Karnataka news paper

ಬಿಸಿಯೂಟಕ್ಕೆ ಬಳಸುವ ಸಾರವರ್ಧಿತ ಅಕ್ಕಿ ಪ್ಲಾಸ್ಟಿಕ್‌ ಅಕ್ಕಿ ಅಲ್ಲ..! ಶಿಕ್ಷಕರು ಸ್ಪಷ್ಟನೆ ಕೊಟ್ಟರೂ ಮುಗಿಯದ ಗೊಂದಲ..!


ಕಣಿತಹಳ್ಳಿ ಎನ್‌. ಚಂದ್ರೇಗೌಡ
ಚಿಕ್ಕಬಳ್ಳಾಪುರ:
ಶಾಲಾ ವಿದ್ಯಾರ್ಥಿಗಳಲ್ಲಿ ಅಪೌಷ್ಟಿಕತೆ ನೀಗಿಸಲು ಕೇಂದ್ರ ಸರಕಾರ ಬಿಸಿಯೂಟದಲ್ಲಿ ಸಾರವರ್ಧಿತ ಅಕ್ಕಿಯನ್ನು ಸೇರಿಸಿದೆ. ಇದು ಕಳೆದ 5 – 6 ತಿಂಗಳಿಂದ ನಡೆಯುತ್ತಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಸಾಕಷ್ಟು ಗೊಂದಲವಿದೆ.

ರಾಜ್ಯಾದಂತ ಸರಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗೆ ಬಿಸಿಯೂಟ ಉಣಬಡಿಸಲಾಗುತ್ತಿದೆ. 1 ರಿಂದ 8 ನೇ ತರಗತಿ ಮಕ್ಕಳ ಬಿಸಿಯೂಟಕ್ಕೆ ಬೇಕಾದ ಅಕ್ಕಿಯನ್ನು ಕೇಂದ್ರ ಸರಕಾರ ನೀಡುತ್ತಿದೆ. ಅದರಲ್ಲಿ ಪ್ರತಿ ಕ್ವಿಂಟಾಲ್‌ಗೆ 10 ಕೆ. ಜಿ. ಯಂತೆ ಈ ಸಾರವರ್ಧಿತ ಅಕ್ಕಿಯನ್ನು ಬೆರೆಸಿ ಕೊಡಲಾಗುತ್ತಿದೆ. ಈ ಗೊಂದಲಕ್ಕೆ ಈಗಾಗಲೇ ಸಾಕಷ್ಟು ಸ್ಪಷ್ಟೀಕರಣಗಳನ್ನು ನೀಡಲಾಗಿದ್ದರೂ ಗೊಂದಲ ಮುಗಿದಿಲ್ಲ.

ಚಿತ್ರದುರ್ಗದ ಅಂಗನವಾಡಿ ಕೇಂದ್ರದಲ್ಲಿ ಪ್ಲಾಸ್ಟಿಕ್‌ ಅಕ್ಕಿ..? ಆರೋಪ ನಿರಾಕರಿಸಿದ ಅಧಿಕಾರಿಗಳು..
ಇದು ಅಕ್ಕಿಯಲ್ಲ: ಅಂದ ಹಾಗೆ ಇದು ನಿಜವಾದ ಅಕ್ಕಿ ಅಲ್ಲ. ಅಕ್ಕಿ ರೂಪದಲ್ಲಿ ವಿನ್ಯಾಸಗೊಳಿಸಲಾದ ಸಾರವರ್ಧಿತ ಕಾಳು. ಕಬ್ಬಿಣಾಂಶ, ಸತು, ಪೋಲಿಕ್‌ ಆ್ಯಸಿಡ್, ವಿಟಮಿನ್‌ ಎ, ವಿಟಮಿನ್‌ ಬಿ 12 ಮೊದಲಾದ ಅಂಶಗಳನ್ನು ಬೆರೆಸಿ ಅದಕ್ಕೆ ಅಕ್ಕಿಯ ಕಾಳಿನ ರೂಪ ಕೊಡಲಾಗಿದೆ. ನೋಡಲು ಸಾಮಾನ್ಯ ಅಕ್ಕಿಗಿಂತ ಕೊಂಚ ಉದ್ದ ಹಾಗೂ ದಪ್ಪವಿದ್ದಂತೆ ಕಾಣುತ್ತದೆ. ದೇಶದ ನಾನಾ ಭಾಗಗಳಲ್ಲಿ ಪರೀಕ್ಷೆಗೆ ಒಳಪಡಿಸಿ, ಮಕ್ಕಳ ಸೇವನೆಗೆ ಯೋಗ್ಯ ಎಂದು ಖಾತ್ರಿಯಾದ ಬಳಿಕವಷ್ಟೇ ಇದನ್ನು ಶಾಲೆಗಳಲ್ಲಿ ಬಿಸಿಯೂಟದ ಮೂಲಕ ಹಂಚಿಕೆ ಮಾಡಲಾಗುತ್ತಿದೆ.

ಸಾರವರ್ಧಿತ ಅಕ್ಕಿ ಎಂದರೇನು?: ದೇಶದಲ್ಲಿ ಲಕ್ಷಾಂತರ ಶಾಲಾ ಮಕ್ಕಳು ರಕ್ತಹೀನತೆ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇಂತಹವರಿಗೆ ಪೌಷ್ಟಿಕಾಂಶದ ಮಾತ್ರೆಗಳನ್ನು ಕೊಟ್ಟರೂ ನುಂಗುವುದಿಲ್ಲ. ಹೀಗಾಗಿ ಮಾಮೂಲಿ ಅಕ್ಕಿಯ ಜತೆಯಲ್ಲೇ ಈ ಸಾರವರ್ಧಿತ ಕಾಳನ್ನು ಸೇರಿಸಿ ನೀಡಲಾಗುತ್ತಿದೆ. ಇದರಿಂದ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಾಗುವುದರ ಜತೆ ಬೆಳವಣಿಗೆಯಲ್ಲೂ ಸಾಕಷ್ಟು ಅನುಕೂಲವಾಗಲಿದೆ. ಇದು ಈಗಾಗಲೇ ಸಾಬೀತು ಕೂಡಾ ಆಗಿದೆ.

ಬಿಸಿಯೂಟಕ್ಕೆ ಸಾರವರ್ಧಿತ ಅಕ್ಕಿ; ಅಕ್ಟೋಬರ್‌ 2ನೇ ವಾರದಿಂದ ಜಾರಿ!
ತರಬೇತಿ ನೀಡಲು ನಿರ್ಧಾರ: ಶಾಲೆಗಳಲ್ಲಿ ಮೊದಲು ಈ ಸಾರವರ್ಧಿತ ಅಕ್ಕಿ ಪರಿಚಯವಾದಾಗ ಅಡುಗೆ ಸಿಬ್ಬಂದಿ ಗಾಬರಿ ಬಿದ್ದಿದ್ದರು. ಪ್ಲಾಸ್ಟಿಕ್‌ ಅಕ್ಕಿ ಬೆರಕೆ ಆಗಿದೆ ಎನ್ನುವ ಗೊಂದಲ ಮೂಡಿತ್ತು. ಪ್ರತಿಷ್ಠಿತ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಿ ಇದು ಸಾರವರ್ಧಿತ ಅಕ್ಕಿ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲಾಗಿತ್ತು. ಈ ಬಗ್ಗೆ ಈಗಾಗಲೇ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರಿಗೆ ತರಬೇತಿ ನೀಡಿ ವಿವರಿಸಲಾಗಿದೆ. ಶೀಘ್ರವೇ ಅಡುಗೆ ತಯಾರಕ ಸಿಬ್ಬಂದಿಗೂ ತರಬೇತಿ ನೀಡಲು ಎಲ್ಲ ತಯಾರಿ ನಡೆದಿದೆ.

ತಲೆ ನೋವು: ಇನ್ನೊಂದೆಡೆ ಜಿಲ್ಲೆಯ ಹಲವೆಡೆ ಈ ಅಕ್ಕಿ ಬಗ್ಗೆ ನಾನಾ ದೂರುಗಳು ಬರುತ್ತಿದ್ದು ಅವರಿಗೆ ವಿವರಿಸಿ ಹೇಳಿದರೂ ಕೆಲವರಿಗೆ ಕೇಳುವ ಮನಸ್ಥಿತಿಯಿಲ್ಲ. ಹೀಗಾಗಿ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರಿಗೆ ತಲೆ ನೋವಾಗಿ ಪರಿಣಮಿಸಿದೆ. ಸ್ಥಳೀಯ ಮಟ್ಟದಲ್ಲಿ ಎದುರಾಗುವ ಗೊಂದಲಗಳಿಗೆ ಪರಿಹಾರ ನೀಡುವ ಸಲುವಾಗಿ ಈಗಾಗಲೇ ಮುಖ್ಯ ಶಿಕ್ಷಕರಿಗೆ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಯಾರಾದರೂ ಈ ಬಗ್ಗೆ ಕೇಳಿದರೆ ವಿವರಿಸುವಂತೆ ಈಗಾಗಲೇ ತಿಳಿಸಲಾಗಿದೆ.

ಕೇವಲ ಅಕ್ಕಿ ಮಾತ್ರವಲ್ಲ, ಎಣ್ಣೆಯಲ್ಲೂ ಸಹ ಮಕ್ಕಳ ಬೆಳವಣಿಗೆ ಮತ್ತು ಅಪೌಷ್ಟಿಕತೆ ನಿವಾರಣೆಗಾಗಿಯೇ ವಿಶೇಷವಾಗಿ ವಿಟಮಿನ್‌ಗಳನ್ನು ಸೇರಿಸಲಾಗುತ್ತಿದೆ. ಇದರಿಂದ ಊಟದ ರುಚಿ ಹೆಚ್ಚುವುದರ ಜತೆಗೆ ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ನೆರವಾಗಲಿದೆ. ಇದು ಪ್ರಾಯೋಗಿಕವಾಗಿ ಯಶಸ್ವಿಯಾದ ನಂತರವೇ ಬಳಸಲಾಗುತ್ತಿದೆ. ಹೀಗಾಗಿ ಯಾರೂ ಅನಗತ್ಯ ಗೊಂದಲಕ್ಕೆ ಒಳಗಾಗುವುದು ಬೇಡ. ಮಕ್ಕಳ ಆರೋಗ್ಯಕರ ಬೆಳವಣಿಗೆಗಾಗಿಯೇ ಈ ಎಲ್ಲ ಕ್ರಮ ಕೈಗೊಳ್ಳಲಾ ಗುತ್ತಿದೆ ಎಂದು ಅಕ್ಷರ ದಾಸೋಹ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸುತ್ತಾರೆ.

ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಹೊಸ ಐಡಿಯಾ: ಬಿಸಿಯೂಟಕ್ಕೆ ‘ಸಾರವರ್ಧಿತ ಅಕ್ಕಿ’ ಬಳಕೆ..!



Read more

[wpas_products keywords=”deal of the day sale today offer all”]