ದೇವದತ್ತ್ ಕಾಮತ್ ಅವರು ಹೈಕೋರ್ಟ್ನಲ್ಲಿ ಮುಸ್ಲಿಂ ಯುವತಿಯರ ಪರ ವಕಾಲತ್ತು ವಹಿಸಿದ್ದಕ್ಕೆ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಿದ್ದರು. ಅವರನ್ನು ಹಿಂದೂ ವಿರೋಧಿ ಎಂದೆಲ್ಲ ಬಿಂಬಿಸುತ್ತಿದ್ದರು. ಇದನ್ನು ಕಂಡ ಬೇಸರಗೊಂಡ ಕಾರವಾರದ ರಾಮಕೃಷ್ಣಾಶ್ರಮದ ಭವೇಶಾನಂದ ಸ್ವಾಮೀಜಿಯವರು ಕಾಮತ್ ಅವರನ್ನು ಬೆಂಬಲಿಸಿ, ಅವರಿಗಾಗಿ ದುಃಖ ವ್ಯಕ್ತಪಡಿಸಿ ಇತ್ತೀಚಿಗೆ ಹೇಳಿಕೆ ಬಿಡುಗಡೆ ಮಾಡಿದ್ದರು.
‘ಸುಪ್ರೀಂಕೋರ್ಟ್ನ ಹಿರಿಯ ವಕೀಲರಾಗಿರುವ ದೇವದತ್ತ್ ಕಾಮತ್ ಅವರು ನ್ಯಾಯಾಲಯದಲ್ಲಿ ವಕೀಲರಾಗಿ ಒಂದು ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ ಎಂಬ ಕಾರಣಕ್ಕಾಗಿ ಅವರನ್ನು ಈ ವಿವಾದಕ್ಕೆ ಎಳೆಯುತ್ತಿರುವುದನ್ನು ಕಂಡು ನನಗೆ ನೋವಾಗಿದೆ. ಕೆಲವು ಶಕ್ತಿಗಳು ಅವರನ್ನು ಹಿಂದೂ ಧರ್ಮದ ವಿರುದ್ಧದ ಚಟುವಟಿಕೆಗೆ ಬೆಂಬಲ ನೀಡುತ್ತಿದ್ದಾರೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿವೆ.
Hijab Row: ಮುಸ್ಲಿಂ ಯುವತಿಯ ಪರ ಕಾರವಾರದ ವಕೀಲ ದೇವದತ್ತ್ ಕಾಮತ್ ವಕಾಲತ್ತು!
ಈ ಗ್ರಹಿಕೆ ಅನಗತ್ಯ ಹಾಗೂ ಆಧಾರರಹಿತ. ಕಕ್ಷಿದಾರರೊಬ್ಬರನ್ನು ಕೋರ್ಟ್ನಲ್ಲಿ ಪ್ರತಿನಿಧಿಸುವ ನ್ಯಾಯವಾದಿಯೊಬ್ಬರು ಅವರ ಕರ್ತವ್ಯ ಮತ್ತು ತಮ್ಮ ಕಕ್ಷಿದಾರರಿಗೆ ನ್ಯಾಯ ಒದಗಿಸುವುದನ್ನು ಮಾಡಲೇಬೇಕು. ಇದು ಒಂದು ವೃತ್ತಿಪರ ಕರ್ತವ್ಯ ಮತ್ತು ಜವಾಬ್ದಾರಿ. ಇದನ್ನು ಹಿಂದೂ ಧರ್ಮದ ವಿರುದ್ಧ ಎಂದು ಹಣೆಪಟ್ಟಿ ಕಟ್ಟಲು ಸಾಧ್ಯವಿಲ್ಲ’ ಎಂದಿದ್ದರು.
‘ದೇವದತ್ತ್ ಕಾಮತ್ ಅವರು ಶ್ರೀರಾಮಕೃಷ್ಣ ವಿವೇಕಾನಂದ ತತ್ವಗಳ ಬದ್ಧ ಅನುಯಾಯಿಯಾಗಿದ್ದಾರೆ. ಅವರು ಬಾಲ್ಯದಿಂದಲೂ ಶ್ರೀರಾಮಕೃಷ್ಣ ಆಶ್ರಮದ ಭಕ್ತರಾಗಿದ್ದಾರೆ. ಅವರು ಆಧ್ಯಾತ್ಮಿಕ ಒಲವುಳ್ಳ ವ್ಯಕ್ತಿ ಮತ್ತು ಆಧ್ಯಾತ್ಮಿಕ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಉತ್ತರ ಕನ್ನಡದ ಒಳಿತಿಗೆ ಅವರು ನೀಡಿದ ಕೊಡುಗೆಗಳು ಹಾಗೂ ಬೆಂಬಲದ ಕಾರಣದಿಂದ ಉತ್ತರ ಕನ್ನಡ ಜನರಿಂದ ಅವರು ಅಪಾರ ಗೌರವಕ್ಕೆ ಪಾತ್ರರಾಗಿದ್ದಾರೆ’ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದ್ದರು.
ಭವೇಶಾನಂದರಿಗೂ ಮಠಕ್ಕೂ ಸಂಬಂಧವಿಲ್ಲ ಎಂದ ರಾಮಕೃಷ್ಣಾಶ್ರಮ
ಭವೇಶಾನಂದರ ಈ ಹೇಳಿಕೆ ಸುದ್ದಿಯಾದ ನಂತರ ಹೇಳಿಕೆ ಬಿಡುಗಡೆ ಮಾಡಿರುವ ಬೆಂಗಳೂರಿನ ಬಸವನಗುಡಿಯ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ನಿತ್ಯಸ್ಥಾನಂದಜೀ ಮಹಾರಾಜ್, ‘ಹಿಜಾಬ್ ವಿವಾದದ ಕುರಿತಂತೆ ಹೇಳಿಕೆ ನೀಡಿರುವ ಕಾರವಾರದ ಶ್ರೀರಾಮಕೃಷ್ಣ ಆಶ್ರಮದ ಸ್ವಾಮಿ ಭವೇಶಾನಂದರಿಗೂ ಕೋಲ್ಕತ್ತದಲ್ಲಿರುವ ವಿವೇಕಾನಂದರು ಸ್ಥಾಪಿಸಿದ ಶ್ರೀರಾಮಕೃಷ್ಣ ಮಠ ಮತ್ತು ಮಿಷನ್ಗೂ ಯಾವುದೇ ಸಂಬಂಧವಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.
‘ಕಾರವಾರದ ರಾಮಕೃಷ್ಣ ಆಶ್ರಮ ಒಂದು ಸ್ವತಂತ್ರ ಸಂಸ್ಥೆಯಾಗಿದ್ದು, ಸ್ವಾಮಿ ಭವೇಶಾನಂದರು ರಾಮಕೃಷ್ಣ ಮಠ ಮತ್ತು ಮಿಷನ್ಗೆ ಸೇರಿದವರಲ್ಲ. ಹೀಗಾಗಿ ಅವರ ಹೇಳಿಕೆಗಳನ್ನು ರಾಮಕೃಷ್ಣ ಮಠ ಮತ್ತು ಮಿಷನ್ನ ಹೇಳಿಕೆ ಅಥವಾ ನಿಲುವು ಎಂದು ಭಾವಿಸಬಾರದು’ ಎಂದು ತಿಳಿಸಿದ್ದಾರೆ.
ಹೌದು, ನಮ್ಮದು ಖಾಸಗಿ ಆಶ್ರಮ
‘ಹೌದು, ನಮ್ಮದು ಖಾಸಗಿ ಆಶ್ರಮ. 1952ರಲ್ಲಿ ಪ್ರಭಾನಂದ ಸ್ವಾಮೀಜಿಯವರಿಂದ ಪ್ರಾರಂಭವಾದ ಈ ಆಶ್ರಮ ಈವರೆಗೂ ಕಾರ್ಯನಿರ್ವಹಿಸುತ್ತಿದೆ. ರಾಮಕೃಷ್ಣ ಪರಮಹಂಸರ, ಸ್ವಾಮಿ ವಿವೇಕಾನಂದರ ಬೋಧನೆಗಳು ಇಲ್ಲಿ ನಿರಂತರವಾಗಿ ನಡೆಯುತ್ತದೆ’ ಎಂದು ಬಸವನಗುಡಿಯ ರಾಮಕೃಷ್ಣ ಮಠದ ಹೇಳಿಕೆಗೆ ಕಾರವಾರದ ರಾಮಕೃಷ್ಣಾಶ್ರಮದ ಭವೇಶಾನಂದ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಹೇಳಿಕೆಯ ಬಳಿಕ ತಮ್ಮನ್ನೂ ಹಿಂದೂ ವಿರೋಧಿಯಂತೆ ಕಾಣಲಾಗುತ್ತಿದೆ ಎಂಬ ಪ್ರಶ್ನೆಗೆ ‘ವಿಕ ವೆಬ್’ಗೆ ಪ್ರತಿಕ್ರಿಯಿಸಿದ ಅವರು, ‘ದೇವದತ್ತ್ ಕಾಮತ್ ಓರ್ವ ವಕೀಲರು. ಅವರು ತಮ್ಮ ವೃತ್ತಿಯಾದ ವಕಾಲತ್ತು ಮಾಡುತ್ತಿದ್ದಾರೆ. ಕೋರ್ಟ್ ಪ್ರಕರಣದಲ್ಲಿ ತೀರ್ಪು ನೀಡುತ್ತದೆ. ಅದನ್ನ ಬಿಟ್ಟು ಒಂದೇ ಸಮನೆ ಆತನನ್ನು ಹಿಂದೂ ವಿರೋಧಿ ಎಂದರೆ ಹೇಗೆ? ತೀರ್ಪು ಬಂದ ಬಳಿಕ ಏನಾದರೂ ಹೇಳಿ. ಆದರೆ ವಾದವನ್ನೂ ಮಾಡಲು ಬಿಡದಂತೆ ಅವರನ್ನು ಹಿಂದೂ ವಿರೋಧಿ ಎಂದು ಬಿಂಬಿಸುವುದು ಸರಿಯಲ್ಲ ಎಂದು ದುಃಖ ವ್ಯಕ್ತಪಡಿಸಿದ್ದೇನೆ ಅಷ್ಟೇ’ ಎಂದರು.
‘ಕಾಮತ್ರನ್ನು ಹಿಂದೂ ವಿರೋಧಿ ಅಥವಾ ಇನ್ನಿತರ ಹೇಳಿಕೆಗಳಿಂದ ನಿಂದಿಸುವುದು ಸರಿಯಲ್ಲ ಎಂದಿದ್ದೇನೆ. ಕಾಮತ್ ಯಾವತ್ತೂ ಹಿಂದೂ ಧರ್ಮ ವಿರೋಧಿಯಲ್ಲ. ಅವರನ್ನು ಸಣ್ಣದಾಗಿನಿಂದ ನಾನು ನೋಡಿದ್ದೇನೆ. ಆ ಹುಡುಗ ಅಂಥವನಲ್ಲ. ಒಂದು ವೇಳೆ ನಾನು ಆತನಿಗಾಗಿ ದುಃಖ ವ್ಯಕ್ತಪಡಿಸಿದ್ದು ತಪ್ಪು ಎಂದರೆ, ಬೇಕಾದರೆ ನನ್ನ ಹೇಳಿಕೆಯನ್ನು ವಾಪಸ್ಸು ಪಡೆಯುವೆ. ನಾನೂ ಹಿಂದೂ ವಿರೋಧಿಯಲ್ಲ, ದೇವದತ್ತ್ ಕಾಮತ್ ಕೂಡ ಹಿಂದೂ ವಿರೋಧಿಯಲ್ಲ.
ಆತ, ಆತನ ಕುಟುಂಬ ಕಳೆದ ಐದಾರು ದಶಕಗಳಿಂದ ಸಾಕಷ್ಟು ಬಡವರ ಪರ, ದೀನದಲಿತರ ಪರ ಸಾಮಾಜಿಕ, ಧಾರ್ಮಿಕ ಕಾರ್ಯಗಳನ್ನು ಮಾಡಿದೆ. ಬಿಲ್ಡಿಂಗ್, ಬಂಗಲೆಗಳನ್ನು ಬೇಕಾದರೂ ಹಾಳು ಮಾಡಿ, ಆದರೆ ಹೃದಯಕ್ಕೆ ತೊಂದರೆ ಕೊಡಬೇಡಿ ಎಂದು’ ಸ್ವಾಮೀಜಿ ಹೇಳಿದರು.
ಇನ್ನು ಹಿಜಾಬ್ ಕುರಿತು ಮಾತನಾಡಿದ ಅವರು, ‘ಯಾರು ಏನೇ ಹೇಳಿದರೂ ಅವರು ಹಿಜಾಬ್ ಹಾಕಿಯೇ ಬರುತ್ತಾರೆ. ಅವರು ಬುರ್ಖಾ ತೆಗೆಯುತ್ತಾರೆ, ಆದರೆ ಹಿಜಾಬ್ ತೆಗೆಯುವುದು ಬಹಳ ಅಪರೂಪ. ಅದರೊಂದಿಗೆ ಅವರ ಭಾವನಾತ್ಮಕ ಸಂಬಂಧವೂ ಇದೆ. ಯಾರನ್ನೂ ಪ್ರತ್ಯೇಕಿಸುವ ಕಾರ್ಯ ಮಾಡಬೇಡಿ.
ಹಾಗಂತ ಶೇ 1ರಷ್ಟು ಯುವತಿಯರು ಹಿಜಾಬ್ ಧರಿಸದೇ ಇರುವವರೂ ಇದ್ದಾರೆ, ಇಲ್ಲವೆಂದಲ್ಲ. ನಮ್ಮ ಆಶ್ರಮದಲ್ಲಿ ಹಿಜಾಬ್ ತೆಗೆದು ಯೋಗಾಸನ ಮಾಡಿದವರಿದ್ದಾರೆ. ಖುರ್- ಆನ್ ಓದಿ ಹೋಗಿದ್ದಾರೆ. ಅದು ಅವರ ಹಕ್ಕು. ಏನೇ ಆದರೂ ಹಿಂದೂ- ಮುಸ್ಲಿಂ- ಕ್ರಿಶ್ಚಿಯನ್ ಯಾವುದೇ ಧರ್ಮದ ಯುವತಿಯರಿದ್ದರೂ ಆಕೆ ನನ್ನ ಸಹೋದರಿ; ಮಹಿಳೆಯರೆಂದರೆ ತಾಯಿಯರ ಸಮಾನ ಎಂಬ ಮನಸ್ಥಿತಿಯಲ್ಲಿ ಎಲ್ಲರೂ ನೋಡಬೇಕಿದೆ’ ಎಂದರು.
‘ಹಿಜಾಬ್ನಿದಾಗಿ ಸಾಮಾಜಿಕವಾಗಿ, ದೈಹಿಕವಾಗಿ ಧನಾತ್ಮಕ, ಋಣಾತ್ಮಕ ಪರಿಣಾಮ ಎರಡೂ ಇದೆ. ಖುಷಿ ಇದ್ದರೆ ಹಾಕು, ಇಲ್ಲದಿದ್ದರೆ ಬಿಡು ಎಂಬ ಮನೋಭಾವನೆ ಎಲ್ಲರಲ್ಲೂ ಬರಬೇಕಿದೆ. ವಿದ್ಯಾಮಂದಿರದಲ್ಲಿ ಮನಸ್ಸಿನ ಏಕಾಗ್ರತೆ ಅಭ್ಯಾಸದ ಕಡೆಗೆ ಇರಬೇಕು, ಅದು ಶಿಕ್ಷಣ. ವಿದ್ಯಾಮಂದಿರಗಳ ಹೊರಭಾಗದಲ್ಲಿ ಏನು ಬೇಕಾದರೂ ಮಾಡಿ. ವಿದ್ಯಾಮಂದಿರದ ಒಳಗೆ ಆತಂಕ ತರುವ ಕೆಲಸ ಮಾಡಬಾರದು, ಅದು ಯಾರೇ ಇರಲಿ’ ಎಂದರು.
Read more
[wpas_products keywords=”deal of the day sale today offer all”]