Karnataka news paper

ದುಬೈ ಆಟದಿಂದ ಭಾರತ ತಂಡಕ್ಕೆಷ್ಟು ಲಾಭ?: ರೋಹಿತ್ ಶರ್ಮಾ ಹೇಳಿದ್ದೊಂದು, ಮೊಹಮ್ಮದ್ ಶಮಿ ಹೇಳಿದ್ದೇ ಮತ್ತೊಂದು!


ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ತಲುಪಿದೆ. ಅದರೊಂದಿಗೆ ಭಾರತ ತಂಡಕ್ಕೆ ಹೈಬ್ರಿಡ್ ಮಾದರಿ ಟೂರ್ನಿಯಿಂದಾಗಿ ಸಂಪೂರ್ಣವಾಗಿ ಲಾಭವಾಗಿದೆ ಎಂಬ ಕೂಗು ಸಹ ಬಲವಾಗುತ್ತಿದೆ. ಇದನ್ನು ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ಗೌತಮ್ ಗಂಭೀರ್ ಅವರು ಅಲ್ಲಗೆಳೆದಿದ್ದರೆ, ವೇಗಿ ಮೊಹಮ್ಮದ್ ಶಮಿ ಅವರು ಸಂಪೂರ್ಣವಾಗಿ ಅಲ್ಲಗೆಳೆದಿದ್ದಾರೆ.ಆ ವಿಚಾರವಾಗಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕೇವಲ ಒಂದೇ ಮೈದಾನದಲ್ಲಿ ಎಲ್ಲಾ ಪಂದ್ಯಗಳನ್ನು ಆಡಿರುವುದರಿಂದ ತಂಡಕ್ಕೆ ನಿಜಕ್ಕೂ ಅನುಕೂಲವಾಗಿದೆ. ಯಾಕೆಂದರೆ ಪಿಚ್ ನ ವರ್ತನೆ ಮತ್ತು ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳಲು, ವಾತಾವರಣಕ್ಕೆ ಹೊಂದಿಕೊಳ್ಳಲು ಬಹಳ uಅನುಕೂಲವಾಯಿತು ’’ ಎಂದು ತಿಳಿಸಿದರು. ಇಷ್ಟು ಮಾತ್ರವಲ್ಲದೆ ಎಲ್ಲಾ ಪಂದ್ಯಗಳನ್ನೂ ಒಂದೇ ಮೈದಾನದಲ್ಲಿ ಆಡುತ್ತಿರುವುದು ನಮಗೆ ನಿಜಕ್ಕೂ ಪ್ಲಸ್ ಪಾಯಿಂಟ್ ಎಂದು ಅವರು ಹೇಳಿದರು.

ಹೈಬ್ರಿಡ್ ಮಾದರಿ ಟೂರ್ನಿ

ಪಾಕಿಸ್ತಾನ ಈ ಬಾರಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಆಯೋಜಿಸಿದ್ದು ಅಲ್ಲಿಗೆ ತೆರಳಿ ಆಡಲು ಭಾರತ ಸರ್ಕಾರ ನಿರಾಕರಿಸಿತ್ತು. ಅಲ್ಲದೆ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸುವಂತೆ ಒತ್ತಾಯ ಮಾಡಿತ್ತು. ಈ ವಿಚಾರ ಐಸಿಸಿ ಅಂಗಣಕ್ಕೆ ಹೋಗಿದ್ದ ಹಿನ್ನೆಲೆಯಲ್ಲಿ ಎರಡೂ ಕ್ರಿಕೆಟ್ ಮಂಡಳಿಗಳ ವಿಚಾರಣೆ ಮಾಡಿದ ಬಳಿಕ ಭಾರತದ ಪಂದ್ಯಗಳನ್ನಷ್ಟೇ ದುಬೈನಲ್ಲಿ ಆಡಿಸುವುದು ಎಂದು ತೀರ್ಮಾನ ಆಯಿತು. ಜೊತೆಗೆ 2027ರವರೆಗೆ ಭಾರತ ಮತ್ತು ಪಾಕಿಸ್ತಾನಗಳಲ್ಲಿ ನಡೆಯುವ ಎಲ್ಲಾ ಐಸಿಸಿ ಟೂರ್ನಿಗಳು ಸಹ ಹೈಬ್ರಿಡ್ ಮಾದರಿಯಲ್ಲೇ ನಡೆಯಲಿವೆ ಎಂದು ತೀರ್ಪು ನೀಡಿತು.

ಈ ಹಿನ್ನೆಲೆಯಲ್ಲಿ ಭಾರತ ತಂಡ ತನ್ನೆಲ್ಲಾ ಪಂದ್ಯಗಳನ್ನು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಡುವುದೆಂದು ತೀರ್ಮಾನ ಆಯ್ತು. ಹೀಗಾಗಿ ಉಳಿದ ತಂಡಗಳು ಭಾರತದ ವಿರುದ್ಧ ಆಡಲು ದುಬೈಗೆ ಆಗಮಿಸಲೇಬೇಕಾಯ್ತು. ಇದು ಅನೇಕ ಮಾಜಿ ಕ್ರಿಕೆಟಿಗರ ಕಣ್ಣು ಕೆಂಪಾಗಿಸಿತ್ತು. ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಈ ಬಗ್ಗೆ ಸದಾ ಕೊಂಕು ಮಾತನಾಡುತ್ತಲೇ ಇದ್ದರು. ಆದರೆ ಇಂಗ್ಲೆಂಡಿನ ನಾಸೀರ್ ಹುಸೇನ್ ಮತ್ತು ಮೈಕ್ ಅಥರ್ಟನ್, ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಈ ಬಗ್ಗೆ ಮಾತನಾಡಿದ ಬಳಿಕ ಬಹಳ ಚರ್ಚೆ ನಡೆಯಿತು.

ರೋಹಿತ್ ಶರ್ಮಾ ನಿರಾಕರಣೆ

ಇದಕ್ಕೆ ಭಾರತದ ನಾಯಕ ರೋಹಿತ್ ಶರ್ಮಾ ಅವರು, “ದುಬೈ ಏನೂ ನಮ್ಮ ಮನೆಯಲ್ಲ. ಈ ಪಿಚ್ ನಲ್ಲಿ ನಾವೂ ಏನೂ ಬಹಳ ಆಡಿಲ್ಲ. ಇದು ನಮಗೂ ಹೊಸದೇ. ಮಾತ್ರವಲ್ಲದೆ ಒಂದು ಪಂದ್ಯದಲ್ಲಿ ಒಂದೊಂದು ರೀತಿಯಾಗಿ ವರ್ತಿಸುತ್ತಿರುವುದು ನಮಗೂ ಸವಾಲಾಗಿ ಪರಿಣಮಿಸಿದೆ. ಮೊದಲೆರಡು ಪಂದ್ಯಗಳಲ್ಲಿ ಚೆಂಡು ಸ್ವಿಂಗ್ ಆಗುತ್ತಿರಲಿಲ್ಲ, ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ಚೆಂಡು ಕೊಂಚ ಸ್ವಿಂಗ್ ಆಗುತ್ತಿತ್ತು’’ ಎಂದಿದ್ದರು.

ಇನ್ನು ಸೌರವ್ ಗಂಗೂಲಿ ಅವರಂತೂ `ದುಬೈಗೆ ಬದಲಾಗಿ ಪಾಕಿಸ್ತಾನದ ಪಿಚ್ ಗಳಲ್ಲಿ ಭಾರತ ತಂಡ ಆಡಿರುತ್ತಿದ್ದರೆ ಮತ್ತಷ್ಟು ರನ್ ಗಳನ್ನು ಸುಲಭವಾಗಿ ಗಳಿಸುತ್ತಿತ್ತು’ ಎಂದು ಹೇಳುವ ಮೂಲಕ ಟೀಕಾಕಾರರಿಗೆ ಟಾಂಗ್ ನೀಡಿದ್ದರು. ಇದೀಗ ಶಮಿ ಅವರು ಇವರಿಬ್ಬರಿಗಿಂತ ಭಿನ್ನ ಹೇಳಿಕೆ ನೀಡಿದ್ದಾರೆ. ಭಾನುವಾರ ಫೈನಲ್ ಪಂದ್ಯವನ್ನು ಸಹ ಭಾರತ ತಂಡ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲೇ ಆಡಲಿದೆ.



Read more

[wpas_products keywords=”deal of the day sale today offer all”]