Karnataka news paper

ಐಸಿಸಿ ಕಿರಿಯರ ವಿಶ್ವಕಪ್‌ ಟೂರ್ನಿ: ‘ಯಂಗ್‌ ಇಂಡಿಯಾ’ ಪ್ರಕಟಿಸಿದ ಬಿಸಿಸಿಐ!


ಹೈಲೈಟ್ಸ್‌:

  • ವೆಸ್ಟ್‌ ಇಂಡೀಸ್‌ ಆತಿಥ್ಯದಲ್ಲಿ ಐಸಿಸಿ ಕಿರಿಯರ ವಿಶ್ವಕಪ್‌ ಟೂರ್ನಿ.
  • ಜನವರಿ 14ರಿಂದ ಫೆಬ್ರವರಿ 5ರವರೆಗೆ ನಡೆಯಲಿರುವ ಜೂನಿಯರ್‌ ವರ್ಲ್ಡ್‌ಕಪ್.
  • ಭಾರತದ ಯುವ ಪಡೆಗೆ ಬಲಗೈ ಬ್ಯಾಟ್ಸ್‌ಮನ್‌ ಯಶ್‌ ಧುಲ್‌ ಮನಾಯಕನಾಗಿ ಆಯ್ಕೆ.

ಮುಂಬೈ: ಮುಂಬರುವ ಐಸಿಸಿ ಕಿರಿಯರ ವಿಶ್ವಕಪ್‌ ಟೂರ್ನಿ ಸಲುವಾಗಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) 17 ಸದಸ್ಯರ ‘ಯಂಗ್‌ ಇಂಡಿಯಾ’ ಬಳಗವನ್ನು ಪ್ರಕಟ ಮಾಡಿದ್ದು, ದಿಲ್ಲಿಯ ಬಲಗೈ ಬ್ಯಾಟ್ಸ್‌ಮನ್‌ ಯಶಸ್‌ ಧುಲ್‌ಗೆ ನಾಯಕನ ಪಟ್ಟ ನೀಡಿದೆ.

14 ರಾಷ್ಟ್ರಗಳ ನಡುವಣ ಜೂನಿಯರ್‌ ವಿಶ್ವಕಪ್‌ ಟೂರ್ನಿ ಈ ಬಾರಿ ವೆಸ್ಟ್‌ ಇಂಡೀಸ್‌ ಆತಿಥ್ಯದಲ್ಲಿ ಜನವರಿ 15ರಿಂದ ಫೆಬ್ರವರಿ 4ರವರೆಗೆ ಜರುಗಲಿದ್ದು, ಭಾರತದ ಯುವ ಪಡೆ ಇದಕ್ಕೂ ಮುನ್ನ ಯುಎಇ ಆತಿಥ್ಯದಲ್ಲಿ ನಡೆಯಲಿರುವ ಎಷ್ಯಾ ಕಪ್‌ ಟೂರ್ನಿಯಲ್ಲಿ ಸಮರಾಭ್ಯಾಸ ನಡೆಸಲಿದೆ.

ಕಿರಿಯರ ವಿಶ್ವಕಪ್‌ ಟೂರ್ನಿಯಲ್ಲಿ ತಂಡಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿ ಪ್ರತಿ ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯುವ ಎರಡು ತಂಡಗಳು ಸೂಪರ್‌ ಲೀಗ್‌ ಹಂತಕ್ಕೆ ಅರ್ಹತೆ ಪಡೆದುಕೊಳ್ಳಲಿವೆ. ನಾಲ್ಕು ಬಾರಿಯ ಚಾಂಪಿಯನ್ಸ್‌ ಭಾರತ ತಂಡ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಜನವರಿ 15ರಂದು ದಕ್ಷಿಣ ಆಫ್ರಿಕಾ ಎದುರು ತನ್ನ ಅಭಿಯಾನ ಆರಂಭಿಸಲಿದೆ. ನಂತರ ಐರ್ಲೆಂಡ್‌ ಮತ್ತು ಉಗಾಂಡ ಎದುರು ಕ್ರಮವಾಗಿ ಜ.19 ಮತ್ತು 22ರಂದು ಕಾದಾಟ ನಡೆಸಲಿದೆ.

ಹರಿಣಗಳ ನಾಡಲ್ಲಿ ಭಾರತ ಟೆಸ್ಟ್‌ ತಂಡದ ಟಾಪ್‌ 5 ಭರ್ಜರಿ ಪ್ರದರ್ಶನಗಳಿವು!

ಯುವ ಪಡೆಗೆ ರೋಹಿತ್‌ ಸಲಹೆ
ತೊಡೆ ಸ್ನಾಯು ಸೆಳೆತದ ಸಮಸ್ಯೆ ಕಾರಣ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿನ ಟೆಸ್ಟ್‌ ಸರಣಿಯಿಂದ ಹೊರಗುಳಿದಿರುವ ಸೀಮಿತ ಓವರ್‌ಗಳ ಕ್ರಿಕೆಟ್‌ನ ನೂತನ ನಾಯಕ ರೋಹಿತ್‌ ಶರ್ಮಾ, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ)ಯಲ್ಲಿ ಪುನಶ್ಚೇತನ ಶಿಬಿರಕ್ಕೆ ಒಳಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಪೂರ್ವಾಭಾವಿ ಶಿಬಿರದಲ್ಲಿ ಪಾಲ್ಗೊಂಡಿದ್ದ ಭಾರತದ ಯುವ ಪಡೆಯೊಂದಿಗೆ ಸಂವಾದ ನಡೆಸಿರುವ ‘ಹಿಟ್‌ಮ್ಯಾನ್‌’ ಖ್ಯಾತಿಯ ಅನುಭವಿ ಓಪನರ್‌ ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ.

ಇದರ ಫೋಟೊಗಳನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡು, ಯುವ ಪಡೆಗೆ ಮಹತ್ವದ ಪಾಠ ಸಿಕ್ಕಿದೆ ಎಂದು ಬರೆದುಕೊಂಡಿತ್ತು. ಇನ್ನು ಕಿರಿಯರ ಏಷ್ಯಾ ಕಪ್‌ ಟೂರ್ನಿ ಡಿ.24ರಿಂದ ಜನವರಿ 1ರವರೆಗೆ ಯುನೈಟೆಡ್‌ ಅರಬ್ ಎಮಿರೇಟ್ಸ್‌ (ಯುಎಇ) ಆತಿಥ್ಯದಲ್ಲಿ ಜರುಗಲಿದ್ದು, ಹಾಲಿ ಚಾಂಪಿಯನ್ಸ್‌ ಭಾರತ ಟ್ರೋಫಿ ಗೆಲ್ಲುವ ಫೇವರಿಟ್‌ ಆಗಿದೆ.

ಕೆ.ಎಲ್‌ ರಾಹುಲ್‌ ಭಾರತ ಟೆಸ್ಟ್‌ ತಂಡದ ಭವಿಷ್ಯದ ನಾಯಕ ಎಂದ ಬಟ್‌!

ಮುಂಬರುವ ಐಸಿಸಿ ಕಿರಿಯರ ವಿಶ್ವಕಪ್‌ ಟೂರ್ನಿಗೆ ಭಾರತದ ಯುವ ಪಡೆ ಹೀಗಿದೆ
ಯಶಸ್‌ ಧುಲ್‌ (ನಾಯಕ), ಹರ್ನೂರ್‌ ಸಿಂಗ್‌, ಅಂಗ್‌ಕ್ರಿಶ್ ರಘುವಂಶಿ, ಎಸ್‌ಕೆ ರಶೀದ್‌ (ಉಪನಾಯಕ), ನಿಶಾಂತ್‌ ಸಿಂಧೂ, ಸಿದ್ಧಾರ್ಥ್ ಯಾದವ್, ಅನೀಶ್ವರ್‌ ಗೌತಮ್‌, ದಿನೇಶ್‌ ಬನ (ವಿಕೆಟ್‌ಕೀಪರ್‌), ಆರಾಧ್ಯ ಯಾದವ್‌ (ವಿಕೆಟ್‌ ಕೀಪರ್‌), ರಾಜ್‌ ಅಂಗದ್‌ ಬಾವಾ, ಮಾನವ್‌ ಪಾರಖ್‌, ಕೌಶಲ್‌ ತಾಂಬೆ, ಆರ್‌ಎಸ್‌ ಹಂಗಾರ್ಗೇಕರ್‌, ವಾಸು ವತ್ಸ, ವಿಕಿ ಓಸ್ತ್ವಾಲ್‌, ರವಿ ಕುಮಾರ್‌, ಗರ್ವ್‌ ಸಾಂಗ್ವಾನ್‌.
ಕಾಯ್ದಿರಿಸಿದ ಆಟಗಾರರು: ರಿಶಿತ್‌ ರೆಡ್ಡಿ, ಉದಯ್‌ ಸಹರನ್‌, ಅನ್ಶ್ ಗೋಸಾಯ್, ಅಮೃತ್‌ ರಾಜ್‌ ಉಪಾಧ್ಯಾಯ, ಪಿಎಮ್‌ ಸಿಂಗ್ ರಾಠೋರ್‌.



Read more