Karnataka news paper

ದಲಿತ ಯುವತಿ ಕಣ್ಮರೆ: 2 ತಿಂಗಳ ಬಳಿಕ ಸಮಾಜವಾದಿ ಪಕ್ಷದ ಮಾಜಿ ಸಚಿವನ ಆಶ್ರಮದ ಪಕ್ಕ ಮೃತದೇಹ ಪತ್ತೆ!


ಉನ್ನಾವೋ: ಸಾಮೂಹಿಕ ಅತ್ಯಾಚಾರ ಪ್ರಕರಣಗಳಿಂದ ಭಾರಿ ಸುದ್ದಿಯಾಗಿದ್ದ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಮತ್ತೊಂದು ಭೀಕರ ಘಟನೆ ವರದಿಯಾಗಿದೆ. ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದ 22 ವರ್ಷದ ದಲಿತ ಯುವತಿಯ ಕೊಳೆತ ಮೃತದೇಹ ಸಮಾಜವಾದಿ ಪಕ್ಷದ ಮಾಜಿ ಸಚಿವ ನಿರ್ಮಿಸುತ್ತಿರುವ ಆಶ್ರಮವೊಂದರ ಸಮೀಪದ ಖಾಲಿ ಜಾಗದಲ್ಲಿ ದೊರಕಿದೆ.

ಸಮಾಜವಾದಿ ನಾಯಕ ಅಖಿಲೇಶ್ ಯಾದವ್ ನೇತೃತ್ವದ ಸರ್ಕಾರ ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಸಚಿವರಾಗಿದ್ದ ಫತೇಹ್ ಬಹದ್ದೂರ್ ಸಿಂಗ್ ಅವರು ನಿರ್ಮಿಸುತ್ತಿರುವ ಕಟ್ಟಡದ ಸಮೀಪ ಕೊಳೆತ ದೇಹ ಪತ್ತೆಯಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
UP Election 2022: ಉನ್ನಾವ್‌ ಅತ್ಯಾಚಾರ ಸಂತ್ರಸ್ತೆಯ ತಾಯಿಗೆ ಟಿಕೆಟ್‌ ನೀಡಿದ ಕಾಂಗ್ರೆಸ್‌

ಪ್ರಮುಖ ಆರೋಪಿಯಾಗಿರುವ ಫತೇಹ್ ಅವರ ಮಗ ರಾಜೋಲ್ ಸಿಂಗ್‌ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಯುವತಿಯ ಮೃತದೇಹದ ಮರಣೋತ್ತರ ಪರೀಕ್ಷೆಗೆ ಸಂಬಂಧಿಸಿದ ಪ್ರಕ್ರಿಯೆಗಳು ನಡೆಯುತ್ತಿದೆ ಎಂದು ಹೇಳಿದ್ದಾರೆ.

“ಆರೋಪಿ ರಾಜೋಲ್ ಸಿಂಗ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ಎಸ್‌ಒಜಿ ತಂಡವು ಗುರುವಾರ ಯಿವತಿಯ ದೇಹವನ್ನು ವಶಕ್ಕೆ ಪಡೆದುಕೊಂಡಿದೆ. ಆಶ್ರಮ ಸಮೀಪದಲ್ಲಿರುವ ಜಾಗದಲ್ಲಿ ದೇಹವನ್ನು ಹೂತು ಹಾಕಲಾಗಿತ್ತು. ದೇಹವನ್ನು ಯಾವ ಸ್ಥಳದಲ್ಲಿ ಸಮಾಧಿ ಮಾಡಲಾಗಿದೆ ಎಂದು ತಿಳಿಯಲು ನಾವು ಸ್ಥಳೀಯ ಬೇಹುಗಾರಿಕೆ ಹಾಗೂ ಮೊಬೈಲ್ ಕಣ್ಗಾವಲುಗಳನ್ನು ಬಳಸಿದ್ದೆವು” ಎಂದು ಉನ್ನಾವೋದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಶಿ ಶೇಖರ್ ಸಿಂಗ್ ತಿಳಿಸಿದ್ದಾರೆ.

ಈ ಪ್ರಕರಣವು ಅಕ್ರಮ ಸಂಬಂಧಗಳಲ್ಲಿ ಉಂಟಾದ ಸಮಸ್ಯೆ ಇರುವಂತೆ ಕಾಣಿಸುತ್ತಿದೆ. ತನಿಖೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಎಂದು ಕಂಡುಬರುತ್ತಾರೋ, ಅವರನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಗುರುವಾರ ಆರಂಭವಾಗಿದ್ದು, ದಲಿತ ಮತಗಳನ್ನು ಪಡೆಯಲು ಕಸರತ್ತು ನಡೆಸುತ್ತಿರುವ ಸಮಾಜವಾದಿ ಪಕ್ಷಕ್ಕೆ ಈ ಘಟನೆ ತೀವ್ರ ಮುಜುಗರ ಉಂಟುಮಾಡಿದೆ. ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿರುವ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ, ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ದೊರಕಿಸಲು ರಾಜ್ಯ ಸರ್ಕಾರವು ಕೂಡಲೇ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಅತ್ಯಾಚಾರ ಸಂತ್ರಸ್ತೆಯ ತಂದೆ ಅಪಘಾತದಲ್ಲಿ ಸಾವು: ಉ.ಪ್ರದಲ್ಲಿ ಮತ್ತೊಂದು ಉನ್ನಾವ್‌ ಮಾದರಿ ಘಟನೆ

ಡಿಸೆಂಬರ್ 8ರಂದು ಯುವತಿ ಕಣ್ಮರೆಯಾಗಿದ್ದಳು. ತನ್ನ ಮಗಳನ್ನು ಮಾಜಿ ಸಚಿವ ಮಗ ರಾಜೋಲ್ ಸಿಂಗ್ ಅಪಹರಣ ಮಾಡಿದ್ದಾನೆ ಎಂದು ಯುವತಿಯ ತಾಯಿ ಆರೋಪಿಸಿದ್ದರು. ಏನೋ ಅಹಿತಕರ ಘಟನೆ ನಡೆದಿದೆ ಎಂದು ಆಕೆ ಸ್ಥಳೀಯ ಪೊಲೀಸರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದರು. ರಾಜೋಲ್ ಸಿಂಗ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು.

ಜನವರಿ 24ರಂದು ಸಂತ್ರಸ್ತೆಯ ತಾಯಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ವಾಹನದ ಮುಂಭಾಗದಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ತನ್ನ ಮಗಳನ್ನು ಪತ್ತೆಹಚ್ಚಲು ಪೊಲೀಸರು ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಆರೋಪಿಸಿದ್ದರು. ಈ ಘಟನೆ ಬಳಿಕ ಅದೇ ದಿನ ಪೊಲೀಸರು ರಾಜೋಲ್ ಸಿಂಗ್‌ನನ್ನು ಬಂಧಿಸಿದ್ದರು. ಈಗ ಮೃತ ದೇಹ ಪತ್ತೆಯಾಗಿರುವುದು ತಾಯಿಯ ಆರೋಪವನ್ನು ಖಚಿತಪಡಿಸಿದೆ.



Read more

[wpas_products keywords=”deal of the day sale today offer all”]