Karnataka news paper

ನಿಮ್ಮ ಟೀಕೆಗಳಿಂದ ಕ್ರೀಡಾಪಟುಗಳನ್ನು ದೂರವಿಡಿ; ಕಾಂಗ್ರೆಸ್‌, ಟಿಎಂಸಿ ನಾಯಕರಿಗೆ ಕೇಂದ್ರ ಕ್ರೀಡಾ ಸಚಿವರ ಕ್ಲಾಸ್!‌


ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ ಅವರ ದೈಹಿಕ ಸಾಮರ್ಥ್ಯದ ಬಗ್ಗೆ ಕುಹುಕವಾಡಿದ್ದ ಕಾಂಗ್ರೆಸ್‌ ವಕ್ತಾರೆ ಶಮಾ ಮೊಹಮ್ಮದ್‌ ಮತ್ತು ಟಿಎಂಸಿ ಸಂಸದ ಸೌಗತ್‌ ರಾಯ್‌ ವಿರುದ್ಧ, ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಮನ್ಸುಖ್‌ ಮಾಂಡವಿಯಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.ಈ ಕುರಿತು ತಮ್ಮ ಅಧಿಕೃತ ಎಕ್ಸ್‌ ಅಕೌಂಟ್‌ನಲ್ಲಿ ಟ್ವೀಟ್‌ ಮಾಡಿರುವ ಮನ್ಸುಖ್‌ ಮಾಂಡವಿಯಾ, “ಕ್ರೀಡೆ ಮತ್ತು ಕ್ರೀಡಾಪಟುಗಳನ್ನು ರಾಜಕೀಯದ ಕಣ್ಣುಗಳಲ್ಲಿ ನೋಡುವುದನ್ನು ಒಪ್ಪಲು ಸಾಧ್ಯವಿಲ್ಲ..” ಎಂದು ಹರಿಹಾಯ್ದಿದ್ದಾರೆ.

ಕ್ರೀಡಾ ಸಚಿವರ ಟ್ವೀಟ್‌ನಲ್ಲೇನಿದೆ?
“ಕ್ರೀಡಾಪಟುಗಳು ತಮ್ಮ ವೃತ್ತಿಪರ ಜೀವನವನ್ನು ಸಂಪೂರ್ಣವಾಗಿ ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಹೀಗಾಗಿ ರಾಜಕಾರಣಿಗಳು ಅವರ ಬಗ್ಗೆ ವಿನಾಕಾರಣ ಅಭಿಪ್ರಾಯ ದಾಖಲಿಸುವ ಅಗತ್ಯವಿಲ್ಲ. ಈ ಅಭಿಪ್ರಾಯಗಳು ರಚನಾತ್ಮಕವಾಗಿದ್ದರೆ ಯಾವ ಅಭ್ಯಂತರೂ ಇಲ್ಲ. ಆದರೆ ಕ್ರೀಡಾಪಟುವಿನ ದೇಹ ರಚನೆ ಬಗ್ಗೆ ಮಾತನಾಡಿ ಅನಗತ್ಯ ಗೊಂದಲ ಸೃಷ್ಟಿಸುವದನ್ನು ಒಪ್ಪಲು ಸಾಧ್ಯವಿಲ್ಲ..” ಎಂದು ಮನ್ಸುಖ್‌ ಮಾಂಡವಿಯಾ ಟ್ವೀಟ್‌ ಮಾಡಿದ್ದಾರೆ.

ಮುಂದುವರೆದು, “ಕಾಂಗ್ರೆಸ್‌ ಮತ್ತು ಟಿಎಂಸಿ ನಾಯಕರು ರೋಹಿತ್‌ ಶರ್ಮಾ ಅವರ ‘ಬಾಡಿ ಶೇಮಿಂಗ್‌’ ಮಾಡಿದ್ದಾರೆ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿ. ತಂಡದಲ್ಲಿ ಕ್ರೀಡಾಪಟುವಿನ ಸ್ಥಾನವನ್ನು ಪ್ರಶ್ನಿಸುವ ಅಧಿಕಾರ ಈ ನಾಯಕರಿಗೆ ಕೊಟ್ಟವರು ಯಾರು? ಕ್ರಿಕೆಟ್‌ ಅಭಿಮಾನಿಯಾಗಿ ಇವರು ತಮ್ಮ ಅಭಿಪ್ರಾಯ ದಾಖಲಿಸಲು ಸಂಪೂರ್ಣ ಅರ್ಹರು ಹೌದಾದರೂ, ಕ್ರೀಡಾಪಟುವಿನ ದೈಹಿಕ ಸ್ಥಿತಿಗತಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಬಾರದು..” ಎಂದು ಮನ್ಸುಖ್‌ ಮಾಂಡವಿಯಾ ತೀವ್ರವಾಗಿ ಹರಿಹಾಯ್ದಿದ್ದಾರೆ.

“ಇಂತಹ ಅನಗತ್ಯ ಕಾಮೆಂಟ್‌ಗಳು ದೇಶವನ್ನು ಪ್ರತಿನಿಧಿಸಲು ನಮ್ಮ ಕ್ರೀಡಾಪಟುಗಳು ಮಾಡುವ ಕಠಿಣ ಪರಿಶ್ರಮ ಮತ್ತು ತ್ಯಾಗವನ್ನು ದುರ್ಬಲಗೊಳಿಸುತ್ತವೆ. ದೇಶಕ್ಕಾಗಿ ಆಡುವ ಅವರ ಮನೋಬಲವನ್ನು ಕುಗ್ಗಿಸುತ್ತವೆ. ಇನ್ನು ಮುಂದಾದರೂ ರಾಜಕಾರಣಿಗಳು ಕ್ರೀಡಾಪಟುಗಳ ಬಗ್ಗೆ ಇಂತಹ ಅನಗತ್ಯ ಹೇಳಿಕೆಗಳನ್ನು ನೀಡವುದನ್ನು ನಿಲ್ಲಿಸಬೇಕು..” ಎಂದು ಕೇಂದ್ರ ಕ್ರೀಡಾ ಸಚಿವರು ಇದೇ ವೇಳೆ ಒತ್ತಾಯಿಸಿದ್ದಾರೆ.

ಏನಾಗಿತ್ತು?

ಐಸಿಸಿ ಚಾಂಪಿಯನ್ಸ್‌ ಟ್ರೋಫಿ 2025ರ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ, ರೋಹಿತ್‌ ಶರ್ಮಾ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ರೋಹಿತ್‌ ಶರ್ಮಾ ಅವರ ನಿಧಾನಗತಿಯ ಬ್ಯಾಟಿಂಗ್‌ನ್ನು ಟೀಕಿಸಿದ್ದ ಕಾಂಗ್ರೆಸ್‌ ವಕ್ತಾರೆ ಶಮಾ ಮೊಹಮ್ಮದ್‌, “ರೋಹಿತ್‌ ಶರ್ಮಾ ದೇಹತೂಕ ಅವರನ್ನು ಭಾರತದ ರಾಷ್ಟ್ರೀಯ ಕ್ರಿಕೆಟ್‌ ತಂಡದ ನಾಯಕನನ್ನಾಗಿ ವಿಫಲಗೊಳಿಸಿದೆ..” ಎಂದು ಹೇಳಿದ್ದರು.

ಹೌದೌದು ರೋಹಿತ್‌ ಶರ್ಮಾ ತಂಡದಲ್ಲಿರಲು ಅನ್‌ಫಿಟ್;‌ ‘ಶಮಾ ಹೈ ಸುಹಾನಾ’ ಎಂದ ಟಿಎಂಸಿ ನಾಯಕ!
ತಮ್ಮ ಹೇಳಿಕೆಗೆ ಎಲ್ಲೆಡೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೇ, ಶಮಾ ಮೊಹಮ್ಮದ್‌ ಅವರು ಕಾಂಗ್ರೆಸ್‌ ಪಕ್ಷದ ಸೂಚನೆ ಮೇರೆಗೆ ತಮ್ಮ ಟ್ವೀಟ್‌ನ್ನು ಡಿಲೀಟ್‌ ಮಾಡಿದ್ದರು. ಅಲ್ಲದೇ ಕಾಂಗ್ರೆಸ್‌ ಕೂಡ “ಇದು ಶಮಾ ಮೊಹಮ್ಮದ್‌ ಅವರ ವೈಯಕ್ತಿಕ ಅಭಿಪ್ರಾಯವೇ ಹೊರತು, ಪಕ್ಷಕ್ಕೂ ಅವರ ಹೇಳಿಕೆಗೂ ಸಂಬಂಧವಿಲ್ಲ..” ಎಂದು ಸ್ಪಷ್ಟಪಡಿಸಿತ್ತು.

ಈ ಮಧ್ಯೆ ಟಿಎಂಸಿ ಸಂಸದ ಸೌಗತ್‌ ರಾಯ್‌ ಅವರು ಶಮಾ ಮೊಹಮ್ಮದ್‌ ಹೇಳಿಕೆಯನ್ನು ಬೆಂಬಲಿಸಿದ್ದಲ್ಲದೇ, “ರೋಹಿತ್‌ ಶರ್ಮಾ ಭಾರತದ ರಾಷ್ಟ್ರೀಯ ಕ್ರಿಕೆಟ್‌ ತಂಡದ ನಾಯಕನಾಗಿ ಮುಂದುವರೆಯಲು ಯೋಗ್ಯರಲ್ಲ..” ಎಂದು ಟೀಕಿಸಿದ್ದರು.

ಈ ಹೇಳಿಕೆಗಳಿಗೆ ತುಂಬ ಖಾರವಾಗಿ ಪ್ರತಿಕ್ರಿಯಿಸಿದ್ದ ಬಿಸಿಸಿಐ, “ಇಂತಹ ತಲೆಬುಡವಿಲ್ಲದೇ ಹೇಳಿಕೆಗಳನ್ನು ಯಾರೂ ಗಂಭೀರವಾಗಿ ಪರಿಗಣಿಸಬೇಕುಲ್ಲ..” ಎಂದು ತಿರುಗೇಟು ನೀಡಿತ್ತು.



Read more

[wpas_products keywords=”deal of the day sale today offer all”]