ವಿಧಾನಸಭೆಯಲ್ಲೂ ಗದ್ದಲದ ಮಧ್ಯೆಯೇ ಪ್ರಶ್ನೋತ್ತರ ಕಲಾಪದ ಶಾಸ್ತ್ರ ಮಾಡಲಾಯಿತು. ಅದರ ಬೆನ್ನಿಗೇ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಭೋಜನ ವಿರಾಮ ಘೋಷಿಸಿದರು. ಭೋಜನದ ಬಳಿಕ ಉಭಯ ಸದನಗಳಲ್ಲೂ ಪ್ರತಿಪಕ್ಷದ ಸದಸ್ಯರು ಸಭಾತ್ಯಾಗ ಮಾಡಿ ವಾಪಸ್ ಬಂದರು. ಬಳಿಕ ಸಾರ್ವಜನಿಕ ಮಹತ್ವದ ಚರ್ಚೆ ಕೈಗೆತ್ತಿಕೊಳ್ಳಲಾಯಿತು.
ಗುಂಡೂರಾವ್ ಪ್ರಕರಣ ಪ್ರಸ್ತಾಪ: ಈ ಮಧ್ಯೆ ಬಿಜೆಪಿ ಸದಸ್ಯ ಎನ್.ರವಿಕುಮಾರ್, ‘ಈ ಹಿಂದೆ ಕಾಂಗ್ರೆಸ್ ಸರಕಾರವಿದ್ದಾಗ ಅಂದಿನ ಸಚಿವ ದಿನೇಶ್ ಗುಂಡೂರಾವ್ ಭೂಕಬಳಿಕೆ ಮಾಡಿದ್ದರ ಆರೋಪದ ಬಗ್ಗೆ ಚರ್ಚಿಸಲು ಕೇಳಲಾಗಿತ್ತು. ಆಗ ಈ ಸದನದಲ್ಲಿ ಸಭಾ ನಾಯಕರಾಗಿದ್ದ ಎಸ್.ಆರ್.ಪಾಟೀಲ್, ನಿಯಮಾನುಸಾರ ಈ ಚರ್ಚೆಗೆ ಅವಕಾಶವಿಲ್ಲ ಎಂದಿದ್ದರು. ಈಗ ಹೇಗೆ ಚರ್ಚೆಗೆ ಅನುಮತಿ ನೀಡಲು ಸಾಧ್ಯ? ಆಗಿನ ಕಾನೂನೇ ಈಗಲೂ ಇದೆಯಲ್ಲ?’ ಎಂದು ಹೇಳಿದರು. ದಿನೇಶ್ ಗುಂಡೂರಾವ್ ಈ ಸದನದ ಸದಸ್ಯರಲ್ಲದ ಕಾರಣದ ಅವರ ಹೆಸರು ಪ್ರಸ್ತಾಪಿಸಬಾರದೆಂದು ಎಸ್.ಆರ್.ಪಾಟೀಲ್ ಹೇಳಿದರು.
ಚರ್ಚೆಗೆ ಸಹಕಾರ: ‘ಸಚಿವ ಬೈರತಿ ಬಸವರಾಜ್ ರಾಜೀನಾಮೆ ಪಡೆದಿಲ್ಲವೆಂದು ನಾವು ಧರಣಿ ಆರಂಭಿಸಿದ್ದೆವು. ಆದರೆ, ರಾಜ್ಯದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿದ್ದು ಚರ್ಚೆಯಾಗಬೇಕಿದೆ. ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿರುವುದು, ಕನ್ನಡ ಧ್ವಜ ಸುಟ್ಟು ಹಾಕಿರುವ ಪ್ರಕರಣದ ಬಗ್ಗೆ ಪ್ರಸ್ತಾಪಿಸಬೇಕಿದೆ. ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಗಮನ ಸೆಳೆಯಬೇಕಿದೆ. 40 ಪರ್ಸೆಂಟ್ ಕಮಿಷನ್ ಬಗ್ಗೆಯೂ ಚರ್ಚಿಸುತ್ತೇವೆ ಹಾಗಾಗಿ ಧರಣಿ ಹಿಂಪಡೆಯಲಾಗಿದೆ’ ಎಂದು ಸಭಾತ್ಯಾಗದ ಬಳಿಕ ಮೊಗಸಾಲೆಯಲ್ಲಿ ಮಾತನಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು. ಈ ಮಧ್ಯೆ ಸದನದಲ್ಲಿ ಯಾವೆಲ್ಲ ವಿಚಾರ ಕೈಗೆತ್ತಿಕೊಳ್ಳಬೇಕು ಎಂಬ ಬಗ್ಗೆ ಕಾಂಗ್ರೆಸ್ನ ಹಿರಿಯರು ಸಭೆ ನಡೆಸಿದರು.