ಹಿಜಾಬ್-ಕೇಸರಿ ಶಾಲಿನ ಕಿಚ್ಚು ಕರಾವಳಿಯಿಂದ ಬಯಲು ಸೀಮೆ ಜಿಲ್ಲೆಗೂ ಹಬ್ಬಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಶನಿವಾರ ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ಕುಮಾರ್ ಮತ್ತು ಸಂತೋಷ್ ಬಾಬು ಅವರು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಹಿಂದೂ – ಮುಸ್ಲಿಂ ಸಮುದಾಯದ ಪ್ರಮುಖ ಮುಖಂಡರ ಜತೆ ಶಾಂತಿ ಸಭೆ ನಡೆಸಿದರು.
ಸಭೆಯಲ್ಲಿ ಎಲ್ಲಾ ಸಮುದಾಯದ ಮುಖಂಡರ ಮಾತುಗಳನ್ನು ಆಲಿಸಿದ ಬಳಿಕ ಮಾತನಾಡಿದ ಸಂತೋಷ್ ಬಾಬು, ಶಾಂತಿಗೆ ಭಂಗ ತರುವಂತಹ ಕೆಲಸಕ್ಕೆ ಯಾರೂ ಕೈಹಾಕಬೇಡಿ. ಇಲ್ಲಿಎರಡೂ ಧರ್ಮದವರ ಮಧ್ಯೆ ಸಾಮರಸ್ಯವಿದ್ದು , ಅದು ಕೆಡದಂತೆ ನೋಡಿಕೊಳ್ಳಿ. ಯಾವನಾದರು ಹಾಳುಮಾಡುವ ಉದ್ದೇಶದಿಂದ ಕೋಮು ಸಾಮರಸ್ಯಕ್ಕೆ ಬೆಂಕಿ ಇಡಲು ಪ್ರಯತ್ನಿಸಿದರೆ ಅವನು ಯಾಕೆ ನಾನು ಹುಟ್ಟಿದೆ ಅನ್ನುವ ರೀತಿ ಮಾಡುತ್ತೀನಿ. ಎಂತಹದ್ದೇ ಪ್ರಭಾವ ಎದುರಾಗಲಿ ಸಮಾಜ ಘಾತುಕ ಶಕ್ತಿಗಳ ಹುಟ್ಟು ಆಡಗಿಸುತ್ತೇನೆ ಎಂದು ಖಡಕ್ ಸಂದೇಶ ನೀಡಿದರು.
ನಾನೂ ಸಹ ಇದೇ ಜಿಲ್ಲೆಯವನು. ಈ ಜಿಲ್ಲೆಯ ಬಗ್ಗೆ ಅಭಿಮಾನ ಹೊಂದಿದ್ದೇನೆ. ಹೀಗಾಗಿ ಇಲ್ಲಿ ಸಮಾಜಘಾತುಕ ಶಕ್ತಿಯನ್ನು ಬೆಳೆಯಲು ಬಿಡುವುದಿಲ್ಲ. ಈ ಜಿಲ್ಲೆಯಲ್ಲಿ ಹಿಂದೂ ಮುಸ್ಲಿಂರು ಅಣ್ಣ ತಮ್ಮಂದಿರ ರೀತಿ ಬದುಕುತ್ತಿದ್ದಾರೆ. ಹಾಗಾಗಿ ಯಾವುದೇ ರೀತೀಯ ಅಹಿತಕರ ಘಟನೆಗಳಿಗೆ ಕಾರಣರಾದರೆ, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಮಾತನಾಡಿ, ಕೋಮು ಸೌಹಾರ್ದತೆಗೆ ಹೆಸರಾಗಿರುವ ಜಿಲ್ಲೆಯಲ್ಲಿ ಹಿಜಾಬ್-ಕೇಸರಿ ಶಾಲಿನ ಹೆಸರಿನಲ್ಲಿ ವಿದ್ಯಾರ್ಥಿಗಳ ಮಧ್ಯೆ ಒಡಕು ಮೂಡಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನಕ್ಕೆ ಯಾರೂ ಸಹ ಮುಂದಾಗದೆ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವಂತೆ ಮನವಿ ಮಾಡಿದರು. ನ್ಯಾಯಾಲಯದ ತೀರ್ಪು ಬರುವವರೆಗೂ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಅವರಿವರ ಮೇಲೆ ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಂಡು ಶಾಂತಿಗೆ ಭಂಗ ತರುವವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಚ್ಚರಿಕೆ ನೀಡಿದರು.
Read more
[wpas_products keywords=”deal of the day sale today offer all”]