Karnataka news paper

ಪಾಕಿಸ್ತಾನದಲ್ಲಿ ನಾರಾಯಣ ಮಂದಿರ ವಿಗ್ರಹ ಧ್ವಂಸ : ಆರೋಪಿಯ ಬಂಧನ


ಹೈಲೈಟ್ಸ್‌:

  • ಪಾಕಿಸ್ತಾನದಲ್ಲಿ ನಾರಾಯಣ ಮಂದಿರ ವಿಗ್ರಹ ಧ್ವಂಸ
  • ಹಿಂದೂ ದಂಪತಿಯಿಂದ ಆರೋಪಿ ವಿರುದ್ಧ ದೂರು
  • ಆರೋಪಿಯನ್ನು ಬಂಧಿಸಿದ ಪೊಲೀಸರು

ಕರಾಚಿ: ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪ­ಸಂಖ್ಯಾತರಾದ ಹಿಂದೂಗಳ ದೇವಸ್ಥಾನಗಳ ಮೇಲೆ ದಾಳಿ ಮುಂದುವರಿದಿದ್ದು, ನಗರದ ನರೇನ್‌ಪುರದಲ್ಲಿನ ನಾರಾಯಣ ಮಂದಿರ­ದಲ್ಲಿ ದೇವರ ವಿಗ್ರಹಗಳನ್ನು ಧ್ವಂಸಗೊಳಿಸ­ಲಾಗಿದೆ. ಸುತ್ತಿಗೆಯಿಂದ ವ್ಯಕ್ತಿಯೊಬ್ಬ ವಿಗ್ರಹಕ್ಕೆ ಹಾನಿ ಮಾಡುತ್ತಿರುವುದನ್ನು ಕಂಡ ಮುಕೇಶ್‌ ಕುಮಾರ್‌ ಹಾಗೂ ಆತನ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಮೊಹಮ್ಮದ್‌ ವಾಲೀದ್‌ ಶಬ್ಬೀರ್‌ ಎಂಬಾತನನ್ನು ಬಂಧಿಸಲಾಗಿದೆ.

ಪ್ರಾರ್ಥನೆ ಸಲ್ಲಿಸಲು ಮಂದಿರಕ್ಕೆ ತೆರಳಿದ್ದಾಗ ಹಿಂದೂ ದಂಪತಿಯು ದೇವರ ವಿಗ್ರಹಕ್ಕೆ ಶಬ್ಬೀರ್‌ ಹಾನಿ ಮಾಡುತ್ತಿರುವುದನ್ನು ಗಮನಿಸಿದ್ದಾರೆ. ಬಳಿಕ ಸುತ್ತಲಿದ್ದ ಜನರು ಶಬ್ಬೀರ್‌ನನ್ನು ಹಿಡಿಯಲು ಮುಂದಾದಾಗ ಆತ ಪರಾರಿಯಾಗಲು ಯತ್ನಿಸಿದ. ಕೊನೆಗೆ ಹೆಚ್ಚು ಜನರ ಸಹಾಯದಿಂದ ಶಬ್ಬೀರ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಂದಿರಕ್ಕೆ ಹಾನಿ ಖಂಡಿಸಿ ಹಿಂದೂ ಸಮುದಾಯದವರು ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಬಳಿಕ, ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಿಂಧ್‌ ಪ್ರಾಂತ್ಯದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಗ್ಯಾನ್‌ಚಂದ್‌ ಇಸ್ರಾನಿ, ಕಟ್ಟುನಿಟ್ಟಿನ ತನಿಖೆ ನಡೆಸಲು ಪೊಲೀಸರಿಗೆ ಸೂಚಿಸಿದರು. ದಶಕಗಳಿಂದಲೂ ನರೇನ್‌ಪುರ ಪ್ರದೇಶದಲ್ಲಿಬಡ ಮತ್ತು ಮಧ್ಯಮ ವರ್ಗದ ಹಿಂದೂ ಕುಟುಂಬಗಳು ವಾಸವಾಗಿವೆ.

ಪಾಕ್‌ ಪಿತೂರಿಗೆ ಅಂಕುಶ
ಭಾರತ ವಿರೋಧಿ ಕಪೋಲ ಕಲ್ಪಿತ ಸುದ್ದಿಗಳನ್ನು ಪ್ರಸಾರ ಮಾಡುವ ಮೂಲಕ ದ್ವೇಷ ಬಿತ್ತುತ್ತಿದ್ದ ಹಾಗೂ ಧಾರ್ಮಿಕ ಸೌಹಾರ್ದ ಕದಡುತ್ತಿದ್ದ ಪಾಕಿಸ್ತಾನದ ಮಾಧ್ಯಮಗಳ ವಿರುದ್ಧ ಭಾರತ ಕ್ರಮಕ್ಕೆ ಮುಂದಾಗಿದೆ. ಪಾಕ್‌ನಿಂದ ಕಾರ್ಯನಿರ್ವಹಿಸುತ್ತಿದ್ದ 20 ಯೂಟ್ಯೂಬ್‌ ಚಾನೆಲ್‌ಗಳು ಹಾಗೂ ಎರಡು ವೆಬ್‌ಸೈಟ್‌ಗಳ ನಿಷೇಧಕ್ಕೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆದೇಶಿಸಿದೆ.

ಗುಪ್ತಚರ ಸಂಸ್ಥೆಗಳ ನೆರವಿನೊಂದಿಗೆ ಸಚಿವಾಲಯ ಇಂತಹ ಚಾನೆಲ್‌ಗಳನ್ನು ಪತ್ತೆ ಮಾಡಿದೆ. ಇವುಗಳ ವಿರುದ್ಧ ಕ್ರಮ ಜರುಗಿಸುವಂತೆ ಯೂಟ್ಯೂಬ್‌ ಸಂಸ್ಥೆಗೆ ಸೂಚಿಸಲಾಗಿದೆ. ಮತ್ತೊಂದು ಪ್ರತ್ಯೇಕ ಆದೇಶದಲ್ಲಿ ಸುದ್ದಿ ಚಾನೆಲ್‌/ ಪೋರ್ಟಲ್‌ಗಳನ್ನು ನಿರ್ಬಂಧಿಸಲು ಅಂತರ್ಜಾಲ ಸೇವಾ ಪೂರೈಕೆದಾರರಿಗೆ ನಿರ್ದೇಶನ ನೀಡುವಂತೆ ದೂರಸಂಪರ್ಕ ಇಲಾಖೆಗೆ ಸೂಚಿಸಲಾಗಿದೆ.



Read more