ರಾಮನಗರದ ಹೆಸರನ್ನು ತೆಗೆದು ‘ಬೆಂಗಳೂರು ದಕ್ಷಿಣ’ ಎಂಬ ಹೊಸ ಹೆಸರು ಕೊಟ್ಟಿರುವ ಕುರಿತು ವಿವಾದ ಉಂಟಾಗಿದೆ. ಈ ಬದಲಾವಣೆಯ ಹಿಂದೆ ಲ್ಯಾಂಡ್ ಮಾಫಿಯಾದ ಬಲವಾದ ಪ್ರಭಾವವಿದೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
‘ಬೆಂಗಳೂರು’ ಎಂಬ ಹೆಸರಿನಲ್ಲಿ ಭೂಮಿಗೆ ಹೆಚ್ಚಿನ ಮೌಲ್ಯ ಸಿಗುತ್ತದೆ ಎಂಬ ಕಾರಣದಿಂದಾಗಿ, ರಾಮನಗರ ಸುತ್ತಲಿನ ಭೂಮಿ ಮೇಲೆ ಕಣ್ಣು ಹಾಕಿರುವ ಲ್ಯಾಂಡ್ ಮಾಫಿಯಾ, ರಾಮನಗರ ಎಂಬ ಹೆಸರನ್ನು ಮರೆಮಾಡಲು ಯತ್ನಿಸುತ್ತಿದೆ ಎಂದಿದ್ದಾರೆ. ”ಅವರಿಗೆ ರಾಮನಗರ ಹೆಸರು ಬೇಕಾಗಿಲ್ಲ, ಅವರಿಗೆ ‘ಬೆಂಗಳೂರು’ ಹೆಸರು ಬೇಕು – ಏಕೆಂದರೆ ಅವರು ಖರೀದಿಸಿರುವ ಜಮೀನಿಗೆ ಮೌಲ್ಯ ಬರುವಂತೆ ಮಾಡಬೇಕು,” ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಂಗಳೂರಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ರೈತರ ಜಮೀನನ್ನು ಕಬಳಿಸಿ, ಬೇರೆಬೇರೆಯವರಿಗೆ ಹಂಚುವ ಷಡ್ಯಂತ್ರ ನಡೆಯುತ್ತಿದೆ. ಈ ನಿರ್ಧಾರವನ್ನು ಸ್ಥಳೀಯರು ವಿರೋಧಿಸಬೇಕು,” ಎಂದು ಅವರು ಹೇಳಿದರು. ರಾಮನಗರದ ಹೆಸರನ್ನು ಉಳಿಸಿಕೊಳ್ಳುವುದು ಅಲ್ಲಿನ ಜನರ ಹೊಣೆ ಎಂದರು.