Karnataka news paper

ಅಂತಿಮ ಹಂತಕ್ಕೆ ಬೆಳಗಾವಿ ಅಧಿವೇಶನ ಸಿದ್ಧತೆ, ಬಂದೋಬಸ್ತ್‌ಗೆ 4500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ


ಹೈಲೈಟ್ಸ್‌:

  • ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಅಂತಿಮ ಹಂತದ ಸಿದ್ಧತೆ
  • ಬಂದೋಬಸ್ತ್‌ಗೆ 4,500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ
  • ಗಣ್ಯರು, ಅಧಿಕಾರಿಗಳ ಸಂಚಾರಕ್ಕೆ 350 ಕಾರುಗಳ ವ್ಯವಸ್ಥೆ

ಬೆಳಗಾವಿ: ಸೋಮವಾರದಿಂದ ಸುವರ್ಣ ವಿಧಾನಸೌಧದಲ್ಲಿ ಆರಂಭಗೊಳ್ಳಲಿರುವ ಚಳಿಗಾಲದ ಅಧಿವೇಶನದ ಸಿದ್ಧತೆಗಳು ಬಹುತೇಕ ಅಂತಿಮ ಹಂತಕ್ಕೆ ತಲುಪಿವೆ.

ಬೆಳಗಾವಿ ನಗರದ ರಸ್ತೆಗಳು ಕೂಡ ಅಧಿವೇಶನದ ಕಾರಣಕ್ಕೆ ದುರಸ್ತಿ ಭಾಗ್ಯ ಕಾಣುತ್ತಿವೆ. ಲೋಕೋಪಯೋಗಿ ಇಲಾಖೆ, ಮಹಾನಗರ ಪಾಲಿಕೆ ಸಿಬ್ಬಂದಿ ತರಾತುರಿಯಲ್ಲಿ ರಸ್ತೆ ರಿಪೇರಿ ಕೈಗೊಂಡಿದ್ದಾರೆ.

ಅಧಿವೇಶನಕ್ಕೆ ಆಗಮಿಸುವ ಸಚಿವರು, ಶಾಸಕರು, ಅಧಿಕಾರಿಗಳಿಗೆ ನಗರದ ವಿವಿಧ ಹೋಟೆಲ್‌ಗಳಲ್ಲಿ ಒಟ್ಟು 2100ಕ್ಕೂ ಹೆಚ್ಚು ರೂಂ ಗಳನ್ನು ಕಾಯ್ದಿರಿಸಲಾಗಿದೆ. ಹೊರ ಭಾಗದಿಂದ ಬರುವ ಕೆಲ ಅಧಿಕಾರಿಗಳು ರೊಟೇಶನ್‌ ಆಧಾರದಲ್ಲಿ ಅಧಿವೇಶನದ ಕಾರ್ಯ ನಿರ್ವಹಿಸಲಿದ್ದಾರೆ.

”ಹಿಂದಿನ ಅಧಿವೇಶನಗಳಲ್ಲಿ ಆಹಾರ ಪೂರೈಕೆ ಮಾಡಿದ ಕ್ಯಾಟರಿಂಗ್‌ನವರಿಗೆ ಈ ಬಾರಿಯೂ ಊಟ- ಉಪಾಹಾರದ ಗುತ್ತಿಗೆ ನೀಡಲಾಗಿದೆ. ಕಳೆದ ಅಧಿವೇಶನಕ್ಕಿಂತ ಅಲ್ಪ ದರ ಹೆಚ್ಚಳ ಮಾಡಲಾಗಿದೆ”, ಎಂದು ಅಧಿವೇಶನದ ಉಸ್ತುವಾರಿ ಅಧಿಕಾರಿ ಡಾ.ಸುರೇಶ ಇಟ್ನಾಳ ‘ವಿಜಯ ಕರ್ನಾಟಕ’ಕ್ಕೆ ತಿಳಿಸಿದರು.

ಬೆಳಗಾವಿ ಅಧಿವೇಶನದಲ್ಲೇ ಮತಾಂತರ ತಡೆ ವಿಧೇಯಕ: ಕಾಂಗ್ರೆಸ್‌ ವಿರೋಧ, ಬಿಜೆಪಿ ಸಮರ್ಥನೆ
ಶಾಸಕರು, ಸಚಿವರು, ಹಿರಿಯ ಅಧಿಕಾರಿಗಳ ಸಂಚಾರಕ್ಕಾಗಿ ರಾಜ್ಯದ ಬೇರೆ ಬೇರೆ ಕಡೆಯ ಸರಕಾರಿ ಕಚೇರಿಗಳಿಂದ 30 ಕಾರುಗಳು ಹಾಗೂ 20 ಖಾಸಗಿ ಇನ್ನೋವಾ ಕಾರುಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಇತರ ಅಧಿಕಾರಿಗಳು, ಸಿಬ್ಬಂದಿ ಸಂಚಾರಕ್ಕಾಗಿ ಒಟ್ಟು 300ಕ್ಕೂ ಹೆಚ್ಚು ಕಾರುಗಳನ್ನು ಬೆಳಗಾವಿಗೆ ತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪೊಲೀಸರಿಗೂ ಉತ್ತಮ ವ್ಯವಸ್ಥೆ

ಅಧಿವೇಶನದ ಭದ್ರತೆಗಾಗಿ ರಾಜ್ಯದ ಬೇರೆ ಬೇರೆ ಭಾಗಗಳಿಂದ ಪೊಲೀಸ್‌ ಅಧಿಕಾರಿಗಳು ಸೇರಿದಂತೆ 4500ಕ್ಕೂ ಹೆಚ್ಚು ಸಿಬ್ಬಂದಿ ಆಗಮಿಸುತ್ತಿದ್ದಾರೆ. ಅವರಿಗೆ ಈ ಬಾರಿ ಉತ್ತಮ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಸುವರ್ಣ ವಿಧಾನಸೌಧದ ಬಳಿಯ ಶಿಂದೊಳ್ಳಿ ಗ್ರಾಮದಲ್ಲಿ ತಾತ್ಕಾಲಿಕ ಟೌನ್‌ಶಿಪ್‌ ನಿರ್ಮಿಸಲಾಗಿದೆ. ಮಹಿಳಾ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮಚ್ಛೆಯ ಕೆಎಸ್‌ಆರ್‌ಪಿಯಲ್ಲಿ ಹಾಗೂ ಕಂಗ್ರಾಳಿಯಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ.

ಸೂಕ್ತ ವ್ಯವಸ್ಥೆ

“2018ರ ಬಳಿಕ ಬೆಳಗಾವಿಯಲ್ಲಿ ಅಧಿವೇಶನ ನಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ ಯಾವುದೇ ಕಾರಣಕ್ಕೂ ಅಧಿವೇಶನ ನಡೆಸಲೇಬೇಕು ಎಂದು ಒತ್ತಾಯಿಸಿದ್ದೆ. ಅದರಂತೆ ಮುಖ್ಯಮಂತ್ರಿಗಳು ಅಧಿವೇಶನದ ಆಯೋಜನೆಗೆ ಸೂಕ್ತ ಕ್ರಮ ಕೈಗೊಂಡಿದ್ದಾರೆ. ಅಧಿವೇಶನಕ್ಕೆ ಎಲ್ಲ ಸಿದ್ಧತೆಗಳು ಸಮರ್ಪಕವಾಗಿ ಸಾಗಿದೆ,” ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ವಿಜಯ ಕರ್ನಾಟಕದ ಜತೆ ಮಾತನಾಡಿದ ಅವರು, ”ಅಧಿವೇಶನದಲ್ಲಿ ಆಸನಗಳ ವ್ಯವಸ್ಥೆ, ಮೈಕ್‌ ಸೇರಿದಂತೆ ಎಲ್ಲ ವ್ಯವಸ್ಥೆಗಳು ಸಮರ್ಪಕವಾಗಿ ಇರುವಂತೆ ಕ್ರಮ ಕೈಗೊಳ್ಳಲಾಗಿದೆ. ಈ ಬಾರಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಚರ್ಚೆಗಳಿಗೆ ಹೆಚ್ಚು ಅವಕಾಶ ಕಲ್ಪಿಸಲಾಗುತ್ತದೆ,” ಎಂದರು.



Read more