ಶಿವಸೇನೆ ವರಿಷ್ಠರೂ ಆಗಿರುವ ಠಾಕ್ರೆ ಅವರು ಬುಧವಾರ ಕೆಸಿಆರ್ ಅವರಿಗೆ ಕರೆ ಮಾಡಿ ಪರ್ಯಾಯ ರಂಗ ರಚಿಸುವ ಪ್ರಯತ್ನಕ್ಕೆ ಬೆಂಬಲ ಸೂಚಿಸಿದರಲ್ಲದೇ, ಉದ್ದೇಶಿತ ಮೈತ್ರಿ ಕೂಟದ ಸ್ವರೂಪ ಮತ್ತು ಬಿಜೆಪಿ ವಿರುದ್ಧದ ಹೋರಾಟದ ಕುರಿತು ಚರ್ಚಿಸಲು ಫೆಬ್ರುವರಿ 20 ರಂದು ಮುಂಬಯಿಗೆ ಆಗಮಿಸುವಂತೆ ಆಹ್ವಾನ ನೀಡಿದರು. ಕೆಸಿಆರ್ ಈ ಆಹ್ವಾನವನ್ನು ಅಂಗೀಕರಿಸಿದ್ದಾರೆ. ಉಭಯ ಮುಖ್ಯಮಂತ್ರಿಗಳ ಕಚೇರಿಯಿಂದ ಈ ಸಂಬಂಧ ಪ್ರತ್ಯೇಕವಾಗಿ ಹೇಳಿಕೆ ಬಿಡುಗಡೆ ಮಾಡಲಾಗಿದೆ.
ಕೆಸಿಆರ್ ಅವರು ಈಗಾಗಲೇ ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್, ಕೇರಳ ಮುಖ್ಯಮಂತ್ರಿ ಕೆ. ಪಿಣರಾಯಿ ವಿಜಯನ್ (ಸಿಪಿಐ), ಬಿಹಾರದಲ್ಲಿ ಆರ್ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಕೇಂದ್ರದಲ್ಲಿನ ಬಿಜೆಪಿ ಸರಕಾರದ ವಿರುದ್ಧ ಬಿಜೆಪಿಯೇತರ ಮುಖ್ಯಮಂತ್ರಿಗಳನ್ನು ಒಗ್ಗೂಡಿಸುವ ಪ್ರಯತ್ನದಲ್ಲಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (ಟಿಎಂಸಿ) ಸಹ ಕೆಸಿಆರ್ ಅವರ ಪ್ರಯತ್ನಕ್ಕೆ ಬೆಂಬಲ ಸೂಚಿಸಿದ್ದಾರೆ. ಅವರೂ ಸಹ ಕೆಸಿಆರ್ ಜತೆ ದೂರವಾಣಿಯಲ್ಲಿ ಮಾತನಾಡಿದ್ದು, ‘ರಾಜ್ಯಪಾಲರ ಅಧಿಕಾರ ದುರ್ಬಳಕೆ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸುವುದು ಅಗತ್ಯವಾಗಿದೆ’ ಎಂದಿದ್ದಾರೆ.
ಗೌಡರ ಬೆಂಬಲ: ಜೆಡಿಎಸ್ ವರಿಷ್ಠರಾಗಿರುವ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಸಹ ಕೆಸಿಆರ್ ಅವರಿಗೆ ಕರೆ ಮಾಡಿ ಪರ್ಯಾಯ ರಂಗ ರಚನೆ ಪ್ರಸ್ತಾವಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ‘ಮತೀಯ ಶಕ್ತಿಗಳ ವಿರುದ್ಧ ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಿದೆ’ ಎಂದು ದೇವೇಗೌಡರು ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ಗುರಿ
ಕೆ. ಚಂದ್ರಶೇಖರ ರಾವ್ ಅವರು 2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಹಾಗೂ ಬಿಜೆಪಿಯೇತರ ರಂಗ ರಚಿಸುವ ಪ್ರಯತ್ನದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ವಾಸ್ತವ ಬೇರೆಯೇ ಇದೆ. ಮುಂದಿನ ವರ್ಷ ಅಂದರೆ 2023ರಲ್ಲಿ ತೆಲಂಗಾಣ ವಿಧಾನಸಭೆಗೆ ಚುನಾವಣೆಗೆ ನಡೆಯಲಿದೆ. ಹೀಗಾಗಿ ಬಿಜೆಪಿಯನ್ನು ಈಗಿನಿಂದಲೇ ಕಟ್ಟಿ ಹಾಕುವ ಪ್ರಯತ್ನವನ್ನು ಕೆಸಿಆರ್ ಆರಂಭಿಸಿದ್ದಾರೆ.
ತೆಲಂಗಾಣ ರಾಜ್ಯದಲ್ಲಿ ಬಿಜೆಪಿ ನಿಧಾನವಾಗಿ ಬೇರೂರುತ್ತಿರುವುದು ಹಾಗೂ ಬಿಜೆಪಿ ಈಗಾಗಲೇ ಅದಕ್ಕೆ ಸಿದ್ಧತೆ ಆರಂಭಿಸುವುದನ್ನು ಕೆಸಿಆರ್ ಗ್ರಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಎರಡು ವಾರ ಹಿಂದೆ ತೆಲಂಗಾಣಕ್ಕೆ ಭೇಟಿ ನೀಡಿ ರಾಮಾನುಜಾಚಾರ್ಯರ ಬೃಹತ್ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಸಂಸತ್ನಲ್ಲಿ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರ ನೀಡುವಾಗಲೂ ತೆಲಂಗಾಣ ರಾಜ್ಯ ರಚನೆ ವಿಚಾರ ಪ್ರಸ್ತಾಪಿಸಿ ಕಾಂಗ್ರೆಸ್ಗೆ ಟಾಂಗ್ ನೀಡಿದ್ದರು. ಇದರ ಹಿಂದಿನ ಉದ್ದೇಶ ಚಂದ್ರಶೇಖರ ರಾವ್ ಅವರಿಗೆ ಚೆನ್ನಾಗಿ ಅರ್ಥವಾಗಿದೆ. ಹೀಗಾಗಿಯೇ ರಾಜ್ಯದಲ್ಲಿ ಬಿಜೆಪಿ ಬೆಳವಣಿಗೆಯನ್ನು ತಡೆಯುವುದೇ ಅವರ ಪ್ರಯತ್ನದ ಮುಖ್ಯ ಉದ್ದೇಶವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
Read more
[wpas_products keywords=”deal of the day sale today offer all”]