Karnataka news paper

ಉತ್ತರ ಕನ್ನಡದಲ್ಲಿ ಕೊರೊನಾ ಕಾಟ: ಜೊಯಿಡಾದಲ್ಲಿ ಆರ್ಭಟ..! ರಾಜ್ಯದಲ್ಲೇ 2ನೇ ಸ್ಥಾನ..!


ಹೈಲೈಟ್ಸ್‌:

  • ಜೊಯಿಡಾ ರಾಮನಗರದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೋವಿಡ್ ಕಾಟ
  • ಮಂಗಳವಾರ 19 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢ
  • ಈವರೆಗೆ ಈ ವಸತಿ ಶಾಲೆಯ ಒಟ್ಟು 30 ಮಂದಿಗೆ ಕೋವಿಡ್ ಸೋಂಕು

ಕಾರವಾರ (ಉತ್ತರ ಕನ್ನಡ): ರಾಜ್ಯದಲ್ಲೇ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾದ ಜಿಲ್ಲೆಗಳ ಪೈಕಿ ಮಂಗಳವಾರ ಉತ್ತರ ಕನ್ನಡ ಜಿಲ್ಲೆ ಎರಡನೇ ಸ್ಥಾನಕ್ಕೇರಿದೆ. ಬೆಂಗಳೂರು, ಮೈಸೂರು ಹೊರತುಪಡಿಸಿದರೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಂಗಳವಾರ ಒಂದಂಕಿ ಸೋಂಕಿತರು ವರದಿಯಾಗಿದ್ದಾರೆ. ಬೆಂಗಳೂರು ನಗರದಲ್ಲಿ 204 ಸೋಂಕು ಪ್ರಕರಣಗಳು ಮಂಗಳವಾರ ದೃಢಪಟ್ಟರೆ, ನಂತರದ ಸ್ಥಾನದಲ್ಲಿ ಉತ್ತರ ಕನ್ನಡ ಜಿಲ್ಲೆ ಇದೆ. ಜಿಲ್ಲೆಯ 29 ಮಂದಿಗೆ ಸೋಂಕು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಇನ್ನು ಮೂರನೇ ಸ್ಥಾನದಲ್ಲಿ ಮೈಸೂರು ಜಿಲ್ಲೆ ಇದ್ದು, ಮೈಸೂರಿನಲ್ಲಿ ಮಂಗಳವಾರ 10 ಪ್ರಕರಣಗಳು ದೃಢಪಟ್ಟಿವೆ.

ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಹೇಳೋದಾದ್ರೆ, ಜಿಲ್ಲೆಯಲ್ಲಿ ಮಂಗಳವಾರ ದೃಢಪಟ್ಟಿರುವ 30 ಪ್ರಕರಣಗಳ ಪೈಕಿ 19 ಪ್ರಕರಣಗಳು ಜೊಯಿಡಾ ತಾಲೂಕಿಗೆ ಸಂಬಂಧಪಟ್ಟದ್ದಾಗಿದ್ದು, ಇನ್ನುಳಿದ ಹನ್ನೊಂದು ಪ್ರಕರಣಗಳಲ್ಲಿ ಹಳಿಯಾಳ, ಶಿರಸಿಯಲ್ಲಿ ತಲಾ 3, ಸಿದ್ದಾಪುರ ಹಾಗೂ ಯಲ್ಲಾಪುರದಲ್ಲಿ ತಲಾ 2 ಪ್ರಕರಣಗಳು ಪತ್ತೆಯಾಗಿವೆ. ಒಂದು ಹಳೆಯ ಪ್ರಕರಣವಾಗಿದೆ.

ಜೊಯಿಡಾ ರಾಮನಗರದ ಮುರಾರ್ಜಿ ದೇಸಾಯಿ ವಸತಿ ಶಾಲೆಯ 19 ವಿದ್ಯಾರ್ಥಿಗಳಿಗೆ ಮಂಗಳವಾರ ಕೊರೊನಾ ಸೋಂಕು ದೃಢಪಟ್ಟಿದ್ದು, ಈವರೆಗೆ ಈ ವಸತಿ ಶಾಲೆಯ ಒಟ್ಟು 30 ಮಂದಿಗೆ ಕೋವಿಡ್ ಸೋಂಕು ತಗುಲಿದಂತಾಗಿದೆ. ಈಗಾಗಲೇ ಈ ಶಾಲೆಯನ್ನು ಕ್ಲಸ್ಟರ್‌ ಆಗಿ ಪರಿವರ್ತಿಸಿ, ಇಲ್ಲಿನ ಎಲ್ಲಾ ಪಾಸಿಟಿವ್ ಪ್ರಕರಣಗಳ ಮಾದರಿಯನ್ನು ಜಿನೋಮಿಕ್ ಸೀಕ್ವೆನ್ಸ್‌ಗೆ ಕಳುಹಿಸಲಾಗಿದೆ. ಸೋಂಕು ತಗುಲಿದ ವಿದ್ಯಾರ್ಥಿಗಳನ್ನು ಕಟ್ಟಡದ ಬೇರೆ ವಿಭಾಗದಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರಲ್ಲದ ಉಳಿದ ಎಲ್ಲಾ ವಿದ್ಯಾರ್ಥಿಗಳ ಗಂಟಲು ದ್ರವ ತೆಗೆದು ಪರೀಕ್ಷೆ ನಡೆಸಲಾಗುತ್ತಿದೆ. ಒಟ್ಟು 155 ವಿದ್ಯಾರ್ಥಿಗಳ ಗಂಟಲು ದ್ರವ ಸಂಗ್ರಹಿಸಿ ಅವರನ್ನೂ ಸಹ ಪ್ರತ್ಯೇಕ ವಿಭಾಗಗಳಲ್ಲಿ ಇರಿಸಲಾಗಿದೆ.

ಶೀಘ್ರದಲ್ಲೇ ಸಂಚಾರಕ್ಕೆ ಮುಕ್ತವಾಗಲಿದೆ ಕರಾವಳಿಯ ಮೊದಲ ಹೆದ್ದಾರಿ ಸುರಂಗ ಮಾರ್ಗ..!
ಇನ್ನು ಉಪ ವಿಭಾಗಾಧಿಕಾರಿ ವಿದ್ಯಾ ಶ್ರೀ ಚಂದರಗಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜೊತೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶರದ್ ನಾಯಕ, ಸರ್ವೇಕ್ಷಣಾಧಿಕಾರಿ ಡಾ.ವಿನೋದ್ ಭೂತೆ, ತಹಶೀಲ್ದಾರ ಶೈಲೇಶ ಪರಮಾನಂದ, ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ಇತರ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳವನ್ನು ಕಂಟೋನ್ಮೆಂಟ್ ಝೋನ್‌ ಆಗಿ ಪರಿವರ್ತಿಸಿ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮ ವಹಿಸಿದ್ದಾರೆ. ಈಗಾಗಲೇ ಒಂದು ಆಂಬ್ಯುಲೆನ್ಸ್ ಕೂಡ ಸ್ಥಳದಲ್ಲಿದ್ದು, ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಒಂದು ವಿಭಾಗವನ್ನು ಕೋವಿಡ್ ಕೇರ್ ಸೆಂಟರ್ ಅನ್ನಾಗಿ ಮಾಡಲಾಗಿದೆ.

ಉತ್ತರ ಕನ್ನಡದಲ್ಲಿ ಅಪಘಾತದ ಮಾರ್ಗವಾಯ್ತು ಚತುಷ್ಪಥ ಹೆದ್ದಾರಿ..! ಅವೈಜ್ಞಾನಿಕ ರಸ್ತೆಯಿಂದ ಅನಾಹುತ..!
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಏರಿಕೆಯಾಗಿರುವ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಜಿಲ್ಲಾಧಿಕಾರಿ ಮುಲ್ಲೆ ಮುಗಿಲನ್, ‘ಸಾರ್ವಜನಿಕರು ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ. ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಸಂಬಂಧಪಟ್ಟ ಇಲಾಖೆಗಳಿಗೆ ಮುಂಜಾಗ್ರತೆ ಕ್ರಮ ವಹಿಸಲು ಸೂಚನೆಯನ್ನು ನೀಡಲಾಗಿದೆ. ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆಯನ್ನು ಎಲ್ಲರೂ ಎಚ್ಚರಿಕೆಯಿಂದ ಆಚರಣೆ ಮಾಡಲು ಸೂಚಿಸಲಾಗಿದೆ. ಯಾರಾದರೂ ಮಾಸ್ಕ್ ಧರಿಸದೇ ಇರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಗುಂಪು- ಗುಂಪಾಗಿರುವುದು ಕಂಡುಬಂದರೆ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಗೆ ಸೂಚಿಸಲಾಗಿದೆ. ಸಾರ್ವಜನಿಕರೂ ಜಿಲ್ಲಾಡಳಿತದೊಂದಿಗೆ ಸಹಕಾರ ನೀಡಬೇಕಿದೆ’ ಎಂದು ಕೋರಿದ್ದಾರೆ.

ಒಮಿಕ್ರಾನ್ ಆತಂಕ: ಉತ್ತರ ಕನ್ನಡದಲ್ಲಿ ಬಿಗಿ ಕ್ರಮ



Read more