Karnataka news paper

1.5 ಕೋಟಿ ರೂ. ಮೌಲ್ಯದ ತಿಮಿಂಗಲ ವಾಂತಿ ವಶಕ್ಕೆ, 6 ಜನರ ಬಂಧನ


ವಿಜಯನಗರ (ಹೊಸಪೇಟೆ): ನಗರದಲ್ಲಿ ಅಕ್ರಮವಾಗಿ ತಿಮಿಂಗಲ ವಾಂತಿ (ಆ್ಯಂಬರ್‌ ಗ್ರೀಸ್) ಮಾರಾಟಕ್ಕೆ ಯತ್ನಿಸುತ್ತಿದ್ದವರನ್ನು ಬಂಧಿಸಿ, ಒಂದೂವರೆ ಕೋಟಿ ಮೌಲ್ಯದ 1.5 ಕೆ.ಜಿ. ತಿಮಿಂಗಲ ವಾಂತಿ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ತಿಳಿಸಿದರು.

ವಿಜಯನಗರದ ಪಟ್ಟಣ ಪೊಲೀಸ್ ಠಾಣೆಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ತಿಮಿಂಗಲ ವಾಂತಿ ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ಡಿ.21 ರಂದು ಬಂದ ಖಚಿತ ಮಾಹಿತಿ ಮೇರೆಗೆ ಕೊಪ್ಪಳ ಜಿಲ್ಲೆಯ ಹೊಸ ಬಂಡಿಹರ್ಲಾಪುರದ ಲಂಬಾಣಿ ವೆಂಕಟೇಶ್ ಮತ್ತು ಅಬ್ದುಲ್ ವಹಾಬ್ ಇಬ್ಬರನ್ನು ವಶಕ್ಕೆ ಪಡೆಯಲಾಗಿತ್ತು.

ತಿಮಿಂಗಲ ವಾಂತಿಗೆ ಹಲವಾರು ಕಡೆಗಳಲ್ಲಿ ಭಾರಿ ಬೇಡಿಕೆ ಇದೆ. ಇದರ ಕಳ್ಳ ಸಾಗಣೆ ಜಾಲ ಕೂಡ ದೊಡ್ಡದಾಗಿದೆ. ಕಡಲ ತೀರದಲ್ಲಿ ಮೀನು ಸಾಗಣೆ ಜತೆ ತಿಮಿಂಗಲ ವಾಂತಿ ಸಾಗಣೆ ಕೂಡ ಜೋರಾಗಿ ಸಾಗುತ್ತಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಟಿಬಿ ಡ್ಯಾಂಗೆ ಮೂರು ಪಟ್ಟು ನೀರು ಹೆಚ್ಚಳ..! 2ನೇ ಬೆಳೆಗೆ ನೀರು ಸಿಗುವ ನಿರೀಕ್ಷೆಯಲ್ಲಿ ರೈತರು..

ಬಳಿಕ ವಿಚಾರಣೆಯಲ್ಲಿ ತಮ್ಮೊಂದಿಗೆ ಇನ್ನೂ ನಾಲ್ಕು ಜನ ಇರುವ ಬಗ್ಗೆ ಮಾಹಿತಿ ದೊರೆತ ನಂತರ ಪ್ರಕರಣದ ತನಿಖೆಗಾಗಿ ಡಿಎಸ್‌ಪಿ ಮಾರ್ಗದರ್ಶನದಲ್ಲಿ ಸಿಪಿಐಗಳಾದ ಶ್ರೀನಿವಾಸ್ ರಾವ್ ಮತ್ತು ಜಯಪ್ರಕಾಶ್ ಅವರ ನೇತೃತ್ವದಲ್ಲಿ ಪೇದೆಗಳಾದ ನಾಗರಾಜ, ತಿಮ್ಮಪ್ಪ, ಲಿಂಗರಾಜ್, ಗಾಳೆಪ್ಪ, ಶ್ರೀನಿವಾಸ್ ಅವರನ್ನೊಳಗೊಂಡ ತಂಡ ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿತ್ತು ಎಂದು ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ತಂಡದಲ್ಲಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಭಟ್ಕಳದ ಹಿರೇಮನೆ ಗಣಪತಿ, ಹುಬ್ಬಳ್ಳಿಯ ಪುಂಡಲೀಕ್, ಮಹೇಶ್ ಹಾಗೂ ವಿಜಾಪುರ ಜಿಲ್ಲೆಯ ಶ್ರೀಧರ್ ಅವರನ್ನು ಬಂಧಿಸಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದರು..

ಬಂಧಿತರಿಂದ ಒಟ್ಟು ಒಂದೂವರೆ ಕೆ.ಜಿ. ತಿಮಿಂಗಲ ವಾಂತಿಯನ್ನು (ಆ್ಯಂಬರ್‌ಗ್ರೀಸ್) ವಶಕ್ಕೆ ಪಡೆದು 6 ಜನರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವನ್ಯಜೀವಿಗಳ ಸಂರಕ್ಷಣೆ ಕಾಯ್ದೆ ಅಡಿ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.

ವಿಜಯನಗರ: ಲಂಚ ಪಡೆಯುವ ವೇಳೆ ಸಿಕ್ಕಿಬಿದ್ದಿದ್ದ ಪೊಲೀಸರು ಸಸ್ಪೆಂಡ್

ಪ್ರಕರಣದಲ್ಲಿ ಆರೋಪಿಗಳ ಪತ್ತೆಗೆ ಕಾರ್ಯ ನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವನ್ನು ಎಸ್ಪಿ ಶ್ಲಾಘಿಸಿದ್ದಾರೆ.

ಡಿಎಸ್‌ಪಿ ವಿಶ್ವನಾಥ್‌ರಾವ್ ಕುಲಕರ್ಣಿ, ಸಿಪಿಐ ಶ್ರೀನಿವಾಸ್ ರಾವ್ ಮತ್ತು ಜಯ ಪ್ರಕಾಶ್ ಇದ್ದರು.



Read more