Karnataka news paper

ಹೈದರಾಬಾದ್ ನಲ್ಲಿ ನಡೆಯುವ ಆರ್ ಎಸ್ಎಸ್ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭಾಗಿ


PTI

ನವದೆಹಲಿ: ಪ್ರಮುಖ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ತನ್ನ ವಾರ್ಷಿಕ ಸಭೆಯನ್ನು ಹೈದರಾಬಾದ್‌ನಲ್ಲಿ ಜನವರಿ 5 ರಿಂದ ಜನವರಿ 7ರ ವರೆಗೆ ನಡೆಸಲಿದೆ. ಇದರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಬಿಎಲ್ ಸಂತೋಷ್ ಅವರು ಭಾಗವಹಿಸಲಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಬಿಜೆಪಿ 2022ರ ಮೊದಲ ವಾರದಲ್ಲಿ ಮೂರು ದಿನಗಳ ಸಮನ್ವಯ ಸಭೆಯನ್ನು ಕರೆದಿದ್ದು, ಹೈದರಾಬಾದ್​ಗೆ ಭಾಗ್ಯನಗರ ಎಂದು ಮರುನಾಮಕರಣಗೊಳಿಸುವ ವಿಷಯವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದೆ.

ಸಭೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ದೇಶದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯ ಅವಲೋಕನ ಮಾಡುವ ಸಾಧ್ಯತೆ ಇದೆ ಮತ್ತು ಆರ್ ಎಸ್ಎಸ್ ನ ಎಲ್ಲಾ ಅಂಗಸಂಸ್ಥೆಗಳ ಮುಖ್ಯಸ್ಥರು ಸಹ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.

ಇದನ್ನು ಓದಿ: ಆರ್ ಎಸ್ಎಸ್ ಮಿಲಿಟರಿ ಸಂಘಟನೆಯಲ್ಲ, ಕೌಟುಂಬಿಕ ವಾತಾವರಣ ಹೊಂದಿರುವ ಒಂದು ಗುಂಪು: ಮೋಹನ್ ಭಾಗವತ್

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಸಮಾಲೋಚನೆಯ ನೇತೃತ್ವ ವಹಿಸಲಿದ್ದು, ಸಂಘಟನೆಯ ಎಲ್ಲಾ ಉನ್ನತ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

ಭಾಗ್ಯನಗರ(ಹೈದರಾಬಾದ್)ದಲ್ಲಿ ನಡೆಯುವ ವಾರ್ಷಿಕ ಸಭೆಯಲ್ಲಿ ಆರ್ಥಿಕ, ಸೇವಾ ಮತ್ತು ಇತರ ಕ್ಷೇತ್ರಗಳ ಜೊತೆಗೆ ಶೈಕ್ಷಣಿಕ ಮತ್ತು ಬೌದ್ಧಿಕ ಚಟುವಟಿಕೆಗಳಿಗೆ ಸಂಬಂಧಿಸಿದ 36 ಸಂಸ್ಥೆಗಳ ಕಾರ್ಯಕಾರಿಣಿಗಳು ಭಾಗವಹಿಸಲಿದ್ದಾರೆ ಎಂದು ಆರ್‌ಎಸ್‌ಎಸ್‌ನ ಸಂವಹನ ವಿಭಾಗದ ಮುಖ್ಯಸ್ಥ ಸುನೀಲ್ ಅಂಬೇಕರ್ ಅವರು ತಿಳಿಸಿದ್ದಾರೆ.



Read more