ್ದರು.

ನಂತರ ಮೂರ್ನಾಲ್ಕು ದಿನಗಳ ಹಿಂದೆ ಊರಿಗೆ ಆಗಮಿಸಿದ ಬಾಲಕ ಬೆಂಗಳೂರಿಗೆ ಹೋಗಿದ್ದಾಗಿಯೂ ಮತ್ತು ಮೊಬೈಲ್‌ ಕಳೆದುಹೋಗಿದ್ದರಿಂದ ಮನೆಯವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂಬ ಸಬೂಬು ಹೇಳಿದ್ದ. ಆದರೆ, ಆ ನಂತರ ಎರಡು ದಿನದ ಬಳಿಕ ಅಪ್ರಾಪ್ತ ಯುವಕನನ್ನು ಹುಡುಕಿಕೊಂಡು ಊರಿಗೆ ಆಗಮಿಸಿದ ಈ ಮಹಿಳೆ, ಆತನ ಮನೆಯವರನ್ನು ಸಂಪರ್ಕಿಸಿ ನನ್ನೊಂದಿಗೆ ಆತನನ್ನು ಮದುವೆ ಮಾಡಿಕೊಡುವಂತೆ ಒತ್ತಾಯ ಮಾಡಿದ್ದಾಳೆ. ಇದರಿಂದ ಗಾಬರಿಗೊಂಡ ಕುಟುಂಬದವರು ಊರಿನ ಕೆಲ ಪ್ರಮುಖರ ಸಮ್ಮುಖದಲ್ಲಿ ಆಕೆಗೆ ತಿಳಿಹೇಳುವ ಪ್ರಯತ್ನ ನಡೆಸಿದರೂ ಆಕೆ ಒಪ್ಪಲು ತಯಾರಾಗಲಿಲ್ಲ. ಇದರಿಂದ ಆತಂಕಗೊಂಡ ಅಪ್ರಾಪ್ತ ಯುವಕನ ಕುಟುಂಬದವರು ರಕ್ಷಣೆ ಕೋರಿ ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಮೊರೆ ಹೋಗಿದ್ದಾರೆ.

ಮೈಸೂರು ಸಂಸದ ಪ್ರತಾಪ್ ಸಿಂಹ ಕನಸಿನ ಯೋಜನೆ ‘ದಶಪಥ’ ದಸರಾಗೆ ರೆಡಿ

ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಅಪ್ರಾಪ್ತನಿಗೆ ಮೈಸೂರಿನ ಬಾಲಕರ ಬಾಲ ಮಂದಿರದಲ್ಲಿ ಹಾಗೂ ಮಹಿಳೆಗೆ ರಾಜ್ಯ ಮಹಿಳಾ ನಿಲಯದಲ್ಲಿ ರಕ್ಷಣೆ ಕೊಡಿಸಿದ್ದಾರೆ. ಇನ್ನು ಬಾಲಮಂದಿರದಲ್ಲಿ ಅಪ್ರಾಪ್ತನನ್ನು ವಿಚಾರಣೆಗೆ ಒಳಪಡಿಸಿದಾಗ ಈ ಮಹಿಳೆ ಮದುವೆಯಾಗುವಂತೆ ದುಂಬಾಲು ಬಿದ್ದಿರುವುದಲ್ಲದೆ, ಆತನೊಡನೆ ಪ್ರವಾಸಕ್ಕೆ ತೆರಳಿದ್ದ ಸಂದರ್ಭ ದೈಹಿಕ ಸಂಪರ್ಕ ಸಾಧಿಸಿದ್ದ ಬಗ್ಗೆ ಮಾಹಿತಿ ನೀಡಿದ್ದಾನೆ.

ಹೀಗಾಗಿ ಅಪ್ರಾಪ್ತನೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ ಆರೋಪದಡಿ ಮಹಿಳೆ ವಿರುದ್ಧ ಪೋಕ್ಸೋ ಕಾಯಿದೆಯಡಿ ಮೈಸೂರಿನ ಬಾಲಮಂದಿರದವರು ನಂಜನಗೂಡಿನ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.



Read more