Karnataka news paper

ಹಾಲು ಉತ್ಪಾದಕರಿಗೆ ಫೆಬ್ರವರಿ 1ರಿಂದಲೇ ಪ್ರತಿ ಲೀಟರ್‌ಗೆ ₹1.50 ಹೆಚ್ಚಳ: ಎಚ್‌. ಡಿ. ರೇವಣ್ಣ


ಹಾಸನ: ಹಾಸನ ಹಾಲು ಒಕ್ಕೂಟವು 2021-22ನೇ ಸಾಲಿನ ಮಾರ್ಚ್ ಅಂತ್ಯಕ್ಕೆ ಸುಮಾರು 20 ಕೋಟಿ ರೂಪಾಯಿಗೂ ಹೆಚ್ಚು ಲಾಭ ಗಳಿಸುವ ನಿರೀಕ್ಷೆ ಹೊಂದಲಾಗಿದೆ. ಈ ಲಾಭದಲ್ಲಿ ಹಾಲಿನ ಖರೀದಿ ದರವನ್ನು ಪ್ರತಿ ಲೀ. 1.50 ರೂ.ಗೆ ಹೆಚ್ಚಿಸಲಾಗಿದೆ ಎಂದು ಹಾಲು ಒಕ್ಕೂಟದ ಅಧ್ಯಕ್ಷ ಎಚ್‌.ಡಿ.ರೇವಣ್ಣ ತಿಳಿಸಿದರು.

ನಗರದ ಹಾಸನ ಹಾಲು ಒಕ್ಕೂಟದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 20 ಕೋಟಿಗೂ ಅಧಿಕ ಲಾಭ ಗಳಿಸುವ ನಿರೀಕ್ಷೆಯಲ್ಲಿರುವ ಒಕ್ಕೂಟವು 13ರಿಂದ 14 ಕೋಟಿ ರೂ. ಲಾಭಾಂಶವನ್ನು ಉತ್ಪಾದಕರು ನೀಡುವ ಹಾಲಿಗೆ ಫೆ.1ರಿಂದ ಪ್ರತಿ ಲೀಟರ್‌ ಗೆ 1.50 ರೂ. ದರವನ್ನು ಹೆಚ್ಚಿಸಲಾಗಿದೆ. ಪ್ರಸ್ತುತ ಹಾಲು ಉತ್ಪಾದಕರಿಗೆ ಶೇ.4 ಜಿಡ್ಡು ಮತ್ತು ಶೇ. 8.5 ಎಸ್‌.ಎನ್‌.ಎಫ್‌. ಹಾಲಿಗೆ 25.75 ರೂ. ರಿಂದ 27.25ರೂ.ಗೆ ಹೆಚ್ಚಿಸಲಾಗಿದ್ದು, ಇದು ರಾಜ್ಯದಲ್ಲಿಯೇ ಹೆಚ್ಚಿನ ಖರೀದಿ ದರ ಪಾವತಿಸುತ್ತಿರುವ ಒಕ್ಕೂಟವಾಗಿದೆ ಎಂದು ಹೇಳಿದರು.

ಹಾಸನ ಹಾಲು ಒಕ್ಕೂಟದಲ್ಲಿ ಸುವಾಸಿತ ಹಾಲಿನ ಪೆಟ್‌ ಬಾಟಲ್‌ ಘಟಕದಲ್ಲಿ ಉತ್ಪಾದಿಸಿದ ಸುಮಾರು 9 ಬಗೆಯ ಸುವಾಸಿತ ಹಾಲು, ಮಿಲ್ಕ್‌ ಶೇಕ್‌, ಲಸ್ಸಿ ಹಾಗೂ ಮಜ್ಜಿಗೆ ಉತ್ಪನ್ನಗಳನ್ನು ಪ್ರಥಮವಾಗಿ ಮಾರಾಟಕ್ಕೆ ಬಿಡುಗಡೆ ಮಾಡಲಾಗುತ್ತಿದೆ. ಕರ್ನಾಟಕ ಹಾಲು ಮಹಾಮಂಡಳದಿಂದ ನೀಡಿರುವ ಇಂಡೆಂಟ್‌ ಪ್ರಕಾರ ಸುಮಾರು 3.60 ಲಕ್ಷ ಬಾಟಲ್‌ಗಳನ್ನು ಕಹಾಮ ಡಿಪೋಗಳ ಮುಖಾಂತರ ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಒಕ್ಕೂಟದಲ್ಲಿ ಉತ್ಪಾದನೆ ಮಾಡಿದ ಸುವಾಸಿತ ಹಾಲನ್ನು ಸ್ಯಾಂಪಲಿಂಗ್‌ಗೆ ಒಳಪಡಿಸಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೇ-2022 ರ 4 ತಿಂಗಳ ಅವಧಿಯವರೆಗೆ ಪ್ರತಿ ದಿನ ಸುಮಾರು 2.5 ಲಕ್ಷ ಬಾಟಲ್‌ಗಳಲ್ಲಿ (50000 ಲೀಟರ್‌) ಸುವಾಸಿತ ಹಾಲನ್ನು ಉತ್ಪಾದಿಸಿ ಸರಬರಾಜು ಮಾಡಲು ಕಹಾಮದಿಂದ ಬೇಡಿಕೆ ಹೆಚ್ಚಿದೆ. ಒಕ್ಕೂಟದಲ್ಲಿ ಉತ್ಪಾದಿಸುವ ಸುವಾಸಿತ ಹಾಲನ್ನು ಹೊರರಾಜ್ಯಗಳಲ್ಲಿ ಮಾರಾಟ ಮಾಡಲು ಸುಮಾರು 200 ಜನ ಯು.ಎಚ್‌.ಟಿ. ಡೀಲರ್‌ಗಳ ಮೂಲಕ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲು ಸರಬರಾಜು ಪ್ರಾರಂಭಿಸಲಾಗುತ್ತಿದೆ.

ಫೆ.1ರಿಂದ ಪ್ರತಿ ಲೀಟರ್‌ ಹಾಲಿಗೆ ₹1.50 ಹೆಚ್ಚಳ
ಸುವಾಸಿತ ಹಾಲಿಗೆ ಈಗಾಗಲೇ ಕಹಾಮ ಮತ್ತು ಡೀಲರ್‌ಗಳಿಂದ ನೀಡಿರುವ ಬೇಡಿಕೆ ಪರಿಗಣಿಸಿದಾಗ ಉತ್ಪಾದನೆ ಪ್ರಾರಂಭ ಮಾಡಿದ ಮೊದಲನೇ ವರ್ಷದಲ್ಲಿಯೇ ಘಟಕದ ಸ್ಥಾಪಿತ ಉತ್ಪಾದನಾ ಸಾಮರ್ಥ್ಯದ ದಿನವಹಿ 1.0 ಲಕ್ಷ ಲೀ. ನಲ್ಲಿ ಶೇ. 40 ರಷ್ಟು ಅಂದರೆ, ದಿನವೊಂದಕ್ಕೆ 40,000 ಲೀ. ಹಾಲಿಗೆ ಬೇಡಿಕೆ ಬಂದಿರುವುದು ಒಕ್ಕೂಟಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.

ಹೈದರಾಬಾದ್‌ ಸಮೀಪ ಡೇರಿ ಸ್ಥಾಪನೆ
ತೆಲಂಗಾಣ ರಾಜ್ಯದ ಹೈದರಾಬಾದ್‌ ನಗರದಲ್ಲಿ ಒಕ್ಕೂಟದಿಂದ ಮಾರಾಟ ಮಾಡುತ್ತಿರುವ ಹಾಲು ಮತ್ತು ಮೊಸರಿನ ಪ್ರಮಾಣ ದಿನೇದಿನೆ ಹೆಚ್ಚಾಗುತ್ತಿದ್ದು, ಇಲ್ಲಿ ಹಾಲಿನ ಮಾರುಕಟ್ಟೆ ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಹೈದರಾಬಾದ್‌ ಸಮೀಪ ಡೇರಿಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಕೌಶಿಕ ಬಳಿ ಕೈಗಾರಿಕಾ ವಸಾಹತುವಿನ 66 ಎಕರೆ ಜಾಗದಲ್ಲಿ ನಿರ್ಮಾಣ ಮಾಡುತ್ತಿರುವ ಮೆಗಾ ಡೇರಿಯ ಸಿವಿಲ್‌ ಕೆಲಸಗಳು ಪ್ರಾರಂಭಗೊಂಡಿದ್ದು, ಮೆಕ್ಯಾನಿಕಲ್‌ ಯಂತ್ರೋಪಕರಣಗಳ ಸರಬರಾಜು ಮತ್ತು ಅಳವಡಿಕೆಗೆ ಕಹಾಮದಿಂದ ಟೆಂಡರ್‌ ಪ್ರಕ್ರಿಯೆ ನಡೆಸಿದ್ದು, ಸುಮಾರು 18 ತಿಂಗಳ ಅವಧಿಯಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ಚಾಲನೆ ನೀಡಲು ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಸೇರಿದಂತೆ ಇತರ ಸಿಬ್ಬಂದಿ ಹಾಜರಿದ್ದರು.



Read more

[wpas_products keywords=”deal of the day sale today offer all”]