ಹೈಲೈಟ್ಸ್:
- ತೀರಾ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಅಧಿಕ ಪ್ರೊಟೀನ್ಯುಕ್ತ ಆಹಾರ ನೀಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ಧಾರ
- ಪ್ರೊಟೀನ್ಯುಕ್ತ ಬಿಸ್ಕೆಟ್, ರಸ್ಕ್, ಸೀಸನ್ ಪೇಸ್ಟ್, ಮಾವಿನ ಬಾರ್ ವಿತರಣೆಗೆ ಕ್ರಮ
- ಜಿಲ್ಲಾದ್ಯಂತ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ 150 ಮಕ್ಕಳ ಮೇಲೆ ವಿಶೇಷ ನಿಗಾ
- ಸಿಎಫ್ಟಿಆರ್ಐ, ತುಮಕೂರಿನ ಸ್ಪಿರುಲಿನಾ ಫೌಂಡೇಶನ್ ಸಹಕಾರ
5 ದಿನ ಮೊಟ್ಟೆ, ಸಾಮಾನ್ಯರಿಗಿಂತ ಒಂದೂವರೆ ಪಟ್ಟು ಅಧಿಕ ಆಹಾರ, ಪ್ರತಿ ತಿಂಗಳು ಆರೋಗ್ಯ ತಪಾಸಣೆ ನಡೆಸಿದರೂ ಒಂದಷ್ಟು ಮಕ್ಕಳಿಗೆ ಅಪೌಷ್ಟಿಕತೆ ಸಮಸ್ಯೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ (ಸಿಎಫ್ಟಿಆರ್ಐ), ತುಮಕೂರಿನ ಸ್ಪಿರುಲಿನಾ ಫೌಂಡೇಶನ್ ವತಿಯಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೈಸರ್ಗಿಕವಾಗಿ ತಯಾರಿಸಿದ ಸ್ಪಿರುಲಿನಾ ಚಿಕ್ಕಿ, ಪ್ರೊಟೀನ್ಯುಕ್ತ ಬಿಸ್ಕೆಟ್, ರಸ್ಕ್, ಸೀಸನ್ ಪೇಸ್ಟ್, ಮಾವಿನ ಬಾರ್ ನೀಡಲು ಯೋಜಿಸಿದೆ. ಈಗಾಗಲೇ ಪ್ರಾಯೋಗಿಕವಾಗಿ ಕೆಲವು ಮಕ್ಕಳಿಗೆ ಇದನ್ನು ನೀಡಲ ನೀಡಿದ್ದು, ಅವರು ಚೇತರಿಸಿಕೊಳ್ಳುತ್ತಿರುವುದರಿಂದ ಉಳಿದವರಿಗೆ ನೀಡಲಾಗುತ್ತಿದೆ.
ಜಿಲ್ಲಾದ್ಯಂತ 150 ಮಕ್ಕಳಿಗೆ ವಿತರಣೆ
ಜಿಲ್ಲಾದ್ಯಂತ ಅಪೌಷ್ಟಿಕತೆಯಿಂದ ಬಳಲುತ್ತಿರುವ 150 ಮಕ್ಕಳಿಗೆ ಮುಂದಿನ ವಾರದಿಂದ ದಿನಕ್ಕೊಂದರಂತೆ ನಿತ್ಯ ಒಂದೊಂದು ಪೌಷ್ಟಿಕಯುಕ್ತ ಆಹಾರ ಪದಾರ್ಥ ವಿತರಿಸಲಾಗುತ್ತದೆ. ಸೋಮವಾರ ಸ್ಪಿರುಲಿನಾ ಚಿಕ್ಕಿ, ಮಂಗಳವಾರ ಪ್ರೊಟೀನ್ಯುಕ್ತ ಬಿಸ್ಕೆಟ್, ಬುಧವಾರ ಪೌಷ್ಟಿಕಾಂಶವುಳ್ಳ ರಸ್ಕ್, ಗುರುವಾರ ಸೀಸನ್ ಪೇಸ್ಟ್, ಶುಕ್ರವಾರ ಮಾವಿನ ಬಾರ್ ವಿತರಿಸಲು ಇಲಾಖೆ ಸಜ್ಜಾಗಿದೆ. ಇದಲ್ಲದೆ ಸಾಧಾರಣ ಅಪೌಷ್ಟಿಕತೆಯಿಂದ ಕೂಡಿರುವ 5,400 ಮಕ್ಕಳೆಡೆಗೂ ಗಮನಹರಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಬಸವರಾಜು ಬಿ. ‘ವಿಜಯ ಕರ್ನಾಟಕ’ಕ್ಕೆ ತಿಳಿಸಿದರು.
ಗ್ರಾಮಾಂತರದಲ್ಲೇ ಅತಿ ಹೆಚ್ಚು
ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ನಂಜನಗೂಡು ಅತಿ ಹೆಚ್ಚು (36) ಹಾಗೂ ಪಿರಿಯಾಪಟ್ಟಣ ತಾಲೂಕಿನಲ್ಲಿ ಅತಿ ಕಡಿಮೆ (8) ಚಿಣ್ಣರು ಇದ್ದಾರೆ. ಉಳಿದಂತೆ ಮೈಸೂರು ಗ್ರಾಮಾಂತರ – 33, ಮೈಸೂರು ನಗರ -22, ಹುಣಸೂರು- 15, ತಿ.ನರಸೀಪುರ – 13, ಕೆ.ಆರ್. ನಗರ – 13 ಹಾಗೂ ಎಚ್.ಡಿ. ಕೋಟೆಯಲ್ಲಿ 10 ಮಕ್ಕಳಿದ್ದು, ಶೀಘ್ರ ಅವರನ್ನು ಗುಣಮುಖರನ್ನಾಗಿಸುವ ಜವಾಬ್ದಾರಿ ಇಲಾಖೆ ಮೇಲಿದೆ.
ಪೌಷ್ಟಿಕಾಂಶ ಸುಧಾರಿಸುವ ಗುರಿ
ಕೊರೊನಾ ಮೂರನೇ ಅಲೆಯ ಭೀತಿ ನಡುವೆಯೂ ಜಿಲ್ಲಾದ್ಯಂತ ಮಕ್ಕಳಲ್ಲಿ ಇರುವ ಅಪೌಷ್ಟಿಕತೆಯನ್ನು ಹೋಗಲಾಡಿಸಿ ಸಾಮಾನ್ಯ ಚಿಣ್ಣರಂತೆ ಮಾಡುವ ಗುರಿಯನ್ನು ಇಲಾಖೆ ಹೊಂದಿದ್ದು, ಇಂಥ ಮಕ್ಕಳ ಮೇಲೆ ವಿಶೇಷ ನಿಗಾ ವಹಿಸಿದೆ.
ಪೌಷ್ಟಿಕಾಂಶ ಕೊರತೆ ಇದ್ದರೆ ರೋಗ ನಿರೋಧಕ ಶಕ್ತಿ ಕುಗ್ಗಿ ನಾನಾ ಕಾಯಿಲೆಗಳು ಎದುರಾಗಬಹುದು. ಹಾಗಾಗಿ ಇಂಥವರಿಗೆ ಏನಾದರೂ ಆರೋಗ್ಯ ಸಮಸ್ಯೆ ಎದುರಾದರೆ ಮೈಸೂರಿನ ಚೆಲುವಾಂಬ ಆಸ್ಪತ್ರೆಯ ನ್ಯೂಟ್ರಿಷಿಯನ್ ಪುನರ್ವಸತಿ ಕೇಂದ್ರದಲ್ಲಿ ಈಗಾಗಲೇ ಚಿಕಿತ್ಸೆ ನೀಡಲಾಗುತ್ತಿದೆ. ಸುಮಾರು 14 ದಿನಗಳ ಕಾಲ ವಿಶೇಷ ನಿಗಾ ವಹಿಸಿ ಗುಣಮುಖರನ್ನಾಗಿಸಲಾಗುತ್ತಿದೆ. ಬಳಿಕ ಇನ್ನುಳಿದವರನ್ನು ಪರೀಕ್ಷಿಸಿ ಕೇಂದ್ರಕ್ಕೆ ಕರೆ ತರುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ.
ಇದಲ್ಲದೆ ಗರ್ಭಿಣಿ, ಬಾಣಂತಿಯರ ಆರೋಗ್ಯ ವೃದ್ಧಿಗೂ ಹೆಸರುಕಾಳು, ತೊಗರಿಬೇಳೆ, ಕಡ್ಲೇಬೀಜ, ಅಕ್ಕಿ, ಹಾಲಿನ ಪುಡಿಯನ್ನು ಅವರ ಮನೆಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ.
ಜಿಲ್ಲೆಯ ಮಕ್ಕಳಲ್ಲಿ ಇರುವ ಅಪೌಷ್ಟಿಕತೆ ನಿವಾರಣೆಗೆ ಸಿಎಫ್ಟಿಆರ್ಐ ಹಾಗೂ ತುಮಕೂರಿನ ಸ್ಪಿರುಲಿನಾ ಫೌಂಡೇಶನ್ ವತಿಯಿಂದ ದಿನಕ್ಕೊಂದು ಅಧಿಕ ಪ್ರೋಟಿನ್ಯುಕ್ತ ಆಹಾರ ನೀಡಲು ಇಲಾಖೆ ಮುಂದಾಗಿದ್ದು, ಮುಂದಿನ ವಾರದಿಂದ ವಿತರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಬಸವರಾಜು ಬಿ ಹೇಳಿದ್ದಾರೆ.