ಬಿಜೆಪಿಗೆ ರಾಜಕೀಯ ಲಾಭ ಎಂದು ಕಿಡಿಕಾರಿದ ಪ್ರತಿಪಕ್ಷಗಳು..!

ವಿಧಾನಸಭೆ ಕ್ಷೇತ್ರಗಳ ಪುನರ್ ವಿಂಗಡಣೆ ಕುರಿತು ಪುನರ್ ವಿಂಗಡಣೆ ಆಯೋಗದ ಶಿಫಾರಸುಗಳ ವಿರುದ್ಧ ಕಣಿವೆಯ ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
‘ಆಯೋಗದ ಶಿಫಾರಸುಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆಯೋಗವು 2011ರ ಜನಗಣತಿಯ ಅಂಕಿ – ಅಂಶಗಳ ಆಧಾರದ ಮೇಲೆ ಕರಡು ಸಿದ್ಧಪಡಿಸಿಲ್ಲ. ಹಾಗಾಗಿಯೇ, ಜಮ್ಮುವಿಗೆ 6 ನೂತನ ಕ್ಷೇತ್ರಗಳ ರಚನೆಗೆ ಶಿಫಾರಸು ಮಾಡಿದರೆ, ಕಾಶ್ಮೀರಕ್ಕೆ ಒಂದು ಕ್ಷೇತ್ರ ಮಾತ್ರ ಹೆಚ್ಚಿಸುವ ಪ್ರಸ್ತಾಪವನ್ನು ಕರಡು ಹೊಂದಿದೆ. ಇದು ಬಿಜೆಪಿಯ ರಾಜಕೀಯ ಉದ್ದೇಶಕ್ಕೆ ಪೂರಕವಾಗಿರುವ ಕರಡು’ ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ನಾಯಕ ಒಮರ್ ಅಬ್ದುಲ್ಲಾ ಸರಣಿ ಟ್ವೀಟ್ಗಳ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪೀಪಲ್ಸ್ ಕಾನ್ಫರೆನ್ಸ್ (ಪಿಸಿ), ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಸಹ ಶಿಫಾರಸು ಕುರಿತು ಅಸಮಾಧಾನ ವ್ಯಕ್ತಪಡಿಸಿವೆ. ಆದಾಗ್ಯೂ, ಮುಂದಿನ 10 ದಿನಗಳ ಒಳಗಾಗಿ ಶಿಫಾರಸು ಕುರಿತು ಪ್ರತಿಕ್ರಿಯೆ ನೀಡಲಾಗುವುದು ಎಂದು ಎನ್ಸಿ ತಿಳಿಸಿದೆ.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ ಆಯೋಗವು ಸೋಮವಾರ ಹೊಸದಿಲ್ಲಿಯಲ್ಲಿ ಸಭೆ ನಡೆಸಿದ್ದು, ಕೇಂದ್ರ ಸಚಿವರೂ ಆದ ಬಿಜೆಪಿ ವಕ್ತಾರ ಜಿತೇಂದ್ರ ಸಿಂಗ್, ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಸೇರಿ ಆಯೋಗದ ಸಹ ಸದಸ್ಯರಾಗಿರುವ ಜಮ್ಮು – ಕಾಶ್ಮೀರದ ಐವರು ಸಂಸದರು ಸಹ ಭಾಗವಹಿಸಿದ್ದರು. ಇಡೀ ಶಿಫಾರಸಿನ ಕುರಿತು ಸಭೆಯಲ್ಲಿ ಚರ್ಚಿಸಲಾಗಿದ್ದು, ಇದೇ ಮಾಸಾಂತ್ಯದೊಳಗೆ ಕರಡು ಕುರಿತು ಪ್ರತಿಕ್ರಿಯೆ ನೀಡುವಂತೆ ಸಹ ಸದಸ್ಯರಿಗೆ ಸೂಚಿಸಲಾಗಿದೆ.
ಕಣಿವೆಗೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿಯನ್ನು 2019ರಲ್ಲಿ ರದ್ದುಗೊಳಿಸಿದ ಬಳಿಕ ಕೇಂದ್ರ ಸರಕಾರವು ಜಮ್ಮು – ಕಾಶ್ಮೀರ ಮರು ಸಂಘಟನೆ ಕಾಯಿದೆ – 2019ರ ಪ್ರಕಾರ ಕ್ಷೇತ್ರಗಳ ಪುನರ್ ವಿಂಗಡಣೆಗಾಗಿ 2020ರ ಮಾರ್ಚ್ 6ರಂದು ಮೂವರು ಸದಸ್ಯರ ಆಯೋಗವನ್ನು ರಚಿಸಲಾಗಿದೆ. ಮುಖ್ಯ ಚುನಾವಣೆ ಆಯುಕ್ತ ಸುಶೀಲ್ ಚಂದ್ರ ಅವರು ಆಯೋಗದ ಪದನಿಮಿತ್ತ ಸದಸ್ಯರಾಗಿದ್ದಾರೆ. ಇದಕ್ಕೂ ಮೊದಲು ಆಯೋಗದ ಸಭೆಯನ್ನು ಪ್ರತಿಪಕ್ಷಗಳು ಬಹಿಷ್ಕರಿಸಿದ್ದವು.
ಎಸ್ಟಿಗೆ ಮೊದಲ ಬಾರಿಗೆ ಕ್ಷೇತ್ರ ಮೀಸಲು

ಜಮ್ಮು – ಕಾಶ್ಮೀರದ ಒಟ್ಟು ವಿಧಾನಸಭೆ ಕ್ಷೇತ್ರಗಳ ಪೈಕಿ ಪರಿಶಿಷ್ಟ ಜಾತಿಗೆ ಏಳು ಹಾಗೂ ಪರಿಶಿಷ್ಟ ಪಂಗಡಗಳಿಗೆ ಒಂಬತ್ತು ಕ್ಷೇತ್ರಗಳಿಗೆ ಮೀಸಲಿಡುವ ಕುರಿತು ಆಯೋಗವು ಶಿಫಾರಸು ಮಾಡಿದೆ. ಹಾಗೊಂದು ವೇಳೆ ಶಿಫಾರಸುಗಳನ್ನು ಅನುಷ್ಠಾನಗೊಳಿಸಿದರೆ, ಕಣಿವೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಪರಿಶಿಷ್ಟ ಪಂಗಡಗಳಿಗೆ ಕ್ಷೇತ್ರ ಮೀಸಲಿರಿಸಿದಂತಾಗುತ್ತದೆ.
ಬಿಜೆಪಿ ಹೇಳುವುದೇನು..?

ಒಂದೆಡೆ ಸಭೆಯಿಂದ ಹೊರ ಬಂದ ಪ್ರತಿಪಕ್ಷ ನಾಯಕರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರೆ, ಬಿಜೆಪಿ ವಕ್ತಾರ ಜಿತೇಂದ್ರ ಸಿಂಗ್ ಅವರು ಮಾತ್ರ ‘ಆಯೋಗದ ಕರಡು ಕುರಿತು ಎಲ್ಲ ಪ್ರತಿಪಕ್ಷಗಳು ಮೆಚ್ಚುಗೆ ವ್ಯಕ್ತಪಡಿಸಿವೆ’ ಎಂದಿದ್ದಾರೆ. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕ್ಷೇತ್ರ ಪುನರ್ ವಿಂಗಡಣೆ ಆಯೋಗವು ಎಲ್ಲ ದಾಖಲೆಗಳನ್ನು ಪರಿಗಣಿಸಿ ಕರಡು ಸಿದ್ಧಪಡಿಸಿದೆ. ಆಯೋಗದ ಕೆಲಸಕ್ಕೆ ಎಲ್ಲ ಪಕ್ಷಗಳ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನ್ಯಾಷನಲ್ ಕಾನ್ಫರೆನ್ಸ್ ಸದಸ್ಯರು ಸಹ ಆಯೋಗದ ಮಾನದಂಡಗಳ ಕುರಿತು ಶ್ಲಾಘಿಸಿದ್ದಾರೆ’ ಎಂದು ತಿಳಿಸಿದರು.
ಜನಗಣತಿ ಮಾಹಿತಿಯೇ ತಪ್ಪು?

ಕ್ಷೇತ್ರಗಳ ಪುನರ್ ವಿಂಗಡಣೆ ಕುರಿತ ಶಿಫಾರಸುಗಳು ಸಿದ್ಧವಾಗಿರುವುದು ರಾಜಕೀಯ ಮೇಲಾಟಕ್ಕೂ ಕಾರಣವಾಗಿದೆ. 2011ರ ಜನಗಣತಿ ಪ್ರಕಾರ ಕಾಶ್ಮೀರ ಜನಸಂಖ್ಯೆಯು 80 ಲಕ್ಷ ಆಗಿದ್ದು, ಜಮ್ಮುವಿನಲ್ಲಿ 60 ಲಕ್ಷ ಜನರಿದ್ದಾರೆ. ಹಾಗಾಗಿ ಜನಗಣತಿಯಲ್ಲಿ ಉಲ್ಲೇಖಿಸಿದ ಜನಸಂಖ್ಯೆ ಆಧಾರದ ಮೇಲೆಯೇ ಕ್ಷೇತ್ರಗಳ ಪುನರ್ವಿಂಗಡಣೆ ಆಗಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿವೆ. ಆದರೆ, ಬಿಜೆಪಿಯು 2011ರ ಜನಗಣತಿಯ ಅಂಕಿ – ಅಂಶಗಳನ್ನೇ ತಪ್ಪೆಂದು ಹೇಳಿದ್ದು, ‘ಸ್ಥಳೀಯ ಅಸಮತೋಲನ ನಿವಾರಣೆಯಾಗಬೇಕಿದೆ’ ಎಂದಷ್ಟೇ ಹೇಳಿದೆ.
ಪಿಒಕೆಗೆ ಏಕೆ ಮೀಸಲು..?

ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ವು ಜಮ್ಮು – ಕಾಶ್ಮೀರದ ಅವಿಭಾಜ್ಯ ಅಂಗ ಎನ್ನುವುದು ಭಾರತದ ಪ್ರತಿಪಾದನೆ. ಜಮ್ಮು – ಕಾಶ್ಮೀರಕ್ಕೆ 1956ರಲ್ಲಿ ಪ್ರತ್ಯೇಕ ಸಂವಿಧಾನ ರಚಿಸಿದಾಗಲೂ ಇದನ್ನು ಸ್ಪಷ್ಟಪಡಿಸಲಾಗಿದೆ ಮತ್ತು ವಿಧಾನಸಭೆಯಲ್ಲಿ 24 ಕ್ಷೇತ್ರ ಮೀಸಲಿರಿಸಲಾಗಿದೆ. ಈ ಕ್ಷೇತ್ರಗಳಿಗೆ ಚುನಾವಣೆ ನಡೆಯದೇ ಖಾಲಿ ಇರುತ್ತವೆ. ಕೇಂದ್ರ ಸರಕಾರವು 2019ರ ಆಗಸ್ಟ್ನಲ್ಲಿ ಸಂವಿಧಾನದ 370ನೇ ವಿಧಿ ರದ್ದತಿ ಮೂಲಕ ಜಮ್ಮು – ಕಾಶ್ಮೀರ ಸಂವಿಧಾನವನ್ನು ರದ್ದುಪಡಿಸಿದರೂ, ಪಿಒಕೆಗೆ 24 ಕ್ಷೇತ್ರ ಮೀಸಲು ಮುಂದುವರಿಸುವುದಾಗಿ ತಿಳಿಸಿತ್ತು. ಅದರಂತೆಯೇ ಕ್ಷೇತ್ರ ಪುನರ್ ವಿಂಗಡಣೆ ಆಯೋಗವು ಕ್ಷೇತ್ರಗಳನ್ನು ಮೀಸಲಿರಿದೆ.