ಬಾಗಲಕೋಟೆ: ’ರಾಜ್ಯದಲ್ಲಿ ಅವ್ಯಾವಹತವಾಗಿರುವ ಮತಾಂತರ ತಡೆಯಲು ನಾಡಿನ ಸ್ವಾಮೀಜಿಗಳು ಮಠ ಬಿಟ್ಟು ಹೊರಗೆ ಬರಬೇಕು. ನೀವು ಮಠದೊಳಗೆ ಇದ್ದರೆ ನಾಳೆ ನಿಮ್ಮ ಪಾದಪೂಜೆಗೂ ಸಹ ಜನ ಸಿಗೋದಿಲ್ಲ‘ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿಗೆ ಆಗ್ರಹಿಸಲು ಮತ್ತು ಮುಖ್ಯಮಂತ್ರಿ ರಕ್ಷಣೆ ಮಾಡಲು ಮಾತ್ರ ಮಠಗಳು ಇಲ್ಲ. ಇಲ್ಲಿಯವರೆಗೆ ತಳ ಸಮುದಾಯದವರು ಮಾತ್ರ ಮತಾಂತರ ಆಗುತ್ತಿದ್ದರು. ಈಗ ಲಿಂಗಾಯತರು, ಕುರುಬರು, ಗೌಡರು, ಬ್ರಾಹ್ಮಣರು, ಆರ್ಯ-ವೈಶ್ಯ ಸಮಾಜದವರೂ ಆಗುತ್ತಿದ್ದಾರೆ. ಎಲ್ಲ ಸಮಾಜದವರನ್ನು ಮತಾಂತರ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಕಾನೂನು ಜಾರಿ ಮೂಲಕ ಅದನ್ನು ತಡೆಯಬೇಕು ಎಂದರು.
ಮತಾಂತರ ನಿಷೇಧ ಕಾಯ್ದೆ ವಿಚಾರದಲ್ಲಿ ಬಿಜೆಪಿಯವರು ಯಾವುದೇ ನಾಟಕ ಆಡುವುದು ಬೇಡ. ಬೆಳಗಾವಿ ಅಧಿವೇಶನದಲ್ಲೇ ಕಾಯ್ದೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ತಮ್ಮ ಅಂಗಡಿ, ವ್ಯಾಪಾರ ಬಂದ್ ಆಗಲಿದೆ. ಉದ್ಯೋಗಕ್ಕೆ ಕುತ್ತು ಬರಲಿದೆ ಎಂದು ಕ್ರಿಶ್ಚಿಯನ್ ಪಾದ್ರಿಗಳು ಮತಾಂತರ ನಿಷೇಧ ಕಾಯ್ದೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮತಾಂತರದಂತಹ ದೇಶದ್ರೋಹಿ ಚಟುವಟಿಕೆ ನಿಲ್ಲಿಸಲು ಕಾನೂನು ಜಾರಿಗೆ ತರಲೇಬೇಕು. ಇಲ್ಲದಿದ್ದರೆ ಸಾವಿರಾರು ಮಠಾಧೀಶರ ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹಮಂತ್ರಿ ಅರಗ ಜ್ಞಾನೇಂದ್ರ ಅವರಿಗೆ ಘೆರಾವ್ ಹಾಕಲಾಗುವುದು ಎಂದು ಎಚ್ಚರಿಸಿದರು.
’ಪಕ್ಷದ ನಾಯಕಿ ಸೋನಿಯಾಗಾಂಧಿ ಅವರನ್ನು ಓಲೈಸಲು ಕಾಂಗ್ರೆಸ್ನವರು ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸುವುದನ್ನು ವಿರೋಧಿಸುತ್ತಿದ್ದಾರೆ‘ ಎಂದು ಆಕ್ರೋಶ ವ್ಯಕ್ತಪಡಿಸಿದ ಮುತಾಲಿಕ್, ’ದೇಶ, ಧರ್ಮದ ಬಗ್ಗೆ ಕಾಳಜಿ ಇದ್ದಿದ್ದರೆ ನೀವು (ಕಾಂಗ್ರೆಸ್) ಈ ಮಾತು ಹೇಳುತ್ತಿರಲಿಲ್ಲ. ಧರ್ಮದ್ರೋಹಿಗಳಾಗಬೇಡಿ. ಮತಾಂತರ ಮಾಡುವವರು ಶಾಸಕ ಗೂಳಿಹಟ್ಟಿ ಶೇಖರ್ ಮನೆಯೊಳಗೆ ಹೋದಂತೆ ನಿಮ್ಮ ಮನೆಗೂ ಬರಲಿದ್ದಾರೆ‘ ಎಂದು ಎಚ್ಚರಿಸಿದರು.