Karnataka news paper

ಎಂಇಎಸ್‌ ನಿಷೇಧಿಸಲು ಚಿತ್ರೋದ್ಯಮದ ಒಕ್ಕೊರಲಿನ ಕರೆ


ಬೆಂಗಳೂರು: ‘ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ಕನ್ನಡದ ಬಾವುಟಕ್ಕೆ ಬೆಂಕಿ ಹಚ್ಚಿ, ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಭಗ್ನ ಮಾಡಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್‌) ಪುಂಡರು ದಬ್ಬಾಳಿಕೆ ಮಾಡಿದ್ದಾರೆ. ಈ ಅಧಿವೇಶನ ಪೂರ್ಣಗೊಳ್ಳುವ ಮೊದಲೇ ಎಂಇಎಸ್‌ ಅನ್ನು ನಿಷೇಧಿಸಿ’ ಎಂದು ನಿರ್ಮಾಪಕ ಸಾ.ರಾ.ಗೋವಿಂದ್‌ ಆಗ್ರಹಿಸಿದ್ದಾರೆ. 

ಮಂಗಳವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಂಇಎಸ್‌ ನಿಷೇಧಿಸಿದರಷ್ಟೇ ಇಂಥ ಕೃತ್ಯಗಳಿಗೆ ಶಾಶ್ವತ ಕಡಿವಾಣ ಹಾಕಬಹುದು. ವರನಟ ಡಾ.ರಾಜ್‌ಕುಮಾರ್‌ ಅವರು ಕೇವಲ ಕಲಾವಿದನಾಗಿರದೆ, ಈ ನಾಡಿಗೆ ಭಾಷೆಗೆ, ನೆಲ ಜಲಕ್ಕೆ ಅನ್ಯಾಯವಾದ ಸಂದರ್ಭದಲ್ಲಿ ಹೋರಾಟ ಮಾಡಿದ್ದರು. ಈ ಭದ್ರ ಬುನಾದಿಯಲ್ಲಿ ನಾವಿದ್ದೇವೆ. ಭಾಷಾವಾರು ಪ್ರಾಂತ್ಯ ಮಾಡಿದ ಮೇಲೆ ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ, ಅಗ್ರಪೀಠ. ಆಡಳಿತಕ್ಕೆ ಬಂದ ಸರ್ಕಾರಗಳು ಕೇವಲ ಮತಭಿಕ್ಷೆಗಾಗಿ ಕನ್ನಡಿಗರ ಮಾನ, ಮರ್ಯಾದೆ, ಗೌರವವನ್ನು ಹರಾಜು ಹಾಕುತ್ತಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಅಧಿವೇಶನ ಪೂರ್ಣಗೊಳ್ಳುವ ಮೊದಲೇ ಎಂಇಎಸ್‌ ಅನ್ನು ನಿಷೇಧಿಸಲಿ’ ಎಂದರು.

‘ನಾಡು, ನುಡಿಗೆ ಅನ್ಯಾಯವಾದಾಗ ಇಡೀ ಚಿತ್ರೋದ್ಯಮ ಒಂದಾಗಿರುತ್ತದೆ. ಸಮಯ ಬಂದಾಗ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಮುಖ್ಯಮಂತ್ರಿಗಳು ಕಠಿಣ ನಿಲುವು ತೆಗೆದುಕೊಳ್ಳಲಿ. ಇಡೀ ರಾಜ್ಯದ ಜನತೆ ನಿಮ್ಮ ಬೆನ್ನಿಗೆ ನಿಲ್ಲಲಿದೆ’ ಎಂದು ಹೇಳಿದರು.

ಮಂಡಳಿಯ ಅಧ್ಯಕ್ಷ ಡಿ.ಆರ್‌.ಜೈರಾಜ್‌ ಮಾತನಾಡಿ, ‘ಬೆಳಗಾವಿಯಲ್ಲಿ ಅಧಿವೇಶನ ನಡೆಯುವ ಸಂದರ್ಭದಲ್ಲೆಲ್ಲಾ ಈ ರೀತಿ ಎಂಇಎಸ್‌ ತೊಂದರೆ ನೀಡುತ್ತಿದೆ. ಮಹಾರಾಷ್ಟ್ರ ಗಡಿಯಲ್ಲಿ ನಡೆಯುವ ಈ ಪುಂಡಾಟಕ್ಕೆ ಕೇಂದ್ರ ಸರ್ಕಾರವೂ ಕಡಿವಾಣ ಹಾಕಬೇಕು. ಕನ್ನಡಿಗರ ರಕ್ಷಣೆಗಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಪದೇ ಪದೇ ಈ ರೀತಿ ಘಟನೆಗಳಾಗದಂತೆ ನಿಗಾವಹಿಸಬೇಕು’ ಎಂದರು. 

ಸರ್ಜಿಕಲ್‌ ಸ್ಟ್ರೈಕ್‌ ಆಗಲಿ: ‘ಇಂಥ ಘಟನೆಗಳು ನಡೆದಾಗ ಕನ್ನಡಿಗನಾಗಿ ರಕ್ತ ಕುದಿಯುತ್ತದೆ. ತಿಳಿವಳಿಕೆ ಇದ್ದವರು ಈ ರೀತಿ ಕೆಲಸ ಮಾಡುವುದಿಲ್ಲ. ಕನ್ನಡಿಗರಲ್ಲಿ ಸಹನೆ, ತಾಳ್ಮೆ, ಸಂಸ್ಕಾರ ಇದೆ. ಈ ರೀತಿ ಘಟನೆ ನಡೆದಾಗ ನಮ್ಮ ರಾಜ್ಯದ ಯಜಮಾನನಿಗೆ ಕೇಳಿ ಕ್ರಮ ಕೈಗೊಳ್ಳಿ ಎನ್ನುವುದು ತಪ್ಪಾಗುತ್ತದೆ. ಅವರೇ ತಕ್ಷಣ ಕ್ರಮ ಕೈಗೊಳ್ಳಬೇಕಿತ್ತು. ಇಲ್ಲಿ ಒಂದು ರೀತಿ ಸರ್ಜಿಕಲ್‌ ಸ್ಟ್ರೈಕ್‌ ನಡೆಸುವ ಅಗತ್ಯವಿದೆ. ಉದಾಹರಣೆಯಾಗಿ ಉಳಿಯುವ ಉತ್ತರ ಕೊಡಬೇಕಾಗಿದೆ. ಇನ್ನು ಮುಂದೆ ಈ ರೀತಿ ಸಾಹಸಕ್ಕೆ ಅವರು ಕೈ ಹಾಕಬಾರದು. ಪ್ರಾಣ ಹೋದರೂ ಸರಿ ನಮ್ಮ ನೆಲದ ಪರವಾಗಿ ನಾವು ನಿಲ್ಲುತ್ತೇವೆ’ ಎಂದು ನಟ ಅಜೇಯ ರಾವ್ ಹೇಳಿದರು.



Read More…Source link