Karnataka news paper

ಹುಣಸೂರಿನಲ್ಲಿ ಹಾಡಹಗಲೇ ಡಬಲ್‌ ಮರ್ಡರ್‌, ತೋಟದ ಮನೆಯಲ್ಲಿದ್ದ ವೃದ್ದ ದಂಪತಿ ಭೀಕರ ಕೊಲೆ


ಹುಣಸೂರು (ಮೈಸೂರು): ಹಾಡು ಹಗಲೇ ರುಬ್ಬುವ ಒರಳು ಕಲ್ಲಿನಿಂದ ಜಜ್ಜಿ ವೃದ್ದ ದಂಪತಿಯನ್ನು ಕೊಲೆ ಮಾಡಿರುವ ಆತಂಕಕಾರಿ ಘಟನೆ ಮೈಸೂರು‌ ಜಿಲ್ಲೆ ಹುಣಸೂರು ತಾಲೂಕಿನ ನಾಡಪ್ಪನಹಳ್ಳಿಯಲ್ಲಿ ಮಾರ್ಚ್‌ 3ರಂದು ಸೋಮವಾರ ನಡೆದಿದೆ.ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ನಾಡಪ್ಪನಹಳ್ಳಿ ಗ್ರಾಮದ ರಂಗಸ್ವಾಮಿಗೌಡ (65 ವರ್ಷ) ಹಾಗೂ ಇವರ ಪತ್ನಿ ಶಾಂತಮ್ಮ (52 ವರ್ಷ) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಇವರಿಗೆ ಗ್ರಾಮ ಪಂಚಾಯತಿ ಸದಸ್ಯ ದೇವರಾಜ್ ಸೇರಿದಂತೆ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬಳು ಮಗಳಿದ್ದಾರೆ.

ತೋಟದ ಮನೆಯಲ್ಲಿ ವಾಸವಿದ್ದ ರಂಗಸ್ವಾಮಿಗೌಡ ಹಾಗೂ ಅವರ ಪತ್ನಿ ಶಾಂತಮ್ಮ ಅವರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಇವರನ್ನು ಯಾವ ಕಾರಣಕ್ಕೆ ಕೊಲೆ ಮಾಡಿದ್ದಾರೆ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ.

ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ಇವರ ಪುತ್ರ ದೇವರಾಜ್ ಜಮೀನಿನಲ್ಲಿ ಶುಂಠಿ ಕೀಳುತ್ತಿದ್ದರು. ಈ ವೇಳೆ ಶುಂಠಿಯನ್ನು ತುಂಬಲು ಕುಕ್ಕೆ (ಬುಟ್ಟಿ) ತರುವಂತೆ ಕಾರ್ಮಿಕ ಗಣೇಶನನ್ನು ತಂದೆ ರಂಗಸ್ವಾಮಿಗೌಡ ಅವರ ತೋಟದ ಮನೆಗೆ ಕಳುಹಿಸಿದ್ದರು. ಬುಟ್ಟಿ ತರಲೆಂದು ಗಣೇಶ್‌ ಮನೆಗೆ ಹೋದಾಗ ಮನೆಯೊಳಗೆ ಶಾಂತಮ್ಮ ಹಾಗೂ ದನದ ಕೊಟ್ಟಿಗೆಯಲ್ಲಿ ರಂಗಸ್ವಾಮಿಗೌಡ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಾಣಿಸಿದೆ. ತಕ್ಷಣವೇ ಅವರು ಮಗ ದೇವರಾಜ್‌ಗೆ ಮಾಹಿತಿ ನೀಡಿದ್ದಾರೆ.

ಪುತ್ರ ದೇವರಾಜ್ ಮನೆಗೆ ಬಂದು ನೋಡುವಷ್ಟರಲ್ಲಿ ತಂದೆ ಹಾಗೂ ತಾಯಿ ಇಬ್ಬರೂ ಸಾವನ್ನಪ್ಪಿದ್ದರು. ತಕ್ಷಣವೇ ದೇವರಾಜ್ ಬಿಳಿಕೆರೆ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ಲೋಲಾಕ್ಷಿ, ಡಿವೈಎಸ್‌ಪಿ ಗೋಪಾಲಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮೈಸೂರಿನಿಂದ ಶ್ವಾನದಳ, ಬೆರಳಚ್ಚು ತಜ್ಞರ ತಂಡದವರೂ ರಂಗಸ್ವಾಮಿಗೌಡ ಅವರ ಮನೆಗೆ ಆಗಮಿಸಿ ವಿವರವಾದ ಪರಿಶೀಲನೆ ನಡೆಸಿದ್ದಾರೆ. ವೃದ್ದ ದಂಪತಿ ಕೊಲೆಯಿಂದ ಗ್ರಾಮದಲ್ಲಿ ಆತಂಕ ಮನೆಮಾಡಿದೆ.



Read more

[wpas_products keywords=”deal of the day sale today offer all”]