Karnataka news paper

ಈ 3 ಕಾರಣಗಳಿಂದಾಗಿ ಕೊಹ್ಲಿಗೆ ಆಫ್ರಿಕಾ ಪ್ರವಾಸ ಕೊನೇ ಚಾನ್ಸ್ ಎಂದ ಕನೇರಿಯಾ!


ಹೈಲೈಟ್ಸ್‌:

  • ಭಾರತ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ ಡಿಸೆಂಬರ್‌ 26 ರಿಂದ ಅಧಿಕೃತವಾಗಿ ಆರಂಭವಾಗಲಿದೆ.
  • ಓಡಿಐ ನಾಯಕತ್ವ ಕಳೆದುಕೊಂಡಿರುವ ಕೊಹ್ಲಿಗೆ ಮಹತ್ವದ ಸಲಹೆ ನೀಡಿದ ದನೀಶ್‌ ಕನೇರಿಯಾ.
  • ಆಫ್ರಿಕಾ ಟೆಸ್ಟ್‌ ಸರಣಿ ಗೆದ್ದು ಬಿಸಿಸಿಐಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಿ : ಪಾಕ್‌ ಮಾಜಿ ಸ್ಪಿನ್ನರ್‌

ಹೊಸದಿಲ್ಲಿ: ಒಂದು ಕಡೆ ಬ್ಯಾಟಿಂಗ್‌ ಫಾರ್ಮ್‌ ಕಳೆದುಕೊಂಡಿರುವುದು, ಮತ್ತೊಂದು ಕಡೆ ಭಾರತ ಓಡಿಐ ತಂಡದ ನಾಯಕತ್ವದಿಂದ ಕೆಳಗಿಳಿದಿರುವ ಟೆಸ್ಟ್ ತಂಡದ ನಾಯಕ ವಿರಾಟ್‌ ಕೊಹ್ಲಿ ಪಾಲಿಗೆ ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸ ಅತ್ಯಂತ ನಿರ್ಣಾಯಕವಾಗಿದೆ ಎಂದು ಪಾಕಿಸ್ತಾನ ಮಾಜಿ ಸ್ಪಿನ್ನರ್‌ ದನೀಶ್‌ ಕನೇರಿಯಾ ಎಚ್ಚರಿಕೆ ನೀಡಿದ್ದಾರೆ.

ಐಸಿಸಿ ಟಿ20 ವಿಶ್ವಕಪ್‌ ಬಳಿಕ ಚುಟುಕು ತಂಡದ ನಾಯಕತ್ವವನ್ನು ತ್ಯಜಿಸಿದ್ದ ವಿರಾಟ್‌ ಕೊಹ್ಲಿ, ಓಡಿಐ ಹಾಗೂ ಟೆಸ್ಟ್‌ ತಂಡದ ನಾಯಕತ್ವದಲ್ಲಿ ಮುಂದುವರಿಯುತ್ತೇನೆಂದು ಸ್ಪಷ್ಟಪಡಿಸಿದ್ದರು. ಇದರ ಹೊರತಾಗಿಯೂ ಕಳೆದ ವಾರ ಬಿಸಿಸಿಐ ಓಡಿಐ ನಾಯಕತ್ವದಿಂದ ಕೊಹ್ಲಿಯನ್ನು ಕೈ ಬಿಟ್ಟು ರೋಹಿತ್‌ ಶರ್ಮಾಗೆ ಸೀಮಿತ ಓವರ್‌ಗಳ ತಂಡದ ನಾಯಕತ್ವ ನೀಡಿತ್ತು. ಆ ಮೂಲಕ ಕೊಹ್ಲಿಗೆ ಆಘಾತ ನೀಡಿತ್ತು.

ಈ ಹಿನ್ನೆಲೆಯಲ್ಲಿ ಬಿಸಿಸಿಐ ವಿರುದ್ಧ ಮುನಿಸಿಕೊಂಡಿದ್ದ ವಿರಾಟ್‌ ಕೊಹ್ಲಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಬಿಸಿಸಿಐ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು ಹಾಗೂ ಭಾರತೀಯ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ಸೌರವ್‌ ಗಂಗೂಲಿಗೆ ತಿರುಗೇಟು ನೀಡಿದ್ದರು.

‘ಸೆಪ್ಟೆಂಬರ್‌ನಲ್ಲಿಯೇ ಮಾತನಾಡಿದ್ದೆವು’ ಕೊಹ್ಲಿ ಆರೋಪ ತಳ್ಳಿಹಾಕಿದ ಬಿಸಿಸಿಐ!

ಇದೀಗ ಕಠಿಣ ಕ್ಷಣಗಳನ್ನು ಎದುರಿಸುತ್ತಿರುವ ವಿರಾಟ್‌ ಕೊಹ್ಲಿಗೆ ಪಾಕ್‌ ಮಾಜಿ ಸ್ಪಿನ್ನರ್‌ ದನೀಶ್‌ ಕನೇರಿಯಾ ಹಲವು ಸೂಕ್ತ ಸಲಹೆಗಳನ್ನು ನೀಡಿದ್ದಾರೆ. ನಿಮ್ಮನ್ನು ಬಿಸಿಸಿಐ ನಡೆಸಿಕೊಂಡಿರುವ ರೀತಿಗೆ ನೀವು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ತಮ್ಮ ಸಾಮರ್ಥ್ಯ ಏನೆಂಬುದನ್ನು ಸಾಬೀತುಪಡಿಸಬೇಕು. ಆ ಮೂಲಕ ಹಲವು ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದು ಹೇಳಿದ್ದಾರೆ.

ಈ ಮೂರು ಪ್ರಮುಖ ಕಾರಣಗಳಿಂದ ಬಿಸಿಸಿಐನಿಂದ ತಿರಸ್ಕರಿಸಲ್ಪಟ್ಟಿರುವ ವಿರಾಟ್‌ ಕೊಹ್ಲಿ ಪಾಲಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಅತ್ಯಂತ ನಿರ್ಣಾಯಕವಾಗಲಿದೆ ಎಂದು 61 ಟೆಸ್ಟ್ ಪಂದ್ಯಗಳಿಂದ 261 ವಿಕೆಟ್‌ ಕಿತ್ತಿರುವ ಮಾಜಿ ಲೆಗ್‌ ಸ್ಪಿನ್ನರ್‌ ತಿಳಿಸಿದ್ದಾರೆ.

‘ಕಾರಣ ತಿಳಿಯುವ ಹಕ್ಕು ಕೊಹ್ಲಿಗಿದೆ’ : ಬಿಸಿಸಿಐ ವಿರುದ್ಧ ಮಿಶ್ರಾ ಗರಂ!

“ದಕ್ಷಿಣ ಆಫ್ರಿಕಾ ಪ್ರವಾಸ ವಿರಾಟ್‌ ಕೊಹ್ಲಿಗೆ ಅತ್ಯಂತ ನಿರ್ಣಾಯಕವಾಗಿದೆ. ಏಕೆಂದರೆ ಮೊದಲನೇಯದಾಗಿ ದಕ್ಷಿಣ ಆಫ್ರಿಕಾದಲ್ಲಿ ಇದುವರೆಗೂ ಭಾರತ ಟೆಸ್ಟ್‌ ಸರಣಿ ಗೆದ್ದಿಲ್ಲ. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ನಲ್ಲಿ ಭಾರತ ಟೆಸ್ಟ್ ಸರಣಿ ಗೆದ್ದಿದೆ. ಆದರೆ ಈ ಬಾರಿ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್‌ ಸರಣಿ ಗೆಲ್ಲಲು ನಾಯಕನಾಗಿ ಕೊಹ್ಲಿಗೆ ಕೊನೆಯ ಅವಕಾಶ,” ಎಂದಿದ್ದಾರೆ.

“ಎರಡನೇಯದಾಗಿ ವಿರಾಟ್‌ ಕೊಹ್ಲಿ ಶತಕ ಸಿಡಿಸಿ ಸರಿ ಸುಮಾರು ಎರಡು ವರ್ಷಗಳೇ ಕಳೆದಿವೆ. ಇದೀಗ ಫಾರ್ಮ್‌ಗೆ ಮರಳಿ ತಂಡದ ಗೆಲುವಿಗಾಗಿ ಅವರು ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಬೇಕಾದ ಅಗತ್ಯವಿದೆ. ಕೊನೆಯದಾಗಿ ಓಡಿಐ ನಾಯಕತ್ವದಿಂದ ಕಿತ್ತೊಗೆದಿರುವ ಬಿಸಿಸಿಐಗೆ ಕೊಹ್ಲಿ ತಿರುಗೇಟು ನೀಡಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕೊಹ್ಲಿಗೆ ಈ ಪ್ರವಾಸ ಅತ್ಯಂತ ಮುಖ್ಯವಾಗಿದೆ,” ಎಂದು ದನೀಶ್‌ ಕನೇರಿಯಾ ಹೇಳಿದ್ದಾರೆ.

‘ಗಂಗೂಲಿ ಇದಕ್ಕೆ ಉತ್ತರಿಸಿ,’ ವಿರಾಟ್‌ ವಿವಾದಕ್ಕೆ ಬಟ್‌ ಪ್ರತಿಕ್ರಿಯೆ!

ವಿರಾಟ್‌ ಕೊಹ್ಲಿ ನಾಯಕತ್ವದ ಟೀಮ್‌ ಇಂಡಿಯಾ ಗುರುವಾರ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಿದ್ದು, ಡಿಸೆಂಬರ್‌ 26 ರಿಂದ ಸೆಂಚೂರಿಯನ್‌ನಲ್ಲಿ ಟೆಸ್ಟ್‌ ಸರಣಿಯನ್ನುಆರಂಭಿಸಲಿದೆ. ಟೆಸ್ಟ್‌ ಸರಣಿ ಮುಗಿದ ಬಳಿಕ ಓಡಿಐ ಸರಣಿಯಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿವೆ.



Read more