Karnataka news paper

ಮಹೇಶ್ ಬಾಬು, ಅಪ್ಪು ಸಿನಿಮಾ ಸ್ಟೈಲ್‌ನಲ್ಲಿ ಹಫ್ತಾ ವಸೂಲಿಗಿಳಿದ ಯುವಕರಿಬ್ಬರ ಬಂಧನ..!


ಹೈಲೈಟ್ಸ್‌:

  • ಸ್ಥಿತಿವಂತರನ್ನು ಗುರಿಯಾಗಿಸಿಕೊಂಡು ಹಫ್ತಾ ವಸೂಲಿ
  • ಮೊಬೈಲ್‌ಗಳನ್ನು ಕಳವು ಮಾಡಿ ಹಣವಂತರಿಗೆ ಕರೆ
  • ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾ. ಸೇರಿ ರಾಜ್ಯದ ಹಲವು ಕಡೆ ಹಫ್ತಾ ವಸೂಲಿ

ಶಿಡ್ಲಘಟ್ಟ (ಚಿಕ್ಕಬಳ್ಳಾಪುರ): ದಿಢೀರ್‌ ಶ್ರೀಮಂತರಾಗಬೇಕು, ಹೈ ಫೈ ಜೀವನ ನಡೆಸಬೇಕೆಂಬ ಹಪಾಹಪಿಗೆ ಬಿದ್ದ ಯುವಕರಿಬ್ಬರು ಥೇಟ್‌ ಸಿನಿಮಾ ಶೈಲಿಯಲ್ಲಿ ವ್ಯಾಪಾರಿ ಬಳಿ ಹಫ್ತಾ ವಸೂಲಿಗೆ ಇಳಿದು ಇದೀಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.

ಚಿಂತಾಮಣಿ ತಾಲೂಕು ಕದಿರೀ ಪುರದ ಚಂದ್ರು (25), ಬಾಬು (23) ಬಂಧಿತರು. ಮದುವೆ ಮಂಜಿ ಇನ್ನಿತರೆ ಶುಭ ಸಮಾರಂಭಗಳಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಇವರು, ಮಹೇಶ್‌ ಬಾಬು ನಟನೆಯ ತೆಲುಗು ಚಿತ್ರ ‘ಬ್ಯುಸಿನೆಸ್‌ ಮ್ಯಾನ್‌’ ಹಾಗೂ ಕನ್ನಡದ ಅಪ್ಪು ಅಭಿನಯದ ‘ರಾಜಧಾನಿ’ ಚಿತ್ರ ವೀಕ್ಷಿಸಿ ಅದರಲ್ಲಿ ನಡೆದಂತೆ ಹಫ್ತಾ ವಸೂಲಿಗೆ ಇಳಿದಿದ್ದಾಗಿ ಆರೋಪಿಗಳು ಪೊಲೀಸರ ಬಳಿ ಬಾಯಿ ಬಿಟ್ಟಿದ್ದಾರೆ.

ಸ್ಥಿತಿವಂತರನ್ನು ಗುರಿಯಾಗಿಸಿಕೊಂಡು ಹಫ್ತಾ ವಸೂಲಿಗೆ ಇಳಿಯಲು ಇವರು ಮೊಬೈಲ್‌ಗಳನ್ನು ಕಳವು ಮಾಡಿ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾ. ಸೇರಿ ರಾಜ್ಯದ ಹಲವು ಕಡೆ ಹಫ್ತಾ ವಸೂಲಿ ಮಾಡಿ, ಮೊಬೈಲ್‌ಗಳನ್ನು ದೋಚಿರುವುದು ಬೆಳಕಿಗೆ ಬಂದಿದೆ.

ಶಿಡ್ಲಘಟ್ಟ ತಾಲೂಕು ಯಣ್ಣೂರು ಗ್ರಾಮದ ದಿಲೀಪ್‌ (24) ಎಚ್‌. ಕ್ರಾಸ್‌ನಲ್ಲಿ ಹಾರ್ಡ್‌ವೇರ್‌ ಅಂಗಡಿ ಇಟ್ಟಿದ್ದು, ಡಿಸೆಂಬರ್ 3 ರಂದು ರಾತ್ರಿ ಅಂಗಡಿ ಬಾಗಿಲು ಹಾಕಿ ಕಾರಿನಲ್ಲಿ ಊರಿಗೆ ವಾಪಸ್‌ ಬರುವಾಗ ದಾರಿ ಮಧ್ಯೆ ಅಪರಿಚಿತ ವ್ಯಕ್ತಿ ಮಂಕಿ ಟೋಪಿ ಧರಿಸಿ ಕೈಯ್ಯಲ್ಲಿ ಕಬ್ಬಿಣದ ಲಾಂಗ್‌ ಹಿಡಿದು ಕಾರಿನ ಮೇಲೆ ದಾಳಿ ನಡೆಸಿದ. ದಿಲೀಪ್‌ ಕಾರು ನಿಲ್ಲಿಸದೆ ಅಲ್ಲಿಂದ ಪರಾರಿಯಾದ. ಊರಿಗೆ ಹೋಗಿ ಸ್ನೇಹಿತರನ್ನು ಕರೆ ತಂದು ಹುಡುಕಿದಾಗ ಯಾರೂ ಕಣ್ಣಿಗೆ ಬಿದ್ದಿಲ್ಲ.

ಈ ಘಟನೆ ನಡೆದ 3 ದಿನಗಳ ನಂತರ ಆರೋಪಿಗಳು ದಿಲೀಪ್‌ಗೆ ಕರೆ ಮಾಡಿ ನಾವೇ ಮೊನ್ನೆ ನಿನ್ನ ಮೇಲೆ ಅಟ್ಯಾಕ್‌ ಮಾಡಿದ್ದು, 5 ಲಕ್ಷ ರೂ. ಹಫ್ತಾ ಕೊಡುವಂತೆ ಧಮಕಿ ಹಾಕಿದ್ದಾರೆ.

ಎಚ್‌. ಕ್ರಾಸ್‌ನ ಸುಮಾರು 40 ಅಂಗಡಿ ಮಾಲಿಕರು ನಮಗೆ ಹಫ್ತಾ ಕೊಡುತ್ತಿದ್ದಾರೆ. ನಮಗೆ ದುಬೈ, ಮುಂಬೈ ಮಾಫಿಯಾದೊಂದಿಗೆ ಕಾಂಟ್ಯಾಕ್ಟ್ ಇದೆ ಎಂದೆಲ್ಲಾ ಬೊಗಳೆ ಬಿಟ್ಟಿದ್ದಾರೆ. ನಾವು ಹೇಳಿದ ಕಡೆ 5 ಲಕ್ಷ ರೂ. ಹಣವನ್ನು ನೀನೊಬ್ಬನೇ ತಂದು ಕೊಡುವಂತೆ ಹೇಳಿದ್ದಾರೆ.

ಪ್ರತಿ 2 – 3 ದಿನಕ್ಕೊಮ್ಮೆ ಮೊಬೈಲ್‌ ಬದಲಿಸುತ್ತಿದ್ದ ಆರೋಪಿಗಳು ಕೇಳಿದಂತೆ ಹಣ ನೀಡುವ ನಾಟಕವಾಡಿದ ಪೊಲೀಸರು ಕೊನೆಗೆ, ಆರೋಪಿಗಳನ್ನು ಶಿಡ್ಲಘಟ್ಟ – ಚಿಂತಾಮಣಿ ಗಡಿಯ ಅಟ್ಟೂರು ಸಮೀಪ ಬಂಧಿಸಿದ್ದಾರೆ. ಬಂಧಿತರಿಂದ 3 ಮೊಬೈಲ್‌, ಲಾಂಗ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಫಿಲ್ಟರ್‌ ನೀರಿನ ಹೆಸರಲ್ಲಿ ಜನರ ಹಣ ಲೂಟಿ! ₹2ಕ್ಕೆ ಸಿಗುತ್ತಿದ್ದ ನೀರಿಗೆ ₹20 ನಿಗದಿ!



Read more