ಹೈಲೈಟ್ಸ್:
- 30 ವರ್ಷಗಳ ಹಿಂದೆ ಸಕಲೇಶಪುರದ ಅರಮನೆಗುಡ್ಡದಲ್ಲಿ ಪತನವಾಗಿದ್ದ ಸೇನಾ ಚಾಪರ್
- ಸುಮಾರು ಒಂದು ವರ್ಷದ ಹುಡುಕಾಟದ ಬಳಿಕ ಪತ್ತೆಯಾಗಿತ್ತು ಚಾಪರ್ನ ಅವಶೇಷ
- ಇನ್ನೂ ಕೈ ಸೇರಿಲ್ಲ ಹುಡುಕಿಕೊಟ್ಟವರಿಗೆ ಸರ್ಕಾರ ಘೋಷಣೆ ಮಾಡಿದ್ದ ಇನಾಮು
30 ವರ್ಷಗಳ ಹಿಂದೆ ಹಾಸನದ ಸಕಲೇಶಪುರದ ದಟ್ಟಾರಣ್ಯದಲ್ಲಿ ಪತನಾವಗಿದ್ದ, ಭಾರತೀಯ ನೌಕಾ ಸೇನೆಗೆ ಸೇರಿದ್ದ ವಿಮಾನವೊಂದರ ಘಟನೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ. 1991 ರ ಜುಲೈನಲ್ಲಿ ಈ ದುರ್ಘಟನೆ ನಡೆದಿತ್ತು.
ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ಭಾರತೀಯ ನೌಕಾ ಪಡೆಗೆ ಸೇರಿದ್ದ ಹೆಲಿಕಾಪ್ಟರ್, ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಪಶ್ಚಿಮ ಘಟ್ಟ ವ್ಯಾಪ್ತಿಯ, ಅರಮನೆ ಗುಡ್ಡ ಎಂಬ ದಟ್ಟಾರಣ್ಯದಲ್ಲಿ ಪತನವಾಗಿತ್ತು. ಈ ಘಟನೆಯಲ್ಲಿ ಓರ್ವ ಕರ್ನಲ್ ದರ್ಜೆಯ ಅಧಿಕಾರಿ ಸೇರಿ ಒಟ್ಟು ನಾಲ್ಕು ಮಂದಿ ಅಸುನೀಗಿದ್ದರು.
ದಟ್ಟಾರಣ್ಯದಲ್ಲಿ ಪತನವಾದ ಈ ಹೆಲಿಕಾಪ್ಟರ್ನ ಅವಶೇಷ ಪತ್ತೆಗೆ ವಾಯುಪಡೆ ಹಾಗೂ ನೌಕಾಪಡೆಯ 45 ಯೋಧರು ಸುಮಾರು ಒಂದು ವಾರಗಳ ಕಾಲ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕಡಿದಾದ ಗುಡ್ಡ, ಕಿರಿದಾದ ಇಳಿಜಾರಿನಿಂದ ಕೂಡಿದ್ದ ಈ ಪ್ರದೇಶದಲ್ಲಿ ಪತ್ತೆ ಕಾರ್ಯ ಸೇನಾ ಪಡೆಗಳಿಗೆ ದುಸ್ತರವಾಗಿ ಪರಿಣಮಿಸಿತ್ತು.
ಈ ಘಟನೆ ಬಗ್ಗೆ ನೆನಪಿಸಿಕೊಳ್ಳುವ ಅಂದಿನ ಸ್ಥಳೀಯ ಪ್ರತ್ಯಕ್ಷ ದರ್ಶಿ ಕಿಶೋರ್ ಕುಮಾರ್ ಎಂಬವರು, ‘ ಹೆಲಿಕಾಪ್ಟರ್ ಅವಘಢ ಉಂಟಾದ ಬಳಿಕ ನಮ್ಮ ಪ್ರದೇಶದಲ್ಲಿ ಮಿಲಿಟರಿ ಸಿಬ್ಬಂದಿಗಳಿದ್ದ ಟ್ರಕ್ಗಳ ಪ್ರಯಾಣ ಹೆಚ್ಚಾಗಿತ್ತು. ಕೆಲವೊಂದು ಸೇನಾ ಹೆಲಿಕಾಪ್ಟರ್ಗಳು ಕೂಡ ಆಗಮಿಸಿ ಪತನವಾದ ಹೆಲಿಕಾಪ್ಟರ್ನ ಅವಶೇಷ ಪತ್ತೆಗೂ ಪ್ರಯತ್ನ ಮಾಡಿದವು. ಆದರೆ ಈ ದಟ್ಟಾರಣ್ಯದಲ್ಲಿ ಅದರ ಪತ್ತೆಗೆ ಸಾಧ್ಯವಾಗಿಲ್ಲ’ ಎಂದು ತಮ್ಮ ಹಳೇಯ ಅನುಭವವನ್ನು ಹಂಚಿಕೊಂಡಿದ್ದಾರೆ. ಆ ವೇಳೆ ನಾನು ಶಾಲಾ ವಿದ್ಯಾರ್ಥಿಯಾಗಿದ್ದೆ ಎಂದು ನೆನಪಿಸಿಕೊಂಡಿದ್ದಾರೆ.
ಹೆಲಿಕಾಪ್ಟರ್ ಅವಘಢ ಉಂಟಾದ ಬಳಿಕ ನಮ್ಮ ಪ್ರದೇಶದಲ್ಲಿ ಮಿಲಿಟರಿ ಸಿಬ್ಬಂದಿಗಳಿದ್ದ ಟ್ರಕ್ಗಳ ಪ್ರಯಾಣ ಹೆಚ್ಚಾಗಿತ್ತು. ಕೆಲವೊಂದು ಸೇನಾ ಹೆಲಿಕಾಪ್ಟರ್ಗಳು ಕೂಡ ಆಗಮಿಸಿ ಪತನವಾದ ಹೆಲಿಕಾಪ್ಟರ್ನ ಅವಶೇಷ ಪತ್ತೆಗೂ ಪ್ರಯತ್ನ ಮಾಡಿದವು. ಆದರೆ ಈ ದಟ್ಟಾರಣ್ಯದಲ್ಲಿ ಅದರ ಪತ್ತೆಗೆ ಸಾಧ್ಯವಾಗಿಲ್ಲ
ಕಿಶೋರ್ ಕುಮಾರ್, ಪ್ರತ್ಯಕ್ಷದರ್ಶಿ
ಇದಾದ ಬಳಿಕ ಹೆಲಿಕಾಪ್ಟರ್ನ ಅವಶೇಷ ಹಾಗೂ ಬ್ಲ್ಯಾಕ್ ಬಾಕ್ಸ್ ಪತ್ತೆ ಮಾಡಿದವರಿಗೆ ಬಹುಮಾನ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು. ಈ ವೇಳೆ ಪಶ್ಚಿಮ ಘಟ್ಟದ ಕಾಡಂಚಿನ ಜನ ಹೆಲಿಕಾಪ್ಟರ್ ಅವಶೇಷ ಪತ್ತೆಗೆ ಕಾಡು ಪೂರ್ತಿ ಅಲೆದರೂ ಯಾವುದೇ ಕುರುಹು ಕೂಡ ಪತ್ತೆಯಾಗಿರಲಿಲ್ಲ.
ಸುಮಾರು ಒಂದು ವರ್ಷದ ಬಳಿಕ ವನಗೂರಿನ ಎಚ್.ಆರ್ ಪುಟ್ಟಸ್ವಾಮಿ ಗೌಡ ಎಂಬವರು ಕಾಡು ಹಂದಿ ಬೇಟೆಗೆಂದು ಈ ಪ್ರದೇಶಕ್ಕೆ ಹೋಗಿದ್ದರು. ಆ ವೇಳೆ ಅವರಿಗೆ ಹೆಲಿಕಾಪ್ಟರ್ನ ಪಳಯುಳಿಕೆ ಕಣ್ಣಿಗೆ ಬಿದ್ದಿತ್ತು.
ಅವರಿಂದ ಮಾಹಿತಿ ಪಡೆದ ಸೇನೆ, ಸ್ಥಳಕ್ಕೆ ತೆರಳಿ ಆಳವಾಡ ಗುಂಡಿಗೆ ಹಗ್ಗದ ಮೂಲಕ ಇಳಿದು ಬ್ಲ್ಯಾಕ್ ಬಾಕ್ಸ್ ಹಾಗೂ ಹೆಲಿಕಾಪ್ಟರ್ನ ಇನ್ನಿತರ ಮಾಹಿತಿಯನ್ನು ಸಂಗ್ರಹಿಸಿತ್ತು. ಹುಡುಕಾಟ ಕಾರ್ಯದಲ್ಲಿ ಉಪಕಾರ ಮಾಡಿದ ಪುಟ್ಟಸ್ವಾಮಿ ಗೌಡರಿಗೆ ಪಣಜಿಯಿಂದ ಬಂದ ಹಿರಿಯ ನೌಕಾಪಡೆಯ ಅಧಿಕಾರಿಯೊಬ್ಬರು, 10,000 ರೂ. ಚೆಕ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಅಲ್ಲದೇ ನಾಲ್ಕು ಎಕರೆ ಕೃಷಿ ಭೂಮಿ ಅಥವಾ ಸರ್ಕಾರಿ ನೌಕರಿ ಕೊಡಿಸುವುದಾಗಿ ಜಿಲ್ಲಾಡಳಿತ ಕೂಡ ಭರವಸೆ ನೀಡಿತ್ತು.
ಘಟನೆ ನಡೆದು 30 ವರ್ಷಗಳೇ ಸಂದರೂ, ಈ ವರೆಗೆ ಪುಟ್ಟೇ ಸ್ವಾಮಿ ಗೌಡರಿಗೆ ಸರ್ಕಾರಿ ನೌಕರಿಯಾಗಲಿ, ಜಮೀನಾಗಲಿ ಸಿಗಲೇ ಇಲ್ಲ. ಇದಕ್ಕಾಗಿ ಸಲ್ಲಿಸಲಾಗಿದ್ದ ಹಲವು ಮನವಿಗಳು ಮೂಲೆಗುಂಪಾಗಿವೆ. ಅವರ 32 ವಯಸ್ಸಿನಲ್ಲಿ ಈ ಘಟನೆ ನಡೆದಿದ್ದು, ಸದ್ಯ ಅವರಿಗೆ 62 ವರ್ಷ. ಈ ಇಳಿವಯಸ್ಸಲ್ಲಾದರೂ ಕೃಷಿ ಭೂಮಿ ನೀಡಿ ಎನ್ನುವುದು ಅವರ ಮನವಿ.