Karnataka news paper

ಬಲಿಷ್ಠ ಮುಂಬೈಗೆ ಸೋಲಿನ ಆಘಾತ ನೀಡಿದ ಕರ್ನಾಟಕ!


ಹೈಲೈಟ್ಸ್‌:

  • ಪ್ರಸ್ತುತ ನಡೆಯುತ್ತಿರುವ ವಿಜಯ್‌ ಹಝಾರೆ ಟ್ರೋಫಿ ಏಕದಿನ ಟೂರ್ನಿ.
  • ಮುಂಬೈ ವಿರುದ್ಧ ಏಳು ವಿಕೆಟ್‌ಗಳಿಂದ ಗೆದ್ದು ಬೀಗಿದ ಕರ್ನಾಟಕ ತಂಡ.
  • ಕರ್ನಾಟಕ ಗೆಲುವಿನಲ್ಲಿ ಸಮರ್ಥ್‌, ಪ್ರವೀಣ್‌ ದುಬೇ ಪ್ರಮುಖ ಪಾತ್ರವಹಿಸಿದ್ದಾರೆ.

ತಿರುವನಂತಪುರಂ: ಪ್ರವೀಣ್‌ ದುಬೇ (29ಕ್ಕೆ 4) ಸ್ಪಿನ್‌ ಮೋಡಿ ಹಾಗೂ ಆರ್‌ ಸಮರ್ಥ್ (96) ಅವರ ಅದ್ಭುತ ಬ್ಯಾಟಿಂಗ್‌ ಸಹಾಯದಿಂದ ಕರ್ನಾಟಕ ತಂಡ ವಿಜಯ್‌ ಹಝಾರೆ ಟ್ರೋಫಿ ಏಕದಿನ ಟೂರ್ನಿಯ ಪಂದ್ಯದಲ್ಲಿ ಬಲಿಷ್ಠ ಮುಂಬೈ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಪಡೆದಿದೆ.

ಇಲ್ಲಿನ ಕೆಸಿಎ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆದಿದ್ದ ಟೂರ್ನಿಯ ಎಲೈಟ್‌ ಬಿ ಮೂರನೇ ಸುತ್ತಿನ ಪಂದ್ಯದಲ್ಲಿ ಮುಂಬೈ ನೀಡಿದ್ದ 209 ರನ್‌ ಗುರಿ ಹಿಂಬಾಲಿಸಿದ ಕರ್ನಾಟಕ ತಂಡ 45.3 ಓವರ್‌ಗಳಿಗೆ 3 ವಿಕೆಟ್‌ ನಷ್ಟಕ್ಕೆ 211 ರನ್‌ ಗಳಿಸಿ 7 ವಿಕೆಟ್‌ ಗೆಲುವು ಪಡೆಯಿತು. ಆ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ 8 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೇರಿತು.

ಕರ್ನಾಟಕ ಪರ ಆರಂಭಿಕರಾಗಿ ಕಣಕ್ಕೆ ಇಳಿದ ರವಿಕುಮಾರ್‌ ಸಮರ್ಥ್‌ ಹಾಗೂ ರೋಹನ್‌ ಕದಮ್‌ ಜೋಡಿಯು ಮುರಿಯದ ಮೊದಲನೇ ವಿಕೆಟ್‌ಗೆ 95 ರನ್‌ ಗಳಿಸಿ ತಂಡಕ್ಕೆ ಉತ್ತಮ ಬುನಾದಿ ಹಾಕಿಕೊಟ್ಟಿತ್ತು. ಆದರೆ, ತಾಳ್ಮೆಯ ಬ್ಯಾಟ್‌ ಮಾಡಿದ ರೋಹನ್‌ ಕದಮ್‌ 44 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು.

ಹ್ಯಾಟ್ರಿಕ್ ಶತಕ ಸಿಡಿಸಿ ಆಯ್ಕೆದಾರರ ಗಮನ ಸೆಳೆದ ಗಾಯಕ್ವಾಡ್‌!

ಮೊದಲನೇ ವಿಕೆಟ್‌ ಉರುಳಿದ ಬಳಿಕ ಕೃಷ್ಣಮೂರ್ತಿ ಸಿದ್ದಾರ್ಥ್‌(17) ಹಾಗೂ ನಾಯಕ ಮಯಾಂಕ್‌ ಅಗರ್ವಾಲ್‌(5) ಬಹುಬೇಗ ವಿಕೆಟ್‌ ಒಪ್ಪಿಸಿದರು. ಒಂದು ತುದಿಯಲ್ಲಿ ಕೊನೆಯವರೆಗೂ ಬ್ಯಾಟ್‌ ಮಾಡಿದ ಆರ್‌ ಸಮರ್ಥ್‌ ಮುಂಬೈ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಎದುರಿಸಿದ 129 ಎಸೆತಗಳಲ್ಲಿ 9 ಬೌಂಡರಿಯೊಂದಿಗೆ ಅಜೇಯ 96 ರನ್‌ ಗಳಿಸಿಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೊನೆಯ ಹಂತದಲ್ಲಿ ಸಮರ್ಥ್‌ಗೆ ಹೆಗಲು ನೀಡಿದ ಕರುಣ್ ನಾಯರ್‌ 39 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಮುಂಬೈ ತಂಡವನ್ನು 208ಕ್ಕೆ ಕಟ್ಟಿ ಹಾಕಿದ್ದ ಕರ್ನಾಟಕ:
ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಮುಂಬೈ ತಂಡಕ್ಕೆ ಯಶಸ್ವಿ ಜೈಸ್ವಾಲ್‌ (61) ಹಾಗೂ ಅಮಾನ್‌ ಜಾಫರ್‌(43) ಜೋಡಿ 95 ರನ್‌ ಗಳಿಸಿ ಭರ್ಜರಿ ಆರಂಭ ತಂದುಕೊಟ್ಟಿತ್ತು. ಆದರೆ ಈ ಇಬ್ಬರನ್ನು ಕ್ರಮವಾಗಿ ಆರ್‌ ಸಮರ್ಥ್‌ ಹಾಗೂ ಜೆ ಸುಚಿತ್ ಔಟ್‌ ಮಾಡುವ ಮೂಲಕ ಎದುರಾಳಿ ತಂಡದ ಓಟಕ್ಕೆ ಬ್ರೇಕ್‌ ಹಾಕಿದರು.

ರಹಾನೆ ಸೇರಿ ಈ ಮೂವರಿಗೆ ಆಫ್ರಿಕಾ ಪ್ರವಾಸವೇ ಕೊನೆಯ ಚಾನ್ಸ್‌! ವರದಿ

ಮೂರನೇ ಕ್ರಮಾಂಕದಲ್ಲಿ ಸೂರ್ಯಕುಮಾರ್‌ ಯಾದವ್‌(8), ಶಾಮ್ಸ್‌ ಮುಲಾನಿ(9), ಶಿವಂ ದುಬೇ(6) ಹಾಗೂ ಸಾಯಿರಾಜ್‌ ಪಾಟಿಲ್‌( 3) ಅವರ ಪ್ರಮುಖ ವಿಕೆಟ್‌ಗಳನ್ನು ಪ್ರವೀಣ್‌ ದುಬೇ ಉರುಳಿಸಿ ಕರ್ನಾಟಕ ತಂಡಕ್ಕೆ ಮೇಲುಗೈ ತಂದುಕೊಟ್ಟರು.

ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಹಾರ್ದಿಕ್‌ ತಾಮರ್‌(46*) ಕೊನೆಯವರೆಗೂ ಬ್ಯಾಟ್‌ ಮಾಡಿ ತಂಡದ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ನೆರವಾದರು. ಅಂತಿಮವಾಗಿ ಮುಂಬೈ ತನ್ನ ಪಾಲಿನ 50 ಓವರ್‌ಗಳಿಗೆ 8 ವಿಕೆಟ್‌ ನಷ್ಟಕ್ಕೆ 208 ರನ್‌ ಗಳಿಸಿತು. ಕರ್ನಾಟಕ ಪರ ಪ್ರವೀಣ್‌ ದುಬೇ ನಾಲ್ಕು ಪಡೆದರೆ, ವಿ ಕೌಶಿಕ್, ಕೆ.ಸಿ ಕಾರಿಯಪ್ಪ ಜೆ. ಸುಚಿತ್‌ ಸಮರ್ಥ್‌ ಆರ್ ತಲಾ ಒಂದೊಂದು ವಿಕೆಟ್‌ ಪಡೆದರು.

ಹೀನಾಯ ಸೋಲಿನ ಬೇಸರದಲ್ಲಿದ್ದ ಇಂಗ್ಲೆಂಡ್‌ಗೆ ಮತ್ತೊಂದು ಆಘಾತ!

ಸಂಕ್ಷಿಪ್ತ ಸ್ಕೋರ್‌

ಮುಂಬೈ: 50 ಓವರ್‌ಗಳಿಗೆ 208/9 (ಯಶಸ್ವಿ ಜೈಸ್ವಾಲ್‌ 61, ಅಮಾನ್ ಜಾಫರ್‌ 43, ಹಾರ್ದಿಕ್‌ ತಾಮರ್‌ 46*; ಪ್ರವೀಣ್‌ ದುಬೇ 29ಕ್ಕೆ 4, ವಿ ಕೌಶಿಕ್ 25ಕ್ಕೆ 1, ಕೆ.ಸಿ ಕಾರಿಯಪ್ಪ 18ಕ್ಕೆ 1, ಜೆ.ಸುಚಿತ್‌ 34ಕ್ಕೆ 1, ಸಮರ್ಥ್‌ ಆರ್‌ 14ಕ್ಕೆ 1)

ಕರ್ನಾಟಕ: 45.3 ಓವರ್‌ಗಳಿಗೆ ರವಿಕುಮಾರ್‌ ಸಮರ್ಥ್‌ 96*, ರೋಹನ್‌ ಕದಮ್‌ 44, ಕರುಣ್‌ ನಾಯರ್‌ 39*; ಪ್ರಶಾಂತ್‌ ಸೋಲಂಕಿ 48ಕ್ಕೆ 2)



Read more